Skip to main content

ಅವನೆಟ್ಟ ಗಿಡ ಹೂ ಬಿಟ್ಟ ದಿನ

ಐದು ತಿಂಗಳ ಹಿಂದೆ ನಮ್ಮೆಲ್ಲರನ್ನು ಭೌತಿಕವಾಗಿ ಅಗಲಿದ ಆ ಎಳೆ ಜೀವ ನೆಟ್ಟ ದಾಸವಾಳದ ಗಿಡ ಹೂ ಬಿಟ್ಟದೆ. ಈ ವಿಷಯ ಅವನ‌ ಚಿಕ್ಕಮ್ಮನಿಂದ ತಿಳಿದು ಖುಷಿ, ಒಟ್ಟಿಗೊಂದು ಸಹಿಸಲಾರದ ದುಃಖ ಎದೆಕಟ್ಟಿತ್ತು. ಅವನು ಆನ್ ಲೈನ್ ಕ್ಲಾಸಿಗೆಂದು ಅಜ್ಜಿಮನೆಗೆ ಹೋದಾಗ ನೆಟ್ಟ ಗಿಡಗಳ ಸಾಲಿನ ಪೋಟೊ ಒಂದು ನನ್ನ ಗ್ಯಾಲರಿಗೆ  ಬಂದು ಕೂತಿತ್ತು. ಬಹುಶಃ ಅವನು ಬದುಕಿದ್ದರೂ ಅದೇ ಪೋಟೊಗಳು ನನ್ನ ಗ್ಯಾಲರಿಯಲ್ಲಿ ಇರುತ್ತಿತ್ತು. ಸ್ವತಃ ಅವನೆ ಪೋಟೊ ಕಳಿಸುತ್ತಿದ್ದ ಈಗ ಇನ್ಯಾರೊ ಅಷ್ಟೇ ವ್ಯತ್ಯಾಸ ಆದರೂ ಈ ವ್ಯತ್ಯಾಸದ ನೋವು ಕೊಂಚ ಕಟುವಾಗಿಯೇ ಕಾಡುತ್ತಿದೆ.

ಅವನದೇ ವಯಸಿನ ಯಾರೊಬ್ಬರನ್ನು ಕಂಡರೂ ತಕ್ಷಣ ನೆನಪಾಗುತ್ತಾನೆ‌. ನಾನು ಮತ್ತೆ ಪ್ರಸಾದನ ಕುರಿತು ಬರೆಯಲು ಕೂತದ್ದು ಯಾಕೆಂದರೆ ಒಂದಷ್ಟು ಮುಖ್ಯ ಘಟನೆಗಳು ನನ್ನನ್ನು ಈ ಬರಹ ಬರೆಯಲು ಪ್ರೇರೇಪಿಸಿತು. ಅದೇನೆಂದರೆ ಇತ್ತೀಚೆಗೆ ಹದಿನೈದು ದಿನಗಳ ಒಳಗಾಗಿ ಜರುಗಿದ ಎರಡು ಬೈಕ್ ಅಪಘಾತಗಳು. ಇವನದೇ ವಯಸ್ಸಿನ ಇಬ್ಬರು ವ್ಯಕ್ತಿಗಳು ವಜ್ರಳ್ಳಿ ಗ್ರಾಮದ ಸುರೇಂದ್ರ ಮತ್ತು ಉಜಿರೆಯ ತೇಜ ಎಂಬಿಬ್ಬರ ಮರಣದ ಸುದ್ದಿ ಮತ್ತೆ ನನ್ನನ್ನು ಅವನ ಸಾವಿನ ದಿನಗಳೆಡೆಗೆ ಸೆಳೆಯಿತು. ಇಂತದೆ ಘಟನೆಗಳಿಂದ ಆಗಾಗ ಮುಳ್ಳು ಚುಚ್ಚಿ ಅಡಿಯಲ್ಲೇ ಕೀವಾಗಿ ಹೊರಬರುವಷ್ಟು ಸಂಕಟವಾಗುತ್ತಿದೆ.

ಅವನೆಟ್ಟ ದಾಸವಾಳದ ಗಿಡ

ಅವರ ನಗುಮೊಗದ ಭಾವಚಿತ್ರಗಳು ಕೂತಲ್ಲಿ ನಿಂತಿಲ್ಲಿ ಬಿಡದೇ ಕಾಣುತ್ತವೆ, ಕಾಡುತ್ತವೆ. ಎಷ್ಟು ಬಾರಿ ಅವರ ವಿಚಾರವಾಗಿ ಇನ್ನೊಬ್ಬರಲ್ಲಿ ಮಾತಿಗಿಳಿಯಬಾರದು ಎಂದಾದರೂ ಯಾವುದಾದರೊಂದು ವಿಚಾರಕ್ಕೆ ಸನ್ನಿವೇಶಕ್ಕೆ ಅವನದೇ ಉದಾಹರಣೆಗಳು ನನ್ನ ಬಾಯಿಂದ ಉಸುರುತ್ತವೆ. ಅವನ ವಿಚಾರ ಹೇಳುತ್ತಾ ನಗುತ್ತಿದ್ದಂತೆಯೇ ಕಣ್ಣುಗಳಲ್ಲಿ ಹನಿಗಟ್ಟುತ್ತವೆ. ಎಲ್ಲರೆದುರು ಉದುರಿದ ಕಣ್ಣೀರಿನ ಹನಿಗಳನ್ನು ಬಹುಶಃ ಎಣಿಸಬಹುದು‌. ಆದರೆ ಕೆಲವು ಬಾರಿ  ನಿದ್ದೆಗಣ್ಣಿನಲ್ಲಿ ಮೈಬೆಚ್ಚಿ ಎಚ್ಚರವಾದಾಗ ಕನ್ನೆಗಳ ಮೇಲಿಳಿದ ಹನಿಗಳನ್ನು ಮೇಲಿರುವ ಅವನೆ ಎಣಿಸಿರಬೇಕು‌. ಅವನು ಅಳಬೇಡ ಎಂದು ಬೈದಂತಾಗಿ ಸುಮ್ಮನೆ ಕಣ್ಣೊರೆಸಿ ನಕ್ಕು ಮಲಗುತ್ತೇನೆ. 

ಇನ್ನೂ ಅವನು ಜೀವಿಸುತ್ತಿದ್ದಾನೆ.

ಸುಮ್ಮನೆ ಖಾಲಿ ಕೂತಾಗ ಅವನೊಟ್ಟಿಗೆ ಹೇಳಬೇಕಾದ ವಿಷಯಗಳನ್ನು ಗುನುಗುತ್ತೇನೆ. ಅವನೇ ಎದುರಿಗೆ ನಿಂತಿದ್ದಾನೆ ಎಂಬಷ್ಟು ಸಹಜ ಭಾವನೆಯಿಂದ ನಗುತ್ತಾ ಮಾತಾಡುತ್ತೇನೆ. ಇದನ್ನು ನನ್ನವರು ಸಹಿಸಿಕೊಂಡು. ಅವರೂ ಅವನೊಟ್ಟಿಗೆ ಮಾತನಾಡಿ ಅವನಿರುವ ಭಾವ ಕಲ್ಪಿಸಿಕೊಟ್ಟಿದ್ದಾರೆ. ನಾನಿರುವ ಕಡೆ ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕೊರೊನಾದಿಂದ ತಮ್ಮ ಸ್ನೇಹಿತ ಕೃಷ್ಣ ಎಂಬಾತನನ್ನು ಕಳೆದುಕೊಂಡು ಪ್ರತಿ ದಿನವೂ ಮನೆಯ ಗೇಟಿನ ಬಳಿ ಹೋಗಿನಿಂತು ಒಬ್ಬರೇ ಅವನೊಟ್ಟಿಗೆ ಮಾತಾಡುತ್ತಿದ್ದರು. ಅದನ್ನು ನೋಡಿ ಚಕಿತಳಾದ ನನಗೆ ನನ್ನ ಸ್ಥಿತಿ ನೆನೆದು ನಗು ಬರುತ್ತಿದೆ.

ಏನಾದರಾಗಲಿ ಒಂದಲ್ಲ ಒಂದು ರೂಪದಲ್ಲಿ ಅವರನ್ನು ನೆನೆದು, ನಮ್ಮೊಟ್ಟಿಗೇ ಇದ್ದಾರೆ ಎಂಬ ಭಾವನೆಯಲ್ಲಿ ನಮ್ಮನ್ನು ನಾವು ಸಂತೈಸಿ ಬಾಳುವುದೇ ಮುಖ್ಯ‌. 

ಸುಮಾ.ಕಂಚೀಪಾಲ್

Comments

  1. ಅವನು ಈ ಗಿಡದಂಗೆ ಹಸಿರಾಗಿ, ಉಸಿರಲ್ಲಿ ಉಸಿರಾಗಿ ನಮ್ಮೊಂದಿಗೇ ಇದ್ದ. ಅಣ್ಣ ನನಗೆ ಫೋಟೊ ಕಳಸದ ನೋಡಿ ನನಗೆ ಅವನ ನೆನಪಿಗೆ ನೆಟ್ಟು ಹೋಗ್ಬುಟ್ನನ ಅನಸ್ತು. ಅದಕ್ಕೆ ನಿನ್ನ ನೆನಪಾಯ್ತು ನಿನಗೂ ಅವನು ಅಂದ್ರೆ ಅಷ್ಟೇ ಪ್ರೀತಿ ಅದಿಕ್ಕೆ ಕಳಸದೆ.

    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...