Skip to main content

ಸೂರ್ಯನ ನೆರಳು.

ಸೂರ್ಯನ ನೆರಳು ಅನುವಾದಿತ ಕೃತಿಯ ಓದು

ಆಪ್ರಿಕಾ ಖಂಡದ ಕುರಿತು ಅಷ್ಟೇನೂ ತಿಳಿದಿರದ ನಮಗೆ ಆಫ್ರಿಕಾ ಒಂದು ಕಗ್ಗತ್ತಲೆಯ ಖಂಡ ಎಂಬ ವಾಕ್ಯ ಒಂದು ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಆಫಿಕಾದಲ್ಲಿ ಸದಾಕಾಲ ಕಡುಗತ್ತಲೇ ಇರುತ್ತದೆಯೇ? ಬರೀ ದಟ್ಟ ಕಾಡು ಹರಿವ ನದಿ, ಸೂರ್ಯನ ಬೆಳಕೇ ಇಲ್ಲದ ಜಾಗವೇ? ಇಂತಹ ಕುತೂಹಲ ಕೆರಳಿಸುವ ವಿಷಯಗಳಿಗಷ್ಟೇ ಸೀಮಿತವಾಗಿದ್ದೇವೆ ಹೊರತಾಗಿ ಅಲ್ಲಿನ ಭೌಗೋಳಿಕ ರಚನೆ, ಸಾಮಾಜಿಕ ಜನಜೀವನ, ಸಂಪ್ರದಾಯ ಆಹಾರಪದ್ದತಿ ಇದಾವುದರ ಕುರಿತಾಗಿಯೂ ನಾವು ತಲೆಕೆಡಿಸಿಕೊಂಡವರಲ್ಲ. 

ರೈ಼ಷಾರ್ಢ ಕಪುಶಿನಸ್ಕೀ ಒಬ್ಬ ಅತ್ಯುತ್ತಮ ಪತ್ರಕರ್ತ ಆಪ್ರೀಕಾದ ಕುರಿತು ಇಂಚಿಚನ್ನೂ ವಿಸ್ತಾರವಾಗಿ ವಿವರಿಸಿದ ಪುಸ್ತಕ ಸೂರ್ಯನ ನೆರಳು ಈ ಪುಸ್ತಕವನ್ನು ಓದಿದ ನಂತರವೇ ನಮಗೆ ಆಫ್ರಿಕಾದ ಶೋಚನೀಯ ಸ್ಥಿತಿ ಅಲ್ಲಿನ‌ ಜನರ ಪರಿಸ್ಥಿತಿ ವರ್ಣಭೇದ ನೀತಿ ಮತ್ತಿತರ  ಎಷ್ಟೋ ವಿಷಯಗಳ ಕುರಿತು ನಮಗೂ ಅರಿವು ಮೂಡುವುದು. ಒಬ್ಬ ಪತ್ರಕರ್ತನಾದವನು ಎಷ್ಟರ ಮಟ್ಟಿಗೆ ಜನರನ್ನು ಮುಟ್ಟಬಹುದು ಎನ್ನುವುದಕ್ಕೆ ಈ ಪುಸ್ತಕ ಒಂದು ಉತ್ತಮ ಉದಾಹರಣೆಆಗಿದೆ.
ಪೋಲೆಂಡಿನ ಪತ್ರಕರ್ತ ರೈಷಾರ್ಡ್ ಕಪ್ಯುಶಿನಸ್ಕಿ  'ಹೆಬಾನ್' ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಬರೆದರು. ಇದನ್ನು ಕ್ಲಾರಾ ಗ್ಲೋವೆಸ್ಕಾ ಇಂಗ್ಲಿಷ್ ಗೆ 'ಶಾಡೋ ಆಫ್ ದ ಸನ್' ಎಂಬ ಹೆಸರಿನಲ್ಲಿ ಅನುವಾದಿಸಿದರು. ಇದನ್ನು ಸಹನಾ ಹೆಗಡೆಯವರು ಕನ್ನಡಕ್ಕೆ " ಸೂರ್ಯನ ನೆರಳು" ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.

' ಆಫ್ರಿಕಾದ ನೋವು, ಸಂಕಷ್ಟಗಳನ್ನು ಕುರಿತಾದ ಪ್ರಾಮಾಣಿಕ,ಸವಿವರ ಆದರೆ ಅಷ್ಟೇ ನಿರ್ಭಾವುಕ  ಪ್ರವೇಶಿಕೆ ಹಾಗೂ ಅದರ ಗಾಢ ಆಕರ್ಷಣೆಯಿಂದ ಹುಟ್ಟಿದ ಒಂದು ನಿಶ್ಯಬ್ಧ ಪ್ರೇಮಗೀತೆ ' ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿರುವುದು ಅತ್ಯಂತ ಸೂಕ್ತವಾಗಿದೆ.
ಅವನಲ್ಲಿ ಹಣದ ಅಭಾವ ಇರುವುದರಿಂದ ಕಾಲ್ನಡಿಗೆಯಲ್ಲಿ, ಗಾಡಿಗಳಲ್ಲಿ, ಬೇರೆ ಬೇರೆ ಪತ್ರಕರ್ತರೊಡನೆ ತಿರುಗಾಡಿದ್ದರಿಂದ ಈ ಕೃತಿಯು ಇಷ್ಟರಮಟ್ಟಿಗೆ ಯಶಸ್ಸು ಹೊಂದಿದೆ. ಎಲ್ಲವನ್ನು ತಾವು ಸ್ವತಃ ಅನುಭವಿಸಿ ನೋಡಬೇಕೆಂಬ ಬಯಕೆಯು ಅವರಲ್ಲಿತ್ತು.
ಇನ್ನು ಅನುವಾದದ ಕುರಿತಾಗಿ ಹೇಳುವುದಾದರೆ ಇದು ಇನ್ನೊಬ್ಬರ ಅನುಭವದ ಕಥನ ಎಂಬುದನ್ನು ಸದಾ ಗಮನದಲ್ಲಿಟ್ಟುಕೊಂಡು ಮೂಲ ಪಠ್ಯಕ್ಕೆ ನ್ಯಾಯ ಒದಗಿಸಿದ್ದಾರೆ ಸಹನಾ ಹೆಗಡೆಯವರು.

ಸಹನಾ ಹೆಗಡೆಯವರನ್ನು ಅಭಿನಂದಿಸಿದ ಕ್ಷಣ. ( MM.arts and science college )

ಮುಖಪುಟದ ವಿನ್ಯಾಸವೂ ಒಂದುರೀತಿ ಅರ್ಥಪೂರ್ಣವಾಗಿ ಮೂಡಿದೆ. ಆಫ್ರಿಕಾದ ಆತ್ಮ ಆನೆಯ ರೂಪದಲ್ಲಿರುತ್ತದೆ ಆನೆಯನ್ನು ಮತ್ತಾವ ಪ್ರಾಣಿಯು ಸೋಲಿಸಲಾರದು. ಇದೇ ಉದ್ದೇಶದಿಂದ ಮುಖಪುಟದಲ್ಲಿ ಆನೆಯನ್ನು ಬಿಂಬಿಸಿದ್ದಾರೆ.
ಈತ ಕೇವಲ ಪತ್ರಕರ್ತನೊಂದೇ ಆಗಿದ್ದರೆ ಈ ಕೃತಿ ವಿಷಯಾದಾರಿತ ಮಾತ್ರವೇ ಆಗಿರುತ್ತಿತ್ತು. ಆದರೆ ಇದು ಅವನ ಸಾಹಿತ್ತಿಕ ಬರವಣಿಗೆಯ ಶೈಲಿಯನ್ನು ಒಳಗೊಂಡಿದೆ. ಹಲವೆಡೆ ವ್ಯಕ್ತಿ ಚಿತ್ರಣವನ್ನು ಕಾಣಬಹುದು ಹಲವು ಧರ್ಮದ ಸಂಸ್ಕೃತಿ ಆಚರಣೆಯ ಕುರಿತಾಗಿ ಕಾಣಬಹುದು. ಒಂದುಕಡೆಯಿಂದ ಇನ್ನೊಂದು ಕಡೆ ಗುಳೆ ತಿರುಗುತ್ತಲೇ ಬದುಕುತ್ತಿರುವ ಜನಾಂಗದ ಕುರಿತಾಗಿ ಅವರನಿತ್ಯದ ಬದುಕಿನ ಕುರಿತಾದ ವಿವರವಿದೆ.

ಜನರ ಮೂಢನಂಬಿಕೆ ಕುರಿತು ಹಲ್ಲಿಯ ತೊಗಲು ಹಕ್ಕಿಯ ತಲೆ, ಹುಲ್ಲಿನ ಕಟ್ಟು, ಮೊಸಳೆಯ ಹಲ್ಲು ಇಂತವುಗಳನ್ನು ಕಟ್ಟಿಕೊಂಡಿದ್ದರೆ ಅಲ್ಲಿಂದ ಮುಂದಕ್ಕೆ ಸಾಗುವುದು ನಿಶಿದ್ಧ ಎಂಬ ಸೂಚನೆ ಇದೆ.
ಒಂದು ರೀತಿಯ ಮೇಲು ಕೀಳು ವರ್ಗೀಕರಣ ಅದು ವರ್ಣಬೇಧ ನೀತಿಯ ಆದಾರಿತವಾದ ಆಳುವವರು ಮತ್ತು ಕನಿಷ್ಠರು ಎಂಬ ತಾರತಮ್ಯದ ಭಾವವಿದೆ. ಜನರ ಮಾರಾಟಮಾಡುವಂತ ಶೋಚನೀಯ ಸ್ಥಿತಿಗಳು ನಡೆಯುತ್ತಿದ್ದವು.
ಸರ್ಪಹೃದಯ ಎಂಬ ಅಧ್ಯಾಯವಂತೂ ನನಗೆ ತುಂಬಾ ಅಚ್ಚರಿಯನ್ನು ಮೂಡಿಸಿತು ಹಾವಿನೊಡನೆ ಸೆಣಸಾಟದ ದೃಶ್ಯ ಕಣ್ಣಿಗೆಕಟ್ಟುವಂತಿತ್ತು.ಕಾರಿನಲ್ಲಿ ಕಾಡೆಮ್ಮೆಗಳ ಗುಂಪೊಂದನ್ನು ಹಾದು ಹೋಗುವ ಸನ್ನಿವೇಶದಲ್ಲಿ ನಮಗೂ ಭಯಹುಟ್ಟುತ್ತದೆ.
ಮಲೇರಿಯಾ ಬಂದಾಗ ಅವರ ಕಷ್ಟ ಆಸ್ಪತ್ರೆಯ ಸನ್ನಿವೇಶ ಎಲ್ಲವು ತುಂಬಾ ಮನಮುಟ್ಟುವಂತಿದೆ.


ಆಫ್ರಿಕಾದ ಜನತೆಗೆ ರಸ್ತೆ , ರೈಲು, ಸೇತುವೆ ಮಾರ್ಗ ನಿರ್ಮಾಣವಾಗಬೇಕಿತ್ತು ಆದರೆ ಬಿಳಿ ಗುಲಾಮರನ್ನು ಕೆಲಸಕ್ಕೆ ತರುವಂತಿರಲಿಲ್ಲಾ. ಇದೇ ಸನ್ನಿವೇಶ ಪ್ರಸ್ತುತ ದಿನಗಳಲ್ಲಾದರೆ ನಡೆಯುತ್ತಿರಲಿಲ್ಲಾ. ಇಂದಿಗೆ ಈ ಗುಲಾಮಪದ್ದತಿಗಳಿಲ್ಲ.
ಝೊಂಗು ಎಂದರೆ ನರಭಕ್ಷಕ ಎಂದರ್ಥವಂತೆ ಚಿಕ್ಕ ಮಕ್ಕಳು ಹಠ ಮಾಡಿದಾಗ ಬಿಳಿಯರು( ಝುಂಗು) ನಿನ್ನನ್ನು ಹಿಡಿದುಬಿಡುತ್ತದೆ ಎಂದು ಹೆದರಿಸಿ ಊಟಮಾಡಿಸುತ್ತಿದ್ದರಂತೆ.
ಹೀಗೆ ಹೇಳುತ್ತಾ ಹೋದರೆ ಇನ್ನು ಎಷ್ಟೆಷ್ಟೋ ಅಚ್ಚರಿಯ ವಿಷಯಗಳಿವೆ. ಕೃತಿಯನ್ನು ಓದುವುದನ್ನು ನಿಲ್ಲಿಸಿ ಬೇರೆ ಕೆಲಸದಲ್ಲಿ ತೊಡಗಿಕೊಂಡರು ಪದೇ ಪದೇ ತಲೆಯಲ್ಲಿ ಸುಳಿಯುವುದು ಒಂದೇ ಪ್ರಶ್ನೆ.

ಹಾಗಾದರೆ  ಈಗ ಆಫ್ರಿಕಾ ಶಾಂತವಾಗಿದೆಯೇ? ಅಲ್ಲೆಲ್ಲಾ ಜನ ತುಸುವಾದರು ನೆಮ್ಮದಿಯನ್ನು ಕಾಣುತ್ತಿರಬಹುದೇ? ಎಂದು ಅದಕ್ಕೂ ಉತ್ತರ ಕೊನೆಯಲ್ಲಿ ಲೇಖಕರೇ ಹೇಳಿದ್ದಾರೆ " ಆಫ್ರಿಕಾ ಎಂದರೆ ವಿವಿಧವಾದ, ವಿಭಿನ್ನವಾದ,ವಿಶೇಷವಾದ, ಕೆಲವೊಮ್ಮೆ ವಿರೋಧಾತ್ಮಕವಾದ  ಸಾವಿರಾರು ಸನ್ನಿವೇಶಗಳು. ಯಾರೋ ಒಬ್ಬ ಹೇಳಬಹುದು  ಅಲ್ಲಿ ಯುದ್ದ ನಡೆಯುತ್ತಿದೆ, ಹಾಗು ಅದು ಸತ್ಯವೂ ಆಗಿರಬಹುದು. ಮತ್ತೊಬ್ಬ ಹೇಳುತ್ತಾನೆ ಅಲ್ಲಿ ಶಾಂತಿನೆಲೆಸಿದೆ.”ಅವನು ಹೇಳುವುದು ಸರಿ ಇರಬಹುದು. ಎಲ್ಲವೂ ಅವಲಂಬಿಸಿರುವುದು ಎಲ್ಲಿ ಮತ್ತು ಯಾವಾಗ ಎನ್ನುವುದನ್ನು ಎಂದು ಹೇಳುವುದರ ಮೂಲಕ ಅಸ್ಪಷ್ಟತೆಯೊಳಗೆ ಸ್ಪಷ್ಟತೆಯನ್ನು ನೀಡುತ್ತಾರೆ. ೩೩೯ ಪುಟಗಳುಳ್ಳ ಈ ಅಪೂರ್ವ ಕೃತಿಯೊಂದನ್ನು ಮನಸ್ಥಿತಿ ತಾಳ್ಮೆಯನ್ನು ಪರಿಶೀಲಿಸುವಂತದ್ದು. ಪ್ರಾಮಾಣಿಕವಾಗಿ ಇದನ್ನು ಅನುವಾದಿಸಿದ ಸಹನಾ ಹೆಗಡೆಯವರು ಅಭಿನಂದನಾರ್ಹರು.
ಈ ಅನುವಾದಿತ ಕೃತಿಯು, ವಿಭಿನ್ನ ಅನುಭವದ ನೋಟಕ್ಕಾಗಿ  ಹೆಚ್ಚು ಜನರನ್ನು ತಲುಪಿಯೇ ತಲುಪುತ್ತದೆ.
ಪುಸ್ತಕ ಓದಿನ ಖುಷಿಯದಿನದ ಚಿತ್ರ ರಂಗೋಲಿಯಲ್ಲಿ ಮೂಡಿತ್ತು.

ಸುಮಾ.ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...