Skip to main content

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ. 



9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ಒಂದು ಕೈ ಹೆಚ್ಚೇ ಚಿಂತೆಯಾಗುತ್ತಿತ್ತು.

ತಕ್ಷಣ ಶಿಫ್ಟ್ ಚಾರ್ಟ್ ತೆಗೆದು ನೋಡಿದೆ.. "ಅಯ್ಯೋ! ನಾಳೆ ಪಾಳಿಯಲ್ಲಿ ನನ್ನ ವಿಭಾಗದಲ್ಲಿ ಕೆಲಸ ಮಾಡುವ ಇನ್ನಿಬ್ಬರೂ, ರಜೆಯಲ್ಲಿದ್ದಾರೆ" ನಿಧಾನಕ್ಕೆ ಬಸ್ಸಿನವರ ಮೇಲಿದ್ದ ಕೋಪವನ್ನು "ನಾ ಲ್ಯಾಪ್‌ಟಾಪ್ ತಕತ್ತೆ ಯಾವ್ದಕ್ಕೂ ಇರ್ಲಿ" ಎಂದಾಗ "ಬೇಡ ಅದಲವ ಆರಾಮ್ ಹೋಯ್ಬಪ್ಪ" ಎಂದವನ‌ ಮೇಲೆ ತಿರುಗಿತು. ಅವನಿಗೂ ಗತಿ ಇಲ್ಲ ನನ್ನ ಮಾತು ಕೇಳಲೇಬೇಕು. ಆದರೆ, ರಾತ್ರಿ ಬೇಗನೇ ನಿದ್ರಾದೇವಿ ಆವರಿಸುವ ಅವನಿಗೂ ನಿದ್ದೆ ತಪ್ಪಿ ಕಿರಿಕಿರಿಯಾಗಿ ಚೂರು ಜೋರಾದ‌. ನಾನು ತಣ್ಣಗಾದೆ. 

ಅಷ್ಟರಲ್ಲೇ ಆಟೋ ಚಾಲಕನೊಬ್ಬ ಈ ಸಮಯ ಬಳಸಿ ತಾನು ಹಣ ಮಾಡಿಕೊಳ್ಳಲು ನೋಡುತ್ತಿದ್ದ. "ನನಗೆ ಬಸ್ ರಿಪೇರಿ ಮಾಡುವವನ ಗುರುತಿದೆ ಬಸ್ ರಿಪೇರಿ ಆಗಲಾರದು" ಎಂದು ದೊಡ್ಡದಾಗಿ ಹೇಳಿದ. ಆ ಮಾತನ್ನು ಕೇಳಿದ ಹಲವರಿಗೆ ಗಾಬರಿ ಆಯಿತು. ನಾನು ದೇವಸ್ಥಾನದ ವಸತಿ ಗ್ರಹಕ್ಕೆ ಡ್ರಾಪ್ ಮಾಡ್ತೀನಿ ಎಂದ. ಆಗ ಇನ್ನೂ ಕೆಲವರಿಗೆ ಹೋಗಿಬಿಡೋಣ ಎನಿಸಿತು. ಆದರೆ, ನಾಳೆ ರವಿವಾರ ಮೊದಲೆ ಎಲ್ಲ ಬಸ್‌ಗಳು ಬುಕ್ ಆಗಿರುತ್ತದೆ ಎಂದು ನೆನಪಾಗಿ ಎಷ್ಟು ಸಮಯವಾದರೂ ಸರಿ ಕಾಯೋಣ ಎನಿಸಿ ಸ್ವಲ್ಪ ಜನ ಕೂತರು. ನಾವಿಬ್ಬರೇ ಆದರೆ ಇಲ್ಲಿ ಕೂರೋದು ಕಷ್ಟ ಎಂದೇನಿಸಲು ಆರಂಭವಾಗಿತ್ತು. ಮಲಗಲು ಜಾಗವೂ ಇರಲಿಲ್ಲ. 


ಇಲ್ಲಿದ್ದ ನಾಯಿಗಳು, ಹಸುಗಳು ಎಲ್ಲ ಮಲಗಿ ಹಾಯಾಗಿ ಕನಸು ಕಾಣುತ್ತಿದ್ದಂತೆ ಭಾಸವಾಗತೊಡಗಿತು. ಅವರ ನೆಮ್ಮದಿ ನಮ್ಮ ನಿದ್ದೆಗಣ್ಣಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅಷ್ಟರಲ್ಲಿ ಪೊಲೀಸರು ಬೀಟಿಗೆ ಬಂದರು. ಬಂದರು, ಹೋದರು ಅಷ್ಟೇ.. ಅವರಿವರು ಪೋನ್ ಮಾಡಿ ಡ್ರೈವರ್ಗೂ ತಲೆ ಕೆಟ್ಟಿತ್ತು. ಇಲ್ಲಿನ ಎಲ್ಲರ ತಲೆಯೂ ಬಿಸಿಯಾಗಿತ್ತು, ಹೊರಗಡೆ ಚೂರು ಚಳಿ ಇತ್ತು. 

ಅಷ್ಟರಲ್ಲೇ ಹತ್ತತ್ತಿರ ಒಂದು ಗಂಟೆ ಸುಮಾರಿಗೆ ಮಹಿಳೆಯರ ವಿಶ್ರಾಂತಿ ಕೊಠಡಿ ಒಳಗಿನಿಂದ ಒಬ್ಬ ಎದ್ದು ಬಂದು ಉಚ್ಚೆ ಹೊಯ್ದು ಮತ್ತೆ ವಾಪಸ್ ಹೋಗಿ, ಇಲ್ಲೇನು ನಡೆದೇ ಇಲ್ಲ ಎನ್ನುವ ರೀತಿಯಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿಯ ಬಾಗಿಲು ಭದ್ರಪಡಿಸಿ ಮತ್ತೆ ಮಲಗಿದ. ಅವನನ್ನು ನೋಡಿ ತಲೆಬಿಸಿಯಲ್ಲಿ ಬಿಸಿ,ಬಿಸಿ ಚರ್ಚೆ ಮಾಡುತ್ತಿದ್ದವರಿಗೆಲ್ಲ ನಗುಬಂತು.


ಎಷ್ಟೊತ್ತಾದರೂ ಪೋನ್ ಎತ್ತದ ಕಂಡಕ್ಟರ್ ಕಾಲ್ ಪಿಕ್ ಮಾಡಿದ್ದ. ಬಸ್ ಹೊರಟಿದೆ ಎಂದ. ಇದೇ ಮಾತನ್ನು ಈಗಾಗಲೆ ಹಲವು ಬಾರಿ ಆಡಿದ ಕಾರಣ ಎಲ್ಲರೊ ಬೈಯ್ಯುತ್ತಿದ್ದರು. ಇವರ ಬೈಗುಳ ಕೇಳಿ ಪಾಪ ಎನಿಸಿದರೂ ಅವ ಮಾಡಿದ್ದಂತೂ ತಪ್ಪೇ ಆಗಿತ್ತು. ನಾನು "ಲೈವ್ ಲೊಕೇಶನ್ ಕಳಿಸಿ ನಂಬುತ್ತೇವೆ ಇಲ್ಲ ಎಂದರೆ ಹಣ ಹಿಂದುರುಗಿಸಿ" ಎಂದೆ. ಅದರಲ್ಲಿ ಲೈವ್ ಲೊಕೇಶನ್ ಕಳಿಸುವ ಉಪಾಯ ಫಲಸಿತು. ಎಲ್ಲರಿಗೂ ಸಮಾಧಾನವಾಯಿತು. ಯಾಕೆಂದರೆ ಬಸ್ ಚಲಿಸತೊಡಗಿತ್ತು.‌ ಮೊಬೈಲ್ ಹಿಡಿದುಕೊಂಡು ಬಸ್ ಬರುವ ಮ್ಯಾಪನ್ನೇ ನೋಡುತ್ತಿದ್ದವರಿಗೆ ಜೈಪುರ ಎಂಬ ಗ್ರಾಮವೋ, ಪಟ್ಟಣವೋ ಯಾವುದೋ ಒಂದು. ಆ ಪ್ರದೇಶ ಬಂದ ತಕ್ಷಣ ಒಂದು ಶಾಕ್ ಕಾದಿತ್ತು. ಅಲ್ಲಿ ನಿಂತ ಬಸ್ ಅಲುಗಾಡುತ್ತಲೇ ಇರಲಿಲ್ಲ. ಮತ್ತೆ ತಲೆಕೆಟ್ಟು ಕಾಲ್ ಮಾಡಿದರು. "ಪಾಪ ಅವನು ಉಚ್ಚೆಹೊಯ್ಯಲು ಇಳಿದಿದ್ದನೇನೋ" ಸ್ವಲ್ಪ ಸಮಯದ ನಂತರ ಮತ್ತೆ ಚಲಿಸತೊಡಗಿತು. 


ನಾಳಿನ ಚಿಂತೆಯಲ್ಲಿ ನಾನು ಈ ಬ್ಲಾಗ್ ಮುಗಿಸುತ್ತಿದ್ದೇನೆ. ನಾಳಿನ ಕೆಲಸ ಸಾಂಗವಾದರೆ ಸಾಕಾಗಿದೆ. 
ಅಷ್ಟೇ...
ನಿಮಗೆಲ್ಲ ಶುಭರಾತ್ರಿ.. ನನಗೆ... ಇದು ರಾತ್ರಿ..

ಸುಮಾ ಕಂಚೀಪಾಲ್

Comments

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...