Skip to main content

Posts

Showing posts from July, 2021

ಸ್ನೇಹ ಬಾಡದ ಮುದ್ದು ಪುಷ್ಪ

ಸ್ನೇಹ ಬಾಡದ ಮುದ್ದು ಪುಷ್ಪ ಅಂಗನವಾಡಿ ಗೋಡೆ ಮೇಲೆ ಅಂದೆಂದೂ ಗೀಚಿದ ಸೇಹದ ಗೆರೆಗಳು ಇಂದಿಗೂ ಹಸಿರು . ಗೆಳೆತನದ ಬೀಜ ಅಂದು ಮನದಲ್ಲಿ ನೆಟ್ಟಿದ್ದು ಇಂದಿಗೂ ಹಸಿರಾಗಿ ಚಿಗುರಿಕೊಂಡೇ ಇದೇ..ಕಡ್ಡಿ ಕಳೆದೋದಾಗ ಕಡ್ಡಿ ಕೊಟ್ಟ ಗೆಳೆಯ ಇಂದು ದೊಡ್ಡ ಕಲಾಕಾರ . ಆದೆಷ್ಟೊ ಚಿತ್ರಗಳಿಗೆ ಜೀವ ತುಂಬುತ್ತಿದ್ದಾನೆ .. ಕನ್ನಡ ಶಾಲೆಯಲ್ಲಿ ಪಕ್ಕದಲ್ಲೇ ಕುಳಿತು ಲೆಕ್ಕ ಬಿಡಿಸುತ್ತಿದ್ದವಳು ಇಂದು ಬ್ಯಾಂಕ್ ಮ್ಯಾನೇಜರ್.  ಹೀಗೆಲ್ಲಾ ಚಿಗುರಿದ್ದು ಇಂದು ಎಣಿಸಲಾಗದಷ್ಟು ನೆನಪೆಂಬ ಎಲೆಗಳಿಂದ ತುಂಬಿಹೋಗಿದೆ . ಈಜಲೆಂದು ಹೋಗಿ ಜೀವ ಕಳೆದುಕೊಂಡ ಬಸ್ಯಾ ಇನ್ನು ನೆನಪಿಗೆ ಬರುತ್ತಾನೆ .. ಹೀಗೆ ಉದುರಿ ಹೋದ ಎಲೆಗಳು ಬಹಳ ಸಂತೋಷಕ್ಕೆ ಸಾತ್ ನೀಡಿ ದುಃಖದಲ್ಲಿ ಸಂತೈಸಿ ಕ್ಷಣ ಕ್ಷಣ ಜೊತೆಯಾಗಿರುವವರು ಸ್ನೇಹಿತರೇ.  ಇನ್ನು ಈ ಮರಕ್ಕೆ ಕೆಲವು ಹೂವುಗಳು ಅನಿರೀಕ್ಷಿತವಾಗಿ ಸಿಗುವ ಗೆಳೆಯರು ಒಂದು ದಿನಕ್ಕೆಲ್ಲಾ ಅರಳಿ ಎರಡು ಮೂರು ದಿನಕ್ಕೆ ಬಾಡಿ ಉದುರಿ ಹೋಗುತ್ತವೆ.ಕ್ಯಾಂಪ್‌ಗಳಲ್ಲಿ , ಬಸ್‌ನಲ್ಲಿ , ಪ್ರವಾಸದಲ್ಲಿ ಸಿಗುವ ಈ ಹೂವುಗಳ ಪರಿಮಳವಂತು ಹೂ ಉದುರಿದರೂ ಉಳಿವಂತ ಕಂಪು ನೀಡಿವೆ. ಕೆಲವು ಹೂವಾಗಿ ಹಣ್ಣಾಗಿ ಕೊಳೆತು ನಾರಿ ಹೇಸಿಗೆಯನ್ನು ಉಂಟುಮಾಡಿದೆ . ಎಷ್ಟೇ ಆದರೂ ಅದು ನಮ್ಮ ಮರದ ಕಾಯಿಯೇ ಎಂದುಸುಮ್ಮನಿದ್ದು ಬಿಡುವುದು. ಇನ್ನು ಕೆಲವು ಹಣ್ಣುಗಳು ತುಂಬಾ ರುಚಿಯಾಗಿ ಸಿಹಿಯನ್ನು ಮಾತ್ರ ನೀಡುವ ಸ್ನೇಹಿತರೂ ಇರುತ್ತಾರೆ . ಜೀವನ...

ಸಿದ್ಧಣ್ಣ

ಪಿಯಾನಿನ ಶಬ್ಧ ನಮ್ಮ‌ಮನೆ ಅಂಗಳದಲ್ಲಿ ಅದೂ ಮಟ ಮಟ ಮಧ್ಯಾನ್ಹ !!!! ಅರೆ ಎಂದು ನಿದ್ದೆಗಣ್ಣಲ್ಲಿ ಮೆಟ್ಟಿಲಿಳಿದೆ. ಕೊರಳತುಂಬ ರುದ್ರಾಕ್ಷಿ ಅದಕ್ಕೆ ಕೇಸರಿ ಗೊಂಡೆ ಬದಿಗೆ ಇಟ್ಟ ಒಂದು ಕರಿಯ ಕೋಲು ಒಂದು ಅಂಗಿ, ಲುಂಗಿ ತಲೆಗೆ ಕೇಸರಿಯ ಪೊಗಡಿಸುತ್ತಿದ್ದ, ಅತೀ ಕಪ್ಪನೆಯ ಬಣ್ಣದ ಮಣ್ಣು ಕಾಲು, ಬೆಂಡಾಗುತ್ತಿರುವ ಬೆರಳು ಕೆಟ್ಟು ಮುರುಟಿದ ಉಗುರು, ಬಗುಲಲ್ಲಿ ಅರಶಿನ ಬಣ್ಣದ ವಸ್ತ್ರದ ಚೀಲ ಹಳೇಯ ಹಳದಿ ಕೊಡೆ. ಆ ನೀತಿ ಹಾಡುಗಳಲ್ಲಿ ಬೇರೆಯದೇ ಭಾವ, ಭಕ್ತಿ ಹಾಡುವವನಿಂದ ಕೇಳುಗನ ಕಿವಿಯಿಂದ ಮನಸಿನ ಆಳಕ್ಕೆ‌ ತೂರಿ ಬರುತ್ತದೆ. ಎಂತಹ ನಾಸ್ತಿಕನಿಗೂ ದೇವರ ಒಮ್ಮೆ ಕಣ್ಣೆದುರು ಬರುವಂತೆ ಮಾಡುವ ಶಕ್ತಿ ಆ ಸಿದ್ದಣ್ಣನ ಹಾಡಿಗಿದೆ. ಹೊರಜಗುಲಿಯಲ್ಲಿ ಅದಾಗಲೇ ಸಿದ್ದಣ್ಣನ ಹಾಡು ಪ್ರಾರಂಭವಾಗಿತ್ತು. "ತೊಗಲ ನೆಚ್ಚಿ ಕೆಡಬೇಡಿರೋ..sss"  ಎಂದು. ನಾನೂ ಚಿಟ್ಟೆಯ ಒಂದು ತುದಿಯಲ್ಲಿ ಅಪ್ಪನ ಪಕ್ಕ ಕೂತು ಅವನನ್ನೇ ನೋಡುತ್ತ ಹಾಡನ್ನು ಆಲಿಸತೊಡಗಿದೆ. ಅಪ್ಪನಂತೂ ತೀರ ತಲ್ಲೀನನಾಗಿ ಕಣ್ಣು ಮುಚ್ಚಿ ಕೇಳುತ್ತಿದ್ದ. ಅಲ್ಲೆ ನನಗೆ ಸನ್ನೆ ಮಾಡಿದ ಮೊಬೈಲ್ ತಂದು ರೆಕಾರ್ಡ್ ಮಾಡು ಎಂದು. ನಾನು ಓಡಿಹೋಗಿ ನಾಲ್ಕನೇ ಸೆಕೆಂಡಿನೊಳಗೆ ರೆಕಾರ್ಡ್ಗೆ ಇಟ್ಟಿದ್ದೆ. ಆ ಹಾಡನ್ನು ನಿಮಗೂ ಕೇಳಿಸುವ ಆಸೆ ಇದೆ. ಹಾಡನ್ನು ಮುಗಿಸುವದರೊಳಗೆ ನಮ್ಮ ಮನೆಯ ನಾಯಿ ಬೆಕ್ಕು ಸಹ ಹೊರಜಗುಲಿಯಲ್ಲಿ ಮುದುರಿ ಕೂತಿದ್ದವು. ಅಪ್ಪ ಪ್ರತಿವರ್ಷವೂ ಅವರ...

ದೇವತೆ ಮತ್ತೆ ಹೊರಟಳು ಸ್ವರ್ಗದತ್ತ

ದೇವತೆ ಮತ್ತೆ ಹೊರಟಳು ಸ್ವರ್ಗದತ್ತ. ಪುಟ್ಟಕರುವಾಗಿ ಪುಟಿಯುತ್ತಾ ಆಡುತ್ತಾ ಬೆಳೆದು ಮೆಂದು ಇರುವ ಹಸುವೊಂದು ಇಂದು ಮೈಕೊರಟು ಮಾಡಿ ಉಸಿರ ಏರಿಳಿತಗಳಿಲ್ಲದೆ ನೆಲದ ಮೇಲೆ ಮಲಗಿಯೇ ಇದೆ.! ಕೆಚ್ಚಲು ತುಂಬಿ ಸುರಿವ ಹಾಲು ಕೊನೆಯ ಉಸಿರಲ್ಲೂ ಚಿಮ್ಮಿಸಿ ಸುಮ್ಮನಾಗಿದೆ. ಈಗಲೂ ನಾವು ಹಾಲುಂಡ ಆ ತಾಯಿ ಸ್ವರ್ಗದ ಬಾಗಿಲೆಡೆಗೆ ಬಾಲ ಬೀಸಿ ನಡೆಯುತ್ತಿದೆ ಎಂದರೆ ಸಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಉಳಿದಿರಲಿಲ್ಲ. ಅಮ್ಮ ಅಕ್ಕರೆಯಿಂದ ಬೆಳೆಸಿದ ಮುದ್ದಿನ ಕರು. ತಮ್ಮ ಆಗಾಗ ಚಿಕ್ಕ ಕೊಂಬು ಹಿಡಿದು ದೊಡ್ಡ ಯುದ್ದವನ್ನೇ ಮಾಡಿದ್ದು ಆ ಹಸುವಿನೊಂದಿಗೆ, ಎಳೆಹುಲ್ಲಿನ ಚಿಗುರನ್ನಷ್ಟೇ ಅಜ್ಜ ಕೊಯ್ದು ತಿನ್ನಿಸಿ ಬೆಳೆಸಿದ್ದು ಇದೇ ಕರುವನ್ನು. ಬುಟ್ಟಿ ಹಿಂಡಿ ಕೊಟ್ಟು ಅಪ್ಪ ಹಾಲು ಹಿಂಡಿದ್ದು ಇದೇ ಹಸುವಿನದು. ಬೇರೆಯವರಿಗೆ ಹತ್ತಿರ ಸುಳಿಯಲು ಭಯ ಹುಟ್ಟುವಷ್ಟು ಧೈತ್ಯವಾಗಿ ಬೆಳೆದಿತ್ತು ಇದೇ ಹಸು. ಎದೆಗೆ ಚುಚ್ಚಿದ ಮುಳ್ಳು ಒಳಗಡೆಯೇ ಮುರಿದಂತೆ ಮನದ ನೋವು. ಒಂದುವಾರದಿಂದ ಹಿಂದೆ ಏಕೋ ಒಂದು ದಿನ ಮಲಗಿದ ಹಸು ಏಳಲೇ ಇಲ್ಲ. ಕಣ್ಣುಗಳಲ್ಲೇ ತನಗೆ ಏನೋ ಆಗಿದೆ ಎಂದು ಸಣ್ಣದಾಗಿ ಹೇಳುತ್ತಿದ್ದ ಅವಳ ಮಾತು ಮೊದಲು ತಿಳಿದದ್ದು ಅಮ್ಮನಿಗೆ. ಇಲ್ಲ ಸಂಜೆಯಾದರೂ ಹುಲ್ಲು, ನೀರು, ಅವಳಿಷ್ಟದ ಬಾಳೆ ಎಲೆ ಯಾವುದನ್ನೂ ತಿನ್ನುತ್ತಿಲ್ಲ ಹಾಲು ಕರೆಯಬೇಕೆಂದು ಹತ್ತಿರ ಹೋದರು ಏಳುವ ಬಲುಮೆ ಅವಳಲ್ಲಿರಲಿಲ್ಲ. ಅಪ್ಪ ತಡಮಾಡಲಿಲ್ಲ " ಡಾಕ್ಟರ್ ಒಮ್ಮೆ ಬಂದು ನೋಡ...

ರೆಕ್ಕೆ ಮೂಡಿದ ಕನಸು

ರೆಕ್ಕೆ ಮೂಡಿದ ಕನಸು‌. ಬೆಚ್ಚನೆಯ ಹೊದಿಕೆಯಡಿ ಅಡಿಗಿರುವ ಕನಸುಗಳಿಗೆ ರೆಕ್ಕೆಮೂಡಿ.. ಹಾರುತ್ತವೆ ನೋಡಿ ಹೃದಯದಿಂದ ಹೊರಗೆ ಓಡಿ. ಮೂಡಿದ ಗರಿಗಳಿಗೆ ಅರೆಗಳಿಗೆಯೂ ಶಾಂತಿ ಇಲ್ಲ ಬೇಕಾದರೆ ನೀವೆ ಒಮ್ಮೆ ಕೇಳಿನೋಡಿ.. ಹಗಲು ಇರುಳು ಹಾರುವ ಕಾಯಕ, ಪ್ರತಿ ಕನಸುಗಳಿಗೂ ಇನ್ನಷ್ಟು ತವಕ‌. ಆಕಾಶದಿಂದಾಚೆ ಎಲ್ಲೋ ಇನ್ನಾವುದೋ ಬಾನು ಕಂಡ ರೆಕ್ಕೆಗೀಗ ನೀರ ಬಣ್ಣ. ಕಂಡದ್ದೆ ಸತ್ಯ. ಹಾರಿದ್ದೇ ಹಾದಿ. ಗರಿಗಳು ಉದುರದಿರಲಿ. ಸುಮಾ.ಕಂಚೀಪಾಲ್

ಮಕ್ಕಳ ಪ್ರೀತಿಯ ಚಿಕ್ಕಪ್ಪ

ಮಕ್ಕಳ ಪ್ರೀತಿಯ ಚಿಕ್ಕಪ್ಪ. ಪ್ರಸಾದ ಮಾವನ ಬಾಲ್ಯ ಅಮ್ಮಾಜಿಯ ನೆಚ್ಚಿನಲ್ಲಿತ್ತು ಮನೆಯ ಬುಡದಲ್ಲೇ ಇರುವ ಹಳ್ಳ ಒಂದಕ್ಕೆ ದಿನವೂ ಹೋಗಬೇಕೆಂಬ ಹಠ. ಅದಕ್ಕೆಂದೇ ಮುದುಕಾದ ಅಮ್ಮಾಜಿ ನಿಧಾನಕ್ಕೆ ನಡೆದು ಬಂದು ಮನೆ ಮುಂದಣ ಹಳ್ಳದಂಚಲ್ಲಿ ಇವನನ್ನು ಕಾಯುತ್ತಾ ಕುಳಿತಿರುತ್ತಿದ್ದರಂತೆ. ಇವನ ಹಳ್ಳದ ಆಸೆ ತೀರಿಸಿದ ಅಮ್ಮಾಜಿಯ ಹಾಗೆ ಇವನು ಉಳಿದ ಮಕ್ಕಳಿಗೆ ಹಳ್ಳದ ಆಸೆ ತೀರಿಸುವ ಪ್ರೀತಿಯ ಚಿಕ್ಕಪ್ಪ. ಇವನಿಗೆ ಮನೆಯ ಅಣ್ಣನ ಮಕ್ಕಳೆಂದರೆ ಬಲು ಪ್ರೀತಿ ಪ್ರಸಾದ ಚಿಕ್ಕಪ್ಪ ಎಂದರೆ ಅಷ್ಟೂ ಮಕ್ಕಳಿಗೆ ಜೀವಂತ ಆಟದ ಖುಷಿಯ ಸ್ವತ್ತು.. ಎಲ್ಲರನ್ನು ಹೆಗಲ ಮೆಲೆ ಹೊತ್ತು ಕುಣಿಸಿ ಮಾತಾಡಿಸಿ, ಕೆಲವೊಮ್ಮೆ ಗದರಿ ಮಾತಾಡಿಸಿ ಅವರ ತಪ್ಪು ತಿದ್ದುತ್ತಿದ್ದ. ಕರೆದರೆ ಓಗುಡುವ ಪಾಠವಂತು ಇವನಿಂದಲೇ ಎಲ್ಲರು ಕಲಿಯುತ್ತಿದ್ದರು.  ಶಾಮ, ಅಹನಾ, ಮೇಧಿನಿ, ಅದಿತಿ, ಗೌತಮ, ಅದ್ವೈತ, ಇನ್ನು ಅವನ ಮಾವನ ಮಕ್ಕಳಾದ ಭುವನ, ಮಿತ್ರ ಇಷ್ಟು ಪುಟ್ಟ ಮಕ್ಕಳು ನಾಲ್ಕು ವರ್ಷದ ಒಳಗಿನವರು. ಪ್ರಗತಿ, ಪ್ರಥಮ, ಸತೀಶ, ಪ್ರಸನ್ನ ನಾವು ಸಲ್ಪ ದೊಡ್ಡವರು. ಅವರ ಅಪ್ಪ ಅಮ್ಮಂದಿರಿಗೆ ಮಕ್ಕಳು ಪ್ರಸಾದನೊಟ್ಟಿಗೆ ಇದ್ದಾರೆ ಎಂದರೆ ಯಾವ ಚಿಂತೆಯೂ ಇಲ್ಲ. ಅಷ್ಟು ವಿಶ್ವಾಸದಿಂದ ಇವನೊಟ್ಟಿಗೆ ಕಳಿಸಿ ಕೊಡುತ್ತಿದ್ದರು. ಇವನ ಜೊತೆ ಅವರೆಲ್ಲ ಓಡೋಡಿ ಬರಲು ಕಾರಣವೆಂದರೆ ಹಳ್ಳಕ್ಕೆ ಈಜು ಹೊಡೆಯಲು ಕರೆದುಕೊಂಡು ಹೋಗುತ್ತಾನೆ ಎಂಬುದು. ಅವರನ್ನೆಲ್ಲಾ ಬೆನ್ನ ಮೇಲ...

ಹೆಸರಿಸಲಾಗದ್ದು

ಶುಕ್ರವಾರ ದಿನಾಂಕ ಹದಿನಾರು ಬೆಳಿಗ್ಗೆ ಹಠಮಾಡಿ ಸತ್ತರೂ ಬದುಕಿದರೂ ಅವನನ್ನು ನೋಡುವುದೇ ಎಂಬ ಆಶಯದಿಂದ ಜಪಗುಡುವ ಮಳೆಯಲ್ಲಿ ಮನೆ ಬಿಟ್ಟೆವು. ಅಮ್ಮ ಮತ್ತು ನಾನು ಬಸ್ಸಿಲ್ಲದೆ ಯಾವುದೋ ಗಾಡಿ ಹತ್ತಿ ಬಂದು, ಮಾವನ ಮನೆಯಿಂದ ಕಾರಲ್ಲಿ ಹೊರಡುವಷ್ಟರಲ್ಲಿ ಬಿಪೀ ಲೋ ಆಗಿದೆ. ನಾಡಿ ಬಡಿತವಿಲ್ಲ. ಎಂಬ ಸುದ್ದಿ ಸಿಕ್ಕಿ ಇನ್ನಷ್ಟು ಗಟ್ಟಿಯಾಗಿ ಹೊರಡೊ ಹೊತ್ತಲ್ಲೆ ಕಾಗೆಗಳ ಹಿಂಡು ಕೂಗುತ್ತಿತ್ತು ಮರದೆತ್ತರಕ್ಕೆ ಕಣ್ಣು ಹಾಯಿಸಿ ಹಾಗೇ ಒಂದು ನೋಟ ನನ್ನೆಡೆಗೆ ಬೀರಿದ ಅಮ್ಮನ ಕಣ್ಣಲ್ಲಿ ನೀರು ತುಂಬಿತ್ತು. ಅಲ್ಲಿಂದ ಹೊರಟು ಅರ್ಧದಾರಿ ಮುಟ್ಟಿದಾಗ ಹನ್ನೊಂದು ನಲವತ್ತೈದು ಕಾರು ನಿಲ್ಲಿಸಿದ್ದೆವು. ಅವನು ಉಸಿರು ನಿಲ್ಲಿಸಿದ್ದ. ನಾನು ಅಳು ನಿಲ್ಲಿಸಿದ್ದೆ. ಎಲ್ಲವೂ ಕಣ್ಣೆದೆರು ಒಮ್ಮಲೆ ಬಂದಂತಾಗಿ ಮೂಕಮಾತ್ರಳಾದೆ. ಅಲ್ಲಿಗೆ ಬರುವುದು ಬೇಡ ಎಂದರು ಹೋಗುವಷ್ಟರಲ್ಲಿ "ಬಾಡಿ ನೋಡುದಾದರೆ ಬನ್ನಿ" ಎಂದಾಗ ಹೃದಯವು ಒಂದೊಂದು ಹೋಳಾಗಿ ಹುಡುಕಿದರು ಜನ್ಮವಿಡಿ ಸಿಗದಷ್ಟು ಪುಡಿಯಾಗಿತ್ತು. ತವಕದಲಿ ಐ ಸಿ ಯು ಹತ್ತಿರ ಹೋದೆ ಹಸಿರಂಗಿ ತೊಡಿಸಿದರು. ಹೋಗುವಷ್ಟರಲ್ಲಿ ಹತ್ತಾರು ವಾಲುಗಳ ನಡುವೆ ಮಲಗಿದ್ದ. ನಾಲಿಗೆ ಹೊರಚಾಚಿತ್ತು. ಕರುಳು ಕಿವುಚಿ ಬಂತು. ಮುಟ್ಟ ಬಹುದೇ ಎಂದು ಕೇಳಿದೆ ತಲೆ ಅಲುಗಾಡಿಸಿದರು. ಎರಡು ನಿಮಿಷ ಅವನ ರಕ್ತ ಕುಂದಿದ ಬಿಳಿ ಕೈಯಲ್ಲಿ ನನ್ನ ಕೈ ಹಿಡಿದು ಮನದ ಭಾವನೆಗಳೆಲ್ಲವನ್ನು ಹರಿಸಿದೆ. ಜನ್ಮವಿಡಿ ಜೊತೆಗಿರು ಖುಷಿಯಿಂದ ಹೋಗಿಬ...

ಮೌಢ್ಯ

ಮೌಢ್ಯಗಳಿಂದ ಹೊರಬನ್ನಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ   ಕೊರೊನಾ ತಡೆಗಟ್ಟಲು ಕೆಲ ಹಳ್ಳಿಗಳಲ್ಲಿ ಮತ್ತು ಬೆಂಗಳೂರಿನಂತಹ ಭಾರಿ ನಗರಗಳಲ್ಲಿಯೂ ಮೂಢನಂಬಿಕೆಗಳನ್ನು  ಜನರು ನಂಬುತ್ತಿದ್ದಾರೆ. ಈ ಹಿಂದೆಯೂ ಪ್ಲೇಗ್ ಎಂಬ ಸಾಂಕ್ರಾಮಿಕ ಕಾಯಿಲೆ ಬಂದಾಗ ಪ್ಲೇಗಮ್ಮ ಎಂದು ಅದಕ್ಕೆ ಸ್ತ್ರೀ ರೂಪ ನೀಡಿ ದೇವಿಯ ರೂಪದಲ್ಲಿ ಆರಾಧಿಸುವ ಮೂಲಕ ಹೇಗೆ ಅವೈಜ್ಞಾನಿಕ ತಳಹದಿಯ ಮೇಲೆ ನಿಂತಿದ್ದರೊ ಹಾಗೇ ಈಗಲೂ ಪುನರಾವರ್ತನೆಯಾಗುತ್ತಿದೆ. ಮದ್ದೂರು ಪಟ್ಟಣದಲ್ಲಿ ಯುವಕ ಮತ್ತು ಯುವತಿಯರು ಸೇರಿ ಕೋರೊನಾ ಮಾರಮ್ಮನ ಹೆಸರಿನಲ್ಲಿ ಹಬ್ಬವನ್ನೇ ಆಚರಿಸಿದರು.ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ವೇಷಧರಿಸಿ  ತಲೆ ಮೇಲೆಹೊತ್ತುಕೊಂಡು ಊರಿನ ಕೆಲ ಭಾಗಗಳಲ್ಲಿ ಮೆರವಣಿಗೆ ಸಾಗಿದ ಘಟನೆಯು ಜರುಗಿದೆ. ಇವುಗಳಿಂದಾಗಿ ಸೊಂಕು ಹರಡುವ ಪ್ರಮಾಣ ಹೆಚ್ಚುತ್ತಿದೆ ಹೊರತಾಗಿ ರೋಗದ ಮುಕ್ತಿಗಾಗಿ ಅವರ ಬೇಡಿಕೆ ಇಡೇರುತ್ತಿಲ್ಲ. ಇದರೊಟ್ಟಿಗೆ ಶಿಂಷಾ ನದಿಯ ತೀರದಲ್ಲಿ ಮೂರ್ತಿಯನ್ನು ಮುಳುಗಿಸಿ, ಮೊಸರಿನಿಂದ ಪೂಜೆಮಾಡಿ ನೀರನ್ನು ಸಿಂಪಡಣೆ ಮಾಡಿದ್ದಾರೆ. ನದಿಗಳಲ್ಲಿ ನಿಂಬೆಹಣ್ಣು ತೇಲಿಬಿಡುವುದು. ಮಾಹಾಪೂಜೆ , ಯಾಗಗಳ ಹೆಸರಿನಲ್ಲಿ ಅನ್ನದ ಆಹುತಿ ಬಲಿಯ ಹೆಸರಿನಲ್ಲಿ ಬಂಡಿತುಂಬ ಅನ್ನವನ್ನು ಊರಿನ‌ ಹೊರವಲಯದಲ್ಲಿ ಬೀರುವ ಆಚರಣೆಗಳು ಖಂಡಿಸುವಂತದ್ದು. ಸಾಮಾಜಿಕ ಪರಿಕಲ್ಪನೆಯನ್ನೂ ಹೊರತುಪಡಿಸಿ ಇಂತಹ ಆಚರಣೆಗಳು ಇಂದಿನ ಆಧುನಿಕ ಕಾಲದ...

ಕವಿತೆ

ಪುಟದ ತಿರುವು. ಪದ್ಯಬರೆಯಲು ಪುಟ ತಿರುವುತ್ತೇನೆ ಹೊತ್ತು ಗೊತ್ತಿಲ್ಲದ ವೇಳೆಯಲಿ ನಡೆವ ದೃಶ್ಯಗಳನ್ನು ನಿಮಗೆ ಬಿಂಬಿಸುವಂತೆ. ಅದೂ ರಾತ್ರಿ ಗೂಡಿನಲ್ಲಿ ಬಾಲ ಮುದುರಿ ಮಲಗಿದ್ದ ನಾಯಿಯ ಪಾಡಿನಂತ ಕವಿತೆ. ಹಗಲು ಇರುಳು ಕಂಡು ಕಾಣದ ಜೇನಿನ ಕಾರ್ಯದಂತೆ ನಿರಂತರವಾಗಿ ಶ್ರಮಿಸುವಂತ ಕವಿತೆ. ಸಾವಿರ ಬೆಂಕಿಯ ಉಂಡೆಗಳು ಉರಿದು ನವಿಲ ಗರಿಯಾಗಿ ಕುಣಿದ ಕವಿತೆ. ನಾಲ್ಕು ಸಾಲು ಬರೆದರಾಯ್ತು ಅದೇ ಕವಿತೆ ಎಂದವನು ಸಹ ಮತ್ತೆ ಓದಬೇಕೆಂಬ ಕವಿತೆ. ಸುಮಾ.ಕಂಚೀಪಾಲ್

ಅಜ್ಜಿಮನೆ

ಅಜ್ಜಿಮನೆಯೆಂಬ ಅರಮನೆಯ ಸುತ್ತ. ಮೂರು ಬದಿ ನೀರು ಒಂದು ಬದಿ ಬೆಟ್ಟ ಅದರ ಮಧ್ಯ  ಒಂದೂರು.ಏನಿದು ಪರ್ಯಾಯ ದ್ವೀಪದ ಕುರಿತಾದ ಕತೆಯೋ ಎಂದು ಯೋಚಿಸಬೇಡಿ. ಇದು ನನ್ನ ಅಜ್ಜಿ ಮನೆಯ ಜಾಗದ ಚಿತ್ರಣ. ಆಗ ಅಜ್ಜಿ ಮನೆಗೆ ಹೋಗುವ ಖುಷಿ ಈಗ ಬಂಗಾರದ ಸರ ಕೊಡಿಸಿದರು ಸಿಗುವುದಿಲ್ಲ.  ಅಜ್ಜಿ ಮನೆಗೆ ಹೋಗುವ ಹಿಂದಿನ ದಿನ ರಾತ್ರಿ ಮಲಗಿದಾಗ ಎಷ್ಟು ಹೊತ್ತಿಗೆ ಬೆಳಗಾಗತ್ತೊ ಎಂದು ಯೋಚಿಸುವ ಹೊತ್ತಿಗೆ ಅರ್ಧ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಏಕೆಂದರೆ ಅಜ್ಜಿಯ ಮನೆಗೆ ಹೋಗುವ ದಿನ ಬೆಳಿಗ್ಗೆ ಅಜ್ಜ ಕೊಡಿಸಿದ ಬೆಳ್ಳಿ ಗೆಜ್ಜೆ ತೊಡಿಸುತ್ತಿದ್ದಳು ಅಮ್ಮ.‌ ಅದರ ಸದ್ದು ಮಾಡುತ್ತಾ ಮನೆತುಂಬ ಕುಣಿದು ಮನೆಯವರಿಗೆಲ್ಲಾ ನಾನು ಅಜ್ಜನ ಮನೆಗೆ ಹೋಗಿ ಬರ್ತೆನೆ ಎಂದು ಡಂಗುರ ಸಾರುವ ಖುಷಿ ಮೊದಲ ಹಂತದ್ದು. ಇನ್ನು ಮರುದಿನ ಬೆಳಗಾದರೆ ಬೇಗನೆ ಎದ್ದು ಸಕಲ ತಯಾರಿಗಳೊಂದಿಗೆ ಮಧ್ಯಾಹ್ನದ ಊಟವನ್ನು ಬುತ್ತಿಕಟ್ಟಿ ಘಟ್ಟಗಳನ್ನು ಕಾಲ್ನಡಿಗೆಯಲ್ಲಿ ಇಳಿಯ ಹೊರಟರೆ ಅಜ್ಜಿ ಮನೆ ಕಾಣುವಷ್ಟರಲ್ಲಿ ಕಾಲೆಲ್ಲಾ ನೋವು ಇನ್ನು ಮಾತ್ರ ಮರಳಿ ಅಜ್ಜನ ಮನೆಗೆ ಬರುವುದಿಲ್ಲ ಎಂದು ಪ್ರತೀ ಬಾರಿಯೂ ವಟ ಗುಡುತ್ತಾ ಮನೆ ತಲುಪುವುದು. ಮರದ ಸಂಕ ಚಪ್ಪಲಿಯನ್ನು ಕೈಯಲ್ಲಿ ಹಿಡಿದು, ಕೈಬಳ್ಳಿ ಹಿಡಿದು ಸಾಗಿದಬೇಕು. ದೊಡ್ಡದೊಂದು ಮಣ್ಣಿನ ಮನೆ ಮನೆ ತುಂಬಾ ಜನ. ಈಗಿನ ಹಾಗೆ ನಾಕು ಎಂಟು ಜನರಲ್ಲ. ಮೂವತ್ತು ಮೂವ್ತತ್ತಾರು ಜನ. ಅಜ್ಜ, ಗಂಗಜ್ಜ, ಮಾಧವಜ್ಜ, ತಮ್ಮಣಜ್ಜ, ರ...

ಮನಸ್ಸಿಗೆ ಅಂಟಿದ ಬಾಲ್ಯದ ಘಮಲು.

ಮನಸ್ಸಿಗೆ ಅಂಟಿದ ಬಾಲ್ಯದ ಘಮಲು. ಹೊಳೆ ಅಂಚಿನ ದಂಡೆಯ ಗುಂಟ ಓಡಿದ್ದೇ ಓಡಿದ್ದು ಸಂಪಿಗೆ ಮರದ ಹಣ್ಣು ಕೀಳಲಿಕ್ಕಾಗಿ.  ಆಗಂತು ಚಿಕ್ಕ ಸ್ಕರ್ಟ ಮೇಲಂಗಿ ಇಷ್ಟೇ ಬಿಟ್ಟರೆ ಚೂಡಿದಾರದ ಸಹವಾಸವೇ ಇರಲಿಲ್ಲ. ಮರಹತ್ತಲು ಬಂದರೂ,ಈ ಸ್ಕರ್ಟನ ಸಹವಾಸಕ್ಕೆ ಹೆದರಿ ಮರ ಹತ್ತದೇ ನಮ್ಮ ಸಹಪಾಠಿ ಹುಡುಗರು ಕೊಯ್ಯೊ ಹಣ್ಣುಗಳನ್ನು ಹೆಕ್ಕುವ ಕೆಲಸ ಮಾತ್ರ  ನಮ್ಮದಾಗಿತ್ತು. ಹೀಗಿರುವಾಗ ಒಮ್ಮೆ ದಾರಿ ಹತ್ತಿರದ ಮರದ ತುಂಬ ಬೊಕ್ಕಳದ ಹೂವು ಬಿಟ್ಟಿತ್ತು ಅದನ್ನು ಆರಿಸಿ ಪೋಣಿಸಿ ಮಾಲೆ ಮಾಡಿ ಶಾಲೆಗೆ ಹೋದರೆ ಅಕ್ಕೋರಿಗೆ ಮಾಲೆ ಕೊಟ್ಟು ಖುಷಿಪಡಿಸಬಹುದು ಎಂಬ ಆಸೆಗೆ ಲಂಗದ ತುದಿ ಮಡಿಸಿ ಹೂ ಆರಿಸೋವಾಗ ಕಟ್ಟಿರುವೆಗಳು ಕಚ್ಚದೇ ಹೋದರೆ ಅವುಗಳ ಖುಷಿ ಕಡಿಮೆ ಅಗುತ್ತಿತ್ತೋ ಎನೋ?! ಅವಂತು ಕಚ್ಚಿಯೆ ಕಚ್ಚುತ್ತಿದ್ದವು. ಅಂಗಿ ತೊಳೆದರು ಮೂಗಿಗೆ ಅಂಟಿದ ಘಮಲು ಹೋಗದಷ್ಟು ಘಾಡವಾದ ಕಂಪು ಅದು. ಮನೆಗೆ ಬಂದು ಬಾಗಿಲ ಪಕ್ಕದ ಸಣ್ಣ ಚಿಟ್ಟೆಯ ಮೇಲೆ ಹೂವು ಹರವಿ ಕೈ ಕಾಲು ತೊಳೆಯುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿತ್ತು. ಅದೇ ಬೆಳಗಿನ ತೆಳ್ಳವು ದೋಸೆ ಬೆಲ್ಲ ತುಪ್ಪದ ರುಚಿಯೊಂದಿಗೆ ಹೊಟ್ಟೆ ತುಂಬಿಸಿಕೊಂಡು ಬರುವಷ್ಟರಲ್ಲಿ ಬೊಕ್ಕಳ ಪೋಣಿಸಿ ಮಾಲೆ ಮಾಡುವ ಕೆಲಸದ ಖುಷಿ ಕಾದಿರುತ್ತಿತ್ತು.‌ ಅಷ್ಟಾದ ಮೇಲೆ ನಾಳೆಗಾಗಿ ಟೀಚರ್ ಕೊಟ್ಟ ಲೆಕ್ಕ. ಗುರೂಜಿ ಕೊಟ್ಟ ಮಗ್ಗಿ ದಿನಚರಿ.  ಒಂದು ಎರಡು ಮೂರು ಗೆರೆಗಳ ತುಂಬಿಸೋದೆ ದೊಡ್ಡ ಕೆಲಸ. ಇಷ್ಟಾದ ...

ನೆನಪ ಬಿಸಿ ಹನಿಗಳು

ಚಿತ್ರ: ಶ್ರೀನಿಧಿ ಮಳೆಗಾಲಕ್ಕೂ ಬೇಯಿಸಿದ ಜೋಳದ ತೆನೆಗೂ ಒಂದೊಳ್ಳೆ ಸಂಭಂದವಿದೆ. ಅದರಲ್ಲೂ ಆ ಜೋಳದ ತೆನೆಯೊಟ್ಟಿಗೆ  ಗೆಳೆಯರ ಗುಂಪು ಅಂಗಡಿಯ ಮುಂದೆ ನಿಂತು. "ನಂಗೆ ಬೇಯಿಸಿದ ಜೋಳ ಇವಳಿಗೊಂದು ಕೆಂಡದಲ್ಲಿ ಸುಟ್ಟ ಜೋಳ, ಅವನಿಗೆ ಖಾರ ಸ್ವಲ್ಪ ಜಾಸ್ತಿ ಇರೋದು ಕೊಡಿ. ನಿಂಬು ಚೆನ್ನಾಗಿ ಹಿಂಡಿ ಹುಳಿ ಹುಳಿಯಾಗಿಸಿ ಕೊಡಿ" ಎಂಬ ಮಾತಲ್ಲೆ ಮುಂದೆ ತೆನೆ ತಿನ್ನುವ ತವಕ ಎದ್ದು ಕಾಣುತ್ತದೆ. ಅದರಲ್ಲು ನಾವೆಲ್ಲಾ ಕಾಲೇಜಿನಿಂದ ವಾಪಾಸಾಗುವ ಸಮಯದಲ್ಲಿ ಪುಟ್ಟಪಾತ್ ಬದಿಯಲ್ಲಿ ಜೋಳ ಬೇಯಿಸುವ ನಾಕಾರು ಅಂಗಡಿಗಳು ನಿಂತೇ ಇರುತ್ತಿದ್ದವು. ದಿನವೂ ಒಂದೊಂದು ಅಂಗಡಿಗೆ ಹೋಗುವುದು ರೂಢಿ.  ಕಾರಣ ಕೇಳ್ತೀರಾ?! ಅಂಗಡಿಯವರಿಗೆ ಬೇಸರ ಆಗಬಾರದು ಎಂದು ಅನ್ನಬಹುದು. ನಿಜವಾದ ಕಾರಣ ಕೇಳ್ತೀರ!? ನಮಗೆ ಉಪ್ಪು, ಕಾರ, ಹುಳಿಯ ಹದದಲ್ಲಿ ವ್ಯತ್ಯಾಸ ಬೇಕಿತ್ತು ಅಷ್ಟೇ. ಅದರಲ್ಲೂ ಜೋರಾಗಿ ಮಳೆ ಸುರಿಯುತ್ತಿರುವ ಹೊತ್ತಲ್ಲಿ ಬೀಸುವ ಜೋರು ಗಾಳಿಗೆ ಅರ್ಧ ಮೈ ತೊಯ್ದು ಒದ್ದೆಯಾದಾಗ ಕೊಡೆಯ ಅಂಚಿನಿಂದ ಕೈ ಒಡ್ಡಿ ಹಣಕೊಟ್ಟು .ಒಂದು ಕೈಯಲ್ಲಿ ಕೊಡೆ ಸಂಭಾಳಿಸಿ ಇನ್ನೊಂದು ಕೈಯಲ್ಲಿ ಜೋಳದ ತೆನೆ ಸವಿಯುವ ಮಜವಿದೆಯಲ್ಲಾ ಮಳೆಗಾಲದಲ್ಲಿ ಬಿಟ್ಟರೆ ಅದು ಇನ್ ಯಾವತ್ತಿಗೂ ಸಿಗಲು ಸಾಧ್ಯವಿಲ್ಲ. ಜೂಡಿದಾರದ ಪ್ಯಾಂಟ್ ಒದ್ದೆಯಾಗಿ ಚಪ್ಪಲಿಯ ನೀರು ಜಡೆಯ ತುದಿವರೆಗೆ ಹಾರಿ, ಸಣ್ಣಗೆ ಚಳಿಯ ನಡುಕ ಹಿಡಿದಿರುವಾಗ, ಹೇಗೊ ನಡೆದು ಬಸ್ಟಾಂಡ್ ಹೊಕ್ಕಿ ಕೊಡೆ ಮಡಚಿದ...

ಆರಂಭ

ಪ್ರಿಯ ಓದುಗರೆ, ಐದು ವರ್ಷಗಳಿಂದ ಅಣುಗಾತ್ರದ ಹೆಜ್ಜೆ ಇಟ್ಟು ಬರೆಯುತ್ತಾ ಬಂದವಳು ನಾನು. ನನ್ನ ಕಿರುಗತೆ ಮತ್ತು ಕೆಲವು ಕವನಗಳನ್ನು ಓದಿ ಪ್ರೋತ್ಸಾಹಿಸಿದವರು ನೀವು.  ಹೀಗೆ ನನ್ನ ಪ್ರಕಟಿತ ಬರಹಗಳನ್ನು ಓದಿ ಹುರಿದುಂಬಿಸಿದ ನಿಮ್ನೆಲ್ಲರ ಪ್ರೀತಿಯಿಂದ ನಾನು ಈ ಬ್ಲಾಗ್ ಆರಂಭಿಸುತ್ತಿದ್ದೇನೆ. ನನ್ನ ಕೆಲವು ಪ್ರಕಟಿತ ಬರಹಗಳು ಇಲ್ಲಿ ಮರುಕಳಿಸಬಹುದು. ಅದನ್ನೂ ನೀವು ಪ್ರೋತ್ಸಾಹಿಸುತ್ತೀರಿ ಎಂಬ ನಂಬಿಕೆ ನನ್ನಿಲ್ಲಿದೆ.  ಬ್ಲಾಗ್ ಆರಂಭಿಸುವ ವಿಚಾರ ನನ್ನಲ್ಲಿದ್ದರೂ ಅದಕ್ಕೆ ರೂಪ ಕೊಡುವ ಕೆಲಸ ನನ್ನಿಂದಾಗಿರಲಿಲ್ಲ. ಯಲ್ಲಾಪುರ, ಶಿರಸಿ,ದಕ್ಷಿಣ ಕನ್ನಡ,  ನಾನಾ ಭಾಗದ ಓದುಗರು ಮತ್ತು ಬರಹಗಾರು ನನ್ನೊಟ್ಟಿಗಿದ್ದು ಅವರ ಕೆಲವು ನುಡಿಗಳು ನನಗೆ ಸ್ಪೂರ್ತಿ ತಂದಿದೆ. ನನ್ನೆಲ್ಲಾ ಸ್ನೇಹಿತರು ಬರಹಗಳನ್ನು ಓದಿ ಹುರಿದುಂಬಿಸಿದಕ್ಕಾಗಿ ನನ್ನ ಲೇಖನಿಗಳು ಹರ್ಷಪಡುತ್ತಿವೆ. ವೈದ್ಯಕೀಯ ವೃತ್ತಿಯಲ್ಲಿದ್ದ ನನ್ನ ಅಕ್ಕ ಪುಟ್ಟ ಮಗುವನ್ನು ಪೋಷಿಸುತ್ತಾ. ನನ್ನೊಟ್ಟಿಗೆ ಈ ವಿಷಯ ಪ್ರಸ್ತಾಪಮಾಡಿದಾಗ. ಬರೆಯಲು ಸಮಯವಿಲ್ಲ ಎಂದುತ್ತರಿಸಿದ ನನಗೆ. ಅವಳ ದಿನದ ಕಾಯಕಗಳೇ ಸ್ಪೂರ್ತಿ. ಒಬ್ಬ ತಾಯಿಯಾಗಿ, ಮಡದಿಯಾಗಿ, ವೈದ್ಯೆಯಾಗಿ, ಕೆಲವೆಡೆ ಇನ್ನೂ ಕಲಿಕೆಯಲ್ಲಿ ನಿರತಳಾಗಿ, ಗೃಹಿಣಿಯೂ ಆಗಿ ಅವಳ ಸಮಯ ಪರಿಪೂರ್ಣ. ಕೇವಲ ವಿದ್ಯಾರ್ಥಿಯಾದ ನನಗೆ ಸಮಯವಿಲ್ಲ ಎಂಬ ಮಾತು.......?! ಇನ್ನು ನನ್ನ ಪ್ರತಿಯೊಂದು ಬರಹಳನ್ನು ವೈಯಕ್ತಿಕವಾಗಿ ಓದ...