Skip to main content

ಸ್ನೇಹ ಬಾಡದ ಮುದ್ದು ಪುಷ್ಪ

ಸ್ನೇಹ ಬಾಡದ ಮುದ್ದು ಪುಷ್ಪ

ಅಂಗನವಾಡಿ ಗೋಡೆ ಮೇಲೆ ಅಂದೆಂದೂ ಗೀಚಿದ ಸೇಹದ ಗೆರೆಗಳು ಇಂದಿಗೂ ಹಸಿರು . ಗೆಳೆತನದ ಬೀಜ ಅಂದು ಮನದಲ್ಲಿ ನೆಟ್ಟಿದ್ದು ಇಂದಿಗೂ ಹಸಿರಾಗಿ ಚಿಗುರಿಕೊಂಡೇ ಇದೇ..ಕಡ್ಡಿ ಕಳೆದೋದಾಗ ಕಡ್ಡಿ ಕೊಟ್ಟ ಗೆಳೆಯ ಇಂದು ದೊಡ್ಡ ಕಲಾಕಾರ . ಆದೆಷ್ಟೊ ಚಿತ್ರಗಳಿಗೆ ಜೀವ ತುಂಬುತ್ತಿದ್ದಾನೆ .. ಕನ್ನಡ ಶಾಲೆಯಲ್ಲಿ ಪಕ್ಕದಲ್ಲೇ ಕುಳಿತು ಲೆಕ್ಕ ಬಿಡಿಸುತ್ತಿದ್ದವಳು ಇಂದು ಬ್ಯಾಂಕ್ ಮ್ಯಾನೇಜರ್. 

ಹೀಗೆಲ್ಲಾ ಚಿಗುರಿದ್ದು ಇಂದು ಎಣಿಸಲಾಗದಷ್ಟು ನೆನಪೆಂಬ ಎಲೆಗಳಿಂದ ತುಂಬಿಹೋಗಿದೆ . ಈಜಲೆಂದು ಹೋಗಿ ಜೀವ ಕಳೆದುಕೊಂಡ ಬಸ್ಯಾ ಇನ್ನು ನೆನಪಿಗೆ ಬರುತ್ತಾನೆ .. ಹೀಗೆ ಉದುರಿ ಹೋದ ಎಲೆಗಳು ಬಹಳ ಸಂತೋಷಕ್ಕೆ ಸಾತ್ ನೀಡಿ ದುಃಖದಲ್ಲಿ ಸಂತೈಸಿ ಕ್ಷಣ ಕ್ಷಣ ಜೊತೆಯಾಗಿರುವವರು ಸ್ನೇಹಿತರೇ.


 ಇನ್ನು ಈ ಮರಕ್ಕೆ ಕೆಲವು ಹೂವುಗಳು ಅನಿರೀಕ್ಷಿತವಾಗಿ ಸಿಗುವ ಗೆಳೆಯರು ಒಂದು ದಿನಕ್ಕೆಲ್ಲಾ ಅರಳಿ ಎರಡು ಮೂರು ದಿನಕ್ಕೆ ಬಾಡಿ ಉದುರಿ ಹೋಗುತ್ತವೆ.ಕ್ಯಾಂಪ್‌ಗಳಲ್ಲಿ , ಬಸ್‌ನಲ್ಲಿ , ಪ್ರವಾಸದಲ್ಲಿ ಸಿಗುವ ಈ ಹೂವುಗಳ ಪರಿಮಳವಂತು ಹೂ ಉದುರಿದರೂ ಉಳಿವಂತ ಕಂಪು ನೀಡಿವೆ. ಕೆಲವು ಹೂವಾಗಿ ಹಣ್ಣಾಗಿ ಕೊಳೆತು ನಾರಿ ಹೇಸಿಗೆಯನ್ನು ಉಂಟುಮಾಡಿದೆ . ಎಷ್ಟೇ ಆದರೂ ಅದು ನಮ್ಮ ಮರದ ಕಾಯಿಯೇ ಎಂದುಸುಮ್ಮನಿದ್ದು ಬಿಡುವುದು.

ಇನ್ನು ಕೆಲವು ಹಣ್ಣುಗಳು ತುಂಬಾ ರುಚಿಯಾಗಿ ಸಿಹಿಯನ್ನು ಮಾತ್ರ ನೀಡುವ ಸ್ನೇಹಿತರೂ ಇರುತ್ತಾರೆ . ಜೀವನ ಪೂರ್ತಿ ಆಳವಾಗಿ ಬೇರೂರಿ ಮರ ಗಟ್ಟಿಯಾಗಿ ನಿಲ್ಲಿಸುವಂತ , ಮರಕ್ಕೂ ಜೀವ ತುಂಬಿ ತನ್ನ ಜೀವವನ್ನೂ ಉಳಿದುಕೊಳ್ಳುವ ... ಸಹೃದಯಿ ಸ್ನೇಹಿತರೂ ಇದ್ದಾರೆ . ಒಂದು ಒಳ್ಳೆಯ ಗೆಳೆಯರ ಬಳಗವಿದ್ದವರು ಭುವಿಯನ್ನೇ ಬೆಳಗುವ ದೀಪವಾಗುವರು. ಗೆಳೆಯರ ಬಳಗವೇ ಕೆಟ್ಟದಾದರೆ ಭುವಿಗೆ ಬೆಂಕಿ ಇಡುವರು . ಜೀವನದುದ್ದಕ್ಕೂ ಹೀಗೆ ಹಲವು ಸ್ನೇಹಗಳು ಹುಟ್ಟಿರುತ್ತವೆ ಆದರೆ ಇದಕ್ಕೆಂದೂ ಸಾವಿಲ್ಲ . ವಯಸ್ಸಿನ ಮಿತಿಯೂ ಇಲ್ಲ . ಸ್ನೇಹ ಅಮರ . 

ಸುಮಾ ಕಂಚಿಪಾಲ್
2018 ರಲ್ಲಿ ಪ್ರಕಟವಾದ ಬರಹ.

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...