Skip to main content

ಮೀನು ನಗುತ್ತದಾ!

ಮಳೆಗಾಲದಲ್ಲಿ ಮಾತ್ರವೇ ನೀರು ಹರಿಯುವ ಒಂದು ಸಣ್ಣ ಕಾಲುವೆ ಇದೆ. ಅದರಲ್ಲಿ ವರ್ಷದ ಮೂರು ತಿಂಗಳು ಮಾತ್ರ ನೀರು ಹರಿಯುತ್ತದೆ. ನೀರು ಹರಿಯುವ ಸಂಧರ್ಭದಲ್ಲಿ ಪುಟ್ಟ ಪುಟ್ಟ ಮೀನುಗಳು ಹುಟ್ಟಿಕೊಳ್ಳುತ್ತವೆ‌. ಇವುಗಳನ್ನು ನೋಡುವುದು, ತಿಂಡಿ ಹಾಕುವುದು, ದುಪ್ಪಟ್ಟ ಮತ್ತು ತೆಂಗಿನ ಚಿಪ್ಪಿನಲ್ಲಿ ಅವುಗಳನ್ನು ಹಿಡಿಯುವುದು ಮತ್ತು ನೀರಿನೊಳಗೆ ಕಾಲಿಟ್ಟು ಅವುಗಳ ಕಳಗುಳಿ ಸಹಿಸುವುದು ಇವೆಲ್ಲವೂ ಸಹ ಆ ಮೂರು ತಿಂಗಳ ಖುಷಿಯ ಸಂಗತಿ. 

ಅಲ್ಲಲ್ಲಿ ಕಚಗುಳಿ

ಇವುಗಳನ್ನು ನೋಡುತ್ತಿದ್ದಾಗಲೆಲ್ಲ ನನಗೆ ಹತ್ತಾರು ಪ್ರಶ್ನೆಗಳು ಕಾಡುತ್ತವೆ. 'ಪ್ರೀತಿಸುವವರನ್ನು ಕೊಂದುಬಿಡಿ' ಎನ್ನುವ ಜೋಗಿ ಅವರ ಪುಸ್ತಕದಲ್ಲಿ ಓದಿದ್ದೆ, ಮೀನಿನ ಏಕಾಗ್ರತೆ ಕೇವಲ ಐದು ಸೆಕೆಂಡ್ ಮಾತ್ರ ಎಂಬುದರ ಕುರಿತು ಅವರು ತಿಳಿಸಿದ್ದರು. ಅದರ ನಂತರ ಕುತೂಹಲ ಹೆಚ್ಚಿ ಗೂಗಲ್ ಮಾಡಿ ನೋಡಿದ್ದೆ. ಅತಿ ಕಡಿಮೆ ಹೊತ್ತು ಏಕಾಗ್ರತೆ ಹೊಂದಿರುವ ಜೀವಿ ಮೀನು. ಮನಸು ಮರ್ಕಟದಂತೆ ಎನ್ನುತ್ತಾರೆ. ಆದರೆ ಮಂಗನ ಮನಸಿಗಿಂತಲೂ ಚಂಚಲ ಮನಸು ಮೀನಿನದ್ದು. 
ಮೀನಿನ ಹೆಜ್ಜೆ ಗುರುತಾದರೂ ಕಂಡು ಹಿಡಿಯಬಹುದು, ಹೆಣ್ಣಿನ ಮನಸಿನ ಭಾವ ತಿಳಿಯದು ಎಂಬ ಮಾತನ್ನೂ ಕೇಳಿದ್ದೇನೆ. ಅದು ಹಾಗಿರಲಿ ಬಿಡಿ ಇನ್ನೊಂದು ಪ್ರಶ್ನೆ ಇದೆ. 

ಮೀನು ಗುಡಿ

ಯಾವಾಗಲೂ ಹರಿಯುವ ನೀರಿನ ವಿರುದ್ಧ ದಿಕ್ಕಿನಲ್ಲಿ ಮುಖಮಾಡಿ ಸದಾ ಈಜುತ್ತಿರುವುದನ್ನು ನಾನು ಗಮನಿಸಿದ್ದೇನೆ. ಏಕೆ ಅವುಗಳ ರೆಕ್ಕೆ ಸೋಲುವುದಿಲ್ಲವೇ?! ಅದನ್ನು ನೋಡುವಾಗ ನನಗೆ ಕಾಣಿಸುವುದು ಒಂದೆ, ದೇಹದ ತೂಕ ಇಳಿಸುವ ಸಲುವಾಗಿ ಕೆಲವರು treadmill ನಲ್ಲಿ ನಿಂತಲ್ಲೇ ಓಡುತ್ತಾರಲ್ಲಾ ಇವುಗಳು ಹಾಗೆ. ಆದರೆ ಇವು ದಿನದ ಇಪ್ಪತ್ನಾಲ್ಕು ಗಂಟೆಯೂ ಓಡುತ್ತವೆ. ಲೆಕ್ಕ ಹಾಕಿದರೆ ಎಷ್ಟು ಕಿ.ಮಿ ಆಗುತ್ತಿತ್ತೊ ಗೊತ್ತಿಲ್ಲ. 

ನೀರಿನ ವೇಗ ಒಮ್ಮೊಮ್ಮೆ ಬದಲಾಗುತ್ತದೆ. ಹೆಚ್ಚು ಮಳೆ ಬಂದಾಗ ರಭಸವಾಗಿ ನೀರು ಹರಿಯುತ್ತದೆ. ಆಗಲೂ ಇವು ಸ್ಥಿರವಾಗಿ ಅಲ್ಲೆ ಉಳಿಯುತ್ತವೆ. ಇವುಗಳಿಗಿಂತ ದೊಡ್ಡದಾದ ಎಷ್ಟೊ ಕಲ್ಲು, ಮರದ ದಿಮ್ಮಿಗಳು ನೀರಿಗೆ ಕೊಚ್ಚಿ ಹೋಗುತ್ತವೆ. ಇನ್ನು ಕೆಲವರು ಅಕ್ವೇರಿಯಂ ನಲ್ಲಿ ಮೀನು ಸಾಕುತ್ತಾರೆ. ಇದರಿಂದ ಮನಸಿಗೆ ನೆಮ್ಮದಿ ಸಿಗುತ್ತದೆ‌, ರಕ್ತದೊತ್ತಡ ನಿವಾರಣೆಯಾಗುತ್ತದೆ ಎನ್ನುತ್ತಾರೆ‌. ನಾನೂ ಮನಸಿಗೆ ಕೆಲಸ ಹೆಚ್ಚಾದಾಗ ಕೂತು ವಿಶ್ರಮಿಸಿ ಬರುತ್ತೇನೆ.
ಮತ್ಸ್ಯ ಮಕ್ಕಳಿಗೆ ಅನ್ನಪ್ರಾಶನ.

ಇನ್ನೊಂದಿಷ್ಟು ಮುಗಿಯದ ಪ್ರಶ್ನೆ ಇದೆ‌ ನಿಮಗೆ!! 
ಮೀನು ನಗುತ್ತದಾ?
ಮೀನು ನಿದ್ರಿಸಬಹುದಾ?
ಮೀನು ತನ್ನ ಜೀವಿತಾವದಿಯಲ್ಲಿ ಬಾಯಿಂದ ಶಬ್ಧ ಹೊರಡಿಸುತ್ತದೆಯಾ?
ಯಾವುದಾದರೂ ಮೀನು ಅಂಗವಿಕಲವಾಗಿ ಹುಟ್ಟಿರಬಹುದಾ?
ನೀರು ಇಂಗಿದಮೇಲೆ ಇವು ಎಲ್ಲಿ ಮರೆಯಾಗುತ್ತದೆ? ವಲಸೆ ಹೋಗುತ್ತದಾ? ಎಂದೂ ನೀರಿರದ ಕಾಲುವೆಯಲ್ಲಿ ಹತ್ತೆ ಹತ್ತು ದಿನದಲ್ಲಿ ಇವು ಹೇಗೆ ಮರಿಗಳಾಗಿತ್ತವೆ.? 

ತಮಾಷೆ ಎನಿಸಿದರೂ ಇದರಲ್ಲೊಂದು ಕುತೂಹಲ ಇದೆ ಅಂದುಕೊಳ್ಳುತ್ತಾ, ನಿಮಗೆ ಉತ್ತರ ಗೊತ್ತಿದ್ದರೆ ತಿಳಿಸಿ, ನಿಮಗೂ ಇಂತಹದೇ ಪ್ರಶ್ನೆ ಇದ್ದರೆ ಅದನ್ನೂ ತಿಳಿಸಿ. 

ಸುಮಾ.ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...