ಚೌತಿಯ ಮರುದಿನ
ದವಾಖಾನೆಯ ಬಾಗಿಲಲ್ಲಿ
ಚಪ್ಪಲಿಗಳದೇ ರಾಶಿ
ಕೆಂಪು ಚಪ್ಪಲಿಯ ಅಡಿ ಕರಿಯದು
ಇನ್ನಾವುದೋ ದಿಕ್ಕಿಗೆ ಒಂದು ಬಲ
ಒಂದು ದಿಕ್ಕಿಗೆ ಎಡ
ಸಾಲಾಗಿ ಕುರ್ಚಿ ಮೇಲೊಂದಿಷ್ಟು ಜನ
ಊಟದ ಸಮಯ ಮೀರಿದೆ
ರೋಗಿಗಳು ಸೇರದೆಯೂ
ನಾಲ್ಕು ಕಾಳು ಉಂಡು ಬಂದಿದ್ದಾರೆ.
ವೈದ್ಯರಿಗೆ ಸೇರಿದರೂ
ಉಣ್ಣಲು ಸಮಯವಿಲ್ಲಾ.
ಕಿವಿ , ಮೂಗು , ಎಲುಬು ಹೃದಯ
ತಜ್ಞರು ಬರುವವರಿದ್ದಾರೆ.
ವಾರಕ್ಕೊಮ್ಮೆ ಮಾತ್ರ
ಗಲಾಟೆಮಾಡಬೇಡಿ
ಮೂಲೆ ಮೂಲೆಯಲ್ಲೊಂದು ಗಡಿಯಾರ
ಇವೆಲ್ಲಾ ದವಾಖಾನೆ ಗೋಡೆಯ
ಸಿಂಗಾರದ ಅಲಂಕಾರ.
ಬಿಳಿಕೋಟು ಧರಿಸಿದ ದೇವದೂತರು ಇದ್ದಾರೆ.
ಮನಸ್ಸು ಮಾಡಿದರೆ ಸ್ವರ್ಗಕ್ಕೂ
ದಾರಿ ತೋರಬಹುದು
ಒಯ್ಯಾರದ ಎಳೆ ನರ್ಸಗಳಿದ್ದಾರೆ.
ಅವರಿಗೂ ಔಷಧಿ ಬೇಕಂತೆ
ಇಲ್ಲಿ ಕಾಯಿಲೆಗಳದೆ ಸಂತೆ.
ಕೂಗಿಕರೆಯುತ್ತಾರೆ ಒಂದೊಂದೆ ಸಂಖ್ಯೆ.
ಒಳಹೊಕ್ಕರೆ ಚುಚ್ಚುವ ಸೂಜಿಯ ನೋವು
ಎಳೆಕಂದಮ್ಮನ ಕಿಟಾ..ರನೆ ಕೂಗು
ಪಾದಕ್ಕಿಂತ ಮೇಲಷ್ಟೆ ಸೀರೆ ಬರುವಂತಾದವರು.
ಪಕ್ಕದಲ್ಲಿ ಪೈಲ್ ಹಿಡಿದ ಗಂಡಂದಿರು.
ಅಲ್ಲಿ ಕುಳಿತವರಂತು ಕೇಳಿಯೇ ಕೇಳುತ್ತಾರೆ
ನಿಮಗೇನಾಗಿದೆ !?
ಜ್ವರ , ಜ್ವರ , ಜ್ವರ ...
ಸುಮಾ.ಕಂಚೀಪಾಲ್.
Sep 16/ 2019
Comments
Post a Comment