Skip to main content

ದೇವತೆ ಮತ್ತೆ ಹೊರಟಳು ಸ್ವರ್ಗದತ್ತ

ದೇವತೆ ಮತ್ತೆ ಹೊರಟಳು ಸ್ವರ್ಗದತ್ತ.
ಪುಟ್ಟಕರುವಾಗಿ ಪುಟಿಯುತ್ತಾ ಆಡುತ್ತಾ ಬೆಳೆದು ಮೆಂದು ಇರುವ ಹಸುವೊಂದು ಇಂದು ಮೈಕೊರಟು ಮಾಡಿ ಉಸಿರ ಏರಿಳಿತಗಳಿಲ್ಲದೆ ನೆಲದ ಮೇಲೆ ಮಲಗಿಯೇ ಇದೆ.! ಕೆಚ್ಚಲು ತುಂಬಿ ಸುರಿವ ಹಾಲು ಕೊನೆಯ ಉಸಿರಲ್ಲೂ ಚಿಮ್ಮಿಸಿ ಸುಮ್ಮನಾಗಿದೆ. ಈಗಲೂ ನಾವು ಹಾಲುಂಡ ಆ ತಾಯಿ ಸ್ವರ್ಗದ ಬಾಗಿಲೆಡೆಗೆ ಬಾಲ ಬೀಸಿ ನಡೆಯುತ್ತಿದೆ ಎಂದರೆ ಸಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಉಳಿದಿರಲಿಲ್ಲ. ಅಮ್ಮ ಅಕ್ಕರೆಯಿಂದ ಬೆಳೆಸಿದ ಮುದ್ದಿನ ಕರು. ತಮ್ಮ ಆಗಾಗ ಚಿಕ್ಕ ಕೊಂಬು ಹಿಡಿದು ದೊಡ್ಡ ಯುದ್ದವನ್ನೇ ಮಾಡಿದ್ದು ಆ ಹಸುವಿನೊಂದಿಗೆ, ಎಳೆಹುಲ್ಲಿನ ಚಿಗುರನ್ನಷ್ಟೇ ಅಜ್ಜ ಕೊಯ್ದು ತಿನ್ನಿಸಿ ಬೆಳೆಸಿದ್ದು ಇದೇ ಕರುವನ್ನು. ಬುಟ್ಟಿ ಹಿಂಡಿ ಕೊಟ್ಟು ಅಪ್ಪ ಹಾಲು ಹಿಂಡಿದ್ದು ಇದೇ ಹಸುವಿನದು. ಬೇರೆಯವರಿಗೆ ಹತ್ತಿರ ಸುಳಿಯಲು ಭಯ ಹುಟ್ಟುವಷ್ಟು ಧೈತ್ಯವಾಗಿ ಬೆಳೆದಿತ್ತು ಇದೇ ಹಸು. ಎದೆಗೆ ಚುಚ್ಚಿದ ಮುಳ್ಳು ಒಳಗಡೆಯೇ ಮುರಿದಂತೆ ಮನದ ನೋವು.



ಒಂದುವಾರದಿಂದ ಹಿಂದೆ ಏಕೋ ಒಂದು ದಿನ ಮಲಗಿದ ಹಸು ಏಳಲೇ ಇಲ್ಲ. ಕಣ್ಣುಗಳಲ್ಲೇ ತನಗೆ ಏನೋ ಆಗಿದೆ ಎಂದು ಸಣ್ಣದಾಗಿ ಹೇಳುತ್ತಿದ್ದ ಅವಳ ಮಾತು ಮೊದಲು ತಿಳಿದದ್ದು ಅಮ್ಮನಿಗೆ. ಇಲ್ಲ ಸಂಜೆಯಾದರೂ ಹುಲ್ಲು, ನೀರು, ಅವಳಿಷ್ಟದ ಬಾಳೆ ಎಲೆ ಯಾವುದನ್ನೂ ತಿನ್ನುತ್ತಿಲ್ಲ ಹಾಲು ಕರೆಯಬೇಕೆಂದು ಹತ್ತಿರ ಹೋದರು ಏಳುವ ಬಲುಮೆ ಅವಳಲ್ಲಿರಲಿಲ್ಲ. ಅಪ್ಪ ತಡಮಾಡಲಿಲ್ಲ " ಡಾಕ್ಟರ್ ಒಮ್ಮೆ ಬಂದು ನೋಡಿ ಎಂದಿಗೂ ಚುರುಕಾಗಿಯೇ ಇರುತ್ತಿದ್ದ ನಮ್ನ ಹಸುವಿಗೆ ಏನೋ ಆಗಿದೆ" ಎಂದು ಪೋನಿಸಿದ ಮಾರನೆ ದಿನ ಬೆಳಿಗ್ಗೆ ಬಂದು ವಿಚಾರಿಸಿ ಔಷದಿ ನೀಡಿ ಹೋಗಿದ್ದಾಯ್ತು. ಮರುದಿನವೂ ಯಾವಸುಧಾರಣೆಯೂ ಕಾಣುತ್ತಿಲ್ಲ. ಮನೆಯ ಮನುಷ್ಯರಿಗೆ ಹುಶಾರು ತಪ್ಪಿದರೆ ಎಷ್ಡು ಕಳವಳವೋ ಅದಕ್ಕಿಂತ ಹೆಚ್ಚಿನ ಆತಂಕ ನಮ್ಮೆಲ್ಲರದು. ಯಾಕೆ ಹೇಳಿ!? ನಾವಾದರೆ ಮಾತಿನಲ್ಲಾದರೂ ನಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಳ್ಳುವ ಅವಕಾಶವನ್ನು ದೇವರು ಒದಗಿಸಿದ್ದಾನೆ. ಅವಳಾದರೋ ಮೂಕ ಪ್ರಾಣಿ. ರಾತ್ರಿ ನಿದ್ದೆ ಬಾರದೆ ಅಪ್ಪ ಮನದಲ್ಲಿ ಅದೆಷ್ಟು ವಿಚಾರ ಮಾಡಿದರೋ ಏನೋ. ನಮ್ಮ ಜೀವನದ ಮುಖ್ಯ ಆಧಾರವೇ ಅವಳಾಗಿದ್ದಾಗ ಅವಳನ್ನು ಕಳೆದುಕೊಳ್ಳುವ ಭಯವನ್ನು ನೆನೆಯಲೂ ಸಾಧ್ಯವಿಲ್ಲದ ಪರಿಸ್ಥಿತಿ ನಮ್ಮದಾಗಿತ್ತು. 
ನಾಕಾರು ವೈದ್ಯರನ್ನು ದಿನ ದಿನವೂ ಕರೆಸಿ ಅದೆಷ್ಟು ಬಾರಿ ಸೂಜಿಗಳನ್ನು ಅವಳ ಚರ್ಮದ ಪದರಗಳಲ್ಲಿ ನುಸುಳಿಸಿ ನೋವು ಕೊಟ್ಟೆವೋ ಲೆಕ್ಕವಿಲ್ಲ. " ಇಲ್ಲಾ ಈ ಹಸು ಉಳಿಯುವ ಸಾಧ್ಯತೆ ತುಂಬಾ ಕಡಿಮೆ ಇದೆ" ಎಂದು ವೈದ್ಯರು ಹೇಳಿದಾಗಲೇ ಅಪ್ಪನ ಹೊಟ್ಟೆಯಲ್ಲಿ ನೂರು ಕೊಳ್ಳಿದೆವ್ವಗಳ ಸಾಲು ಸುಳಿದಿತ್ತು. ಮನಸ್ಸು ಗಟ್ಟಿಮಾಡಿಕೊಂಡು ಪ್ರಯತ್ನ ಬಿಡದೆ ಇಲ್ಲ ಮತ್ತು ಬೇರೆ ವೈದ್ಯರಿದ್ದರೆ ತಿಳಿಸಿ ಹೇಗಾದರೂ ಮಾಡಿ ನಾನು ಉಳಿಸಿಕೊಳ್ಳುತ್ತೇನೆ ಎಂದು ಮತ್ತೂ ಒಂದು ಚಿಕ್ಕ ಭರವಸೆಯನ್ನು ಅವನಿಗವನೇ ತಂದು ಕೊಂಡ.

ಮೂರು ಹೊತ್ತು ಅವಳು ನರಳುವ ಮತ್ತು ಉಸಿರಾಡಲು ಪಡುತ್ತಿದ್ದ ಕಠೋಟ ನೋವುತುಂಬಿದ ದನಿಗಳು ಕೊಟ್ಟಿಯ ಕಡೆಯಿಂದ ಅಲೆಯಾಗಿ ಮನೆಯನ್ನು ಸುಳಿಯುತ್ತಿತ್ತು. ಎರಡು ದಿನದಿಂದ ಅವಳೊಟ್ಟಿಗೆ ಅಪ್ಪ,ಅಮ್ಮನೂ ನಿಶ್ಚಿಂತರಾಗಿ ನಿದ್ದೆ ಮಾಡಿರಲಿಲ್ಲ. ಅಮ್ಮ ದಿನವೂ ಅವಳ ಮೈಗೆ ಬಿಸಿ ನೀರ ಶಾಖ ನೀಡಿ ತುಂಬಾ ಪ್ರೀತಿಯಿಂದ " ಶೋಭಾ ನಿನಗೆ ಏನಾಗುತ್ತಿದೆ!? ನಾನಿದ್ದೇನೆ ಎಂದು ಮೈಮೇಲೆ ಕೈಯಾಡಿಸುತ್ತಿದ್ದರೆ. ಅಮ್ಮನನ್ನೇ ದಿಟ್ಟಿಸಿ ನೋಡಿ ಇದಕ್ಕೂ ಹೆಚ್ಚು ನನ್ನಿಂದಾಗದು. ನಾನು ನಿಮ್ಮನ್ನು ಅಗಲುವ ಸಮಯ ಬಂದಂತಿದೆ ಎಂದು ಹೇಳಿದ್ದು ಅಮ್ಮನಿಗೂ ತಿಳಿಯುತ್ತಿತ್ತು ಆದರೂ ಅವಳ ಪಕ್ಕ ಕುಳಿತು ಸಮಾಧಾನ ಮಾಡುತ್ತಿದ್ದರು. ಏಳಲು ಪ್ರಯತ್ನಿಸುತ್ತಿದ್ದ ಅವಳನ್ನು ಯಂತ್ರದ ಮೂಲಕ ಎತ್ತಿ ನಿಲ್ಲಿಸುವ ಪ್ರಯತ್ನವೂ ನಡೆಯಿತು. ಬದುಕ ಬೇಕು ಎದ್ದು ನಿಲ್ಲಬೇಕೆಂಬ ಅವಳ ಬಯಕೆಯೂ ಏಳುವಾಗ ಅವಳ ಮೊಣಕಾಲಿಗಾದ ಗಾಯವೇ ಸಾರುತ್ತಿತ್ತು.



ಏಳು ಬಾರಿ ಬೇರೆ ಬೇರೆ ವೈದ್ಯರನ್ನು ತರಿಸಿದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಯಸ್ಸಾದ ಹಸುವಲ್ಲ ಹುಟ್ಟಿ ಐದುವರ್ಷವಷ್ಟೇ ಆಗಿತ್ತು. ತಮ್ಮನಿಗೂ ಅವಳೆಂದರೆ ವಿಶೇಷವಾದ ಒಲವಿತ್ತು ಯಾಕೆಂದರೆ ತಿಂಗಳಿದು ಐದಾರು ಬಾರಿ ಕುಣಿದು ಕುಣಿದು ಕುತ್ತಿಗೆಯ ಹಗ್ಗ ಬಿಡಿಸಿಕೊಂಡು ಓಡುತ್ತಿದ್ದ ಅವಳ ದೈತ್ಯಕಾಯವನ್ನು ಉಪಾಯಮಾಡಿ ಹಿಡಿದು ತಂದು ಅಶ್ವಮೇಧದ ಕುದುರೆ ಕಟ್ಟಿದಷ್ಟು ಖುಷಿ ಪಡುತ್ತಿದ್ದ. ಅವಳೊಟ್ಟಿಗೆ ಅದನ್ನೇ ಮಾತನಾಡಿ ನಗುತ್ತಿದ್ದ. ಯಾವದಕ್ಕೂ ಕರಗದ ಅವನ ಮನಸ್ಸು ಇವಳ ನರಳಾಟಕ್ಕೆ ತೀರಾ ಕುಂದಿ ಹೋಗಿತ್ತು.

ಕೊನೆಯ ದಿನದಲ್ಲಿ ಅವಳ ಶರೀರದ ಬಾಗಗಳು ಬಿರುಕು ಬಿಡತೊಡಗಿದ್ದವು. ಗಡ್ಡೆಯಂತಾಗಿದ್ದವು. ಕೆಚ್ಚಲು ತುಂಬಾ ಭಾರವಾಗಿದ್ದವು, ಅಲ್ಲಲ್ಲಿ ಗಾಯಗಳು ಔಷಧಿಯ ಪರಿಣಾಮವಾಗಿ ಬಾವು ಬಂದಿತ್ತು. ಪದೇ ಪದೇ ಅವಳು ಬದುಕುವುದಿಲ್ಲ ಎಂಬ ಭಾವ ದೃಡವಾಯ್ತು. ಹೇಗಾದರೂ ಸಾಯುವವಳು ಈ ಎಲ್ಲ ನೋವುಗಳಿಂದ ಬೇಗ ಮುಕ್ತಿಹೊಂದಿ ಬೇರೆ ದಾರಿ ಹಿಡಿಯಲಿ ಎಂದು ಕೊನೆಗೆ ನಾವೇ ಬಯಸುವ ಸ್ಥಿತಿಯಲ್ಲಿ ಅವಳು ಇಂದು ಉಸಿರು ನಿಲ್ಲಿಸಿದ್ದಾಳೆ. ಏಳು ಜನ ಸೇರಿದರು ಎತ್ತಲಾಗದ ಅವಳ ದೈತ್ಯ ದೇಹವನ್ನು ಅಂತ್ಯಸಂಸ್ಕಾರಕ್ಕಾ ಎಳೆದುಕೊಂಡು ಹೋಗುವ ಕಾಲಕ್ಕೆ ಅಪ್ಪನ ಮನಸ್ಸು ಅದೆಷ್ಟು ಸಹಸ್ರ ಚೂರುಗಳಾಗಿ ಒಡೆದವೆಂದು ಊಹಿಸಲು ನಮಗೆ ಸಾದ್ಯವಾಗುವುದಿಲ್ಲ. 


ಸದಾ ಜೊತೆಯಾಗಿರುತ್ತಿದ್ದ ಅಂಬಾ ಎನ್ನುವ ಭಾಷೆಯಲ್ಲಿ ಮಾತನಾಡುತ್ತಿದ್ದ ಉಳಿದ ಹಸುಗಳಿಗೆ ಆ ದೃಷ್ಯದ ಅರಿವಾಗಿರಬಹುದು ಹಗ್ಗ ಹರಿಯುವಂತೆ ಕುಪ್ಪಳಿಸಿ ಅಂಬಾ, ಅಂಬಾ, ಎಂದು ಎಣಿಸಲಾರದಷ್ಟು ಬಾರಿ ಕೂಗಿದವು. ಮಾತೂ ಬಾರದ ಕಣ್ಣೀರೂ ಸುರಿಯದ ಒಳನೋವು ಅಪ್ಪನಿದಾದರೆ ,ಈ ಯಾವ ದೃಷ್ಯವನ್ನೂ ನೋಡುವ ಮನಸ್ಸು ಮಾಡದ ಅಮ್ಮ ಇನ್ನೊಂದು ಕಡೆ. ಹಗ್ಗ ತಪ್ಪಿಸಿಕೊಂಡಾಗ ಅವಳನ್ನು ಮಣಿಸುತ್ತಿದ್ದ ತಮ್ಮನ್ನು ಇಂದು ಅವಳನ್ನು ಮಣ್ಣಿನ ಗುಣಿಯೆಡೆಗೆ ಎಳೆಯುತ್ತಿದ್ದಾನೆ. ಅವನಿಗೂ ಅನಿಸಿಯೇ ಅನಿಸಿರುತ್ತದೆ " ಒಮ್ಮೆ ಎದ್ದು ಓಡಿಬಿಡು ದಯವಿಟ್ಟು ಮತ್ತೆ ಹಿಡಿಯುತ್ತೇನೆ " ಎಂದು ಬಲಗೈಯ ಅಂಗಿ ತೋಳುಗಳು ತೊಯ್ಯವಷ್ಟು ಅವನು ಕರಗಿದ್ದಾನೆ. ದೂರದ ಊರಲ್ಲಿರುವ ನನಗೆ ಕೊನೆಪಕ್ಷ ಅವಳನ್ನು ನೋಡುವ ಕನಿಷ್ಠ ಭಾಗ್ಯವೂ ಸಿಗಲಿಲ್ಲ.

ಸುಮಾ.ಕಂಚೀಪಾಲ್

ಅವಧಿ ಬ್ಲಾಗ್ ನಲ್ಲಿ ಹಿಂದೆ ಪ್ರಕಟವಾದ ನನ್ನ ಬರಹ. 
#avadhi

Comments

  1. ನೀನಾರಿಗಾದೆಯೋ ಎಲೆ ಮಾನವಾ...! ಹಾಡು ನೆನಪಾಯಿತು...

    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...