ಐದು ತಿಂಗಳ ಹಿಂದೆ ನಮ್ಮೆಲ್ಲರನ್ನು ಭೌತಿಕವಾಗಿ ಅಗಲಿದ ಆ ಎಳೆ ಜೀವ ನೆಟ್ಟ ದಾಸವಾಳದ ಗಿಡ ಹೂ ಬಿಟ್ಟದೆ. ಈ ವಿಷಯ ಅವನ ಚಿಕ್ಕಮ್ಮನಿಂದ ತಿಳಿದು ಖುಷಿ, ಒಟ್ಟಿಗೊಂದು ಸಹಿಸಲಾರದ ದುಃಖ ಎದೆಕಟ್ಟಿತ್ತು. ಅವನು ಆನ್ ಲೈನ್ ಕ್ಲಾಸಿಗೆಂದು ಅಜ್ಜಿಮನೆಗೆ ಹೋದಾಗ ನೆಟ್ಟ ಗಿಡಗಳ ಸಾಲಿನ ಪೋಟೊ ಒಂದು ನನ್ನ ಗ್ಯಾಲರಿಗೆ ಬಂದು ಕೂತಿತ್ತು. ಬಹುಶಃ ಅವನು ಬದುಕಿದ್ದರೂ ಅದೇ ಪೋಟೊಗಳು ನನ್ನ ಗ್ಯಾಲರಿಯಲ್ಲಿ ಇರುತ್ತಿತ್ತು. ಸ್ವತಃ ಅವನೆ ಪೋಟೊ ಕಳಿಸುತ್ತಿದ್ದ ಈಗ ಇನ್ಯಾರೊ ಅಷ್ಟೇ ವ್ಯತ್ಯಾಸ ಆದರೂ ಈ ವ್ಯತ್ಯಾಸದ ನೋವು ಕೊಂಚ ಕಟುವಾಗಿಯೇ ಕಾಡುತ್ತಿದೆ.
ಅವನದೇ ವಯಸಿನ ಯಾರೊಬ್ಬರನ್ನು ಕಂಡರೂ ತಕ್ಷಣ ನೆನಪಾಗುತ್ತಾನೆ. ನಾನು ಮತ್ತೆ ಪ್ರಸಾದನ ಕುರಿತು ಬರೆಯಲು ಕೂತದ್ದು ಯಾಕೆಂದರೆ ಒಂದಷ್ಟು ಮುಖ್ಯ ಘಟನೆಗಳು ನನ್ನನ್ನು ಈ ಬರಹ ಬರೆಯಲು ಪ್ರೇರೇಪಿಸಿತು. ಅದೇನೆಂದರೆ ಇತ್ತೀಚೆಗೆ ಹದಿನೈದು ದಿನಗಳ ಒಳಗಾಗಿ ಜರುಗಿದ ಎರಡು ಬೈಕ್ ಅಪಘಾತಗಳು. ಇವನದೇ ವಯಸ್ಸಿನ ಇಬ್ಬರು ವ್ಯಕ್ತಿಗಳು ವಜ್ರಳ್ಳಿ ಗ್ರಾಮದ ಸುರೇಂದ್ರ ಮತ್ತು ಉಜಿರೆಯ ತೇಜ ಎಂಬಿಬ್ಬರ ಮರಣದ ಸುದ್ದಿ ಮತ್ತೆ ನನ್ನನ್ನು ಅವನ ಸಾವಿನ ದಿನಗಳೆಡೆಗೆ ಸೆಳೆಯಿತು. ಇಂತದೆ ಘಟನೆಗಳಿಂದ ಆಗಾಗ ಮುಳ್ಳು ಚುಚ್ಚಿ ಅಡಿಯಲ್ಲೇ ಕೀವಾಗಿ ಹೊರಬರುವಷ್ಟು ಸಂಕಟವಾಗುತ್ತಿದೆ.
ಅವರ ನಗುಮೊಗದ ಭಾವಚಿತ್ರಗಳು ಕೂತಲ್ಲಿ ನಿಂತಿಲ್ಲಿ ಬಿಡದೇ ಕಾಣುತ್ತವೆ, ಕಾಡುತ್ತವೆ. ಎಷ್ಟು ಬಾರಿ ಅವರ ವಿಚಾರವಾಗಿ ಇನ್ನೊಬ್ಬರಲ್ಲಿ ಮಾತಿಗಿಳಿಯಬಾರದು ಎಂದಾದರೂ ಯಾವುದಾದರೊಂದು ವಿಚಾರಕ್ಕೆ ಸನ್ನಿವೇಶಕ್ಕೆ ಅವನದೇ ಉದಾಹರಣೆಗಳು ನನ್ನ ಬಾಯಿಂದ ಉಸುರುತ್ತವೆ. ಅವನ ವಿಚಾರ ಹೇಳುತ್ತಾ ನಗುತ್ತಿದ್ದಂತೆಯೇ ಕಣ್ಣುಗಳಲ್ಲಿ ಹನಿಗಟ್ಟುತ್ತವೆ. ಎಲ್ಲರೆದುರು ಉದುರಿದ ಕಣ್ಣೀರಿನ ಹನಿಗಳನ್ನು ಬಹುಶಃ ಎಣಿಸಬಹುದು. ಆದರೆ ಕೆಲವು ಬಾರಿ ನಿದ್ದೆಗಣ್ಣಿನಲ್ಲಿ ಮೈಬೆಚ್ಚಿ ಎಚ್ಚರವಾದಾಗ ಕನ್ನೆಗಳ ಮೇಲಿಳಿದ ಹನಿಗಳನ್ನು ಮೇಲಿರುವ ಅವನೆ ಎಣಿಸಿರಬೇಕು. ಅವನು ಅಳಬೇಡ ಎಂದು ಬೈದಂತಾಗಿ ಸುಮ್ಮನೆ ಕಣ್ಣೊರೆಸಿ ನಕ್ಕು ಮಲಗುತ್ತೇನೆ.
ಸುಮ್ಮನೆ ಖಾಲಿ ಕೂತಾಗ ಅವನೊಟ್ಟಿಗೆ ಹೇಳಬೇಕಾದ ವಿಷಯಗಳನ್ನು ಗುನುಗುತ್ತೇನೆ. ಅವನೇ ಎದುರಿಗೆ ನಿಂತಿದ್ದಾನೆ ಎಂಬಷ್ಟು ಸಹಜ ಭಾವನೆಯಿಂದ ನಗುತ್ತಾ ಮಾತಾಡುತ್ತೇನೆ. ಇದನ್ನು ನನ್ನವರು ಸಹಿಸಿಕೊಂಡು. ಅವರೂ ಅವನೊಟ್ಟಿಗೆ ಮಾತನಾಡಿ ಅವನಿರುವ ಭಾವ ಕಲ್ಪಿಸಿಕೊಟ್ಟಿದ್ದಾರೆ. ನಾನಿರುವ ಕಡೆ ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕೊರೊನಾದಿಂದ ತಮ್ಮ ಸ್ನೇಹಿತ ಕೃಷ್ಣ ಎಂಬಾತನನ್ನು ಕಳೆದುಕೊಂಡು ಪ್ರತಿ ದಿನವೂ ಮನೆಯ ಗೇಟಿನ ಬಳಿ ಹೋಗಿನಿಂತು ಒಬ್ಬರೇ ಅವನೊಟ್ಟಿಗೆ ಮಾತಾಡುತ್ತಿದ್ದರು. ಅದನ್ನು ನೋಡಿ ಚಕಿತಳಾದ ನನಗೆ ನನ್ನ ಸ್ಥಿತಿ ನೆನೆದು ನಗು ಬರುತ್ತಿದೆ.
ಏನಾದರಾಗಲಿ ಒಂದಲ್ಲ ಒಂದು ರೂಪದಲ್ಲಿ ಅವರನ್ನು ನೆನೆದು, ನಮ್ಮೊಟ್ಟಿಗೇ ಇದ್ದಾರೆ ಎಂಬ ಭಾವನೆಯಲ್ಲಿ ನಮ್ಮನ್ನು ನಾವು ಸಂತೈಸಿ ಬಾಳುವುದೇ ಮುಖ್ಯ.
ಸುಮಾ.ಕಂಚೀಪಾಲ್
ಅವನು ಈ ಗಿಡದಂಗೆ ಹಸಿರಾಗಿ, ಉಸಿರಲ್ಲಿ ಉಸಿರಾಗಿ ನಮ್ಮೊಂದಿಗೇ ಇದ್ದ. ಅಣ್ಣ ನನಗೆ ಫೋಟೊ ಕಳಸದ ನೋಡಿ ನನಗೆ ಅವನ ನೆನಪಿಗೆ ನೆಟ್ಟು ಹೋಗ್ಬುಟ್ನನ ಅನಸ್ತು. ಅದಕ್ಕೆ ನಿನ್ನ ನೆನಪಾಯ್ತು ನಿನಗೂ ಅವನು ಅಂದ್ರೆ ಅಷ್ಟೇ ಪ್ರೀತಿ ಅದಿಕ್ಕೆ ಕಳಸದೆ.
ReplyDelete😊😊. ಸದಾ ಹಸಿರು
Delete