Skip to main content

ಮನಸ್ಸಿಗೆ ಅಂಟಿದ ಬಾಲ್ಯದ ಘಮಲು.

ಮನಸ್ಸಿಗೆ ಅಂಟಿದ ಬಾಲ್ಯದ ಘಮಲು.

ಹೊಳೆ ಅಂಚಿನ ದಂಡೆಯ ಗುಂಟ ಓಡಿದ್ದೇ ಓಡಿದ್ದು ಸಂಪಿಗೆ ಮರದ ಹಣ್ಣು ಕೀಳಲಿಕ್ಕಾಗಿ.  ಆಗಂತು ಚಿಕ್ಕ ಸ್ಕರ್ಟ ಮೇಲಂಗಿ ಇಷ್ಟೇ ಬಿಟ್ಟರೆ ಚೂಡಿದಾರದ ಸಹವಾಸವೇ ಇರಲಿಲ್ಲ. ಮರಹತ್ತಲು ಬಂದರೂ,ಈ ಸ್ಕರ್ಟನ ಸಹವಾಸಕ್ಕೆ ಹೆದರಿ ಮರ ಹತ್ತದೇ ನಮ್ಮ ಸಹಪಾಠಿ ಹುಡುಗರು ಕೊಯ್ಯೊ ಹಣ್ಣುಗಳನ್ನು ಹೆಕ್ಕುವ ಕೆಲಸ ಮಾತ್ರ  ನಮ್ಮದಾಗಿತ್ತು.

ಹೀಗಿರುವಾಗ ಒಮ್ಮೆ ದಾರಿ ಹತ್ತಿರದ ಮರದ ತುಂಬ ಬೊಕ್ಕಳದ ಹೂವು ಬಿಟ್ಟಿತ್ತು ಅದನ್ನು ಆರಿಸಿ ಪೋಣಿಸಿ ಮಾಲೆ ಮಾಡಿ ಶಾಲೆಗೆ ಹೋದರೆ ಅಕ್ಕೋರಿಗೆ ಮಾಲೆ ಕೊಟ್ಟು ಖುಷಿಪಡಿಸಬಹುದು ಎಂಬ ಆಸೆಗೆ ಲಂಗದ ತುದಿ ಮಡಿಸಿ ಹೂ ಆರಿಸೋವಾಗ ಕಟ್ಟಿರುವೆಗಳು ಕಚ್ಚದೇ ಹೋದರೆ ಅವುಗಳ ಖುಷಿ ಕಡಿಮೆ ಅಗುತ್ತಿತ್ತೋ ಎನೋ?! ಅವಂತು ಕಚ್ಚಿಯೆ ಕಚ್ಚುತ್ತಿದ್ದವು.


ಅಂಗಿ ತೊಳೆದರು ಮೂಗಿಗೆ ಅಂಟಿದ ಘಮಲು ಹೋಗದಷ್ಟು ಘಾಡವಾದ ಕಂಪು ಅದು. ಮನೆಗೆ ಬಂದು ಬಾಗಿಲ ಪಕ್ಕದ ಸಣ್ಣ ಚಿಟ್ಟೆಯ ಮೇಲೆ ಹೂವು ಹರವಿ ಕೈ ಕಾಲು ತೊಳೆಯುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿತ್ತು. ಅದೇ ಬೆಳಗಿನ ತೆಳ್ಳವು ದೋಸೆ ಬೆಲ್ಲ ತುಪ್ಪದ ರುಚಿಯೊಂದಿಗೆ ಹೊಟ್ಟೆ ತುಂಬಿಸಿಕೊಂಡು ಬರುವಷ್ಟರಲ್ಲಿ ಬೊಕ್ಕಳ ಪೋಣಿಸಿ ಮಾಲೆ ಮಾಡುವ ಕೆಲಸದ ಖುಷಿ ಕಾದಿರುತ್ತಿತ್ತು.‌

ಅಷ್ಟಾದ ಮೇಲೆ ನಾಳೆಗಾಗಿ ಟೀಚರ್ ಕೊಟ್ಟ ಲೆಕ್ಕ. ಗುರೂಜಿ ಕೊಟ್ಟ ಮಗ್ಗಿ ದಿನಚರಿ.  ಒಂದು ಎರಡು ಮೂರು ಗೆರೆಗಳ ತುಂಬಿಸೋದೆ ದೊಡ್ಡ ಕೆಲಸ. ಇಷ್ಟಾದ ಮೇಲೆ ಚೂರು ಟಿ. ವಿ ನೋಡೋಣ ಎಂದು ಕೂತರೆ ಅಮ್ಮ ಗದರುತ್ತಾಳೆ. ಕೈ ಕಾಲು ತೋಳೆದು ದೇವರಿಗೆ ದೀಪ ಹಚ್ಚು ಎಂದು ತಮ್ಮನಿಗೂ ತಪ್ಪಿದ್ದಲ್ಲ ಸಂಧ್ಯಾ ವಂದನೆ.

ಇಷ್ಟಾಗಿ ಸದಾ ಕಾರ್ಯನಿರತರಾದ ನಮಗೆ ಬಾಯಿಪಾಠದ ಬಿಸಿ ಮುಟ್ಟಿಸುತ್ತಿದ್ದ ಚಿಕ್ಕಮ್ಮನ ಕೆಲಸ ಆರಂಭ ಅದೇ ಹೇಳಿದ್ದನ್ನೇ ಹೇಳೊ ಪರಿಪಾಠ ಅ. ಆ, ಇ, ಈ. ಒಂದೊಂದ್ಲೆ ಒಂದ, ಆದರೆ ಅಂದಿನಿಂದ ಇಂದಿಗೂ ಹದಿಮೂರು ಮತ್ತು ಹದಿನೇರ ಮಗ್ಗಿ ಮಾತ್ರ ನಾನು ಕೂತ ಮಣೆ ಅಡಿಗೆ ಉಳಿದು ಬಿಟ್ಟಿದೆ.

ಮನೆಗೆ ನೆಂಟರು ಬಂದ ದಿನ ಬಾಯಿಪಾಠಕ್ಕೆ ರಜೆ. ತಿನ್ನು ಏನಾದರೊಂದು ವಿಷೇಶ ಕಜ್ಜಾಯ. ಇಷ್ಟಾಗಿ ಮಲಗಿದರೆ ಬೆಳಿಗ್ಗೆ ಟೀಚರಿಗೆ ಬೊಕ್ಕಳಮಾಲೆ ಕೊಡುವ ಹಂಬಲದಲ್ಲಿ ನಿದ್ದೆ.
ಇಂತಹ ಬಾಲ್ಯ ಈಗಿನ ಹಳ್ಳಿಮಕ್ಕಳಿಗೂ ಇಲ್ಲ. ಆಧುನಿಕತೆಯ ಅಡಿಯಲ್ಲಿ ಇಂತಹ ಎಷ್ಟೋ ಖುಷಿಗಳು ಹುದುಗಿ ಹೋಗಿವೆ.


ಸುಮಾ.ಕಂಚೀಪಾಲ್

Comments

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...