Skip to main content

ಮಕ್ಕಳ ಪ್ರೀತಿಯ ಚಿಕ್ಕಪ್ಪ

ಮಕ್ಕಳ ಪ್ರೀತಿಯ ಚಿಕ್ಕಪ್ಪ.

ಪ್ರಸಾದ ಮಾವನ ಬಾಲ್ಯ ಅಮ್ಮಾಜಿಯ ನೆಚ್ಚಿನಲ್ಲಿತ್ತು ಮನೆಯ ಬುಡದಲ್ಲೇ ಇರುವ ಹಳ್ಳ ಒಂದಕ್ಕೆ ದಿನವೂ ಹೋಗಬೇಕೆಂಬ ಹಠ. ಅದಕ್ಕೆಂದೇ ಮುದುಕಾದ ಅಮ್ಮಾಜಿ ನಿಧಾನಕ್ಕೆ ನಡೆದು ಬಂದು ಮನೆ ಮುಂದಣ ಹಳ್ಳದಂಚಲ್ಲಿ ಇವನನ್ನು ಕಾಯುತ್ತಾ ಕುಳಿತಿರುತ್ತಿದ್ದರಂತೆ. ಇವನ ಹಳ್ಳದ ಆಸೆ ತೀರಿಸಿದ ಅಮ್ಮಾಜಿಯ ಹಾಗೆ ಇವನು ಉಳಿದ ಮಕ್ಕಳಿಗೆ ಹಳ್ಳದ ಆಸೆ ತೀರಿಸುವ ಪ್ರೀತಿಯ ಚಿಕ್ಕಪ್ಪ.

ಇವನಿಗೆ ಮನೆಯ ಅಣ್ಣನ ಮಕ್ಕಳೆಂದರೆ ಬಲು ಪ್ರೀತಿ ಪ್ರಸಾದ ಚಿಕ್ಕಪ್ಪ ಎಂದರೆ ಅಷ್ಟೂ ಮಕ್ಕಳಿಗೆ ಜೀವಂತ ಆಟದ ಖುಷಿಯ ಸ್ವತ್ತು.. ಎಲ್ಲರನ್ನು ಹೆಗಲ ಮೆಲೆ ಹೊತ್ತು ಕುಣಿಸಿ ಮಾತಾಡಿಸಿ, ಕೆಲವೊಮ್ಮೆ ಗದರಿ ಮಾತಾಡಿಸಿ ಅವರ ತಪ್ಪು ತಿದ್ದುತ್ತಿದ್ದ. ಕರೆದರೆ ಓಗುಡುವ ಪಾಠವಂತು ಇವನಿಂದಲೇ ಎಲ್ಲರು ಕಲಿಯುತ್ತಿದ್ದರು.  ಶಾಮ, ಅಹನಾ, ಮೇಧಿನಿ, ಅದಿತಿ, ಗೌತಮ, ಅದ್ವೈತ, ಇನ್ನು ಅವನ ಮಾವನ ಮಕ್ಕಳಾದ ಭುವನ, ಮಿತ್ರ ಇಷ್ಟು ಪುಟ್ಟ ಮಕ್ಕಳು ನಾಲ್ಕು ವರ್ಷದ ಒಳಗಿನವರು. ಪ್ರಗತಿ, ಪ್ರಥಮ, ಸತೀಶ, ಪ್ರಸನ್ನ ನಾವು ಸಲ್ಪ ದೊಡ್ಡವರು.


ಅವರ ಅಪ್ಪ ಅಮ್ಮಂದಿರಿಗೆ ಮಕ್ಕಳು ಪ್ರಸಾದನೊಟ್ಟಿಗೆ ಇದ್ದಾರೆ ಎಂದರೆ ಯಾವ ಚಿಂತೆಯೂ ಇಲ್ಲ. ಅಷ್ಟು ವಿಶ್ವಾಸದಿಂದ ಇವನೊಟ್ಟಿಗೆ ಕಳಿಸಿ ಕೊಡುತ್ತಿದ್ದರು. ಇವನ ಜೊತೆ ಅವರೆಲ್ಲ ಓಡೋಡಿ ಬರಲು ಕಾರಣವೆಂದರೆ ಹಳ್ಳಕ್ಕೆ ಈಜು ಹೊಡೆಯಲು ಕರೆದುಕೊಂಡು ಹೋಗುತ್ತಾನೆ ಎಂಬುದು. ಅವರನ್ನೆಲ್ಲಾ ಬೆನ್ನ ಮೇಲೆ ಕುರಿಸಿಕೊಂಡು ನೀರಾಟವಾಡಿಸುತ್ತಿದ್ದ. ಮಕ್ಕಳಿಗೆ ನೀರಿಗಿಂತ ಹರ್ಷಕೊಡುವ ಸಂಗತಿ ಮತ್ತೊಂದಿಲ್ಲ. ಹಾಗೆ ಚಿಕ್ಕಪ್ಪನಷ್ಟು ಮೋಜು ಕಲಿಸುವವರು ಮತ್ಯಾರಿಲ್ಲ. ಮಕ್ಕಳನ್ನು ಕಂಡರೆ ಅವನ ಕಣ್ಣು ಬಟ್ಟಲುಗಳು ಅರಳುತ್ತಿದ್ದವು. ಮುತ್ತಿಟ್ಟು ಅವರನ್ನು ಕಾಡುತ್ತಾ, ಕೆಣಕುತ್ತಾ, ರೇಗುತ್ತಾ, ಕೂಗುತ್ತಾ ಅವರ ನೆಚ್ಚಿನ ಚಿಕ್ಕಪ್ಪನಾಗಿದ್ದ.
ಅವರೆಲ್ಲರನ್ನು ಸದಾ ಪ್ರೀತಿಯಿಂದ ಮಾತನಾಡಿಸಿ ಮಕ್ಕಳೊಡನೆ ಮಕ್ಕಳಾಗಿ ಆಡಿ ಸಮಯ ಕಳೆದವ ಅವನು.

ಇದು ನಮ್ಮ ಬಾಲ್ಯ

ನಾನು ಮತ್ತು ಅವನು ಚಿಕ್ಕವರಿರುವಾಗ ಒಂದು ಮರದ ಏಣಿಯಮೇಲೆ ಕೂತು ಬೈಕು,ಕಾರು,ಬಸ್ಸು ವಿಮಾನ‌ ಓಡಿಸುವ ಆಟ ಆಡುತ್ತಿದ್ದೆವು. ನನ್ನ ಮೊದಲ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ಅವನ ಹೆಸರಿನಲ್ಲಿ ಅಜ್ಜ ಕೊಡಿಸಿದ ಸಣ್ಣ ಕೂರ್ಚೆ ಇನ್ನು ಹಾಗೇ ಇದೆ. ಮೊನ್ನೆ ಬಂದವನು ನಾನು ಇದರಲ್ಲೊಮ್ಮೆ ಕುಳಿತು ಕೊಳ್ಳುತ್ತೇನೆ ಎಂದ ಇಲ್ಲ ಇದು ನಿನ್ನ ಭಾರ ತಡಿಯೋದಿಲ್ಲ ಎಂದು ಕಸಿದು ಕೊಂಡಿದ್ದೆ.


ನಮ್ಮ ಮನೆಗೆ ಯಾವ ಸಣ್ಣ ಮಕ್ಕಳು ಬಂದರೂ ಅದರಲ್ಲಿ ಕುಳಿತುಕೊಳ್ಳುತ್ತಾರೆ. ಇಪ್ಪತ್ತೆರಡು ವರ್ಷಗಳಿಂದ ನಾನು ಅದನ್ನು ಜೋಪಾನ ಮಾಡಿಕೊಂಡು ಬಂದಿದ್ದೇನೆ ಮತ್ತೆ ಯಾರಾದರೂ ಕುಳಿತು ಬಿಡಬಹುದು ನಾನು ಮನೆಯಲ್ಲಿ ಇರದಾಗ ಎಂಬ ಕಾರಣಕ್ಕೆ ಮೆತ್ತಿನ ನನ್ನ ಕೋಣೆಯಲ್ಲಿ ಯಾರಿಗೂ ಸುಲಭಕ್ಕೆ ಸಿಗದ ಹಾಗೆ ಇಟ್ಟಿದ್ದೇನೆ.  ಇನ್ನು ನಾನು ಅವನು ಕೂಡಿ ಹಳ್ಳದ ಬದಿಯಲ್ಲಿ ಕಲ್ಲು ಹೆಕ್ಕುವುದು ಆಟಕ್ಕೆಂದು ದುಪ್ಪಟದಲ್ಲಿ ಮೀನ, ಮಂಡೂಕ ಹಿಡಿಯುವುದು. ಮನೆಯ ಬುಡದ ಮರದ ಚುಂಚಿಹಣ್ಣು ಕೊಯ್ದು ತಿನ್ನುವುದು ಇವೆಲ್ಲವೂ ಸದಾ ಕಾಲಕ್ಕೂ ಪ್ರಿಯವಾದ ಕಾರ್ಯವಾಗಿತ್ತು.

ನಾನು ಹೊಸದೊಂದು ವಾಚು ಕರೀದಿಸಿ ತೊಟ್ಟಿದ್ದೆ. ಅದು ವಾಟರ್ ಪ್ರೂಪ್ ಎಂದು ನಾನು ಹೇಳಿದ್ದೆ. ಅದು ನಿಜವೋ? ಸುಳ್ಳೋ!! ನೋಡಲು ಅವನು ಹಳ್ಳದಲ್ಲಿ ಐದಾರು ನಿಮಿಷ ಮುಳಿಗಿಸಿ ಇಟ್ಟು ತೆಗೆಯುವಷ್ಟರಲ್ಲಿ ಅದರಲ್ಲಿ ಇಬ್ಬನಿ ಕಟ್ಟಿ ವಾಚು ನಿಂತಿತ್ತು. ಮನೆಯಲ್ಲಿ ಹೇಳಿದರೆ ಬೈತಾರೆ ಅಂತ ಇಬ್ಬರು ಸೇರಿ ಬಿಸಿಲಿಗೆ ಒಣಗಿಸಿ ಎರಡು ಸಲ ತಲೆ ಮೇಲೆ ಬಡಿದಾಗ ಮುಳ್ಳು ತಿರುಗಲಾರಂಭಿಸಿತ್ತು. ಅದೇ ಘಟನೆಯನ್ನು ಹಲವಾರು ಸಾರಿ ಅವನು ನೆನಪು ಮಾಡಿ ನಗುತ್ತಿದ್ದ.ನಾನು ಕೋಪಿಸಿಕೊಳ್ಳುತ್ತಿದೆ.


ಎಷ್ಟು ಹೇಳಿದರು ಮುಗಿಯದ ಕತೆಗಳು ನನ್ನಲ್ಲಿವೆ. ಆಗಾಗ ಅವನನ್ನು ನನ್ನ ಬರಹದಲ್ಲಿ ಜೀವಂತ ಇಡಲು ಬಯಸುತ್ತೇನೆ. ಬರೆದಿಲ್ಲ ಇನ್ನು ಕೆಲವೇ ದಿನಗಳಲ್ಲಿ ಆ ಘಟನೆಗಳು ಮರೆತೇ ಹೋಗುತ್ತದೆ ಎಂಬ ವಿಷಯಗಳಂತು ಇಲ್ಲವೇ ಇಲ್ಲ. ಸದಾ ನನ್ನ ಬರಹಗಳಲ್ಲಿ ನಾನು ಅವನನ್ನು ಜೀವಂತವಾಗಿಡುತ್ತೇನೆ. ನೀವು ಅವನನ್ನು ಈ ಮೂಲಕ ತಲುಪಬಹುದು.

ಸುಮಾ.ಕಂಚೀಪಾಲ್
sumagaonkar22@gmail.com
 

Comments

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...