Skip to main content

Posts

Showing posts from September, 2021

ಅದೇನೊ ಕವಿತೆಯಂತೆ

ಯಾರಿಗೂ ಅರ್ಥವಾಗದ ನಾಕು ಸಾಲು ಗೀಚಿದ್ದೆ ಅದೋ ಅವರಿವರಿಂದ ಸಾಲ ಕೇಳಿ ಪಡೆದ ಸಾಲು, ಎಲ್ಲವನ್ನೂ ಪೋಣಿಸಿ ಅಲೆದಾಡುತ್ತಿದ್ದ ಅಕ್ಷರವನ್ನು ಗುಂಪುಮಾಡಿ ಸುಮ್ಮನೆ ಸಾಲಾಗಿ ಕೂರಿಸಿದೆ. ಬರೆಯುವುದಕ್ಕೂ ಭಯಂಕರ ಸಮಯ ಬೇಕಂತೆ ಸಾಹಿತ್ಯದ ಅರಿವೇ ಇಲ್ಲದ ಹಿರಿಯನೊಬ್ಬ ಹೇಳಿದ ಪ್ರೇಮದ ಇನ್ನೊಂದು ಪರಿಯೇ ಕವನವಂತೆ ಹದಿಹರೆಯದ ಹುಡುಗನೊಬ್ಬ ಸಣ್ಣಗೆ ಉಸುರಿದ. ಅಕ್ಷರವೆಲ್ಲಾ ಆಕಾಶದೆಡೆಗೆ ಮುಖ ಮಾಡಿ ಕವಿಗಳಿಂದ ನಮ್ಮನ್ನು ಪಾರುಮಾಡು ಎಂದವಂತೆ ಎಲ್ಲರಿಗೂ ದಾರಿ ತೋರುವ ದೇವ ದಾರಿತಪ್ಪಿ ಗುಡಿಯ ಹುಡುಕ ಹೊರಟ ನನ್ನ ಬಳಿ ಕೇಳಿದ ಬರೆದದ್ದೇ ಬರೆದದ್ದು ಹಾಳೆಯ ಮೇಲಿನ ಅಕ್ಷರವೇ ಮಾಯವಾಗಿದೆ. ಅಕ್ಷರ ಮುಗಿಸಿಕೊಂಡು ಎದ್ದು ಹೋಯಿತೆ?! ಬೇಸರದಿಂದ ಅತ್ತು ಪುಟಗಳಲ್ಲಿ ಮಾಸಿ ಹೋಯಿತೆ ಸುಮಾ.ಕಂಚೀಪಾಲ್

ಸ್ತ್ರೀವಾದ ಪುರುಷ ವಿರೋಧಿ ಅಲ್ಲ ಕೇವಲ ಸಮಾನತೆಯ ಅಡಿಪಾಯ.

ಸ್ತ್ರೀವಾದ ಪುರುಷ ವಿರೋಧಿ ಅಲ್ಲ ಕೇವಲ ಸಮಾನತೆಯ ಅಡಿಪಾಯ. ಸ್ತ್ರೀವಾದ ಎಂಬುದು ಇಂದಿನ ದಿನಮಾನದಲ್ಲಿ ಮಹಿಳೆಯರ ಕುರಿತಾಗಿ ಕ್ರಾಂತಿಯೇ ಘಟಿಸಿದೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ . ಮಕ್ಕಳನ್ನು ನೋಡಿಕೊಳ್ಳುವುದು , ಹಿರಿಯರ ಆರೈಕೆ ಮಾಡುವ , ಪಾತ್ರೆ ತೊಳೆಯುವ . ಬಟ್ಟೆ ಒಗೆಯುವ ಆ ಕೈಗಳು ಹೆಣ್ಣಿನದ್ದೇ ಯಾಕಾಗಿರಬೇಕು ? ಇಂತಹ ಪ್ರಶ್ನೆಯು ಇಂದು ಉದ್ಭವಿಸಿದೆ. ಮಹಿಳೆ ಸ್ವಾವಲಂಬಿಯಾಗುತ್ತಿದ್ದಾಳೆ ವಿಶಾಲ ಜಗತ್ತಿನಲ್ಲಿ ತನಗೆ ಬೇಕಾದನ್ನು ಪಡೆದುಕೊಳ್ಳುವ ವೃತ್ತಿ ಕೌಶಲ್ಯ ಛಲ ಅವಳಲ್ಲಿದೆ. ಇದಕ್ಕೆಲ್ಲ ಸಹಕಾರವಾಗಿ ನಿಂತಿರುವುದು ಸ್ತ್ರೀವಾದದ ಕಲ್ಪನೆಗಳು , ಮನುಷ್ಯತ್ವ , ಎಲ್ಲವನ್ನು ಧಿಕ್ಕರಿಸುವುದು ವಿರೋಧಿಸುವುದು ಎಂಬ ಬಣ್ಣವನ್ನು ಬಳಿದುಕೊಳ್ಳುತ್ತಿದೆಯೇ ಹೊರತಾಗಿ ಇದರ ನೈಜತೆ ಬೇರೆಯೇ ಇದೆ. ಸ್ತ್ರೀ ವಾದ   ಹುಟ್ಟಿದ್ದು ಕೇವಲ ಸಮಾನತೆಗಾಗಿ. ವರದಕ್ಷಿಣೆಯ ಪಿಡುಗಿನಿಂದ ತಪ್ಪಿಸಿಕೊಳ್ಳಲು ಹೆಣ್ಣು ಭ್ರೂಣ ಹತ್ಯೆ,  ಅತ್ಯಾಚಾರ, ಶಿಕ್ಷಣ , ಹಕ್ಕುಗಳ ಜಾಗೃತಿ ಮತ್ತು ಪುರುಷ ಜಗತ್ತಿಗೆ ಹೆಣ್ಣನ್ನು ಅರ್ಥೈಸಲು ಸ್ತ್ರೀವಾದ ನಿಂತಿರುವುದು. ಒಬ್ಬಳೇ ಹೊರಗೆ ಹೋಗಬೇಡ ಎಂದು ಕಾಳಜಿ ಹೆಸರಿಟ್ಟು ಸ್ವಾತಂತ್ರ್ಯ ಕಸಿದರು. ನಿನ್ನಬಳಿ ಈ ಕೆಲಸವಾಗದು ಎಂದು ಹೇಳಿ ಬಲಹೀನಳನ್ನಾಗಿಸಿಬಿಟ್ಟರು. ಹಣದ ಕೆಲಸ ಬೇಡ ಜವಾಬ್ದಾರಿ ಅದನ್ನು ನಿರ್ವಹಿಸಲಾರೆ ಎಂದರು. ಇಂತಹ ಬಟ್ಟೆ ತೊಡಬೇಡ ಎಂದರು ಸಂಸ್...

ಮೀನು ನಗುತ್ತದಾ!

ಮಳೆಗಾಲದಲ್ಲಿ ಮಾತ್ರವೇ ನೀರು ಹರಿಯುವ ಒಂದು ಸಣ್ಣ ಕಾಲುವೆ ಇದೆ. ಅದರಲ್ಲಿ ವರ್ಷದ ಮೂರು ತಿಂಗಳು ಮಾತ್ರ ನೀರು ಹರಿಯುತ್ತದೆ. ನೀರು ಹರಿಯುವ ಸಂಧರ್ಭದಲ್ಲಿ ಪುಟ್ಟ ಪುಟ್ಟ ಮೀನುಗಳು ಹುಟ್ಟಿಕೊಳ್ಳುತ್ತವೆ‌. ಇವುಗಳನ್ನು ನೋಡುವುದು, ತಿಂಡಿ ಹಾಕುವುದು, ದುಪ್ಪಟ್ಟ ಮತ್ತು ತೆಂಗಿನ ಚಿಪ್ಪಿನಲ್ಲಿ ಅವುಗಳನ್ನು ಹಿಡಿಯುವುದು ಮತ್ತು ನೀರಿನೊಳಗೆ ಕಾಲಿಟ್ಟು ಅವುಗಳ ಕಳಗುಳಿ ಸಹಿಸುವುದು ಇವೆಲ್ಲವೂ ಸಹ ಆ ಮೂರು ತಿಂಗಳ ಖುಷಿಯ ಸಂಗತಿ.  ಅಲ್ಲಲ್ಲಿ ಕಚಗುಳಿ ಇವುಗಳನ್ನು ನೋಡುತ್ತಿದ್ದಾಗಲೆಲ್ಲ ನನಗೆ ಹತ್ತಾರು ಪ್ರಶ್ನೆಗಳು ಕಾಡುತ್ತವೆ. 'ಪ್ರೀತಿಸುವವರನ್ನು ಕೊಂದುಬಿಡಿ' ಎನ್ನುವ ಜೋಗಿ ಅವರ ಪುಸ್ತಕದಲ್ಲಿ ಓದಿದ್ದೆ, ಮೀನಿನ ಏಕಾಗ್ರತೆ ಕೇವಲ ಐದು ಸೆಕೆಂಡ್ ಮಾತ್ರ ಎಂಬುದರ ಕುರಿತು ಅವರು ತಿಳಿಸಿದ್ದರು. ಅದರ ನಂತರ ಕುತೂಹಲ ಹೆಚ್ಚಿ ಗೂಗಲ್ ಮಾಡಿ ನೋಡಿದ್ದೆ. ಅತಿ ಕಡಿಮೆ ಹೊತ್ತು ಏಕಾಗ್ರತೆ ಹೊಂದಿರುವ ಜೀವಿ ಮೀನು. ಮನಸು ಮರ್ಕಟದಂತೆ ಎನ್ನುತ್ತಾರೆ. ಆದರೆ ಮಂಗನ ಮನಸಿಗಿಂತಲೂ ಚಂಚಲ ಮನಸು ಮೀನಿನದ್ದು.  ಮೀನಿನ ಹೆಜ್ಜೆ ಗುರುತಾದರೂ ಕಂಡು ಹಿಡಿಯಬಹುದು, ಹೆಣ್ಣಿನ ಮನಸಿನ ಭಾವ ತಿಳಿಯದು ಎಂಬ ಮಾತನ್ನೂ ಕೇಳಿದ್ದೇನೆ. ಅದು ಹಾಗಿರಲಿ ಬಿಡಿ ಇನ್ನೊಂದು ಪ್ರಶ್ನೆ ಇದೆ.  ಮೀನು ಗುಡಿ ಯಾವಾಗಲೂ ಹರಿಯುವ ನೀರಿನ ವಿರುದ್ಧ ದಿಕ್ಕಿನಲ್ಲಿ ಮುಖಮಾಡಿ ಸದಾ ಈಜುತ್ತಿರುವುದನ್ನು ನಾನು ಗಮನಿಸಿದ್ದೇನೆ. ಏಕೆ ಅವುಗಳ ರೆ...

ಚೌತಿಯ ಮರುದಿನ

ಚೌತಿಯ ಮರುದಿನ ದವಾಖಾನೆಯ ಬಾಗಿಲಲ್ಲಿ  ಚಪ್ಪಲಿಗಳದೇ ರಾಶಿ  ಕೆಂಪು ಚಪ್ಪಲಿಯ ಅಡಿ ಕರಿಯದು  ಇನ್ನಾವುದೋ ದಿಕ್ಕಿಗೆ ಒಂದು ಬಲ  ಒಂದು ದಿಕ್ಕಿಗೆ ಎಡ  ಸಾಲಾಗಿ ಕುರ್ಚಿ ಮೇಲೊಂದಿಷ್ಟು ಜನ  ಊಟದ ಸಮಯ ಮೀರಿದೆ  ರೋಗಿಗಳು ಸೇರದೆಯೂ  ನಾಲ್ಕು ಕಾಳು ಉಂಡು ಬಂದಿದ್ದಾರೆ.  ವೈದ್ಯರಿಗೆ ಸೇರಿದರೂ  ಉಣ್ಣಲು ಸಮಯವಿಲ್ಲಾ. ಕಿವಿ , ಮೂಗು , ಎಲುಬು ಹೃದಯ  ತಜ್ಞರು ಬರುವವರಿದ್ದಾರೆ.  ವಾರಕ್ಕೊಮ್ಮೆ ಮಾತ್ರ  ಗಲಾಟೆಮಾಡಬೇಡಿ  ಮೂಲೆ ಮೂಲೆಯಲ್ಲೊಂದು ಗಡಿಯಾರ  ಇವೆಲ್ಲಾ ದವಾಖಾನೆ ಗೋಡೆಯ  ಸಿಂಗಾರದ ಅಲಂಕಾರ. ಬಿಳಿಕೋಟು ಧರಿಸಿದ ದೇವದೂತರು ಇದ್ದಾರೆ.  ಮನಸ್ಸು ಮಾಡಿದರೆ ಸ್ವರ್ಗಕ್ಕೂ  ದಾರಿ ತೋರಬಹುದು  ಒಯ್ಯಾರದ ಎಳೆ ನರ್ಸಗಳಿದ್ದಾರೆ. ಅವರಿಗೂ ಔಷಧಿ ಬೇಕಂತೆ  ಇಲ್ಲಿ ಕಾಯಿಲೆಗಳದೆ ಸಂತೆ. ಕೂಗಿಕರೆಯುತ್ತಾರೆ ಒಂದೊಂದೆ ಸಂಖ್ಯೆ. ಒಳಹೊಕ್ಕರೆ ಚುಚ್ಚುವ ಸೂಜಿಯ ನೋವು  ಎಳೆಕಂದಮ್ಮನ ಕಿಟಾ..ರನೆ ಕೂಗು  ಪಾದಕ್ಕಿಂತ ಮೇಲಷ್ಟೆ ಸೀರೆ ಬರುವಂತಾದವರು.  ಪಕ್ಕದಲ್ಲಿ ಪೈಲ್ ಹಿಡಿದ ಗಂಡಂದಿರು. ಅಲ್ಲಿ ಕುಳಿತವರಂತು ಕೇಳಿಯೇ ಕೇಳುತ್ತಾರೆ  ನಿಮಗೇನಾಗಿದೆ !?  ಜ್ವರ , ಜ್ವರ , ಜ್ವರ ... ಸುಮಾ.ಕಂಚೀಪಾಲ್. Sep 16/ 2019

ಹರ್ಷ

ಜುಲೈ 6 ರಿಂದ ಸಪ್ಟೆಂಬರ್ 6 ರ ವರೆಗೆ ಒಟ್ಟು 6000 ಜನರು ನನ್ನ ಬರಹಗಳನ್ನು ಸುಕಂ ಬ್ಲಾಗ್ ನಲ್ಲಿ ಓದಿದ್ದೀರಿ. ( kanchipal.blogspot.com) ನಿಮ್ಮ ಸಹಕಾರ ಎಂದಿಗೂ ಹೀಗೆ ಇರಲಿ ಎಂದು ಆಶಿಸುತ್ತೇನೆ. ನನ್ನ ನಿರೀಕ್ಷೆಯನ್ನು ಮೀರಿದ ಪ್ರತಿಕ್ರಿಯೆಗಳನ್ನು ಕಂಡಿದ್ದೇನೆ.  ಬಾಲ್ಯದ ಕುರಿತಾದ ಬರಹಗಳನ್ನು ಮತ್ತು ಕೆಲವು ಕತೆಯನ್ನು ನೀವು ಹೆಚ್ಚು ಮೆಚ್ಚಿಕೊಂಡಿದ್ದೀರಿ. ಬರೆಯುವದಕ್ಕಾಗಿ ಕೆಲವು ವಿಷಯಗಳನ್ನೂ ಸೂಚಿಸಿ ಸಹಕರಿಸಿದ್ದೀರಿ. ನಾನು ಬರೆದ ಕೆಲವು ಕವನಗಳನ್ನೂ ಸಹ ಹಲವಾರು ಜನ ಮೆಚ್ಚಿಕೊಂಡಿದ್ದೀರಿ  ನನ್ನ ಬರಹಗಳನ್ನು ಇತರರೊಡನೆ ಹಂಚಿಕೊಂಡಿದ್ದೀರಿ. ನಿರಂತರವಾಗಿ ನನ್ನ ಎಲ್ಲ ಬರಹಗಳನ್ನು ಓದುವವರು ಕೆಲವರಿದ್ದೀರಿ ಎಂಬುದು ಓದುಗರ ಸಂಖ್ಯೆಯಿಂದಲೇ ತಿಳಿಯುತ್ತದೆ. ನಿಮ್ಮೆಲ್ಲರ ಈ ಸಹಕಾರವು ನನ್ನ ಮುಂದಿನ ಬರಹಗಳಿಹೆ ಸ್ಪೂರ್ತಿದಾಯಕವಾಗಿದೆ.  ನಿಮ್ಮೆಲ್ಲರ ಸಹಕಾರ ಬಯಸುವ ಇಂತಿ ನಿಮ್ಮವಳು ಸುಮಾ.ಕಂಚೀಪಾಲ್.

ಗಣಪತಿ ಕಂಚೀಪಾಲ್ ಅವರ ಅನುಭವ ಸಂದರ್ಶನ

ಬದುಕನ್ನು ಯಾರು ಪ್ರೀತಿಸುತ್ತಾರೋ ಅವರಿಗೆ ನಿವೃತ್ತಿ ಇಲ್ಲ : ಗಣಪತಿ ಗಾಂವ್ಕರ್ ಮೂವತ್ತಾರು ವರ್ಷಗಳ ಕಾಲ ಸರ್ವೋದಯ ಪ್ರೌಢ ಶಾಲಾ  ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಗಣಪತಿ ಗಾಂವ್ಕರ್. ಈಗ ನಿವೃತ್ತರಾದ ಅವರ ಶೈಕ್ಷಣಿಕ ಬದುಕಿನ ಅನುಭವ ಮತ್ತು ಅವರ ನಿತ್ಯದ ಹಾದಿಯನ್ನು ಈ ಸಂದರ್ಶನದ ಮುಲಕ ನಿಮಗಾಗಿ ತೆರೆದಿಡುತ್ತಿದ್ದೇವೆ. ಪ್ರಶ್ನೆ : ಚಿತ್ರಕಲಾ ಶಿಕ್ಷಕರಾಗಿ  ನೀವು ನಿವೃತ್ತಿ ಹೊಂದಿದ್ದೀರಿ,  ಶಿಕ್ಷಕರಾಗಿ ಸೇವೆ ಸಲ್ಲಿಸಿದ ದಿನಗಳು ಮತ್ತು ಶಾಲೆಯ ಕುರಿತಾಗಿ ನಿಮ್ಮ ಮಾತುಗಳೇನು? ಉತ್ತರ : ನಾನು ಶಿಕ್ಷಕನಾಗಿ ಸೇವೆ ಸಲ್ಲಿಸಿದ ಕುರಿತು ಒಂದು ವಿಷೇಶವಿದೆ. ನಾನು ಕಲಿತದ್ದು ಸರ್ವೋದಯ ಪ್ರೌಢ ಶಾಲೆ ವಜ್ರಳ್ಳಿಯಲ್ಲಿ  ನನ್ನ ಇಬ್ಬರು ಮಕ್ಕಳು ಕಲಿತದ್ದು ಇದೇ ಶಾಲೆಯಲ್ಲಿ. ನನ್ನ ವಿದ್ಯಾರ್ಥಿಯೂ ಇಲ್ಲೇ ಕಲಿತು ಈಗ ಇದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದಾನೆ. ನನ್ನ ಮೂವತ್ತಾರು ವರ್ಷದ ಎಂಟುತಿಂಗಳ ಶಿಕ್ಷಕ ವೃತ್ತಿಯನ್ನು ನಾನು ಕೇವಲ ಇದೊಂದೇ ಶಾಲೆಯಲ್ಲಿ ಕಳೆದಿದ್ದೇನೆ ಆದ್ದರಿಂದ ಇದು ಕೇವಲ ಶಾಲೆಯಲ್ಲ ನನ್ನದು ನಮ್ಮ ಮನೆ ಎಂಬ ಭಾವನೆ ಇದೆ. ಪ್ರಶ್ನೆ : ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ದಿನಗಳಿಗೂ ಮತ್ತು ನಿವೃತ್ತಿ ಬದುಕಿಗೂ ಏನು ವ್ಯತ್ಯಾಸವಿದೆ ಮತ್ತು ಈಗಿನ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ? ಉತ್ತರ : ಶಾಲಾ ದಿನಗಳಲ್ಲಿ ದಿನನಿತ್ಯವೂ ಮಕ್ಕಳೊಟ್ಟಿಗೆ ಒಡನಾಟವಿರುತ...

ಗೋಡೆಗೆ ಅಂಟಿದ ಮುಖ

ಅವಧಿ ಗೋಡೆಗೆ ಅಂಟಿದ ಮುಖ ಸದಾ ನಗುಮೊಗ ತಾನು ತನ್ನದು ಎಂದು ಅವನ ಪಾಡಿಗೆ ಅವನು ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ ಸೂರ್ಯನಾರಾಯಣ. ಅವನದು ಪುಟ್ಟ ಮನೆ ಮನೆತುಂಬಾ ಬಟ್ಟೆ ಮತ್ಯಾರೂ ಇಲ್ಲ ಇವನೊಬ್ಬನೆ. ಯಾಕೆ ಗೊತ್ತಾ? ಇವನು ಊರು ಬಿಟ್ಟು ಪಟ್ಟಣಕ್ಕೆ ಬಂದುಳಿದು ಹಲವು ವರ್ಷಗಳೇ ಕಳೆದಿವೆ. ಇವನು ಹೊಲಿಗೆ ಮಾಡುವ ಒಬ್ಬ ಸಾಮಾನ್ಯ ವ್ಯಕ್ತಿ. ಅಗತ್ಯಕ್ಕಿಂತ ಹೆಚ್ಚಿನದನ್ನು ಎಂದಿಗೂ ಬಯಸದ ಸದ್ಗುಣಿ. ಅವನ ಬಾಳ ಸಂಗಾತಿ ಹೊಲಿಗೆ ಯಂತ್ರವೇ ಆಗಿಹೋಗಿದೆ. ಆದರೆ ನಮ್ಮ ನಾಣಿಗೀಗ ಮದುವೆ ವಯಸ್ಸು ಬಂದಿದೆ. " ನಿಮ್ಮಲ್ಲಿ ಯಾರಾದರೂ ಒಳ್ಳೆಯ ಹೆಣ್ಣಿದ್ದರೆ ತಿಳಿಸಿ" ಎಂದು ಹೇಳುವುದಕ್ಕೂ ಅವನ ಜನರು ಅಲ್ಲಿಲ್ಲಾ. ಇವನೇ ಹಾಗೆ ಹೇಳಿಕೊಳ್ಳೊಕೆ ಆಗೋದಿಲ್ಲಾ. ವರ್ಷಕೊಮ್ಮೆ ಬಂದು ತನ್ನ ತಾಯಿಗೆ ಸೀರೆಕೊಟ್ಟು, ಸ್ವಲ್ಪ ಮಟ್ಟಿನ ಹಣ ಕೊಟ್ಟು ಹೋಗುವುದು ಅವನ ರೂಡಿ ದೂರದಿಂದ ಬಂದರೂ ಮನೆಯಿಂದ ಅಣ್ಣ ಹೊರಹಾಕಿದ್ದ ಎನ್ನುವ ಕಾರಣಕ್ಕಾಗಿ ಈತ  ಮನೆಗೇ..ಬಂದರು ಅಂಗಳದಲ್ಲಿಯೇ ಕುಳಿತು ಒಂದು ಗುಟುಕು ನೀರನ್ನೂ ಕುಡಿಯದೆ ಹೊರಗಿನಿಂದ ಹೊರಗೇ ತಾಯಿಯನ್ನು ಮಾತನಾಡಿಸಿ ಹೋಗುತ್ತಿದ್ದ. ಇದು ಹೀಗೆ ನಡೆಯಲು ಪ್ರಾರಂಭವಾಗಿ ಏಳೆಂಟು ವರ್ಷಗಳೇ ಕಳೆದು ಹೋಗಿದೆ. ಅತ್ತಿಗೆಗೆ ಮೈದುನನ್ನು ಕಂಡು ಕನಿಕರ ಗಂಡನಿಗೆ ಕಾಣದ ಹಾಗೆ ಹಲಸಿನ ಹಪ್ಪಳ, ಸಂಡಿಗೆ , ಚಕ್ಕುಲಿ ಇಂತವನ್ನು ಡಬ್ಬಿಯಲ್ಲಿ ತುಂಬಿ ಗಂಡನ ಕಣ್ಣಿಗೆ ಕಾಣದಂತೆ ಅವನ ಗಾಡಿಗೆ ಮುಟ್ಟ...

ಮದುಮಗಳು

ಮದುಮಗಳು ಮೂರುದಿನಕಳೆದರೆ ಮದುವೆ ಆಕೆಗೆ ಮನೆಮುಂದೆ ಚಪ್ಪರ ತೋರಣದ ತಯಾರಿ ಮನೆಮಂದಿ ಕೆಲಸದಲಿ ತೊಡಗಿರಲು ಮನದಲ್ಲೆ  ಮಾಡಿಹಳುಮದುವೆಯ ಕನಸ ಕುಸುರಿ  ಮದರಂಗಿ ರಂಗಲ್ಲೆ ಪ್ರೀತಿಯ ತೂಕ ಹೊಸ ಸೀರೆಯ ಉಡುವಂತ ಕೌತುಕ ಮನೆ ಬಿಟ್ಟು ಮನೆ ಸೇರುವ ಆತಂಕ. ಮನೆತನಗಳಾ ನಡುವೆ ಮೂಡುವುದು ಒಲವ ಸಂಕ ಒಡವೆಗಳಿಗೆ ಜವಳಿಗೆ ಕೊಡಬೇಕು ಸುಂಕ. ಅವನೊಡನೆ ಮಾತಲ್ಲಿ ಒಂಚೂರು ಬಿಂಕ. ಕುಡಿ ಕುಡಿದು ಸವಿಯಾದ ಪಾನಕ ಕೇಳಿದರೂ ಕಿರಿಮಗಳ ಜಾತಕ                                                   -   ಸುಮಾ.ಕಂಚೀಪಾಲ್

ಬೇರಿನ‌ ಅರಿವು

ಪರಿಸರದ ಉಳಿವಿಗೆ  ಬೇರಿನ ಅರಿವು. ಮಾನವ ಪರಿಸರ ಸ್ನೇಹಿಯಾಗದ ಹೊರತು ಪರಿಸರ ಮಾನವನನ್ನು ಪ್ರೀತಿಸುವುದಿಲ್ಲ. ‌ಪ್ರತಿಯೊಬ್ಬ ಮನುಷ್ಯನಿಗೂ ಪರಿಸರ ರಕ್ಷಣೆ ಮಾಡಬೇಕೆಂಬ ವಾಕ್ಯ ತಿಳಿದಿದೆ.  ಆದರೆ ಅದನ್ನು ಅನುಸರಿಸುವ ಜನ ವಿರಳ. ಮರದ ಬೇರುಗಳ ಬಗ್ಗೆ ಒಂದಷ್ಟು ಮಾಹಿತಿಗಳ ಅರಿವು ಇದ್ದರೆ ಪರಿಸರ ಸಂರಕ್ಷಣೆ ಸುಲಭ. ಕೆಲವು ಮರಗಳ ಕುರಿತಾಗಿ ಅಧ್ಯಯನ ಮಾಡಿದಾಗ ತಿಳಿದು ಬಂದ ವಿಷಯಗಳು ಎನೆಂದರೆ ಮರದ ಬೇರುಗಳು ಬಲವಾಗಿಲ್ಲ ಎಂಬುದು. ಎಲೆಗೊಂದರಂತೆ ಬೇರುಗಳಿರಬೇಕು. ಮರ ಎಷ್ಟು ಎತ್ತರವಿದೆಯೋ ಅದರಷ್ಟು ಆಳದವರೆಗೆ ಬೇರು ಹರಡಿರ ಬೇಕು. ಆದರೆ ಮಾನವನ ಆಧುನಿಕತೆಯ ಪರಿಣಾಮವಾಗಿ ರಸ್ತೆ, ಕಟ್ಟಡಗಳ ನಿರ್ಮಾಣಕ್ಕಾಗಿ ಮತ್ತು ಚರಂಡಿ ನಿರ್ಮಾಣಕ್ಕಾಗಿ ಮರವನ್ನು ಕತ್ತರಿಸುವುದರೊಟ್ಟಿಗೆ ಸಮೀಪವಿರುವ ಮರದ ಬೇರುಗಳನ್ನು ಕತ್ತರಿಸಲಾಗುತ್ತಿದೆ. ಇದರಿಂದ ಸಣ್ಣ ಗಾಳಿ, ಮಳೆ ಬಂದರೂ ಸಹ ಮರಗಳು ಧರೆಗೆ ಉರುಳುವ ಘಟನೆ ಹೆಚ್ಚಾಗಿದೆ. ಅಕೇಶಿಯ ಮತ್ತು ನೀಲಗಿರಿ ಮರಗಳು ಇರುವ ಕಡೆಯಲ್ಲಿ ಬೇರೆ ಮರಗಳು ಬೆಳೆಯುವುದಿಲ್ಲ. ಮತ್ತು ಮಣ್ಣಿನ ಗುಣಮಟ್ಟದ ಕೊರತೆ ಉಂಟಾಗುತ್ತದೆ. ಈ ವಿಷಯ ಅಧ್ಯಯನದ ಮೂಲಕ ಸಾಬೀತಾಗಿದೆ. ಕೆಲವೆಡೆ ಇಂತಹ ಮರಗಳನ್ನು ಬೇರು ಸಮೇತವಾಗಿ ಕಿತ್ತು ಹಾಕಲಾಗಿದೆ. ಮರಗಳಿಗೂ ಮಾನನವನಿಗೆ ಬಂದಂತೆ ಹಲವಾರು ಕಾಯಿಲೆಗಳು ಬಾದೆಗಳು ಎದುರಾಗುತ್ತವೆ. ಭೂಮಿಯ ಸುರಕ್ಷೆಗಾಗಿ ಮತ್ತು ಮರದ ಉಳಿವಿಗಾಗಿ ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಇಟ್ಟು ಕಾಪಾಡಿ...

ಸೂರ್ಯನ ನೆರಳು.

ಸೂರ್ಯನ ನೆರಳು ಅನುವಾದಿತ ಕೃತಿಯ ಓದು ಆಪ್ರಿಕಾ ಖಂಡದ ಕುರಿತು ಅಷ್ಟೇನೂ ತಿಳಿದಿರದ ನಮಗೆ ಆಫ್ರಿಕಾ ಒಂದು ಕಗ್ಗತ್ತಲೆಯ ಖಂಡ ಎಂಬ ವಾಕ್ಯ ಒಂದು ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಆಫಿಕಾದಲ್ಲಿ ಸದಾಕಾಲ ಕಡುಗತ್ತಲೇ ಇರುತ್ತದೆಯೇ? ಬರೀ ದಟ್ಟ ಕಾಡು ಹರಿವ ನದಿ, ಸೂರ್ಯನ ಬೆಳಕೇ ಇಲ್ಲದ ಜಾಗವೇ? ಇಂತಹ ಕುತೂಹಲ ಕೆರಳಿಸುವ ವಿಷಯಗಳಿಗಷ್ಟೇ ಸೀಮಿತವಾಗಿದ್ದೇವೆ ಹೊರತಾಗಿ ಅಲ್ಲಿನ ಭೌಗೋಳಿಕ ರಚನೆ, ಸಾಮಾಜಿಕ ಜನಜೀವನ, ಸಂಪ್ರದಾಯ ಆಹಾರಪದ್ದತಿ ಇದಾವುದರ ಕುರಿತಾಗಿಯೂ ನಾವು ತಲೆಕೆಡಿಸಿಕೊಂಡವರಲ್ಲ.  ರೈ಼ಷಾರ್ಢ ಕಪುಶಿನಸ್ಕೀ ಒಬ್ಬ ಅತ್ಯುತ್ತಮ ಪತ್ರಕರ್ತ ಆಪ್ರೀಕಾದ ಕುರಿತು ಇಂಚಿಚನ್ನೂ ವಿಸ್ತಾರವಾಗಿ ವಿವರಿಸಿದ ಪುಸ್ತಕ ಸೂರ್ಯನ ನೆರಳು ಈ ಪುಸ್ತಕವನ್ನು ಓದಿದ ನಂತರವೇ ನಮಗೆ ಆಫ್ರಿಕಾದ ಶೋಚನೀಯ ಸ್ಥಿತಿ ಅಲ್ಲಿನ‌ ಜನರ ಪರಿಸ್ಥಿತಿ ವರ್ಣಭೇದ ನೀತಿ ಮತ್ತಿತರ  ಎಷ್ಟೋ ವಿಷಯಗಳ ಕುರಿತು ನಮಗೂ ಅರಿವು ಮೂಡುವುದು. ಒಬ್ಬ ಪತ್ರಕರ್ತನಾದವನು ಎಷ್ಟರ ಮಟ್ಟಿಗೆ ಜನರನ್ನು ಮುಟ್ಟಬಹುದು ಎನ್ನುವುದಕ್ಕೆ ಈ ಪುಸ್ತಕ ಒಂದು ಉತ್ತಮ ಉದಾಹರಣೆಆಗಿದೆ. ಪೋಲೆಂಡಿನ ಪತ್ರಕರ್ತ ರೈಷಾರ್ಡ್ ಕಪ್ಯುಶಿನಸ್ಕಿ  'ಹೆಬಾನ್' ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಬರೆದರು. ಇದನ್ನು ಕ್ಲಾರಾ ಗ್ಲೋವೆಸ್ಕಾ ಇಂಗ್ಲಿಷ್ ಗೆ 'ಶಾಡೋ ಆಫ್ ದ ಸನ್' ಎಂಬ ಹೆಸರಿನಲ್ಲಿ ಅನುವಾದಿಸಿದರು. ಇದನ್ನು ಸಹನಾ ಹೆಗಡೆಯವರು ಕನ್ನಡಕ್ಕೆ " ಸೂರ್ಯನ ನೆರಳು" ಎಂಬ ಹೆಸರಿ...