Skip to main content

ಹಿತ ಏಕಾಂತ

ಆಫೀಸ್ ಕೆಲಸ ಮುಗಿದಿತ್ತು. ಚೇರ್ ಹಿಂದಕ್ಕೆ ಸರಿಸಿ ಚಾರ್ಜರ್ ಎತ್ತಿಡುತ್ತಲೆ ಗಂಟೆ ಎಷ್ಟಾಗಿದೆ ಎಂದು ಒಮ್ಮೆ ಮೊಬೈಲ್ ಸ್ಕ್ರೀನ್ ಡಬಲ್ ಟ್ಯಾಪ್ ಮಾಡಿ ನೋಡಿದೆ. 6:15 ಆಗಿತ್ತು. ಹಾಗೇ ಅವನಿಗೊಂದು ಪೋನು ಮಾಡಿ ಹೊರಡೋಣ ಎನ್ನುವಷ್ಟರಲ್ಲಿ ಇನ್ನು ಹತ್ತು ನಿಮಿಷಗಳಲ್ಲಿ ಹೊರಡಲಿರುವ ಬಸ್ ನೆನಪಾಗಿ‌ ಮೊಬೈಲ್ ಬ್ಯಾಗಿಗೆ ತುರುಕಿ ಮಧ್ಯಾಹ್ನ ಊಟಕ್ಕೆ ತಂದಿದ್ದ ಮೂರು ಡಬ್ಬಿಗಳನ್ನು ಬ್ಯಾಗಿಗಿಳಿಸಿ ಹೊರಟು ನಿಂತೆ. ಲಾಗ್ ಔಟ್ ಮಾಡಲು ಬಾಗಿಲ ಬಳಿ ಬೆರಳಿಟ್ಟೆ. ಅದು ಥ್ಯಾಂಕ್ಯೂ ಎನ್ನುವುದರ ಒಳಗಾಗಿ ನಾನು ಅಲ್ಲಿಂದ ಕಾಲು ಕಿತ್ತು ಲಿಫ್ಟ್ ಬಟನ್ ಪ್ರೆಸ್ ಮಾಡಿದ್ದೆ. ಅದರ ಬಾಗಿಲಿನಲ್ಲಿ ಕಾಣುವ ನನ್ನ ಪ್ರತಿಬಿಂಬ ನೋಡಿ ಕೂದಲು ಸರಿ ಮಾಡಿ ನನ್ನೊಂದಿಗೆ ನಾನೇ ನಗುವಷ್ಟರಲ್ಲಿ ಡೋರ್ ಓಪನ್ ಆಗಿತ್ತು.



ತುಸು ಭಯ ಹುಟ್ಟುಸುವ ಮೈನಸ್ ಒಂದರಲ್ಲಿ ಇಳಿದು ಸೆಕ್ಯುರಿಟಿ ಇದ್ದಾರಾ? ಎಂದು ವಾರೆಗಣ್ಣಲ್ಲೇ ನೋಡುತ್ತಾ ಕಾಲಿನ‌ ವೇಗ ಹೆಚ್ಚಿಸಿದೆ. ರವಿವಾರ ಆದ್ದರಿಂದ ಬ್ಲಾಗ್ ಬರೆಯಬೇಕು ಇಂದೊಂದಿಷ್ಟು ಜನ ಓದಬಹುದು ಎಂದುಕೊಂಡೆ. ಆದರೆ ಕೆಲಸದ ಅವಧಿಯಲ್ಲಿ ಬರೆದ ಆರ್ಟಿಕಲ್‌ಗಳ ಮಧ್ಯೆ ಮತ್ತೊಂದಿಷ್ಟು ಬರೆಯುವುದೆಂದರೆ ಖಾಲಿ ಹೊಟ್ಟೆ ಇರುವಾಗ ತೇಗು ಬಂದಂತೆ ಎಂದು ತಿಳಿದಿದ್ದರೂ, ಬದುಕಲು ಊಟ ಮುಖ್ಯವೆಂದು ಒತ್ತಾಯ ಮಾಡಿಯಾದರೂ ಉಣ್ಣುತ್ತೇವಲ್ಲ ಹಾಗೆ ಬರೆಯುವ ಮನಸು ಮಾಡಿದೆ.

ಒಂದು ಹತ್ತು ನಿಮಿಷ ಬಸ್ಸಿಗಾಗಿ ಕಾಯುವುದರ ಒಳಗಾಗಿ ಬಸ್ ಬಂತು. ಹೇಗೋ ರವಿವಾರ, ಇಂದಾದರೂ ಸೀಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿದ್ದೆ. ಊಹೂ. ಇಂದು ಒಂದೇ ಒಂದು ಸೀಟು ಖಾಲಿ ಇರಲಿಲ್ಲ. ಕೆ ಆರ್ ಮಾರ್ಕೆಟ್ ದಾಟುವ ಸಂದರ್ಭದಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮೊಳಗುತ್ತಿತ್ತು. ಜನ ನುಗ್ಗಿ ನುಗ್ಗಿ ಬಸ್ ಹತ್ತುತ್ತಿದ್ದರು. ಎಲ್ಲಿ ನನ್ ಮೊಬೈಲ್ ಅಥವಾ ಪರ್ಸ್ ಕಳುವಾಗುತ್ತೋ ಎಂಬ ಭಯದಲ್ಲಿ ಲ್ಯಾಪ್‍ಟಾಪ್ ಬ್ಯಾಗ್ ಒಂದೇ ತೋಳಿಗೆ ಸಿಕ್ಕಿಸಿ ಅದರ ಮೇಲೆ ಇನ್ನೊಂದು ಕೈ ಹಿಡಿದು ನಿಂತಿದ್ದೆ.


ಪೇಟೆಯ ಗದ್ದಲ, ತರಕಾರಿ, ಹೂವಿನ ಕವರ್, ದಪ್ಪನೆಯ ಬ್ಯಾಗ್, ಆಂಟಿಯರ ಕುಪ್ಪಸದ ಬೆವರು ವಾಸನೆ, ಕರಿ ಬಿಳಿ ಕೂದಲಿನ ತಲೆಗಳು, ಗದರುತ್ತಲೇ ತಿರುಗುವ ಕಂಡಕ್ಟರ್ ಇವುಗಳ ಮಧ್ಯ ಇಲಿ ಮರಿಯಂತೆ ನಾನು ನನ್ನ ಬ್ಯಾಗ್. ಪದೇ ಪದೇ ಬೀಳುವ ಸಿಗ್ನಲ್ ಐದು ಕಿಲೋಮೀಟರ್ ದಾರಿಯನ್ನು ಬರೋಬ್ಬರಿ 45  ನಿಮಿಷಗಳ ಕಾಲ ನಿಂತು ಸಾಗಿದರೆ ಬರೋದೆ ನನ್ನ ಮನೆ (ರೂಂ).



ಬರುವಷ್ಟರಲ್ಲಿ ದಾಹ ಹಸಿವು. ಮಾಡಿಕೊಂಡು ತಿನ್ನುವಷ್ಟೂ ತ್ರಾಣ ಇರುವುದಿಲ್ಲ. ತಿಂಡಿ ಮಾಡಿಡಲು ನನಗೆ ಹೆಂಡತಿ ಇಲ್ಲ. ಗಂಡನೂ ಸದ್ಯಕ್ಕಿಲ್ಲ. (ಈ ಸಾಲು ಬರೆಯುವಷ್ಟರಲ್ಲಿ ನಾನಿದ್ದೇನೆ ಎಂದು ನೆನಪಿಸುವಂತೆ ಅವನ ಗುಡ್‌ನೈಟ್ ಕಾಲ್ ಬಂದಿತ್ತು. ಇದೇ ಇರಬಹುದು ಟೆಲಿ-ಪತಿ)


ಅಂತೂ ಸುಸ್ತಾಗಿದ್ದವಳು ಅಪರೂಪಕ್ಕೆ ಬಂದವಳೇ ಬಟ್ಟೆ ಬದಲಿಸಿ ಕೈಕಾಲು ತೊಳೆದಿದ್ದೆ. ಇಲ್ಲವಾದರೆ ಮೊಬೈಲ್ ಗೀಚುತ್ತಿದ್ದೆ. ಹಸಿವಾದಂತೆ ಅನಿಸಿ ಒಂಚೂರು ಮಂಡಕ್ಕಿ ತಿಂದೆ. ಸ್ವಲ್ಪ ಗಟ್ಟಿಯಾಗು ಎಂದು ಬಲವಂತ ಮಾಡುವವರ ಸಲುವಾಗಿ ಚೂರು ಸೇಬು ಮೂಸಂಬಿ ತಿಂದಿದ್ದೆ.

ಇಷ್ಟಾಗುವ ಹೊತ್ತಿಗೆ ಕಾಲು ತೊಳೆಯಲು ಹೋದಾಗ ಹಾಕಿದ ಗೀಸೃ ನೀರು ಬಿಸಿಮಾಡಿತ್ತು. ಸ್ನಾನ ಮಾಡಿ ಬಂದು ಅಡುಗೆ ಮಾಡಿ ಚೂರು ಮೊಬೈಲ್ ಗೀಚಿ ಒಂದಷ್ಟು ರೀಲ್ಸ್ ನೋಡಿದೆ. ಅವರಿವರ ಮೆಸೆಜೊಂದಷ್ಟಕ್ಕೆ ರಿಪ್ಲೈ ಒತ್ತಿ ಮನೆಗೆ ವಿಡಿಯೋ ಕಾಲ್ ಮಾಡಿ ಅಜ್ಜನನ್ನೊಮ್ಮೆ ನೋಡಿಕೊಂಡೆ.



ಸಂಜೆ ಆರು ಗಂಟೆಗೆ ಮಾತು ನಿಲ್ಲಿಸಿದ ಮೇಲೆ ಮರುದಿನ 9:30 ಕ್ಕೆ ಆಫೀಸಿಗೆ ಹೋಗಿಯೇ ಮಾತನಾಡುವುದು. ಒಂಟಿ ಜೀವನದಲ್ಲಿ ಸಿಗುವಷ್ಟು ಖುಷಿ, ಇಷ್ಟು ಮೌನ, ಧ್ಯಾನ, ಏಕಾಂತ, ಏಕತಾನತೆ, ಒಂಟಿತನ, ಸ್ವಯಂ ಪ್ರೀತಿ, ಆತ್ಮವಿಶ್ವಾಸ, ಬೇಸರ ನಮ್ಮೊಂದಿಗೆ ನಾವೇ ಇರುವ ಸಮಯ, ತೋಡಿ ಬರುವ ದುಃಖ ಇವೆಲ್ಲವೂ ಇನ್ನೊಬ್ಬರೊಂದಿಗಿರುವಾಗ ಕಡಿಮೆ. ಮಲಗುವಾಗ ಗೋಡೆಯ ಮೇಲೆ ಬೀಳುವ ತೆಂಗಿನಗರಿಯ ನೆರಳು ಅಕ್ಕ ಪಕ್ಕ ನೆಟ್ಟುಕೊಂಡ ೨ ಗಿಡ ಬಿಟ್ಟರೆ ನನ್ನ ಆಲೋಚನೆಗಳೇ ನನ್ನ ಸಂಗಾತಿ.

ತಮ್ಮನ ಪರೀಕ್ಷೆ, ಅಮ್ಮನ ಹಳ್ಳಿ ಔಷಧಿ, ಅಪ್ಪ ಮಾಡುತ್ತಿರುವ ಮಣ್ಣಿನ ಗಣಪತಿ ಮತ್ತು ಇಂದು ವೀಲ್ ಚೇರ್ ನಾನೇ ತಳ್ಳಿಕೊಂಡು ಹೋದೆ ಎಂಬ ಅಜ್ಜನ ಖುಷಿ ಇವೆಲ್ಲ ಆದ ನಂತರ ರೀಲ್ಸ್ ನೋಡುತ್ತಿದ್ದೆ. ಅದರಲ್ಲಿ ಕೆಲವೊಂದಿಷ್ಟು ಛೇ ನಾನೂ ಹೀಗೆಲ್ಲಾ ಮಾಡಬೇಕಿತ್ತು ಬರಿ ಕೆಲಸವೇ ಆಯ್ತು ಎನ್ನುವುದನ್ನು ನೆನಪಿಸಿದರೆ ಇನ್ನೊಂದಿಷ್ಟು ಹೊಸ ಕನಸುಗಳನ್ನು ಹುಟ್ಟಿ ಹಾಕುತ್ತಿತ್ತು. ನಿನ್ನೆ ನಿಮಗೆ ಕೊಟ್ಟ ಭರವಸೆ ನೆನಪಾಗಿ ಏನಾದರು ಬರೆಯೋಣ ಎಂದರೆ ವಿಷಯ ಮಾತ್ರ ತೋಚಲಿಲ್ಲ. ಹಾಗಾಗಿ ಇಷ್ಟನ್ನು ಬರೆದಿದ್ದೇನೆ.

ಇಷ್ಟು ಬರೆಯುವುದಕ್ಕೂ ಬರದಷ್ಟು ಯಾಂತ್ರಿಕ ಬದುಕು ಬೇಕಿತ್ತಾ ಎಂಬ ಪ್ರಶ್ನೆ? ಅಷ್ಟೇ ಇಂದಿಗೆ ಪ್ರಶ್ನಾರ್ಥಕವಾಗಿಯೇ ಮುಗಿಸುತ್ತೇನೆ. ಮತ್ತೆ ಸಿಗೋಣ. 

ಸುಮಾ.ಕಂಚೀಪಾಲ್

Comments

  1. ಚೆನ್ನಾಗಿದೆ. ನನ್ನದೇ ಭಾವನೆಗಳು ಪದಗಳಲ್ಲಿ ಪೋಣಿಸಿಟ್ಟ ಅನುಭವವಾಯ್ತು.

    ReplyDelete
  2. ಬರಹಗಾರರಿಗೆ ಹೊಟ್ಟೆ ಉರಿಸುವಂಥ ಸಹಜವಾದ ಮನಮುಟ್ಟುವ, ಹೃದಯತಟ್ಟುವ ಬರಹ!

    ReplyDelete

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...