Skip to main content

ನೆನಪ ಬಿಸಿ ಹನಿಗಳು

ಚಿತ್ರ: ಶ್ರೀನಿಧಿ

ಮಳೆಗಾಲಕ್ಕೂ ಬೇಯಿಸಿದ ಜೋಳದ ತೆನೆಗೂ ಒಂದೊಳ್ಳೆ ಸಂಭಂದವಿದೆ. ಅದರಲ್ಲೂ ಆ ಜೋಳದ ತೆನೆಯೊಟ್ಟಿಗೆ  ಗೆಳೆಯರ ಗುಂಪು ಅಂಗಡಿಯ ಮುಂದೆ ನಿಂತು. "ನಂಗೆ ಬೇಯಿಸಿದ ಜೋಳ ಇವಳಿಗೊಂದು ಕೆಂಡದಲ್ಲಿ ಸುಟ್ಟ ಜೋಳ, ಅವನಿಗೆ ಖಾರ ಸ್ವಲ್ಪ ಜಾಸ್ತಿ ಇರೋದು ಕೊಡಿ. ನಿಂಬು ಚೆನ್ನಾಗಿ ಹಿಂಡಿ ಹುಳಿ ಹುಳಿಯಾಗಿಸಿ ಕೊಡಿ" ಎಂಬ ಮಾತಲ್ಲೆ ಮುಂದೆ ತೆನೆ ತಿನ್ನುವ ತವಕ ಎದ್ದು ಕಾಣುತ್ತದೆ.

ಅದರಲ್ಲು ನಾವೆಲ್ಲಾ ಕಾಲೇಜಿನಿಂದ ವಾಪಾಸಾಗುವ ಸಮಯದಲ್ಲಿ ಪುಟ್ಟಪಾತ್ ಬದಿಯಲ್ಲಿ ಜೋಳ ಬೇಯಿಸುವ ನಾಕಾರು ಅಂಗಡಿಗಳು ನಿಂತೇ ಇರುತ್ತಿದ್ದವು. ದಿನವೂ ಒಂದೊಂದು ಅಂಗಡಿಗೆ ಹೋಗುವುದು ರೂಢಿ.  ಕಾರಣ ಕೇಳ್ತೀರಾ?! ಅಂಗಡಿಯವರಿಗೆ ಬೇಸರ ಆಗಬಾರದು ಎಂದು ಅನ್ನಬಹುದು. ನಿಜವಾದ ಕಾರಣ ಕೇಳ್ತೀರ!? ನಮಗೆ ಉಪ್ಪು, ಕಾರ, ಹುಳಿಯ ಹದದಲ್ಲಿ ವ್ಯತ್ಯಾಸ ಬೇಕಿತ್ತು ಅಷ್ಟೇ.

ಅದರಲ್ಲೂ ಜೋರಾಗಿ ಮಳೆ ಸುರಿಯುತ್ತಿರುವ ಹೊತ್ತಲ್ಲಿ ಬೀಸುವ ಜೋರು ಗಾಳಿಗೆ ಅರ್ಧ ಮೈ ತೊಯ್ದು ಒದ್ದೆಯಾದಾಗ ಕೊಡೆಯ ಅಂಚಿನಿಂದ ಕೈ ಒಡ್ಡಿ ಹಣಕೊಟ್ಟು .ಒಂದು ಕೈಯಲ್ಲಿ ಕೊಡೆ ಸಂಭಾಳಿಸಿ ಇನ್ನೊಂದು ಕೈಯಲ್ಲಿ ಜೋಳದ ತೆನೆ ಸವಿಯುವ ಮಜವಿದೆಯಲ್ಲಾ ಮಳೆಗಾಲದಲ್ಲಿ ಬಿಟ್ಟರೆ ಅದು ಇನ್ ಯಾವತ್ತಿಗೂ ಸಿಗಲು ಸಾಧ್ಯವಿಲ್ಲ.
ಜೂಡಿದಾರದ ಪ್ಯಾಂಟ್ ಒದ್ದೆಯಾಗಿ ಚಪ್ಪಲಿಯ ನೀರು ಜಡೆಯ ತುದಿವರೆಗೆ ಹಾರಿ, ಸಣ್ಣಗೆ ಚಳಿಯ ನಡುಕ ಹಿಡಿದಿರುವಾಗ, ಹೇಗೊ ನಡೆದು ಬಸ್ಟಾಂಡ್ ಹೊಕ್ಕಿ ಕೊಡೆ ಮಡಚಿದರೆ ಅರ್ಧಗೆದ್ದಂತೆ. ಅದು ಇದು ಕತೆ ಹೇಳಿ ಇಲ್ಲವೋ ಇನ್ಯಾರದ್ದೋ ಗೋಸಿಪ್ ಕತೆಗಳನ್ನು ಹೇಳುತ್ತಾ ತಿಂದರೆ ಅದರ ರುಚಿ ಹುಡುಗಿಯರ ಬಾಯಲ್ಲಿ ಇನ್ನು ಹೆಚ್ಚುತ್ತದೆ. ಅಷ್ಟಾದಮೇಲೆ ಬಸ್ ಬರುವ ಹೊತ್ತಿಗಾಗಲೇ ಅರ್ದಕಾಲಿಯಾದ ತೆನೆಯನ್ನು ಬಿಸಾಡಲು ಆಗದೆ, ಪೂರ್ತಿ ತಿನ್ನಲು ಆಗದೆ ಸಮಸ್ಯೆಯಲ್ಲಿ ಮಳೆಯಲ್ಲಿ ತೊಯ್ದು ಕೊಡೆ ಹಿಡಿದೇ ಬಸ್ಸ ಹತ್ತಿದರು ಆ ನೂಕು ನುಗ್ಗಲಿಗೆ ಜೋಳದ ತೆನೆಯ ಉಪ್ಪು ಕಾರಗಳು ಸ್ವಲ್ಲ ಕಡಿಮೆಯಾಗಿಬಿಟ್ಟಿರುತ್ತಿದ್ದವು.

ಆದರೂ ಬಿಡದೆ ಒಂದು ಸೀಟ್ ಹಿಡಿದು ಕುಳಿತು ಕಂಡಕ್ಟರ್ ಬಂದ ತಕ್ಷಣ ಎಡಗೈಯಿಂದ ಬಸ್ ಪಾಸ್ ತೋರಿಸಿ. ಕಿಟಕಿ ಅಂಚಿನಿಂದೆಲ್ಲಾ ಮಳೆ ನೀರುನುಗ್ಗಿ ಒದ್ದೆಯಾದ ಸೀಟ್ ಮೇಲೆ‌ ಅದಕ್ಕೆಂದೆ ಮೀಸಲಿಟ್ಟ ಪೇಪರ್ ತುಂಡುಗಳು, ಇನ್ಯಾರದೊ ಕರವಸ್ತ್ರಗಳನ್ನು ಬಳಸಿ ಅಲ್ಲಿನ ತೇವ ಹೀರಿಸಿ ನಾವು ಕುಳಿತುಕೊಳ್ಳುತ್ತಿದ್ದೆವು.

ಈಗಲೂ ಮಳೆ ಸುರಿಯುತ್ತಿದೆ. ಇಂದು ಜೋಳ ಸಿಗಲಿಲ್ಲ ಅದಕ್ಜೇ ಇದನ್ನು ಬರೆದದ್ದು. ಆಸೆ ತೀರಿತು.

ಸುಮಾ.ಕಂಚೀಪಾಲ್
sumagaonkar22@gmail.com

Comments

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...