Skip to main content

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ. 



9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ಒಂದು ಕೈ ಹೆಚ್ಚೇ ಚಿಂತೆಯಾಗುತ್ತಿತ್ತು.

ತಕ್ಷಣ ಶಿಫ್ಟ್ ಚಾರ್ಟ್ ತೆಗೆದು ನೋಡಿದೆ.. "ಅಯ್ಯೋ! ನಾಳೆ ಪಾಳಿಯಲ್ಲಿ ನನ್ನ ವಿಭಾಗದಲ್ಲಿ ಕೆಲಸ ಮಾಡುವ ಇನ್ನಿಬ್ಬರೂ, ರಜೆಯಲ್ಲಿದ್ದಾರೆ" ನಿಧಾನಕ್ಕೆ ಬಸ್ಸಿನವರ ಮೇಲಿದ್ದ ಕೋಪವನ್ನು "ನಾ ಲ್ಯಾಪ್‌ಟಾಪ್ ತಕತ್ತೆ ಯಾವ್ದಕ್ಕೂ ಇರ್ಲಿ" ಎಂದಾಗ "ಬೇಡ ಅದಲವ ಆರಾಮ್ ಹೋಯ್ಬಪ್ಪ" ಎಂದವನ‌ ಮೇಲೆ ತಿರುಗಿತು. ಅವನಿಗೂ ಗತಿ ಇಲ್ಲ ನನ್ನ ಮಾತು ಕೇಳಲೇಬೇಕು. ಆದರೆ, ರಾತ್ರಿ ಬೇಗನೇ ನಿದ್ರಾದೇವಿ ಆವರಿಸುವ ಅವನಿಗೂ ನಿದ್ದೆ ತಪ್ಪಿ ಕಿರಿಕಿರಿಯಾಗಿ ಚೂರು ಜೋರಾದ‌. ನಾನು ತಣ್ಣಗಾದೆ. 

ಅಷ್ಟರಲ್ಲೇ ಆಟೋ ಚಾಲಕನೊಬ್ಬ ಈ ಸಮಯ ಬಳಸಿ ತಾನು ಹಣ ಮಾಡಿಕೊಳ್ಳಲು ನೋಡುತ್ತಿದ್ದ. "ನನಗೆ ಬಸ್ ರಿಪೇರಿ ಮಾಡುವವನ ಗುರುತಿದೆ ಬಸ್ ರಿಪೇರಿ ಆಗಲಾರದು" ಎಂದು ದೊಡ್ಡದಾಗಿ ಹೇಳಿದ. ಆ ಮಾತನ್ನು ಕೇಳಿದ ಹಲವರಿಗೆ ಗಾಬರಿ ಆಯಿತು. ನಾನು ದೇವಸ್ಥಾನದ ವಸತಿ ಗ್ರಹಕ್ಕೆ ಡ್ರಾಪ್ ಮಾಡ್ತೀನಿ ಎಂದ. ಆಗ ಇನ್ನೂ ಕೆಲವರಿಗೆ ಹೋಗಿಬಿಡೋಣ ಎನಿಸಿತು. ಆದರೆ, ನಾಳೆ ರವಿವಾರ ಮೊದಲೆ ಎಲ್ಲ ಬಸ್‌ಗಳು ಬುಕ್ ಆಗಿರುತ್ತದೆ ಎಂದು ನೆನಪಾಗಿ ಎಷ್ಟು ಸಮಯವಾದರೂ ಸರಿ ಕಾಯೋಣ ಎನಿಸಿ ಸ್ವಲ್ಪ ಜನ ಕೂತರು. ನಾವಿಬ್ಬರೇ ಆದರೆ ಇಲ್ಲಿ ಕೂರೋದು ಕಷ್ಟ ಎಂದೇನಿಸಲು ಆರಂಭವಾಗಿತ್ತು. ಮಲಗಲು ಜಾಗವೂ ಇರಲಿಲ್ಲ. 


ಇಲ್ಲಿದ್ದ ನಾಯಿಗಳು, ಹಸುಗಳು ಎಲ್ಲ ಮಲಗಿ ಹಾಯಾಗಿ ಕನಸು ಕಾಣುತ್ತಿದ್ದಂತೆ ಭಾಸವಾಗತೊಡಗಿತು. ಅವರ ನೆಮ್ಮದಿ ನಮ್ಮ ನಿದ್ದೆಗಣ್ಣಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅಷ್ಟರಲ್ಲಿ ಪೊಲೀಸರು ಬೀಟಿಗೆ ಬಂದರು. ಬಂದರು, ಹೋದರು ಅಷ್ಟೇ.. ಅವರಿವರು ಪೋನ್ ಮಾಡಿ ಡ್ರೈವರ್ಗೂ ತಲೆ ಕೆಟ್ಟಿತ್ತು. ಇಲ್ಲಿನ ಎಲ್ಲರ ತಲೆಯೂ ಬಿಸಿಯಾಗಿತ್ತು, ಹೊರಗಡೆ ಚೂರು ಚಳಿ ಇತ್ತು. 

ಅಷ್ಟರಲ್ಲೇ ಹತ್ತತ್ತಿರ ಒಂದು ಗಂಟೆ ಸುಮಾರಿಗೆ ಮಹಿಳೆಯರ ವಿಶ್ರಾಂತಿ ಕೊಠಡಿ ಒಳಗಿನಿಂದ ಒಬ್ಬ ಎದ್ದು ಬಂದು ಉಚ್ಚೆ ಹೊಯ್ದು ಮತ್ತೆ ವಾಪಸ್ ಹೋಗಿ, ಇಲ್ಲೇನು ನಡೆದೇ ಇಲ್ಲ ಎನ್ನುವ ರೀತಿಯಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿಯ ಬಾಗಿಲು ಭದ್ರಪಡಿಸಿ ಮತ್ತೆ ಮಲಗಿದ. ಅವನನ್ನು ನೋಡಿ ತಲೆಬಿಸಿಯಲ್ಲಿ ಬಿಸಿ,ಬಿಸಿ ಚರ್ಚೆ ಮಾಡುತ್ತಿದ್ದವರಿಗೆಲ್ಲ ನಗುಬಂತು.


ಎಷ್ಟೊತ್ತಾದರೂ ಪೋನ್ ಎತ್ತದ ಕಂಡಕ್ಟರ್ ಕಾಲ್ ಪಿಕ್ ಮಾಡಿದ್ದ. ಬಸ್ ಹೊರಟಿದೆ ಎಂದ. ಇದೇ ಮಾತನ್ನು ಈಗಾಗಲೆ ಹಲವು ಬಾರಿ ಆಡಿದ ಕಾರಣ ಎಲ್ಲರೊ ಬೈಯ್ಯುತ್ತಿದ್ದರು. ಇವರ ಬೈಗುಳ ಕೇಳಿ ಪಾಪ ಎನಿಸಿದರೂ ಅವ ಮಾಡಿದ್ದಂತೂ ತಪ್ಪೇ ಆಗಿತ್ತು. ನಾನು "ಲೈವ್ ಲೊಕೇಶನ್ ಕಳಿಸಿ ನಂಬುತ್ತೇವೆ ಇಲ್ಲ ಎಂದರೆ ಹಣ ಹಿಂದುರುಗಿಸಿ" ಎಂದೆ. ಅದರಲ್ಲಿ ಲೈವ್ ಲೊಕೇಶನ್ ಕಳಿಸುವ ಉಪಾಯ ಫಲಸಿತು. ಎಲ್ಲರಿಗೂ ಸಮಾಧಾನವಾಯಿತು. ಯಾಕೆಂದರೆ ಬಸ್ ಚಲಿಸತೊಡಗಿತ್ತು.‌ ಮೊಬೈಲ್ ಹಿಡಿದುಕೊಂಡು ಬಸ್ ಬರುವ ಮ್ಯಾಪನ್ನೇ ನೋಡುತ್ತಿದ್ದವರಿಗೆ ಜೈಪುರ ಎಂಬ ಗ್ರಾಮವೋ, ಪಟ್ಟಣವೋ ಯಾವುದೋ ಒಂದು. ಆ ಪ್ರದೇಶ ಬಂದ ತಕ್ಷಣ ಒಂದು ಶಾಕ್ ಕಾದಿತ್ತು. ಅಲ್ಲಿ ನಿಂತ ಬಸ್ ಅಲುಗಾಡುತ್ತಲೇ ಇರಲಿಲ್ಲ. ಮತ್ತೆ ತಲೆಕೆಟ್ಟು ಕಾಲ್ ಮಾಡಿದರು. "ಪಾಪ ಅವನು ಉಚ್ಚೆಹೊಯ್ಯಲು ಇಳಿದಿದ್ದನೇನೋ" ಸ್ವಲ್ಪ ಸಮಯದ ನಂತರ ಮತ್ತೆ ಚಲಿಸತೊಡಗಿತು. 


ನಾಳಿನ ಚಿಂತೆಯಲ್ಲಿ ನಾನು ಈ ಬ್ಲಾಗ್ ಮುಗಿಸುತ್ತಿದ್ದೇನೆ. ನಾಳಿನ ಕೆಲಸ ಸಾಂಗವಾದರೆ ಸಾಕಾಗಿದೆ. 
ಅಷ್ಟೇ...
ನಿಮಗೆಲ್ಲ ಶುಭರಾತ್ರಿ.. ನನಗೆ... ಇದು ರಾತ್ರಿ..

ಸುಮಾ ಕಂಚೀಪಾಲ್

Comments

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...