Skip to main content

Posts

Showing posts with the label ಕವಿತೆ

ಮಳೆ

ಅವಧಿ ಮಳೆ - ಇಳೆ ಜೋರಾಗಿ ಬೀಸುವ ಗಾಳಿ ಮರಗಿಡಗಳ ನಲುಗಿಸಿತು ಹಸಿರು ಹಾಸಿದ ಇಳೆಯ ನಡುಗಿಸಿತು ಗುಡುಗು ಮೊಳಕೆಯೊಡೆದು ಮಿಂಚ ಹೂ ಬಿಟ್ಟಿತು ಬಾನಿಂದ ಭುವಿಯಗಲ ಎಲ್ಲ ಬೆಳಗಿಸಿತು. ಹಾಸಿ ಹಬ್ಬಿದ ಹಸಿರು ಕಣ್ಮನ ಸೆಳೆದು ಫಲ ತಂತು ಅಬ್ಬರಿಸದಿರು ಮಳೆಯೇ ಸ್ವಲ್ಪ ನಿಧಾನಿಸಿ ಸುರಿದು ಬಿಡು ಈ ಇಳೆಯ ದಾಹ ತಣಿದಿದೆ ಮತ್ತೆ ಭೂರಮೆ ಕಾಯ್ವುದು‌. ಹೀಗೆ ಸುರಿದು ಬಿಡು ಮುಂದೊಮ್ಮೆ ನನ್ನ ಮಕ್ಕಳ ಮಕ್ಕಳು ನಿನ್ನ ನೋಡಲಿ ಸುಮಾ.ಕಂಚೀಪಾಲ್

ಅಳು

ಸುಕಂ ಅಳು ಚಿಕ್ಕ ಮಗುವಿಗೆ ಹಸಿವಿನ ಅಳು ಅಮ್ಮನಿಗೆ ಕಂದನ ಅಳು ಯಜಮಾನನಿಗೆ ಹಣದ ಅಳು  ಮಗಳಿಗೆ ಅಪ್ಪನ ಬೈಗುಳದ ಅಳು ಮಗನಿಗೆ ಬಿದ್ದು ಪೆಟ್ಟಾದ ಗಾಯದ ಅಳು ಮನೆಯ ಹಿರಿಯನಿಗೆ ವೃದ್ಧಾಪ್ಯದ ಅಳು ಮದುವೆಯಾಗದೆ ಉಳಿದವಳಿಗೆ  ಬದುಕಿನ ಅಳು. ವಿಧವೆಗೆ ಗಂಡನಿಲ್ಲವೆಂಬ ಅಳು  ಕೈ ಕಾಲುಗಳಿಗೆ ಸ್ವಯ ಇಲ್ಲದವರಿವೆ  ಅಂತರಂಗದ ಅಳು ಕೆಲಸ ಸಿಗದವನಿಗೆ ಕೀಳರಿಮೆಯ ಅಳು.  ಹಾ!! ಸಾಕು ಇಂತಹ ಸಾವಿರಾರು  ಅಳು ಅಳುಕಿಲ್ಲದೆ ಇದೆ.  ಸುಮಾ.ಕಂಚೀಪಾಲ್

ನಾಟ್ಯ

ನೆರಿಗೆ ಗೆರೆಗಳ ಸರಿಪಡಿಸಿ ಒಂದೊಂದೆ ಪದರ ಬಿಡಿಸಿ ಉಟ್ಟಿದ್ದಾಳೆ ಭೂಮಿ ತನ್ನ ಸೀರೆ. ಸಿಕ್ಕು ಕೂದಲು ಬಿಡಿಸಿ ತನ್ನದಲ್ಲದ ವೇಷ ಧರಿಸಿ ಸಿದ್ದವಾಗಿದ್ದಾಳೆ ಭೂಮಿ ನಾಟ್ಯಕ್ಕೆ ಚಿತ್ರ: ಕಾರ್ತಿಕ್ ಅರೆಮನೆ ( ಪಟ - ಸೌಭಾಗ್ಯ ಹಂದ್ರಾಳ್)  ಹೆಜ್ಜೆ ಹೆಜ್ಜೆಗು ಗೆಜ್ಜೆ ಧ್ವನಿಸಿ ಮೈಯೊಳಗೆ ಪುಳಕ ಹರಿಸಿ ಕಿವಿತುಂಬಿ ಕೊಂಡಿದ್ದಾಳೆ ವಾದ್ಯ ಸಿರಿ ಮೈಮರೆಸಿ‌ ತಾಮರೆತು ನಾಟ್ಯವಾಡುತ್ತಾಳೆ ಮಯೂರಿ ತನ್ನ ಒಡಲು ತಣಿವರೆಗೆ ಸುಮಾ.ಕಂಚೀಪಾಲ್

ಜಾರಿತು ತುತ್ತೂರಿ

ಜಾರಿತು ತುತ್ತೂರಿ. ಪುಟ್ಟ ಸಾಗಿದ್ದಾಳೆ ಜಾತ್ರೆಯಲ್ಲಿ ಅಮ್ಮನ ದೊಡ್ಡ ಕೈಗಳನ್ನು ತನ್ನ ಪುಟ್ಟಿ ಬೆರಳುಗಳಲ್ಲಿ ಬಿಗಿಹಿಡಿದು. ಭಯವಾಗುತ್ತಿದೆ ಜಾತ್ರೆಯ ಗೌಜು ಗದ್ದಲಕ್ಕೆ ಸುತ್ತಿ ಸುತ್ತಿ ಸೋತಿದ್ದಾಳೆ. ಅಪ್ಪನ ಬೆನ್ನು ಜೋತುಬೀಳುವ ಹೊತ್ತು ಇನ್ನೊಂದೆಡೆ ನಿದ್ದೆ ತೂಗುತಿತ್ತು. ಪಕ್ಕದ ಅಂಗಡಿಯ ಪೀ ಪೀ ಸದ್ದು. ಪುಟ್ಟಿ ನೋಡಿದಳು ನಿದ್ದೆಇಂದೆದ್ದು. ಮತ್ತೆ ಓಡಿದಳು ಅಪ್ಪನ ಬಿಟ್ಟು. ಅಮ್ಮ ನೋಡಿದರೊಮ್ಮೆ ದೊಡ್ಡ ಕಣ್ಬಿಟ್ಟು. ಮನೆಗೆ ಮರಳವಾಗ ಹಠ ಮಾಡಿ ತಂದ ತುತ್ತೂರಿ ದಾರಿಯಲ್ಲೇ ಬಿತ್ತು ಪುಟ್ಟಿ ಕೈಜಾರಿ. ಸುಮಾ.ಕಂಚೀಪಾಲ್

ಹಳೆ ಮನೆ

ಎಷ್ಟೆಲ್ಲ ನೆನಪಿತ್ತು  ಮಣ್ಣಿನ ಪರಿಮಳ ಸೂಸುವ ಆ ಗೋಡೆಗಳಲ್ಲಿ.  ಜಾರುವ ಅಬ್ಬಿಕುಳಿಯ ನುಂಪು ಕಲ್ಲುಗಳಲ್ಲಿ ಮಾಡುಗುಳಿಯ ಹಂಚಿನ ಅಂಚಿನಲ್ಲಿ ಸಿಕ್ಕಿಸಿದ  ಹಲ್ಲುಜ್ಜುವ ಬ್ರಷ್ ನಲ್ಲಿ ಯಾವಾಗಲೂ ವರತೆ  ಹರಿಸುವ ಬೆಲಗಿನ ನೀರಿನಲ್ಲಿ ಎಷ್ಟೋ ಇತ್ತು ಈ ಹಳೆಯ ನಿತ್ಯ ಜೀವನದಲ್ಲಿ.  ಪಾತ್ರೆ ತೊಳೆಯುವ ಬಟ್ಟಲಿಗೆ ಅಂಟಿದ ಬೂದಿಯಲ್ಲಿ. ಗೋಡೆಗೆ ಆಗಿದ್ದ ಅಮ್ಮನ  ಒದ್ದೆ ಕೈಗಳ ಅಚ್ಚಿನಲ್ಲಿ. ಉಳಿಸಿಕೊಳ್ಳಲಾಗದ ಈ ಕಾಲದಲ್ಲಿ ಉಳಿದದ್ದು ಯಾವುದಿದೆ? ಸುಮಾ.ಕಂಚೀಪಾಲ್

ಎಷ್ಟೆಲ್ಲ ಇತ್ತು

ಎಷ್ಟೆಲ್ಲ ನೆನಪಿತ್ತು ಮಣ್ಣಿನ ಪರಿಮಳ ಸೂಸುವ ಆ ಗೋಡೆಗಳಲ್ಲಿ.  ಜಾರುವ ಅಬ್ಬಿಕುಳಿಯ ನುಂಪು ಕಲ್ಲುಗಳಲ್ಲಿ ಮಾಡುಗುಳಿಯ ಹಂಚಿನ ಅಂಚಿನಲ್ಲಿ ಸಿಕ್ಕಿಸಿದ  ಹಲ್ಲುಜ್ಜುವ ಬ್ರಷ್ ನಲ್ಲಿ ಯಾವಾಗಲೂ ವರತೆ  ಹರಿಸುವ ಬೆಲಗಿನ ನೀರಿನಲ್ಲಿ ಎಷ್ಟೋ ಇತ್ತು ಈ ಹಳೆಯ ನಿತ್ಯ ಜೀವನದಲ್ಲಿ.  ಪಾತ್ರೆ ತೊಳೆಯುವ ಬಟ್ಟಲಿಗೆ ಅಂಟಿದ ಬೂದಿಯಲ್ಲಿ. ಗೋಡೆಗೆ ಆಗಿದ್ದ ಅಮ್ಮನ  ಒದ್ದೆ ಕೈಗಳ ಅಚ್ಚಿನಲ್ಲಿ. ಉಳಿಸಿಕೊಳ್ಳಲಾಗದ ಈ ಕಾಲದಲ್ಲಿ ಉಳಿದದ್ದು ಯಾವುದಿದೆ? ಹೇಳಿ ನೀವೆ ಇದರಲ್ಲಿ. ಸುಮಾ.ಕಂಚೀಪಾಲ್

ಪಾತರಗಿತ್ತಿ ಕಣ್ಣು

ಕಣ್ಣ ಪಾತರಗಿತ್ತಿಗೆ ಎರಡು ರೆಕ್ಕೆ ಮಿಟುಕಿಸಿದರೆ ಬೀಸಣಿಕೆಯಂತೆ. ಅಚ್ಚ ಕಪ್ಪು ಗೆರೆಗಳಂತಾ ರೆಪ್ಪೆ ಒಡೆದು ಮುಚ್ಚಲದು ಕಪ್ಪೆ ಚಿಪ್ಪಿನಂತೆ. ಬಿಳಿಯ ಕೊಳದಲೊಂದು ಕಪ್ಪು ತಟ್ಟೆ ಅತ್ತ ಇತ್ತ ಓಡುವುದು ಹಡಗಿನಂತೆ. ಅವಳ ನೋಟ ಯನಗೆ ಸಂತೆ ನೂರು ಕನಸ ಹೊತ್ತ ಕಂತೆ. ಸುಮಾ.ಕಂಚೀಪಾಲ್

ಚೌತಿಯ ಮರುದಿನ

ಚೌತಿಯ ಮರುದಿನ ದವಾಖಾನೆಯ ಬಾಗಿಲಲ್ಲಿ  ಚಪ್ಪಲಿಗಳದೇ ರಾಶಿ  ಕೆಂಪು ಚಪ್ಪಲಿಯ ಅಡಿ ಕರಿಯದು  ಇನ್ನಾವುದೋ ದಿಕ್ಕಿಗೆ ಒಂದು ಬಲ  ಒಂದು ದಿಕ್ಕಿಗೆ ಎಡ  ಸಾಲಾಗಿ ಕುರ್ಚಿ ಮೇಲೊಂದಿಷ್ಟು ಜನ  ಊಟದ ಸಮಯ ಮೀರಿದೆ  ರೋಗಿಗಳು ಸೇರದೆಯೂ  ನಾಲ್ಕು ಕಾಳು ಉಂಡು ಬಂದಿದ್ದಾರೆ.  ವೈದ್ಯರಿಗೆ ಸೇರಿದರೂ  ಉಣ್ಣಲು ಸಮಯವಿಲ್ಲಾ. ಕಿವಿ , ಮೂಗು , ಎಲುಬು ಹೃದಯ  ತಜ್ಞರು ಬರುವವರಿದ್ದಾರೆ.  ವಾರಕ್ಕೊಮ್ಮೆ ಮಾತ್ರ  ಗಲಾಟೆಮಾಡಬೇಡಿ  ಮೂಲೆ ಮೂಲೆಯಲ್ಲೊಂದು ಗಡಿಯಾರ  ಇವೆಲ್ಲಾ ದವಾಖಾನೆ ಗೋಡೆಯ  ಸಿಂಗಾರದ ಅಲಂಕಾರ. ಬಿಳಿಕೋಟು ಧರಿಸಿದ ದೇವದೂತರು ಇದ್ದಾರೆ.  ಮನಸ್ಸು ಮಾಡಿದರೆ ಸ್ವರ್ಗಕ್ಕೂ  ದಾರಿ ತೋರಬಹುದು  ಒಯ್ಯಾರದ ಎಳೆ ನರ್ಸಗಳಿದ್ದಾರೆ. ಅವರಿಗೂ ಔಷಧಿ ಬೇಕಂತೆ  ಇಲ್ಲಿ ಕಾಯಿಲೆಗಳದೆ ಸಂತೆ. ಕೂಗಿಕರೆಯುತ್ತಾರೆ ಒಂದೊಂದೆ ಸಂಖ್ಯೆ. ಒಳಹೊಕ್ಕರೆ ಚುಚ್ಚುವ ಸೂಜಿಯ ನೋವು  ಎಳೆಕಂದಮ್ಮನ ಕಿಟಾ..ರನೆ ಕೂಗು  ಪಾದಕ್ಕಿಂತ ಮೇಲಷ್ಟೆ ಸೀರೆ ಬರುವಂತಾದವರು.  ಪಕ್ಕದಲ್ಲಿ ಪೈಲ್ ಹಿಡಿದ ಗಂಡಂದಿರು. ಅಲ್ಲಿ ಕುಳಿತವರಂತು ಕೇಳಿಯೇ ಕೇಳುತ್ತಾರೆ  ನಿಮಗೇನಾಗಿದೆ !?  ಜ್ವರ , ಜ್ವರ , ಜ್ವರ ... ಸುಮಾ.ಕಂಚೀಪಾಲ್. Sep 16/ 2019

ಬಾಸಿಂಗ

ಕೆಂಡಸಂಪಿಗೆ ಬಾಸಿಂಗ ಇನ್ನು ಮೈನೆರೆಯದ ಮುದ್ದು ಹುಡುಗಿ, ನಿನ್ನೆಯಷ್ಟೆ ಚಿಕ್ಕಪ್ಪನ ಮದುವೆಯಲ್ಲಿ ಕಂಬದಾಟ ಆಡಿದವಳು, ಇಂದು ವಧುವಾಗಿ ಮದುವೆ ಮಂಟಪದ ಬಾಸಿಂಗವೇ ಅವಳಾಗಿದ್ದಾಳೆ. ರಾತ್ರಿ ಹನ್ನೆರಡರ ಮೂಹೂರ್ತ ಮಲ್ಲಿಗೆ ಬ್ರಹ್ಮಕಮಲಗಳು ಬಿರಿದುನಿಂತಿವೆ. ಮಿಣುಕು ಹುಳಕೂ ಮೈತುಂಬ ಬಂಗಾರ, ಎಷ್ಟು ಹೊಳೆದರೂ ಸಾಲ. ಅಪ್ಪ ಮಾಡಿದ್ದಲ್ಲವೇ? ತೋರಣದ ಮಾವಿನೆಲೆ ಸಸಿದು ಆಡುವ ಹುಡುಗಿ ತಾಳಿ ಕಟ್ಟಿಸಿಕೊಳ್ಳುವಾಗ ಎಚ್ಚರವೂ ಇರಲಿಲ್ಲ. ಅವಳಪ್ಪ ಹೇಳುತ್ತಾನೆ. ಇವತ್ತಿಗೆ ಅವಳು ಹುಟ್ಟಿ ಹನ್ನೆರಡು ವರ್ಷ. ಅಮ್ಮ ಬಿಕ್ಕುತ್ತಾಳೆ. ಸುಮಾ.ಕಂಚೀಪಾಲ್

ದೇವರು ತೃಪ್ತನಾಗಿರಬಹುದು

ಇರುಳು ಹರಿದು ಹಗಲು ಬರುವ ಹೊತ್ತಿಗೆ. ಇಬ್ಬನಿಯ ಮೃದು ಬಿಂದುಗಳ ಸಿಂಚನದ ಬಣ್ಣ ಬಣ್ಣದ ಹೂವುಗಳ ಅಜ್ಜ ಕೀಳುತ್ತಾನೆ. ಕೈನಡುಗುವ ಬೆಳಗಿನ ಚಳಿಯಲ್ಲಿ ಹೂವಿನಪಕಳೆ ಹರಿಯುತ್ತದೆ. ಅಬ್ಬಿ ಒಲೆಗೆ ಕೈ ಒಡ್ಡಿಕೂರುತ್ತಾನೆ. ಬೆಚ್ಚಗೆ ಹೊಗೆಯಾಡುವ ಅಬ್ಬಿಯಲ್ಲಿ ಮಿಂದು, ದೇವರ ನಾಮದೊಂದಿಗೆ ಮಡಿ ಉಡುತ್ತಾನೆ. ಬೊಡ್ಡೆ ತುಂಬ ಮಡಿನೀರು, ತಳೆದ ಗಂಧ ದೇವರ ನಂದಾ ದೀಪ ಆರತಿ ಗಂಧದ ಕಡ್ಡಿ, ಗಂಟೆಗಳ ನಾದ. ಎಂದಿನಂತೆ ಇಂದಿಗೂ ಹೊರಜಗುಲಿಗೆ ಕೂತು ಭಗವದ್ಗೀತೆ ಓದುತ್ತಾನೆ ಅಜ್ಜನೂ, ದೇವರು ತೃಪ್ತನಾಗಿರಬಹುದು.! ಸುಮಾ.ಕಂಚೀಪಾಲ್

ಎಲ್ಲವೂ ಸಾಕು

ಎಲ್ಲವೂ ಸಾಕು ಈ ಕೆಂಡದ ಮಳೆ ಸುರಿವ ಪ್ರೀತಿಯ ಗಾಳಿಯಲಿ ನಾನು, ಅವನ ಸಿಗರೇಟಿನ ವಾಸನೆ ಇಲ್ಲದ ಬರಿಯ ಗಾಳಿಗೆ ಜೀವ ಇಲ್ಲ ಎಂದು ಈಗ ಅರಿತಿದ್ದೇನೆ. ಸಿಗರೇಟಿನ ಅಂಚಿನ ಕೇಸರಿ ಕಿಡಿ, ಬಿಳಿ ಬಣ್ಣದ ಬೂದಿ ದಿನಕ್ಕೆರಡು ಬಾರಿ ಆ್ಯಶ್ ಟ್ರೇಗಳನ್ನು ಒರೆಸಿ ಒರೆಸಿ ಸೋತಿದ್ದೆ. ಹಲವಾರು ಬಾರಿ ತಿಳಿಸಿ ಹೇಳಿದ್ದೆ‌. ಬೆಂಗಳೂರು ಇದು ನಮ್ಮ ಹಳ್ಳಿಯಂತಲ್ಲ ನೀನೂ ಒಳಗೆಳೆದುಕೋ ಎಂದು ಕಣ್ಣು ಹೊಡೆದಿದ್ದ. ಈಗ ಅವನು ಸಿಗರೇಟು ಸೇದುವುದಿಲ್ಲ. ಆ್ಯಶ್ ಟ್ರೇ ಮೇಲೆ ಬೂದಿ ಉದುರಿಸುವುದಿಲ್ಲ. ಆದರೆ ಆ ಬಿಳಿ ಬಣ್ಣದ ಬೂದಿ ಟ್ರೇಗಳ ಬದಲು ಮಣ್ಣಿನ ಮಡಿಕೆಯಲ್ಲಿ ಈಗ ನನ್ನ ಕಾರಿನ ಸೀಟಿನ ಮೇಲೆ ಇದೆ. ಈಗ ಬುದ್ದಿಬಂತು ನಾನು ಅವನೊಟ್ಟಿಗೆ ಒಳಗೆಳೆಯ ಬೇಕಿತ್ತು. ಸುಮಾ.ಕಂಚೀಪಾಲ್ (ಕೊನೆಯ ಮೂರು ಸಾಲಿನ ಗ್ರಹಿಕೆ ಕವಿತೆಯ ಸಾರ.)

ರೆಕ್ಕೆ ಮೂಡಿದ ಕನಸು

ರೆಕ್ಕೆ ಮೂಡಿದ ಕನಸು‌. ಬೆಚ್ಚನೆಯ ಹೊದಿಕೆಯಡಿ ಅಡಿಗಿರುವ ಕನಸುಗಳಿಗೆ ರೆಕ್ಕೆಮೂಡಿ.. ಹಾರುತ್ತವೆ ನೋಡಿ ಹೃದಯದಿಂದ ಹೊರಗೆ ಓಡಿ. ಮೂಡಿದ ಗರಿಗಳಿಗೆ ಅರೆಗಳಿಗೆಯೂ ಶಾಂತಿ ಇಲ್ಲ ಬೇಕಾದರೆ ನೀವೆ ಒಮ್ಮೆ ಕೇಳಿನೋಡಿ.. ಹಗಲು ಇರುಳು ಹಾರುವ ಕಾಯಕ, ಪ್ರತಿ ಕನಸುಗಳಿಗೂ ಇನ್ನಷ್ಟು ತವಕ‌. ಆಕಾಶದಿಂದಾಚೆ ಎಲ್ಲೋ ಇನ್ನಾವುದೋ ಬಾನು ಕಂಡ ರೆಕ್ಕೆಗೀಗ ನೀರ ಬಣ್ಣ. ಕಂಡದ್ದೆ ಸತ್ಯ. ಹಾರಿದ್ದೇ ಹಾದಿ. ಗರಿಗಳು ಉದುರದಿರಲಿ. ಸುಮಾ.ಕಂಚೀಪಾಲ್

ಕವಿತೆ

ಪುಟದ ತಿರುವು. ಪದ್ಯಬರೆಯಲು ಪುಟ ತಿರುವುತ್ತೇನೆ ಹೊತ್ತು ಗೊತ್ತಿಲ್ಲದ ವೇಳೆಯಲಿ ನಡೆವ ದೃಶ್ಯಗಳನ್ನು ನಿಮಗೆ ಬಿಂಬಿಸುವಂತೆ. ಅದೂ ರಾತ್ರಿ ಗೂಡಿನಲ್ಲಿ ಬಾಲ ಮುದುರಿ ಮಲಗಿದ್ದ ನಾಯಿಯ ಪಾಡಿನಂತ ಕವಿತೆ. ಹಗಲು ಇರುಳು ಕಂಡು ಕಾಣದ ಜೇನಿನ ಕಾರ್ಯದಂತೆ ನಿರಂತರವಾಗಿ ಶ್ರಮಿಸುವಂತ ಕವಿತೆ. ಸಾವಿರ ಬೆಂಕಿಯ ಉಂಡೆಗಳು ಉರಿದು ನವಿಲ ಗರಿಯಾಗಿ ಕುಣಿದ ಕವಿತೆ. ನಾಲ್ಕು ಸಾಲು ಬರೆದರಾಯ್ತು ಅದೇ ಕವಿತೆ ಎಂದವನು ಸಹ ಮತ್ತೆ ಓದಬೇಕೆಂಬ ಕವಿತೆ. ಸುಮಾ.ಕಂಚೀಪಾಲ್