Skip to main content

ಗದಗದ ಹುಡುಗ

ಉಜಿರೆಯಿಂದ ಬಸ್ಸಿನಲ್ಲಿ ಹೊರಟಿದ್ದೆ ದಾರಿಯ ಅರ್ಧಕ್ಕೆ ಬಹಳಷ್ಟು ಜನ ನಿಂತಿದ್ದರು. ತುಂಬಾ ಕತ್ತಲಾಗಿತ್ತು. ಸುಮಾರು ಇಪ್ಪತ್ತೈದು ಜನ ಬಸ್ಸಿಗೆ ತಮ್ಮ ಕೈ ಅಡ್ಡಹಿಡಿದರು. "ಓ ಯಾವುದೊ ಬಸ್ಸ ಕೆಟ್ಟು ನಿಂತಿದೆ" ಎಂದು ಅರ್ಥಾಯ್ತು. ಬಸ್ ನಿಲ್ತಿದ್ದಂತೆ ಜನರ ಗುಂಪೊಂದು ವೇಗವಾಗಿ ಬಸ್ ಏರಿತು. ಸಿಟಿಗಾಗಿ ತಡಕಾಡಿ ಒಮ್ಮಿಂದೊಮ್ಮೆಲೆ ನುಗ್ಗಿ ಅಲ್ಲಿ ಇಲ್ಲಿ ಜಾಗ ಸಿಕ್ಕಿದಲ್ಲೆಲ್ಲ ಕೂತು ಬಿಟ್ಟರು. 

ನನ್ನ ಪಕ್ಕದ ಸೀಟೊಂದು ಖಾಲಿ ಇತ್ತು ಆದರೆ ನಾನು ನನ್ನ ಬ್ಯಾಗ್ ಒಂದನ್ನು ಅರ್ಧ ಸೀಟಿನ ಮೇಲೆ ಇಟ್ಟ ಕಾರಣ ಯಾರು‌ ಕೂರಲು ಇಷ್ಟ ಪಡಲಿಲ್ಲ. ಕೊನೆಗೆ ಎಲ್ಲಾ ಸೀಟು ಸಂಪೂರ್ಣ ತುಂಬಿ ಹೋದಾಗ ಮದುಮಗನ ರೀತಿ ರೆಡಿಯಾಗಿದ್ದ ಒಬ್ಬ ಹುಡುಗ ಬಂದು "ನಾನು ಕೂರ್ಬಹುದಾ"? ಎಂದು ಕೇಳಿದ. ಅವನ ಮುಖ ನೋಡಿದರೆ ಅತ್ತಂತಿತ್ತು. "ಹಾ ಬನ್ನಿ" ಅಂತ ಬ್ಯಾಗ್ ಸರಿಸಿದೆ. ಕೂತ ಮೊಬೈಲ್ ಕವರ್ ಹಿಂದುಗಡೆ ಇದ್ದ ಒಂದಷ್ಟು ಟಿಕೆಟ್‌ಗಳನ್ನು ಹರಿದು ಬಿಸಾಡಿದ. ಗ್ಯಾಲರಿ ಓಪನ್ ಮಾಡಿ ಅದ್ಯಾರದೋ ಒಂದಿಷ್ಟು ಪೋಟೋ ನೋಡಲು ಆರಂಭಿಸಿದ. 


ತುಂಬಾ ಕತ್ತಲಿತ್ತು ಬಸ್ ಒಳಗಡೆ ಇದ್ದ ಲೈಟ್ ಕೂಡಾ ಬಂದ್ ಮಾಡಿದ್ದರು. ಆ ಕಾರಣದಿಂದಾಗೇ ಅವನ ಮೊಬೈಲ್ ಬೆಳಕು ನನ್ನ ಕಣ್ಣಿಗೆ ಸ್ವಲ್ಪ ಹೆಚ್ಚೇ ತಾಕಿ ಬೇಡ ಬೇಡವೆಂದರು ಅವನ ಗ್ಯಾಲರಿ ನನ್ನ ಕಣ್ಣಿಗೆ ಬಿತ್ತು ಆದರೂ ನಾನಷ್ಟು ಲಕ್ಷ ಹಾಕಲಿಲ್ಲ. ಅವನು ಅಳುವ ಸದ್ದು ಕೇಳುತ್ತಿದ್ದರು ವಿಷಯ ಏನು ಎಂದು ಕೇಳಲು ನಾನು ಮುಂದಾಗಲಿಲ್ಲ. ಅವನ ಪಾಡಿಗವನೆ ಸಮಾಧನ ಮಾಡಿಕೊಂಡು ಸ್ವಲ್ಪ ಸಮಯದ ಬಳಿಕ. "ನಿಮ್ ಊರು " ಅಂತ ಕೇಳ್ದ ಯಲ್ಲಾಪುರ ಅಂದೆ ಅದಾಗ್ಲೆ ಅರಬೈಲು ಗಟ್ಟ ಹತ್ತಿದ್ದೆವು. ನಾನು ಅಪರಚಿತರೊಬ್ಬರಲ್ಲಿ ಹೇಳಲೇ ಬೇಕಾದ ನನ್ನ ಕತೆಯನ್ನು ಈಗ ನಿಮಗೆ ಹೇಳಲೇ ಬೇಕು ನೀವು ಕೇಳುವುದಾದರೆ ಕೇಳಿ ಇಲ್ಲವಾದರೆ ಬಿಡಿ ನನ್ನ ಸಮಾಧನ ನನಗೆ ಮುಖ್ಯ ಎಂದ. ಅರೆ! ಇವನಿಗೇನು ಮರ್ಲ? ಅಂತ ನಂಗನಿಸಿದರು ಅವನ ಕಥೆ ಮಾತ್ರ ಇಂಟ್ರೆಸ್ಟಿಂಗ್ ಆಗಿತ್ತು. 

ಇಪ್ಪತ್ತೊಂದು ವರ್ಷದ ಹುಡುಗ ಅವನು ಯಾವುದೋ ೧೮ ವರ್ಷದ ಹುಡುಗಿಯನ್ನು ಪ್ರೀತಿಸಿ ಮನೆಯಿಂದ ಕರ್ಕೊಂಡು ಬಂದಿದಾನೆ. ನಾಲ್ಕು ವರ್ಷಗಳಿಂದ ಅವಳನ್ನೇ ಪ್ರೀತಿಸಿ ಇವನು ಈಗ ಬೇರೆ ಊರಲ್ಲಿ ತನ್ನ ಓದು ಮುಂದುವರಿಸಿದ್ದ. ಇವನಿಗೆ ಅವಳ ಮದುವೆ ನಿಶ್ಚಯವಾಗಿದೆ ಎಂದು ಅವಳು ಪೋನು ಮಾಡಿ ಹೇಳಿ ಅತ್ತಿದ್ದಾಳೆ. ಅದನ್ನು ಕೇಳಿ ಅವಳ ಮದುವೆಗೆ ಒಂದು ವಾರವಿರುವಾಗ ಇವನು ಗಾಬರಿಯಿಂದ ಅವಳನ್ನು ತನ್ನ ಊರಿಗೆ ಕರೆದುಕೊಂಡು ಹೋಗಿ ಚಿಕ್ಕಪ್ಪನ ಬಳಿ ಹೇಳಿ ಮದುವೆಯ ಸಿದ್ದತೆ ಮಾಡಿಸಿದ್ದಾನೆ. 

ಆದರೆ ಇವರು ಅರ್ಧ ದಾರಿ ತಲುಪಿದಾಗ ಅವಳ ಅಣ್ಣಂದಿರಿಗೆ ವಿಷಯ ಗೊತ್ತಾಗಿ. ಇವರನ್ನು ಟ್ರಾಕ್ ಮಾಡಿ ಅವಳನ್ನು ವಾಪಸ್ ಕರೆದೊಯ್ದಿದ್ದಾರೆ. ಅದೇ ಬೇಜಾರಿನಲ್ಲಿ ಇವನು ಅವಳ ಜೊತೆ ಕಳೆದ ದಿನವನ್ನು ನೆನೆಯುತ್ತಾ. ಬೆಳಿಗ್ಗೆ ಎಷ್ಟು ಸುಖದಿಂದ ಆರಂಭ ಆಗಿತ್ತೊ ಅದಕ್ಕೂ ಹೆಚ್ಚಿನ ದುಃಖದಲ್ಲಿ ಮುಗಿತಿದೆ. ಎಂದು ಕೊರಗಿದ. ಅವಳ ಪೋಟೋ ತೋರಿಸಿದ ನನಗೊಂಚೂರು ಭಯ ಪೋಲಿಸ್ ಕೇಸ್ ಬೇರೆ ಆಗಿದೆ ಅಂತಿದ್ದ. 

ನಾನು..ನೀನು ಏನ್ ಕಲಿತಿದಿಯಾ ಅಂದಾಗ ಡಿಪ್ಲೊಮಾ ಅಂದ. ನಿನ್ನ ಕಾಲೇಜು ಪೀಸ್ ಯಾರು ಕಟ್ಟತಾರೆ ಅಂತ ಕೇಳ್ದೆ ಅಪ್ಪ ಅಂದ. ನೀನ್ ಅವಳನ್ನ ಹೇಗ್ ಸಾಕ್ತಿದ್ದೆ ಅಂತ ಕೇಳ್ದಾಗ. ಸುಮ್ನಾದ. ಎರಡ್ ನಿಮ್ಶದ್ ನಂತ್ರ. ನಾನ್ ಕಲ್ತು ಮುಗ್ಸತೀನಿ ನಂದೆ ದುಡ್ಡಲ್ಲಿ ನನ್ ಹೆಣ್ತಿ ಕೊರ್ಳಿಗ್ ತಾಳಿ ಮಾಡಿ ಹಾಕಿ ಸೆಲ್ಪಿ ಕಳಸ್ತೀನಿ ಪೇಸ್ಬುಕ್ ಇದ್ಯಾ ಅಂತ ಕೇಳ್ದ.? 

ನಾನ್ ಇಳಿಯೋ ಜಾಗ ಹತ್ರ ಬಂದಿತ್ತು. ಇಷ್ಟೊತ್ತಾದ್ರು ಒಬ್ರಿಗೊಬ್ರು ಹೆಸ್ರು ಕೇಳ್ಕೊಂಡಿರ್ಲಿಲ್ಲ. ಬಸ್ ಇಂದ ಇಳಿತಿದ್ದಾಗೆ. ಟಾಟಾ ಮತ್ತೆ ಸಿಗೋಣ ನನ್ನ ಹೆಸ್ರು ಬಸವರಾಜು. ಗದಗ ನಮ್ಮೂರು. ನಿಮ್ಮೆಸ್ರ ಏನ್ರೀ ಅಂತ ದೊಡ್ದಾಗಿ ಕೂಗ್ದ. ನಾನ್ ಹೇಳ್ದೆ ಸುಮಾ..ಅದಾಗ್ಲೆ ಬಸ್ ಹೊರ್ಟಿತ್ತು. ಅಳ್ತಿದ್ದ ಆಸಾಮಿ ಮುಖದಲ್ಲಿ ಒಂದ್ ನಗುವಿತ್ತು. 

ಸುಮಾ.ಕಂಚೀಪಾಲ್


Comments

  1. ಅವನು ಫೋಟೊ ಕಳಿಸೇ ಕಳಿಸ್ತಾನೆ, ಆಗ ಅವನು ಗೆದ್ದ ಕಥೆಯನ್ನೊಮ್ಮೆ ಕೇಳಿ.
    ಸಾಧ್ಯವಾದರೆ ಆಗ ಅದನ್ನೂ ಬರೆಯಿರಿ.

    ����ಅಕ್ಕಾ ����

    ReplyDelete
  2. ಬಸವರಾಜುವಿನ fb a/c ಸಿಕ್ತಾ..!?✌

    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...