Skip to main content

ನಮ್ಮ ಕೇರಿ

ಊರು ಕೇರಿಯವರು ಅಡಿಕೆ ಕೊಯ್ಲು ಬಂದರೆ ತುಂಬಾ ಬ್ಯೂಸಿ ಆಗಿ ಬಿಡುತ್ತಾರೆ. ಹೀಗೇ ಉಳಿದ ದಿನಗಳಲ್ಲಿ ಬಿಡುವಿದೆ ಎಂಬ ಅರ್ಥ ಈ ಮಾತಿನದ್ದಲ್ಲ. ಅವರು ಯಾವಾಗಲೂ ಪುರುಸೊತ್ತಿಲ್ಲದ ಜೇನಿನಂತೆ ಕೆಲಸ ಮಾಡುವ ಜನ. ಚಳಿ ಆರಂಭ ಆಗ್ತಾ ಇದ್ಹಾಗೆ ಅಡಿಕೆ ಕೊಯ್ಲು ಶುರುವಾಗಿ ಬಿಡುತ್ತೆ. ಆಗ ಹೆಂಗಸರಿಗೂ, ಗಂಡಸರಿಗೂ ಬಿಡುವಿಲ್ಲದ ಕೆಲಸ. 



ನಮ್ಮಲ್ಲಿ ಗಂಡು ಮೇಲೋ ಹೆಣ್ಣು ಮೇಲೋ ಎಂಬ ಮಾತೇ ಬರೋದಿಲ್ಲ. ಎಲ್ಲ ಕೆಲಸಗಳನ್ನು ಎಲ್ಲರೂ ಸಮನಾಗಿ ಮಾಡುತ್ತಾರೆ. ಅಡಿಕೆ ಕುಯ್ಯುವ ಆ ದಿನವನ್ನು ಗಂಡಸರು ನಿಭಾಯಿಸಿದರೆ, ಆಳುಗಳಿಗೆ ಮಜ್ಜಿಗೆ ಬೆಲ್ಲವನ್ನೋ, ಚಹಾವನ್ನು ಮಾಡಿ, ತೆರಿ ಅಡಿಕೆ ಹೆಕ್ಕಿ ಅದೂ ಇದೂ ಅಂತ ಲೆಕ್ಕಕ್ಕೇ ಸಿಗದ ನೂರು ಕೆಲಸವನ್ನು ಹೆಂಗಸರೇ ಮಾಡುತ್ತಾರೆ. ಅಷ್ಟೇ ಯಾಕೆ ಅಡಿಕೆ ಹೋರಲು ಜನ ಸಿಗಲಿಲ್ಲ ಎಂದರೆ ಇವರು ಅದಕ್ಕೂ ಸೈ. 


ಇನ್ನು ಸಂಜೆಯಾಗುತ್ತಿದ್ದಂತೆ ಊಟಕ್ಕೆ ತಯಾರಿ ಆಗೇ ಬಿಡಬೇಕು. ಯಾಕೆಂದರೆ ಮುರಿಯಾಳಿನ ಪ್ರಕಾರ ಒಬ್ಬರ ಮನೆ ಅಡಿಕೆಯನ್ನು ಇನ್ನೊಬ್ಬರು ಸುಲಿಯಬೇಕಲ್ಲ. ಅದೇ ಹಿಂದಿನಿಂದಲೂ ಬಂದ ಪದ್ದತಿ. ಹಾಗೆನ್ನುವುದಕ್ಕಿಂತ ನಮ್ಮ ಕೇರಿಯ ಒಗ್ಗಟ್ಟು ಎನ್ನಬಹುದು. ಏನೇ ಕಾರ್ಯಕ್ರಮ ಇರಲಿ ಅಥವಾ ಹತ್ತು ಜನ ಕೂಡುವ ಶುಭಕಾರ್ಯ ಇರಲಿ ಚಪ್ಪರ ಹಾಕುವುದರಿಂದ ಬಾಳೆಲೆಕೊಯ್ದು, ಬಂದವರಿಗೆ ಬಡಿಸುವವರೆಗೂ ಕೇರಿಯವರೇ ನೋಡಿಕೊಳ್ಳುತ್ತಾರೆ. 

ಕೇರಿಯ ಪ್ರೀತಿಯ ಚಿಕ್ಕಪ್ಪ, ಚಿಕ್ಕಮ್ಮಂದಿರು ಎಲ್ಲಾ ಮಕ್ಕಳಿಗೂ ಅಪ್ಪ, ಅಮ್ಮ ಇದ್ದಂತೆ ನಾವು ಪ್ರತಿಭಾ ಕಾರಂಜಿಗೆ ಹೋದೆವು ಅಂದುಕೊಳ್ಳಿ ಅವರು ಯಾರದ್ದೇ ತಾಯಿ ಆಗಿರಲಿ ನಮ್ಮನ್ನೂ ಅವರ ಮಕ್ಕಳು ಎಂದೇ ಭಾವಿಸಿ ತಯಾರಿ ಮಾಡುತ್ತಾರೆ. ಅರ್ಜೆಂಟಿಗೆ ಹೊಲಿಗೆ ಬೇಕಾದರೆ ಮಾಡಿ ಕೊಡ್ತಾರೆ. ಅಯ್ಯೊ ನಮ್ಮನೆಲಿ ಸದ್ಯ ತುಪ್ಪ ಇಲ್ಲ ಎಂದು ಯಾರಾದರು ಒಬ್ಬರು ಹೇಳಿದರೆ ತುಪ್ಪ ಕೊಡಲು ಹತ್ತು ಜನ ಅಮ್ಮಂದಿರು ಸಿದ್ಧರಿರ್ತಾರೆ. 

ಕೇರಿಯ ತುಂಬ ಅಮ್ಮಂದಿರು, ಅವರ ಪ್ರೀತಿ, ಅವರಿಗೂ ನಾವೆಲ್ಲ ಮಕ್ಕಳು. ಯಾರೇ ಕಲಿಯಲು ದೂರ ಹೋಗಿರಲಿ ಅವರು ಊರಿಗೆ ಬಂದರೆಂದರೆ ಎಲ್ಲರೂ ನಮ್ಮನೆಗೆ ಬಾ ಎಂದು ಅಕ್ಕರೆಯಿಂದ ಕರೆಯುವವರೇ ಆಗಿರುತ್ತಾರೆ. ನಾನು ಇಂದು ರಾತ್ರಿ ಬಸ್ಸಿಗೆ ಹೋಗ್ತೀನಿ ಅಂತ ಹೇಳಿದರೆ ಅವರ ಮನೆಯಲ್ಲಿ ಏನಾದರೂ ವಿಶೇಷ ಮಾಡಿದ್ದರೆ ಅದನ್ನು ಹಾಲು ಡೇರಿ ( ಅದೊಂತರ ವಿವಿಧೋದ್ದೇಶ ಸಂಘ ಇದ್ಹಾಗೆ, ವಸ್ತು ವಿಚಾರಗಳ ವಿನಿಮಯಕ್ಕೆ) ಅಲ್ಲಿಗೆ ಕಳಿಸಿ ಕೊಡ್ತಾರೆ. 


ಇನ್ನು ಶಾಲೆಯಲ್ಲಿ ಪಾಲಕರನ್ನು‌ ಕರೆ ತರಲು ಹೇಳಿದರೆ ಕೆಲವು ಬಾರಿ ನನ್ನ ದೊಡ್ಡಪ್ಪ ಸಿಗ್ನೇಚರ್ ಮಾಡಿದ್ದೂ ಇದೆ. ನಮ್ಮ ಕೇರಿಯ ಒಗ್ಗಟ್ಟಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂಬುದೇ ಆಶಯ. ಇನ್ನು ಅಡಿಕೆ ಸೊಲಿಯುವ ಆ ರಾತ್ರಿಗಳ ಕಥೆಯನ್ನು ಕೇಳಲು ಎಷ್ಟು ಮಜವಾಗಿರುತ್ತದೆ ಎಂದರೆ ಯಾವ ಹಾಲಿವುಡ್ ಮೂವಿಗೂ ಆ ಕಥೆಗಳು ಕಮ್ಮಿಯಿಲ್ಲ. ಕಾಮಿಡಿ, ಎಮೋಷನಲ್ ಪ್ರದೀಪಣ್ಣ ಹೇಳುವ ಹಾರರ್ ಕಥೆಗಳು ಆಹಾ! ಒಂದಕ್ಕಿಂತ ಒಂದು ಮಜ. 


ಇದನ್ನೆಲ್ಲಾ ನಿಮಗೆ ಪೇಟೆಯಲ್ಲಿ ಅನುಭವಿಸಲು ಖಂಡಿತ ಸಿಗೋದಿಲ್ಲ. ಇದು ಒಂಥರ ವರ ಎಂದೇ ಹೇಳಬಹುದು. ಯಾಕೆಂದರೆ ಮೊಬೈಲ್, ಇಂಟರ್ನೆಟ್, ಟಿವಿ ಎಂದು ಕಳೆದು ಹೋಗುವ ಈ ದಿನಗಳಲ್ಲಿ ಅಡಿಕೆ ಕೊಯ್ಲು ಎಂದು ನಾಕು ಜನ ಸೇರಿ ಮಾತಾಡುವುದಿದೆಯಲ್ಲ ಅದರ ಮಹತ್ವ ಅಲ್ಲಿ ಹೋಗಿ ಕುಳಿತಾಗಲೇ ಅರ್ಥವಾಗುತ್ತದೆ. 

ನೀವೂ ಈ ದಿನಗಳು ಹೇಗಿರುತ್ತದೆ ಎಂದು ಅನುಭವಿಸಿಯೇ ನೋಡಬೇಕು ಎಂದಾದರೆ ಅಡಿಕೆ ಕೊಯ್ಲಿನಲ್ಲಿ ಊರಿಗೆ ಹೋಗಿ ಬನ್ನಿ, ಸಾಧ್ಯವಾದರೆ ನಾನೂ ಹೋಗುತ್ತೇನೆ

ಮತ್ತೆ ಸಿಗೋಣ...
ಸುಮಾ.ಕಂಚೀಪಾಲ್ 

Comments

  1. Hey I don't know to read Kannada, but I read the English translated version, and it still felt good to read. Very wholesome topic and the pics are good too.

    ReplyDelete
  2. ಚೆ‌ಂದ ಆಯ್ದು ಕೂಸೆ.ನೈಜತೆ ಮತ್ತು ಕೇರಿಯ ಆತ್ಮೀಯತೆ ಕೂಡಿದ್ದು.ಇಂತಹ ದಿನಗಳು ಇನ್ನು ಬಹಳದಿನಗಳು ಇರಲಾರದು.ಎಲ್ಲರೂ ಮುದುಕರಾಗುತ್ತದ್ದಾರೆ.ಯುವಕರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ.ಇರಲಿ,ಆದಷ್ಟು ದಿನ ಹೀಗೆ ಇರೋಣ.ನೆನಪುಗಳನ್ನು ಮೆಲಕು ಹಾಕಲಾದರೂ ಮುಂದಿನ ದಿನಗಳಲ್ಲಿ ಬೇಕು.

    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...