Skip to main content

ಗಣಪತಿ ಕಂಚೀಪಾಲ್ ಅವರ ಅನುಭವ ಸಂದರ್ಶನ

ಬದುಕನ್ನು ಯಾರು ಪ್ರೀತಿಸುತ್ತಾರೋ ಅವರಿಗೆ ನಿವೃತ್ತಿ ಇಲ್ಲ : ಗಣಪತಿ ಗಾಂವ್ಕರ್

ಮೂವತ್ತಾರು ವರ್ಷಗಳ ಕಾಲ ಸರ್ವೋದಯ ಪ್ರೌಢ ಶಾಲಾ  ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಗಣಪತಿ ಗಾಂವ್ಕರ್. ಈಗ ನಿವೃತ್ತರಾದ ಅವರ ಶೈಕ್ಷಣಿಕ ಬದುಕಿನ ಅನುಭವ ಮತ್ತು ಅವರ ನಿತ್ಯದ ಹಾದಿಯನ್ನು ಈ ಸಂದರ್ಶನದ ಮುಲಕ ನಿಮಗಾಗಿ ತೆರೆದಿಡುತ್ತಿದ್ದೇವೆ.

ಪ್ರಶ್ನೆ : ಚಿತ್ರಕಲಾ ಶಿಕ್ಷಕರಾಗಿ  ನೀವು ನಿವೃತ್ತಿ ಹೊಂದಿದ್ದೀರಿ,  ಶಿಕ್ಷಕರಾಗಿ ಸೇವೆ ಸಲ್ಲಿಸಿದ ದಿನಗಳು ಮತ್ತು ಶಾಲೆಯ ಕುರಿತಾಗಿ ನಿಮ್ಮ ಮಾತುಗಳೇನು?

ಉತ್ತರ : ನಾನು ಶಿಕ್ಷಕನಾಗಿ ಸೇವೆ ಸಲ್ಲಿಸಿದ ಕುರಿತು ಒಂದು ವಿಷೇಶವಿದೆ. ನಾನು ಕಲಿತದ್ದು ಸರ್ವೋದಯ ಪ್ರೌಢ ಶಾಲೆ ವಜ್ರಳ್ಳಿಯಲ್ಲಿ  ನನ್ನ ಇಬ್ಬರು ಮಕ್ಕಳು ಕಲಿತದ್ದು ಇದೇ ಶಾಲೆಯಲ್ಲಿ. ನನ್ನ ವಿದ್ಯಾರ್ಥಿಯೂ ಇಲ್ಲೇ ಕಲಿತು ಈಗ ಇದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದಾನೆ. ನನ್ನ ಮೂವತ್ತಾರು ವರ್ಷದ ಎಂಟುತಿಂಗಳ ಶಿಕ್ಷಕ ವೃತ್ತಿಯನ್ನು ನಾನು ಕೇವಲ ಇದೊಂದೇ ಶಾಲೆಯಲ್ಲಿ ಕಳೆದಿದ್ದೇನೆ ಆದ್ದರಿಂದ ಇದು ಕೇವಲ ಶಾಲೆಯಲ್ಲ ನನ್ನದು ನಮ್ಮ ಮನೆ ಎಂಬ ಭಾವನೆ ಇದೆ.


ಪ್ರಶ್ನೆ : ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ದಿನಗಳಿಗೂ ಮತ್ತು ನಿವೃತ್ತಿ ಬದುಕಿಗೂ ಏನು ವ್ಯತ್ಯಾಸವಿದೆ ಮತ್ತು ಈಗಿನ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ?
ಉತ್ತರ : ಶಾಲಾ ದಿನಗಳಲ್ಲಿ ದಿನನಿತ್ಯವೂ ಮಕ್ಕಳೊಟ್ಟಿಗೆ ಒಡನಾಟವಿರುತ್ತಿತ್ತು. ಸಹ ಶಿಕ್ಷಕರ ಗೆಳೆತನವಿತ್ತು. ದಿನ ನಿತ್ಯವು ಶಿಸ್ತಿನ ಬದುಕು ಮತ್ತು ಸಮಯಪಾಲನೆಗೆ ಪ್ರಾಮುಖ್ಯತೆ ಇರುತ್ತಿತ್ತು. ಈಗ ಆ ನಿಟ್ಟಿನಲ್ಲಿ ಕೊಂಚ ಬೇಸರ ಎನಿಸುತ್ತದೆ. ಈಗಿನ ದಿನವೆಂದರೆ ಶಿಸ್ತು ಸಮಯಪಾಲನೆ ಬದಲಾಗಿದೆ ಆದರೂ ನಿವೃತ್ತಿ ಇಲ್ಲ ಬೇರೆ ಬೇರೆ ಕೃಷಿ, ಸಾಹಿತ್ಯ, ಕಲೆ ಇವುಗಳಲ್ಲಿ ನನ್ನನ್ನು ಹೆಚ್ಚು ತೊಡಗಿಸಿಕೊಂಡಿದ್ದೇನೆ ಬಿಡುವಿಲ್ಲದ ವೇಳೆಗಳನ್ನು ಕಳೆಯುತ್ತಿದ್ದೇನೆ.



ಪ್ರಶ್ನೆ : ನಿಮ್ಮ ಪ್ರಕಾರ ವಿದ್ಯಾರ್ಥಿಗಳ ಬದುಕಿನಲ್ಲಿ ಒಬ್ಬ ಶಿಕ್ಷಕನ‌ಪಾತ್ರ ಎಷ್ಟು ಮುಖ್ಯ ಮತ್ತು ಶಿಕ್ಷಕ ತನ್ನನ್ನು ತಾನು ಹೇಗೆ ರೂಪಿಸಿಕೊಳ್ಳಬೇಕು?

ಉತ್ತರ : ಒಬ್ಬ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕ ಒಬ್ಬ ತಂದೆಯ ಪಾತ್ರ, ಮಾರ್ಗದರ್ಶಕನ ಪಾತ್ರ ಮತ್ತು ಒಂದು ಒಳ್ಳೆಯ ಸ್ನೇಹಿತನ ಪಾತ್ರವನ್ನು ನಿರ್ವಹಿಸುತ್ತಾನೆ. ಚಿತ್ರಕಲಾ ಶಿಕ್ಷಕನಾದ ನಾನು ಚಿತ್ರಕಲೆಯೊಟ್ಟಿಗೆ ಜೀವನ ಕೌಶಲ್ಯಗಳನ್ನು ಕಲಿಸುತ್ತಿದ್ದೆ. ಯೋಗ, ಧ್ಯಾನ , ಪ್ರಾಣಾಯಾಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರನ್ನು ಹುರಿದುಂಬಿಸುತ್ತಿದ್ದೆ. ಹೀಗೆ ಪ್ರತಿಯೊಬ್ಬ ಶಿಕ್ಷಕನು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಮಕ್ಕಳಿಗೆ ಹಿಡಿಸುವಂತ ಚಟುವಟಿಕೆಗಳ ಮುಲಕ ಅವರ ಸಾಧನೆಗೆ ಸಹಕಾರಿಯಾಗಬೇಕು.

ಪ್ರಶ್ನೆ : ವೃತ್ತಿ ಜೀವನದಲ್ಲಿ ನಿಮಗೆ ಖುಷಿ ತಂದುಕೊಟ್ಟ ವಿಷಯಗಳೇನು?
ಉತ್ತರ : ಅತೀ ಹೆಚ್ಚು ಖುಷಿ ನೀಡುವ ವಿಚಾರಗಳೆಂದರೆ ಮಕ್ಕಳ ಸಾಧನೆ. ಪ್ರತಿಭಾ ಕಾರಂಜಿ ಮತ್ತು ಕೆಲವು ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ಜಿಲ್ಲಾ ಮಟ್ಟ ರಾಜ್ಯ ಮಟ್ಟಗಳಲ್ಲಿ ಪ್ರಥಮ ಬಹುಮಾನಗಳು ದೊರೆತಿದ್ದವು‌. ಕೆಲವೊಮ್ಮೆ ಚಿತ್ರಕಲೆ ಹಲವುಬಾರಿ ನಾಟಕ ಸ್ಪರ್ಧೆ ಇವುಗಳು ನನಗೆ ಸದಾ ನೆನಪಿನಲ್ಲಿ ಉಳಿಯುವ ದಿನಗಳು. ಮತ್ತು ಮಕ್ಕಳು ಏನಾದರು ಕೇಳಿದಾಗ ಅವರಿಗೆ ಅದನ್ನು ಕೊಡಿಸಿದಾಗ ತೃಪ್ತಿ ಸಿಗುತ್ತಿತ್ತು ಅದು ಒಂದು ಚಿಕ್ಕ ಚಾಕಲೇಟ್ ಇಲ್ಲ ಪಾಯಸದ ಊಟ ಹೀಗೆ ಅವರ ಸಣ್ಣ ಸಣ್ಣ ಬೇಡಿಕೆಗಳನ್ನು ಪೂರೈಸಿ ಖುಷಿ ಎಂದಿಗೂ ಹಸಿರು.

ಇತ್ತೀಚಿನ ವಿದ್ಯಾರ್ಥಿಗಳಿಗಿಂತ ಹಳೆಯ ವಿದ್ಯಾರ್ಥಿಗಳೊಂದಿಗಿನ ನೆನಪು ಹೆಚ್ಚು ಕಾಡುತ್ತದೆ. ಅವರನ್ನು ಹೆಚ್ಚು ಆತ್ಮೀಯತೆಯಿಂದ ಕಂಡಿರುತ್ತೇವೆ. ಒಡನಾಟಗಳು ಕಡಿಮೆ ಇದ್ದರೂ ಸಹ ಬಾಂಧವ್ಯ ಹೆಚ್ಚಿರುತ್ತದೆ.



ಪ್ರಶ್ನೆ : ನೀವೂ ಸಹ ಶಿಕ್ಷಕರಾಗುವ ಮೊದಲು ಒಬ್ಬ ವಿದ್ಯಾರ್ಥಿಯಾಗಿರುತ್ತೀರಿ ಆಗ ಬೆಳೆಸಿಕೊಳ್ಳುವ ಹವ್ಯಾಸ ಮುಂದಿನ ಜೀವನಕ್ಕೆ ಎಷ್ಟು ಸಹಾಯಕವಾಗಿರುತ್ತದೆ?

ಉತ್ತರ: ನಾನು ವಿದ್ಯಾರ್ಥಿಯಾಗಿದ್ದ ಕಾಲಮಾನ ಹಳೆಯದಿತ್ತು ಅಂದಿಗಿಂತ ಇಂದು ಹವ್ಯಾಸಗಳು ಬಹಳ ಮುಖ್ಯವಾಗುತ್ತವೆ. ವೃತ್ತಿ ಜೀವನದೊಟ್ಟಿಗೆ ಹವ್ಯಾಸಗಳು ನಮ್ಮ ಕೈ ಹಿಡಿಯುತ್ತವೆ. ನಾನು ಶಿಕ್ಷಕ‌ನಾಗಿರುವಾಗಲೂ ಸಹ ನನ್ನ ಕೆಲವು ಹವ್ಯಾಸಗಳನ್ನು ಉಳಿಸಿಕೊಂಡಿದ್ದೆ. ದ್ಯೇಯನಿಷ್ಟ ಪತ್ರಕರ್ತ ಎನ್ನುವ ಪತ್ರಿಕೆಯಲ್ಲಿ ವರದಿಗಾರನಾಗಿ ಸುದ್ದಿ, ಲೇಖನ ಮತ್ತು ವ್ಯಂಗ್ಯ ಚಿತ್ರರಚನಾಕಾರನಾಗಿ ಕೆಲಸ ಮಾಡಿದ್ದೆ. ಕಲಾ ಪ್ರದರ್ಶನಗಳು, ಬರವಣಿಗೆ, ನಾಟಕ, ಯೊಗ ತರಬೇತಿ ಹೀಗೆ ಹಲವು ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದ್ದವು ಅದೇ ನನ್ನ ಕೈ ಹಿಡಿದಿದೆ.

ಪ್ರಶ್ನೆ : ನಿಮ್ಮ ನಿವೃತ್ತಿ ಜೀವನದ ದಿನಗಳನ್ನು ಹೇಗೆ ಕಳೆಯಲು ಬಯಸುತ್ತಿದ್ದೀರಿ?

ಉತ್ತರ:  ನಾನು ನನ್ನ ಹೆಚ್ಚಿನ ಸಮಯವನ್ನು ಕೃಷಿ ಮತ್ತು ಸಾಹಿತ್ಯದಲ್ಲಿ ಕಳೆಯಲು ಬಯಸುತ್ತೇನೆ.‌ ಆದರೆ ಕೃಷಿಯಲ್ಲೇ ಹೆಚ್ಚಿನ ಸಮಯ ವ್ಯಯವಾಗುತ್ತಿದ್ದು ಸಾಹಿತ್ಯದ ಕಡೆಗೆ ಗಮನಹರಿಸಲು ಸಮಯ ಸಾಲುತ್ತಿಲ್ಲ. ಈಗಾಗಲೇ ಒಂದು ಮಕ್ಕಳ ಕತೆಗಳ ಪುಸ್ತಕವನ್ನು ಬಿಡುಗಡೆ ಮಾಡಿದ್ದೇನೆ. ಒಮದು ಕತಾ ಸಂಕಲನ , ಕವನ ಸಂಕಲನ ಮತ್ತು ಚಿತ್ರಕಲಾ ಪುಸ್ತಕವನ್ನು ಬಿಡುಗಡೆಮಾಡುವ ಹಂಬಲವಿದೆ.

ಇವರು
ಅಖಿಲ ಭಾರತ ಕನ್ನಡ ಪರಿಷತ್ತಿನ ಜವಾಬ್ದಾರಿ ಹೊತ್ತಿದ್ದಾರೆ. ಅದಕ್ಕಾಗಿ ಕೆಲವು ಆನ್ ಲೈನ್ ಕಾರ್ಯಕ್ರಮ ಮಾಡುತ್ತಿದ್ದಾರೆ.  ಮೈತ್ರಿ ಕಲಾ ಬಳಗ ಎಂಬ ಕಲಾ ವೇದಿಕೆಯನ್ನು ಮೊದಲಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಅದರ ಸಹಯೋಗದಲ್ಲಿ  ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿಧಿ ಸ್ಥಾಪಿಸಿದ್ದು‌ ಪ್ರತೀ ವರ್ಷ ಎಂಟರಿಂದ ಹತ್ತನೆ ತರಗತಿಯ ಮೂರು ವಿದ್ಯಾರ್ಥಿಗ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಮಾಡುತ್ತಿದ್ದಾರೆ. "ಕಾಗದ ಪತ್ರ ಮತ್ತು ಕಡತಗಳಲ್ಲಿ ನಿವೃತ್ತಿ ಹೊಂದಿದ್ದೇನೆ ಹೊರತಾಗಿ ಕೆಲಸಗಳಿಂದಲ್ಲ". ಎಂಬುದು ಅವರ ಮಾತು

ಸುಮಾ.ಕಂಚೀಪಾಲ್


Comments

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...