Skip to main content

ಮೆಜೆಸ್ಟಿಕ್

ನಾನು ಇವನು ಹೈದರಾಬಾದ್‌ಗೆ ಹೋಗೋದು ಅಂತ ನಿರ್ಧಾರ ಮಾಡಿ ಮನೆಯಲ್ಲೇ ಊಟ ಮುಗಿಸಿ ಹೊರಟೆವು. ಕುವೆಂಪು ಮೆಟ್ರೋ ಸ್ಟೇಷನ್‌ನಿಂದ ಸೀದಾ ಬಂದು ಇಳಿದದ್ದು ಮೆಜೆಸ್ಟಿಕ್‌ಗೆ. ನಾನು ಸ್ವಲ್ಪ ಕತ್ತಲಾಗಿ ಬೀದಿ ದೀಪಗಳು ಉರಿಯಲು ಶುರುವಾದರೆ ಸಾಕು ಹೆದರಿ ಸಾಯುತ್ತೇನೆ. ನನ್ನನ್ನು ಸಮಾಧಾನ ಮಾಡಿ ಬ್ಯಾಗಿನ ಜೊತೆ ಕೈ ಹಿಡಿದು ಬೇರೆ ಊರು ತಲುಪುವುದು ಎಂದರೆ ಇವನಿಗೆಷ್ಟು ಕಷ್ಟ ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಆದರೂ ನಮಗೇನಾದ್ರೂ ಆದ್ರೆ? ಕಳ್ಳ ಬಂದ್ರೆ? ನಾನು ಕಳೆದೇ ಹೋದ್ರೆ ಎಂದು ಏನೇನೋ ಮಳ್ಳು ಹಲುಬುತ್ತ ಸಾಗುತ್ತೇನೆ. ಇವನಿಗೆ ಇರುವಷ್ಟು ಸಹನೆ ಯಾರಿಗೂ ಇಲ್ಲ, ಅದಂತೂ ನಿಜ ಎಂದು ನನಗೆ ನಾನೇ ಹಲುಬಿಕೊಂಡು ಅವನ ಹಿಂದೆ ಸಾಗುತ್ತೇನೆ. 


ಚಿತ್ರ: ಮೆಜೆಸ್ಟಿಕ್ ಪ್ಲಾಟ್‌ಫಾರ್ಮ್ ನಂಬರ್ 16

ಕೆಂಪು, ಬಿಳಿ, ನೀಲಿ ಬಸ್ಸುಗಳ ಸಾಲು. ಏ ಇಲ್ ನೋಡೇ, ಹಿಂದಿನ ಸಲ ನಾವು ಬಸ್ ಹತ್ತಿದ್ದು ಇಲ್ಲೆಯ ನೆನಪಿದ್ದಾ ನಿನಗೆ? ಎಂದು ಉಮೇದಿಯಿಂದ ಇವ ಒಂಚೂರು ನನ್ನ ಕೈ ಬಿಟ್ಟು ಮುಂದೆ ಸಾಗಿದರೆ ನಾನು ನಿಂತಲ್ಲೇ ಬಾಕಿ. ಯಾಕೆಂದು ನನಗೂ ಗೊತ್ತಿಲ್ಲ. ಆಮೇಲೆ ನನ್ನಿಂದ ಉತ್ತರ ಬರದೇ ಇದ್ದಾಗ ಅವ ಮತ್ತೆ ತಲೆಮೇಲೆ ಕೈ ಹೊತ್ತು ನಾನಿದ್ದಲ್ಲಿ ಬರುತ್ತಾನೆ. 



ಅವನಿಗೆ ಎಲ್ಲ ಜನರನ್ನು, ಎಲ್ಲ ಊರುಗಳ ಹೆಸರನ್ನು ಹಾಗೇ ಕೆ. ಆರ್ ಮಾರ್ಕೇಟಿಗೆ ಹೋಗಲು ಬಂದಿಳಿದ ಫ್ರೆಷ್ ಪುದಿನಾ ಎಲೆಗಳ ಗಂಟನ್ನೂ; ಎಲ್ಲವನ್ನೂ ಮಾತಾಡಿಸಬೇಕು. ನನಗೆ ಜನರನ್ನು ಕಂಡೇ ಭಯ. ಈಗ ಮೆಜೆಸ್ಟಿಕ್ ಬೆಂಚಿನ ಮೇಲೆ ಕೂತು ಬ್ಲಾಗ್ ಬರೆಯುತ್ತಾ ಇದ್ದರೂ ಯಾವ ಕಳ್ಳ ಬಂದು ನನ್ನ ಕೈಯಿಂದ ಮೊಬೈಲ್ ಕಸಿಯುತ್ತಾನೋ ಎಂಬ ಭಯ.


ಒಂದು ಕೈಯ್ಯಲ್ಲಿ ಮೊಬೈಲ್ ಗಟ್ಟಿಯಾಗಿ ಹಿಡಿದು ಬ್ಯಾಗ್ ಮುಂದೆ ನೇತುಹಾಕಿಕೊಂಡು ಇದನ್ನು ಬರೆದೆ. ಆಗಾಗ ಇವನ ಭುಜ ನನಗೆ ತಾಗದೆ ಇದ್ದರೆ ತಕ್ಷಣ ಅವನಿದ್ದ ಕಡೆಗೆ ವಾಲುತ್ತೇನೆ. ನಾನ್ಯಾಕೆ ಇಷ್ಟು ಭಯಪಡುತ್ತೇನೆ? ಯಾಕೆ ಇಷ್ಟು ಅತಿಯಾಗಿ ಆಡುತ್ತೇನೆ ಎಂದು ನನಗೆ ನಾನೇ ಪ್ರಶ್ನೆ ಮಾಡಿಕೊಂಡಾಗ ಹೊಳೆದವರು ಚಿತ್ರ ವಿಚಿತ್ರ ಜನರು - ಉದಾಹರಣೆಗೆ, ನೆಲದ ಹಾಸಿನ ಮೇಲೆ ಇದೇ ಅರಮನೆ ಎಂಬಂತೆ ಮಲಗುವ ಉದ್ದ ಕೂದಲು ಬಿಟ್ಟ ಅಜ್ಜ. ಕನ್ನಡಕ ಧರಿಸಿ ಕತ್ತಿಗೆ ಮೂರು ಚೈನು ಕೈ ಎಲ್ಲಾ ಬೆರಳಿಗೂ ಉಂಗುರ ತೊಟ್ಟ ಮಧ್ಯಮ ವಯಸ್ಕ, ಲವರ್ ಹತ್ತಿರ ಜಗಳ ಮಾಡುತ್ತ ಇನ್ನೇನು ಕೊಂದೇ ಹಾಕುತ್ತಾನೆ ಇವ ಎಂಬಂತ ಜೋಡಿಗಳು. ಅವರು ಎಲ್ಲಿಂದ ಬಂದವರೋ? ಎಲ್ಲಿಗೆ ಹೋಗುವವರೋ ಗೊತ್ತಿಲ್ಲ.


ನನ್ನದಲ್ಲದ ಹಲವು ಭಾಷೆಗಳನ್ನು ಆಡುವ ಜನ. ಸತ್ತು ಹೋದ ನನ್ನ ಅಜ್ಜ, ಅವ್ವನನ್ನೇ ಹೋಲುವ ಮುದಿ ಜೋಡಿ. ಇದೆಲ್ಲ ನನ್ನೊಳಗೆ ಆತಂಕ ಹುಟ್ಟಿಸುವ ವಿಷಯಗಳು. ಇಷ್ಟು ಬರೆಯುವಷ್ಟರಲ್ಲಿ ಪಕ್ಕದಲ್ಲಿದ್ದ ನಮ್ಮ ಯಜಮಾನರು ಮಾಯ!  ಬಸ್ ನೋಡಿ ಬರುತ್ತೇನೆ ಎಂದು ಹೋದವರು ಇನ್ನೂ ಬಂದಿಲ್ಲ. ನನ್ನ ಪಕ್ಕದ ಜಾಗ ಈಗಲೇ ಆಕ್ರಮಣ ಆಗಿಬಿಟ್ಟಿದೆ. ಇವನು ಬರುವುದಕ್ಕೂ ಮೊದಲು ಆ ಸಹಸ್ರ ಜನರ ಆಸ್ತಿಯೇ ಆಗಿಹೋದ ಮೆಜೆಸ್ಟಿಕ್‌ನಲ್ಲಿ ಕೇಳಿದ್ದು ನಮ್ಮ ಹವ್ಯಕ ಭಾಷೆ ಯಾರೋ ಮಂತ್ರಾಲಯಕ್ಕೆ ಹೊರದವರದ್ದು. ಇದೊಂದು ಖುಷಿ ನೋಡಿ, ಎಲ್ಲಿ ಹೋದ್ರೂ ನಮ್ಮವರು ಸಿಕ್ಕೇ ಸಿಗುತ್ತಾರೆ. 


ಎಲ್ಲಿದ್ದನೋ ಎಲ್ಲಿಂದ ಬಂದನೋ.. ಇವನು ಬಂದು 'ಬಾ, ಬಸ್ ಬಂತು' ಎಂದ. ಸೀದಾ ಇವನ ಹಿಂದೆ ನಡೆದು ಬಂದೆ. ಐರಾವತ ಕ್ಲಬ್ ಕ್ಲಾಸ್ ಬಸ್ ರೆಡಿಯಾಗಿತ್ತು. ಐಡಿ ತೋರಿಸಿ ಸೀಟು ಭದ್ರಪಡಿಸಿಕೊಂಡು ಇಬ್ಬರ ಮನೆಗೂ ಕಾಲ್ ಮಾಡಿ ಧರಣಿ ಮಂಡಲ ಸಿನಿಮಾ ನೋಡಲು ಅಣಿಯಾದೆವು.
ಮತ್ತೆ ಸಿಗೋಣ ಶುಭರಾತ್ರಿ.

ನಾಳಿನ ಬೆಳಗು ಹೈದರಾಬಾದ್

ಸುಮಾ. ಕಂಚೀಪಾಲ್



Comments

  1. Super 👍 aadru kallara hedrake iddu helatu hangallla bittik hogada helu yajamanara hatra😅😂

    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...