Skip to main content

ಆಟಿ

ಆಟಿ

ತುಳುನಾಡಿನ ಸಂಸ್ಕೃತಿಯ ಪರಿಚಯ ಮಾಡಿಸುವುದಕ್ಕಾಗಿ ಮತ್ತು ಹಬ್ಬದ ಆಚರಣೆ ಖುಷಿಯನ್ನು, ಊಟದ ರುಚಿಯನ್ನೂ ಅರಿಯುವುದಕ್ಕಾಗಿ ಈ ಆಟಿ  ಹಬ್ಬವನ್ನು
ಎಸ್.ಡಿ. ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾಗಿತ್ತು.

ಹುಡುಗ ಹುಡುಗಿಯರೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು,
ಹೆಣ್ಣು ಮಕ್ಕಳೆಲ್ಲ ಸೀರೆ, ಹುಡುಗರು ಪಂಚೆ ಉಟ್ಟು ರತ್ನಮಾನಸ ಎಂಬ ವಸತಿನಿಲಯದಲ್ಲಿ ಹಾಜರಿದ್ದರು.‌ ಕಣ್ಣಿಗಂತು ಹಬ್ಬ ಚಂದ ಚಂದದ ಬಣ್ಣ, ಬಣ್ಣದ ಲೋಕ ಅಲ್ಲಿ ಸೃಷ್ಟಿಯಾಗಿತ್ತು.
ತೀರಾ ಸಾಂಪ್ರದಾಯಿಕ ಎನಿಸುವ ಹಳೆಯ ಕಾಲದ ಕಟ್ಟಡ, ಅಲ್ಲಿದ್ದ ಮರದ ವಸ್ತುಗಳು, ಹೊರಜಗುಲಿ, ಪಾಠಶಾಲೆ, ಒಳಾಂಗಣ ವಿನ್ಯಾಸ ಎಲ್ಲವೂ ಗುತ್ತು ಮನೆಯ ಶೈಲಿಯಲ್ಲಿತ್ತು. ನನಗೆ ಇದು ಹೊಸತರ ಎನಿಸಿತ್ತು.

 ರತ್ನಮಾನಸ ಬಾಳೆಲೆ ಊಟ

ಮನೆಯ ಮೆತ್ತು ಹತ್ತಿದಂತೆ ಮೇಲ್ಗಡೆ ಮೆಟ್ಟಿಲೇರಿ ಹೋದಾಗ ಅಲ್ಲಿ ಪುಟ್ಟದೊಂದು ವೇದಿಕೆ ಸಿದ್ಧವಾಗಿತ್ತು. ಅಲ್ಲಿ ಕಹಿ ಔಷದಿಯ ಹಾಲೆ ಮರದ ಚಕ್ಕೆಯ ಕಷಾಯ ಮಾಡುವ ವಿಧಾನದ ಬಗ್ಗೆ ಮತ್ತು ಈ ಆಟಿ ಮಾಸದಲ್ಲಿ ಹೊಸ ಪೈರು ಇಲ್ಲದೆ ಹಳೆ ಪೈರುಗಳು ಸಹ ಖಾಲಿಯಾಗಿ ಮನೆಯವರು ಮಳೆಗಾಲದಲ್ಲಿ ಕಂಗಾಲಾಗುವ ದಿನದ ಕಥನವಿತ್ತು.ಅದರಲ್ಲಿ ಕುತೂಹಲಕಾರಿಯಾದ ವಿಷಯವೆಂದರೆ  ಮನೆಯ ಗಂಡಸರೊಬ್ಬರು ಮರದ ಹತ್ತಿರ ಹಿಂದಿನ ದಿನ ಹೋಗಿ ನಾಳೆ ಬರುತ್ತೇನೆ ನಿನ್ನಲ್ಲಿಯ ಔಷದೀಯ ಗುಣಗಳು ಹೆಚ್ಚಿರಲಿ ಎಂದು ಬೇಡಿಕೆ ಸಲ್ಲಿಸಿ ಬರುವುದು. ಬಂದು ಮರುದಿನ ಬೆತ್ತಲಾಗಿ ಹೋಗಿ ಯಾವುದೇ ಲೋಹದ ತುಂಡನ್ನೂ ಬಳಸದೇ ಚಕ್ಕೆ ಕಿತ್ತು ತರುವ ವಿಚಾರ. ಇಂದಿನ ದಿನಗಳಲ್ಲಿ ಯಾರಾದರು ಹೀಗೆ ಮಾಡಿದರೆ ಹುಚ್ಚರೆಂದಾರು ಎಂದು ನನಗೆ ಅನಿಸಿತ್ತು.
ಹೊರಾಂಗಣ ನೋಟ

ನಂತರ ಈ ಪದ್ದತಿಯ ಹಿಂದೆ ಕಾರಣ ಏನಿರಬಹುದು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ತವಕ ಆರಂಭವಾಯ್ತು. ( ಆದರೆ ಇನ್ನೂ ಉತ್ತರ ಸಿಕ್ಕಿಲ್ಲ)

ಇಷ್ಟೆಲ್ಲ ಆದ ಮೇಲೆ ಹಾಡು ನೃತ್ಯ ನಾಟಕ ಇತ್ಯಾದಿ.

 ಅದಾದಮೇಲೆ ಭರ್ಜರಿ ಭೋಜನ ಎಲೆಯ ತುಂಬ ಎಡೆ ಶೃಂಗಾರ ಅನ್ನಕ್ಕಲ್ಲಿ ಜಾಗವೇ ಇಲ್ಲ‌. ಕೆಸುವಿನ ಸೊಪ್ಪು,
 ಹಲಸಿನಕಾಯಿ ಇದೆರಡನ್ನೇ ಉಪಯೋಗಿಸಿ ಹಲವು ರೀತಿಯ ಖಾದ್ಯಗಳನ್ನು ತಯಾರಿಸಿದ್ದರು. 
ಎಡೆ ಶೃಂಗಾರ

ಒಂದಕ್ಕಿಂತ ಒಂದು ವಿಭಿನ್ನ. ಹಾಸ್ಟೆಲ್ ಗೆ ಬಂದಮೇಲೆ ನೆಲಕ್ಕೆ ಕೂತು ಊಟಮಾಡದೆ ತಿಂಗಳೇ ಕಳೆದಿತ್ತು ಈ ಹೆಸರಿನಲ್ಲಿ ನೆಲಕ್ಕೆ ಕೂತು ಉಣ್ಣುವ ಭಾಗ್ಯ ದೊರಕಿತ್ತು. ಊಟಮಾಡುವಾಗ ಗೌಜಿ, ಹರಟೆ, ಬಿಡಿಯ


ಊಟ ಮುಗಿದ ಮೇಲೆ ಒಂದು ಅಲ್ಪವಿರಾಮ‌. ಆಗ ಆಟಿ ಗಮ್ಮತ್ತು ನೆನಪಿನ ಹಾಳೆಯಲ್ಲಿ ಮುದ್ರೆಯೊತ್ತಲು ಬೇಕಾದ ಚಂದ ಚಂದದ ಪಟಗಳು. ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದದ್ದೆ ಹಿಡಿದದ್ದು ಒಬ್ಬರದ್ದೆ ಹತ್ತಾರು ಪೋಟೋ ಒತ್ತಿದ್ದೇ ಒತ್ತಿದ್ದು. ಕರಿ ಕೂಲಿಂಗ್ ಗ್ಲಾಸ್, ಬಿಳಿ ಅಂಗಿ, ಹಳೇಸೀರೆ, ಹೊಸ ಹುಡ್ಗಿ, ಹ್ಯಾಂಡ್ಸಂ ಹುಡುಗ, ಚೂರು ನಡುಕಾಣಲೇ ಬೇಕೆಂದು ಸರಿಸಿಕೊಳ್ಳುವ ನೆರಿಗೆಗಳು, ಅಯ್ಯೊ ಪಂಚೆ ಹಾರ್ತಿದೆ ಅಂತ ನಾಚುವ ಹೊಸಕಾಲದ ಹುಡುಗರು. ಅಂತೂ ಮಜವಿತ್ತು.



ಅದಾದ ನಂತರ ಸೀರೆ ಪಂಚೆಯ ಬದಿಗಿಟ್ಟು ಪ್ಯಾಂಟ್ ಶರ್ಟತೊಟ್ಟು ಕೆಸರುಗದ್ದೆಗಿಳಿದು ಹಗ್ಗ ಜಗ್ಗಾಟ, ನಮ್ಮನಮ್ಮಲ್ಲೇ ಭಲ ಪ್ರದರ್ಶನ, ಕೆಸರುಗದ್ದೆ ಓಟ, ಹಾಡಿಗೆ ನೃತ್ಯ. ನಾನು ಸುಮಾರು ಹೊತ್ತು ಗದ್ದೆಗಿಳಿಯದೆ ದಡದಲ್ಲೆ ನಿಂತೆ ಆದರೆ ಕೊನೆಗೊಂದು ಸಂಚಿನಲ್ಲಿ ನನನ್ನು ಕೆಸರಿಗೆ ನೂಕಲಾಯ್ತು‌. ಜೊತೆಗಿದ್ದ ನನ್ನ ಗೆಳತಿಯನ್ನು. 
ನನ್ನಷ್ಟೇ ತೆಳ್ಳಗಿನ ಹುಡುಗಿಯೊಬ್ಬಳನ್ನು ಎರಡೇ ಕೈಯಲ್ಲಿ ಎತ್ತಿ ಕೆಸರಿನಲ್ಲಿ ಪದೆ ಪದೆ ಮುಳುಗಿಸಿ ಗೋಳು ಕೊಡುತ್ತಿದ್ದ ಜನರನ್ನು ನೋಡಿ ಭಯವಾಗಿ ನಾನು ಇಳಿದಿರಲಿಲ್ಲ.
ಕೊನೆಗೂ ಮೈ ಕೆಸರಾಯ್ತು ಆಗ ಬೇರೆತರದ ಖುಷಿ ಪ್ರಾಪ್ತವಾಯ್ತು.
ಮರುದಿನದ ಕಥೆ ಬೇರೆ ಇದೆ
ಸ್ನಾನದ ಪಜೀತಿ
ಕಾಲು ನೋವು
ಗೀರು ಗಾಯ
ನಿದ್ದೆಗಣ್ಣು
ತ್ರಾಣ ಕಳೆದ ದೇಹ
ತರಗತಿ
ಕಣ್ಣು, ಕಿವಿಯೊಳಗಿನ ಮಣ್ಣು
ಅಬ್ಬಬ್ಬಾ!

ಮತ್ತೆ ಹೇಳ್ತೇನೆ ಈ ಕುರಿತು.

ಸುಮಾ.ಕಂಚೀಪಾಲ್

Comments

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...