Skip to main content

ಅಜ್ಜ ವೈಕುಂಠಕ್ಕೆ ಹೊರಟಿದ್ದಾನೆ

ತಮ್ಮನ ಪೋನು, ಅಕ್ಕ ಹೊರ್ಡು- ಸಮಯ 8:15 ಇರಬಹುದು

ಅಲ್ಲಿಗೆ ನನಗೆಲ್ಲಾ ಅರ್ಥವಾಗೇ ಹೋಯ್ತು ಯಾಕೆಂದರೆ ಅಜ್ಜನ ನೈಜ ಸ್ಥಿತಿ ಏನೆಂಬುದರ ಅರಿವು ಯನಗಿತ್ತು. ಎಷ್ಟೋ ಜನ ಹಾ, ಈಸಲಿ ಚೌತಿ ದಾಟ್ತನಿಲ್ಲೆ ಹ"ಎಂದಾಗಲೇ ಚೌತಿ ಹತ್ತಿರ ಬಂದಂತೆ ಭಯವಾಗಿತ್ತು. ಅಪ್ಪನೂ ಒಂದು ಮಾತು ಹೇಳಿಟ್ಟದ್ದು ನಿಜ. "ಏನೇ ಆದ್ರೂ ಬೇಜಾರಪ್ಲಿಲ್ಲೆ. ನೀ ಬಪ್ಪಲ್ಲಿವರಿಗ್ ಇಡುದಾ ಇಲ್ಯಾ ಗೊತ್ತಿಲ್ಲೆ" ಎಂದದ್ದೆಲ್ಲಾ ಒಮ್ಮೆಲೆ ನೆನಪಾಯ್ತು.

ತಕ್ಷಣ ಬಸ್ ಇದೆಯಾ ಎಂದು ನೋಡಿದೆ. ಹೇಗೋ ರಾತ್ರಿ ಆಯ್ತು, ಅಂತ್ಯಸಂಸ್ಕಾರ ಈಗ ಮಾಡಲ್ಲ ಎಂದುಕೊಂಡೆ. ಆದ್ರೆ ಮನೆಯಿಂದ ಪೋನ್ಬಂತು. ಈಗೇ ಮಾಡೂದು, ನಾಳೆ ಚೌತಿ ಹೇಳ್ತಾ ಇದ್ದ. ಅರೆ! ನನ್ನ ಮನಸಿಗೆ ಒಮ್ಮೆ ಘಾಸಿ ಆಯ್ತು. ಬೆಂಗಳೂರಿನ ಯಾವುದೋ ಡಾಂಬರು ರಸ್ತೆ ಮೇಲೆ ನಿಂತು ದೊಡ್ಡದಾಗಿ ಅತ್ತುಬಿಟ್ಟೆ. ಕೊನೆಗೊಮ್ಮೆ ಮುಖ ನೋಡಬಹುದು ಅಂದುಕೊಂಡಿದ್ದೆ. ಅದೂ ಆಗಲಾರದೇ ಎಂದೆನಿಸಿತು.




ಇಲ್ಲ, ನನ್ನ ಅಳು ನೋಡಿ ಅಪ್ಪ ಅಮ್ಮ ಸುಮ್ಮನಿರು, ಅಳದೇ ಮನೆಗೆ ಬಾ, ಇಡ್ತೀವಿ ಎಂದು ಪೋನಲ್ಲೇ ಸಮಾಧಾನ‌ ಮಾಡಿದರು. ಕಣ್ಣೊರೆಸಿದೆ. ಬಸ್ಸಿಗಾಗಿ ಕಾಯುತ್ತಾ ಕುಳಿತಾಗ ತಲೆ ತುಂಬಾ ನಾಳಿನದೇ ಯೋಚನೆ. ಮನೆಯಲ್ಲಿ ಮಾಡಿಟ್ಟ ಗಣಪತಿಗಳನ್ನೆಲ್ಲ ಏನ್ಮಾಡ್ತಾರೆ ಎಂಬುದಾಗಿ. ಗೋವಾದಲ್ಲಿರುವ ಅತ್ತೆ ಯಾವಾಗ ಬರ್ತಾಳೆ ಎಂಬುದಾಗಿ. ಹೀಗೆ ಹಲವಾರು. ಈ ಕಡೆ ಆಫೀಸು ರಜಾ, ಕೆಲಸ ಅದೆಲ್ಲದರ ತಲೆಬಿಸಿ. ಪಕ್ಕದಲ್ಲೊಂದು ಸಾಂತ್ವನ ಹಾಗೂ ಧೈರ್ಯದ ಕೈ. ಬಸ್ ಬಂದೇ ಬಿಡ್ತು. ಶ್ರೀಕುಮಾರ ಒಂಥರಾ ಕಾಣಿಸಿತು. ಒಂದೊಂದು ಪಯಣವೂ ಇದರಲ್ಲಿ ಒಂದೊಂದು ಭಾವನೆಗಳನ್ನು ಹೊಂದಿರುತ್ತದೆ. ಹೆದರಿಕೆಯೂ ಆಯಿತು. ಮುಂದಿನ ಪಯಣ ಎಂತ ಅನಿವಾರ್ಯತೆಯನ್ನು ಸೃಷ್ಟಿಸುವುದೋ ಎಂದು.



ಪುಣ್ಯಕ್ಕೆ ನನಗೆ ಡೆಂಗ್ಯು ಆಗಿ ನಾನು 15 ದಿನ ಮನೆಯಲ್ಲಿ ಅಜ್ಜನೊಟ್ಟಿಗೆ ಮಾತಾಡುತ್ತಾ, ಬೈಯುತ್ತಾ, ಅವ ಕೇಳಿದ್ದನ್ನೆಲ್ಲಾ ಕೊಡುತ್ತಾ ಅವನ ಪಕ್ಕವೇ ಹರಟುತ್ತಾ ಅವನನ್ನು ವೀಲ್ ಚೇರ್ಮೆಲೆ ಕೂರಿಸಿ ಸುತ್ತಿಸುತ್ತಾ ಅವನೊಟ್ಟಿಗೆ ಅವನ ಹಾಸಿಗೆ ಮೇಲೆ ಮಲಗುತ್ತಿದ್ದೆ. ಅವ ಅಂದ " ಅಕಾ ಇಂಗ್ಲೀಷಲ್ಲಿ ಆಕಳ ಬಗ್ಗೆ ಮಾತಾಡೆ ತಮಾ, ನೀನು ಅಜ್ಜನ ಬಗ್ಗೆ ಇಂಗ್ಲಿಷ್ ಅಲ್ಲಿ ಮಾತಾಡು. ನಾ ಸಾಯುವ ಮೊದಲು ಮೊಮ್ಮಕ್ಕಳು ಇಂಗ್ಲಿಷಲ್ಲೂ ಮಾತಾಡ್ತಾರೆ ನೋಡ್ತೆ ಎಂದ.

ನಾನು ತಮ್ಮ ಕಾಂಪಿಟೇಶನ್ ಮೇಲೆ ಮಾತಾಡಿದ್ದೆ ಆಡಿದ್ದು. ಅಜ್ಜನಿಗೆ ಫುಲ್ ಖುಷಿ. ಇದೆಲ್ಲ ನೆನಪಿಗೆ ನೆಪವಾಗಿ ಬೆಳಗ್ಗೆ ಅವನನ್ನು ಯಾವ ಸ್ಥಿತಿಯಲ್ಲಿ ನೋಡಬೇಕು ಎಂದು ಯೋಚಿಸಿದರೆ ನಿಜಕ್ಕೂ ಮತ್ತೆ ದುಃಖ ಉಮ್ಮಳಿಸುತ್ತಿತ್ತು



ಈ ಮೇಲಿನದಷ್ಟನ್ನು ಬರೆದು ಇಟ್ಟ ನಂತರ - ಮತ್ತೆ ಇದೀಗ ಅಂದರೆ ಮರುದಿನ ದಿನಾಂಕ 20/9/2023ಕ್ಕೆ ಇದನ್ನು ಪೂರ್ತಿಯಾಗಿ ಬರೆಯಲು ಆರಂಭಿಸಿದೆ. ಹೀಗೆ ಬರೆದಾಗ ಮಾತ್ರ ನನಗೆ ನನ್ನ ದುಃಖ ಇಳಿಯುವುದು. ನಿನ್ನೆ ಬೆಳಿಗ್ಗೆ ಮನೆ ತಲುಪಿದಾಗ ಅಜ್ಜ ಮಲಗಿದ್ದ ಮೈಮೇಲೊಂದು ಬಿಳಿ ವಸ್ತ್ರ ಮುಚ್ಚಿದ್ದರು. ಕಾಲು ಹಾಗೂ ತಲೆ ಭಾಗದಲ್ಲಿ ಹಸಿ ತೆಂಗಿನ‌ ಕಡಿಯಲ್ಲಿ ದೀಪ ಹಚ್ಚಿದ್ದರು. ಅತ್ತೆ ಅಲ್ಲೇ ಕೂತಿದ್ದಳು. ಅಪ್ಪ ಬಂದು ಮುಖ ನೋಡ್ತೀಯಾ ಬಟ್ಟೆ ತೆಗಿಲಾ ಕೇಳಿದರೂ ಊಹೂ ಎಂದವಳೇ ಅಮ್ಮನನ್ನು ಹುಡುಕಿ‌ ನಡೆದೆ.‌ಅಮ್ಮ ಕೊಟ್ಟಿಗೆಯಲ್ಲಿ ಚಾಕರಿ ಮಾಡುತ್ತಿದ್ದಳು. ಇದುವರೆಗೆ ಯಾರಲ್ಲೂ ಕೇಳಿರಲಿಲ್ಲ. ಅಜ್ಜ ಎಷ್ಟು ಗಂಟೆಗೆ ಹೇಗೆ ಸತ್ತರು ಎಂದು.



ಅವರಿಗೆ ಹಾರ್ಟ್‌ಫೇಲ್ ಆಗಿರುವ ಸಂಗತಿ ನನಗೆ ಮೊದಲೇ ತಿಳಿದಿತ್ತು. ನನಗೆ ಡೆಂಗ್ಯು ಆದಾಗ ನಾನು ಅಜ್ಜನ ಜೊತೆಯೇ ಇದ್ದದ್ದರಿಂದ ಪರಿಸ್ಥಿತಿ ಅರಿವಿತ್ತು. ತಕ್ಷಣ ಕಾಲ್ ಬಂದರೆ ಹೊರಡಲು ಬ್ಯಾಗ್ ರೆಡಿ ಇಟ್ಟಿದ್ದೆ. ಅಮಾ..ಎಷ್ಟೊತ್ತಿಂಗೆ ಅಂದೆ. ಅಮ್ಮ ಲಲಿತಾ ಸಹಸ್ರನಾಮ ಓದುವಾಗ ತಮ್ಮ ಹೊರಗಿದ್ದ ಅಜ್ಜ ತಮ್ಮನನ್ನು ಕರೆದು ಒಮ್ಮೆ ವಾಂತಿ ಮಾಡಿದ್ದರು. ಬೆವರು ಒರೆಸಲು ಬಟ್ಟೆ ಕೊಡು ಎಂದವರೇ ಎರಡು ಬಾರಿ ಕೈಕಾಲು ಒದ್ದುಕೊಂಡಾಗ ಶಬ್ಧವಾಗಿ ಎಲ್ಲರೂ ಓಡಿ ಬರುವಷ್ಟರಲ್ಲಿ ಪ್ರಾಣಹೋಗಿತ್ತು.

ಅಕ್ಕ ಬಂದವಳಿದ್ದಳು (ಡಾಕ್ಟರ್) ಅವಳು ವಿಷಯ ಪಕ್ಕಾ ಮಾಡಿದಳು ಎಂದೆಲ್ಲಾ ಅಮ್ಮ ಹೇಳಿದ ಮೇಲೆ ಮತ್ತೆ ಜಗುಲಿಗೆ ಬಂದೆ ಅಪ್ಪ ಈಗ ಮುಖ ನೋಡ್ತೆ ತೆಗಿ ಅಂದೆ. ಅಪ್ಪ ಬಟ್ಟೆ ಜಾರಿಸಿದರು ಅಜ್ಜ, ನನ್ನಜ್ಜ! ನಗುತ್ತಿದ್ದಾನೆ! ಅರೆ.. ನನಗೂ ಅಳುವಿನ ಬದಲು ನಸು ನಗು. ಯಾಕೆಂದರೆ ಅವನ ಮುಖದಲ್ಲಿ ಸಾಯುವಾಗಿನ ಸಂಕಟದ ನೋವಿನ ಛಾಯೆ ಇರಲಿಲ್ಲ. ಬಾಯಿ ಚೂರು ಒಡೆದಿತ್ತು. ಹಲ್ಲೆರಡು ಕಾಣುತ್ತಿತ್ತು. ಕಣ್ಣು ತೆರೆದಿತ್ತು. ಆದರೆ ಅಜ್ಜ ನಾ ಬಂದಿನೋ ಎನ್ನುತ್ತಾ ನನಗೆ ಅಳು ಆರಂಭ ಆಯ್ತು. ಮನೆಯಲ್ಲಿ ಮತ್ಯಾರು ಇರಲಿಲ್ಲ. ಹಿಂದಿನ‌ ದಿನ ರಾತ್ರಿಯೇ ಹನ್ನೆರಡರವರೆಗೆ ಇದ್ದು ಸಾಂತ್ವನ‌ ಹೇಳಿ ನಾಳೆ ಬರುತ್ತೇವೆ ಎಂದರೆ ಇನ್ನೊಂದಷ್ಟು ಜನ ಅಯ್ಯೋ ಚೌತಿಯಲಿ ಎಂದು ಹೋಗಿದ್ದರು.


ತಮ್ಮ ಮಾತ್ರ ತನ್ನ ಕೈಯಲ್ಲೇ ಅಜ್ಜ ತೀರಿಕೊಂಡರೂ ಸಹ ಗಟ್ಟಿಯಾಗಿ ಜವಾಬ್ಧಾರಿಯಿಂದ ಮುಂದೆ ಬೇಕಾದ ಎಲ್ಲಾ ತಯಾರಿ ಮಾಡುತ್ತಾ ಕುಗ್ಗದೆ ಎಲ್ಲಾ ಕೆಲಸ ಮಾಡುತ್ತಿದ್ದ. ಅವನನ್ನು ನೋಡಿದರೆ ನನಗೆ ಹೊಟ್ಟೆ ಚುರ್ ಎನ್ನುತ್ತಿತ್ತು. ಈಗಲೂ ಹಾಗೇ ಅನಿಸುತ್ತಿದೆ. ಮರಕಡಿಯುವ ಮಷಿನ್ ಶಬ್ಧ, ಬಾಳೆಮುಂಡಿ ಕಡಿಯುವ ಶಬ್ಧ, ಜನರ ಮಾತು ಅವರಿವರ ಬಾಯಲ್ಲಿ ಅಜ್ಜ ಪಟ್ಟ ಕಷ್ಟ ಮಾಡಿದ ಸಮಾಜ ಸೇವೆ ಇವನ್ನೆಲ್ಲಾ ಕಿವಿಗೆ ಹಾಕಿಕೊಳ್ಳುತ್ತಾ ಮನೆ ಮಗಳಾಗಿ ನನ್ನ ಕೆಲಸ ಅದಾಗಲೇ ಆರಂಭವಾಗಿತ್ತು. ಅರಿಶಿನ‌, ಶೇಡಿ, ಹಣ, ಬಾಯಲ್ಲಿಡಲು ಚಿನ್ನ ಬೆಳ್ಳಿ ತುಂಡು, ಗೋಮಯ್ಯ ಮೂತ್ರ, ಹಾಳೆ, ಜನಿವಾರ ಹೀಗೆ ಒಂದೊಂದನ್ನೂ ಹೇಳಿದಂತೆ ಜೋಡಿಸುತ್ತಾ ಹೋದೆ.

ಒದ್ದೆಯಾಗಿ ಬನ್ನಿ, ಅಜ್ಜನಿಗೆ ಮೀಸಬೇಕು ಎಂದರು. ತಮ್ಮ, ಅಮ್ಮ, ಅಪ್ಪ ಅತ್ತೆಯಂದಿರು ಮತ್ತು ನಾನು ಉಟ್ಟ ಬಟ್ಟೆಯಲ್ಲೇ ತಲೆ ಮೇಲಿನಿಂದ ನೀರು ಹೊಯ್ದುಕೊಂಡೆವು. ಆ ನೀರಲ್ಲೇ ನನ್ನ‌ ಅಳು ಕರಗಿತ್ತಿತ್ತು. ಇನ್ನೂ ಕಾಡಿದ್ದೆಂದರೆ ಬಚ್ಚಲಲ್ಲಿ ಇಟ್ಟ ಅಜ್ಜನ‌ ಹಲ್ಲುಜ್ಜುವ ಬ್ರಷ್, ಅವನ‌ ಸೋಪ್ ಹಿಂದಿನ‌ ದಿನ‌ ಸ್ನಾನ‌ ಮಾಡುವಾಗ ತೆಗೆದಿಟ್ಟ ಉದ್ದ ತೋಳಿನ‌ ಅಂಗಿ ಇವುಗಳನ್ನು ನೋಡಿ ಅಳು ನಿಲ್ಲಿಸಲು ಸ್ವಲ್ಪ ಕಷ್ಟವೇ ಆಯಿತು.
ಅಜ್ಜನಿಗೆ ಪಿಂಡ ಇಡಲು....

ಉದ್ದ ಕಾಯದ ಅಜ್ಜನನ್ನು ನಾಲ್ಕು ಜನ ಹೊತ್ತು ತಂದು ಬಾಳೆ ಮುಂಡಿಯ ಮೇಲೆ ಮಲಗಿಸಿದರು. ನಾವು ಕಾಲಿಂದ ತಲೆವರೆಗೆ ನೀರು ಹಾಕಿದೆವು. ನಾನು ಅಜ್ಜನಿಗೆ ಈ ರೀತಿ ಮಾಡುವ ದಿನ ಯಾಕಾದರೂ ಬಂತೆನಿಸಿತು. ಅಳುತ್ತಾ ಮೀಸಿ ದೂರ ಸರಿದು ಅಜ್ಜನನ್ನೇ ನೋಡುತ್ತಾ ನಿಂತಾಗ 2009ರಲ್ಲಿ ಆದ ಓಪನ್ ಹಾರ್ಟ್ ಸರ್ಜರಿಯ ಕೊಯ್ದ ಗಂಟು ಕಲೆಗಳು ಅವನ ನೋವನ್ನು ಸಾರುತ್ತಿತ್ತು. ಎದೆಯ ಮೇಲೆ ಉದ್ದನೆ ಬಿಳಿ ರೋಮವೊಂದು ಹಾರುತ್ತಿತ್ತು.

ಅಲ್ಲಿಂದ ತೆಂಗಿನ ಗರಿಯ ಮೇಲೆ ಮಲಗಿಸಿ ಸ್ಮಶಾನ ಹಾದಿಯಲ್ಲಿ ಶಾಸ್ತ್ರದಂತೆ ಮೂರು ಸಾರಿ‌ ಮಲಗಿಸಿ ಮಕ್ಕಳೆಲ್ಲ ಅಜ್ಜನನ್ನು ಹೊತ್ತರು. ನಾನು ಚಿಕ್ಕಮ್ಮ ಹೇಳಿದಂತೆ ಹಸ್ತ ಮುಟ್ಟಿ ಏಳು ಹೆಜ್ಜೆ ನಡೆದೆ. ತಮ್ಮ ನಿರ್ಲಿಪ್ತ ಭಾವನೆಯಿಂದ ಸಾಗುತ್ತಿದ್ದ. ಅಪ್ಪ ಕೂದಲು ಮೀಸೆಯನ್ನೆಲ್ಲಾ ಬೋಳಿಸಿ ವಿಚಿತ್ರವಾಗಿ ಹಿಂದೆಂದೂ ಕಾಣದ ರೀತಿ ಕಾಣುತ್ತಾ ಮಣ್ಣಿನ ಮಡಿಕೆಯಲ್ಲಿ ಅಗ್ನಿ ಹೊತ್ತು ನಡೆಯುತ್ತಿದ್ದ ಹರಿಶ್ಚಂದ್ರ ಕಾಣಿಕೆಯ ಗಂಟೊಂದಿತ್ತು.

ಅವ್ವನನ್ನು ಸುಟ್ಟ ಜಾಗದಿಂದ ಮೂರು ಮಾರು ದೂರದಲ್ಲಿ ಕುಂಟೆ ಕೊರೆದು ಸುಡುವ ಜಾಗ ಮಾಡಿದ್ದರು. ಎಲ್ಲರ ಮನೆಯಲ್ಲೂ ಸೂತಕದಿಂದ ಚೌತಿ ನಿಂತಿತ್ತು. ಅಜ್ಜನನ್ನು ಅದರ ಮೇಲೆ ಮಲಗಿಸಿದ್ದರು. ಬಟ್ಟರು ಮಂತ್ರ ಹೇಳುತ್ತಿದ್ದರು. ಅಪ್ರದಕ್ಷಿಣಾಕಾರದಲ್ಲಿ ಅಪ್ಪ ಅಜ್ಜನ ಸುತ್ತ ತಿರುಗುತ್ತಿದ್ದ. ಮಳೆ ಆರಂಭವಾಯ್ತು ಎಲ್ಲರೂ ಒಮ್ಮೆ ತೊಯ್ದರು.

ತಮ್ಮ ಬಟ್ಟರಿಗೆ ಪುಸ್ತಕ ತೊಯ್ಯದಂತೆ ಕೊಡೆ ಹಿಡಿದಿದ್ದ. ನಾನು ಅವನ ಪಕ್ಕ ನಿಂತಿದ್ದೆ. ಮನಸಿನಲ್ಲಿ ಭಯ ಬೆಂಕಿ ಇಡುವಾಗ ಮಳೆ ಬಂದರೆ ಏನಾಗುತ್ತದೆಯೋ ಎಂಬ ಚಿಂತೆ. ಚಿತೆ ಉರಿಯಲು ಆರಂಭಿಸಿದರೆ ಏನೂ ಆಗಲ್ಲ ಎಂದು ಜನರ ಭರವಸೆಯ ಮಾತು. ಸುಟ್ಟ ಮೇಲೆ ಮಳೆ ಬಂದರೆ ಶ್ರೇಷ್ಠ ಎಂಬ ಮಾತು. ಅವ್ವನನ್ನು ಸುಟ್ಟಾಗಲು ಮಳೆ ಬಂದಿತ್ತು. ಆದರೆ ಬೆಂಕಿ ಆರುವುದಿಲ್ಲ.

ಅಜ್ಜನ ಸಿಂಹ ಪಾತ್ರ

ಎಲ್ಲಾ ವಿಧಿ ವಿಧಾನಗಳು ಮುಗಿದಿತ್ತು. ಅಜ್ಜನ ಸುತ್ತ ಕುಂಟೆ ಇಡುತ್ತಾ ಬಂದರು. ಅಜ್ಜನ ಮೈ ಮುಖ ಮುಚ್ಚುವಾಗ ಅವನಿಗೆ ನೋವಾಗಬಹುದು ಎಂಬ ಭಾವನೆ ಮಾತ್ರ ನನ್ನಲ್ಲಿತ್ತು. ಎಷ್ಟು ಸಾಧ್ಯವೋ ಅಷ್ಟು ಹೊತ್ತು ಇನ್ನೆಂದೂ ಕಾಣದ ಅಜ್ಜನ ಮುಖ ನೋಡಿಕೊಂಡೆ. ಅಮ್ಮನ ಅಪ್ಪ ಅಮ್ಮ (ಅಜ್ನಮನೆ ಅಜ್ಜಾ ಅಬ್ಬೆ - ಮನೆ ಅಜ್ಜಾ ಅವ್ವಾ) ಯಾರೂ ಇಲ್ಲ ನಾನೊಂಥರ ಮದುವೆಗೆ ಹಿರಿಯರ ಆಶೀರ್ವಾದ ಪಡೆಯಲಾರದ ನತದೃಷ್ಟೆ ಎಂದೆನಿಸಿ ಮತ್ತೆ ಅಳು ಬಂತು. ಪಾಪ ಅಪ್ಪ ಅಮ್ಮನಿಗೆ ಎಷ್ಟು ಅನಾಥ ಭಾವ ಕಾಡಿರಬಹುದು! ಅಪ್ಪ ಕೊಳ್ಳಿ ಇಟ್ಟ ಇನ್ನೊಂದಷ್ಟು ಜನ ಉರಿಸಿದರು. ಅಜ್ಜನನ್ನು ಸುಟ್ಟ ಮೇಲೆ ಹಿಂತಿರುಗಿ‌ ನೋಡದೆ ಹೋಗಬೇಕು ಎಂದಿದ್ದರು. ಅದಕ್ಕೆ ತಡವಾಗಿ ಬೆಂಕಿ ಉರಿದು ಇನ್ನು ಅಜ್ಜ ಕಾಣಲಾರ ಎಂದಾದಮೇಲೆ ಪ್ರದಕ್ಷಿಣೆ ಹಾಕಿ ಹೊರಟೆ. ಅಜ್ಜ ವೈಕುಂಠಕ್ಕೆ ಹೋಗುತ್ತಾ ಇದ್ದಾನೆ. ಅವ ಈಗ ನನ್ನನ್ನು ಅಲ್ಲಿಂದಲೇ ನೋಡುತ್ತಿರಬಹುದು. ನಾನು ಅತ್ತರೆ ಅಥವಾ ನೀವು ಅತ್ತರೆ ಅವನಿಗೆ ಹೋಗಲು ಕಷ್ಟವಾಗುತ್ತದೆ.



ಈ ಬಸ್ಸಿನಲ್ಲಿ ಒಬ್ಬರೇ ಒಂದು ರಾತ್ರಿ ಕಳೆಯುವುದು ಅದೂ ಇಂತಹ ಸಂದರ್ಭಗಳಲ್ಲಿ ತುಂಬಾ ಕಷ್ಟ ಎನಿಸಿಬಿಡುತ್ತದೆ. ಬೇಸರ ಮಾಡಿಕೊಂಡು ಅಳುತ್ತಾ ಮಲಗುವ ಬದಲು ಇದನ್ನು ಬರೆದಿದ್ದಷ್ಟೇ.. ಮತ್ಯಾವ ಉದ್ದೇಶವೂ ಇದಕ್ಕಿಲ್ಲ.

ಅಜ್ಜ ನಾನು ಬರೆಯುವುದನ್ನು ಇಷ್ಟಪಡುತ್ತಿದ್ದ. ಇಷ್ಟ ಪಡುತ್ತಾನೆ. ಅವನ ನೆನಪಾದಾಗೆಲ್ಲ ನಾನು ಬರೆದೇ ಸುಮ್ಮನಾಗುತ್ತೇನೆ. 

ಸುಮಾ.ಕಂಚೀಪಾಲ್

Comments

  1. ತುಂಬಾ ಸೊಸಾಗಿದೆ ಬರೆದಿರುವ ಶೈಲಿ

    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...