Skip to main content

ನಾರಿ ಶಕ್ತಿ


ಆದರ್ಶವನಿತಾ ಸಮಾಜ ಎಂದರೆ‌ ಉತ್ತರ ಕನ್ನಡದ ಶಿರಸಿಯ ನಾರಿಯರಿಗೆ ಶಕ್ತಿ ತುಂಬುವ ಕೇಂದ್ರ‌. ಸಕ್ರಿಯವಾಗಿ ತಮ್ಮನ್ನು ಸದಾ ಚಲನಶೀಲವಾಗಿರಿಸಿಕೊಳ್ಳಲು ದಾರಿ ತೋರಿದ ಒಂದು ಮಾರ್ಗ. ಹಲವು ವರ್ಷಗಳ ಇತಿಹಾಸವುಳ್ಳ ಆದರ್ಶ ವನಿತಾ ಸಮಾಜದ ಕುರಿತು ಒಂದಿಷ್ಟು ಮಾಹಿತಿ ಕಲೆಹಾಕಿದಾಗ ಸಿಕ್ಕಿದ್ದು ಆಸಕ್ತಿದಾಯಕ‌ ಸಂಘಟನೆಯ ಕತೆ.



ಸಿದ್ದಾಪುರ ತಾಲೂಕು ಕೊರ್ಲಕಾಯಿ ಗ್ರಾಮದ ಮಹಿಳೆ ವಾಸಂತಿ ಎನ್ನುವವರು 1975 ರಲ್ಲೆ ಈ ಮಹಿಳಾ ಸಂಘಟನೆಯನ್ನು ಹುಟ್ಟುಹಾಕಲು ಶ್ರಮಿಸಿದವರು. ಶಿರಸಿಯ ಚಿಪಗಿಯ ಸಹ್ಯಾದ್ರಿ ಕಾಲನಿಯಲ್ಲಿ ತಮ್ಮದೇ ಆದ ಒಂದಿಷ್ಟು ಜಾಗಕ್ಕಾಗಿ ಹೋರಾಟಮಾಡಿ ಕಟ್ಟಡ ನಿರ್ಮಾಣಮಾಡಿದರು.

ಈ ಕಾರ್ಯಕ್ಕೆ ಇವರ ಕುಟುಂಬದ ಸಹಾಯ ಹೆಚ್ಚಿನದಾಗಿತ್ತು.
ಅವರು ತಮ್ಮ ಹದಿನೇಳನೇ ವರ್ಷಕ್ಕೆ ತವರು ಮನೆಬಿಟ್ಟು ಗಂಡನ ಮನೆ ಸೇರಿದ್ದರು. ಆರ್ಥಿಕವಾಗಿ ಒಂದು ರೂಪಾಯಿ ಕೂಡ ಇಲ್ಲದ ಪೂರ್ವ ಹಂತದಲ್ಲಿ ಮನೆ ಮನೆಗೆ ತಮ್ಮ ಎರಡುವರೆ ವರ್ಷದ ಮಗುವನ್ನು ಕಂಕುಳಲ್ಲಿ ಹೊತ್ತು ಬಿಸಿಲಲ್ಲಿ ಕಾಲ್ನಡಿಗೆಯಲ್ಲಿ ತಿರುಗಿ ಬೇಕಾಗುವ ಮೊತ್ತ ಸಂಗ್ರಹಿಸಿದರು.

ಆ ಕಾಲದಲ್ಲೇ ಇವರು ತಮ್ಮ ಮೆಟ್ರಿಕ್ ಶಿಕ್ಷಣವನ್ನು ಮುಗಿಸಿದವರು‌. "ಎಂದಿಗೂ ಸುಮ್ಮನೆ ಮನೆಯಲ್ಲಿ ಕೂರಬಾರದು ಸದಾ ಕಾರ್ಯೋನ್ಮುಖರಾಗಿರಬೇಕು ಎನ್ನುವ ಹಂಬಲ ನನ್ನನ್ನು  ಮನೆಯಲ್ಲಿ ಕೂರಲು ಬಿಡಲಿಲ್ಲ" ಎನ್ನುತ್ತಾರೆ ವಾಸಂತಿ ಅಮ್ಮ‌. ಊರೂರು ತಿರುಗುವುದು, ಕೈಗಾರಿಕೆ, ಕ್ರೋಷಾ, ಕಸೂತಿ, ಅಲಂಕಾರ ವಸ್ತು ತಯಾರಿಕೆ, ಪರಿಸರ ಹೊರಾಟ ಇಷ್ಟು ತಮ್ಮಿಷ್ಟದ ಹವ್ಯಾಸ ಎಂದು ಅವರು ತಿಳಿಸಿದ್ದಾರೆ.

ಮಹಿಳಾ ಸಮಾಜ ನಿರ್ಮಾಣವಾದಾಗ ಮೊದ ಮೊದಲು ಸಭೆ ಸೇರಲು ಕೆಲವರು ಅಂಜುತ್ತಿದ್ದರು. ಸಾಮಾಜಿಕವಾಗಿ ಮಹಿಳೆಯರಿಗೆ ಅಷ್ಟು ಸ್ವಾತಂತ್ರ್ಯವಿಲ್ಲದ ಕಾಲದಲ್ಲಿ ಇವರು ಮಹಿಳಾ ಸಂಘಟನೆ ಮಾಡಿ ಅವರೊಟ್ಟಿಗೆ ಹಲವು ಪರಿಸರ ಚಳುವಳಿಯಲ್ಲಿ ಪಾಲ್ಗೊಂಡರು.‌ ಶರಾವತಿ ಅಣೆಕಟ್ಟು, ಗಣಿ, ಕೈಗಾ ಹೀಗೆ ಪರಿಸರದ ಕುರಿತು ಕಾಳಜಿ ತೋರಿದರು.

ನಂತರ ಇವರ ಪ್ರಯತ್ನ ನೋಡಿ ಸರ್ಕಾರ ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಯ ಉಳಿತಾಯ ಯೋಜನೆ ಮೂಲಕ ಸಹಾಯ ತೊರಕಿತು.‌ ವತ್ಸಲಾ ಪ್ರಾತಕ್ಕಾಲ, ನಾಗರಾಜ್ ಮತ್ತು ಲೀಲಮ್ಮಾ ಎಂಬ ತ್ರಿಮೂರ್ತಿಗಳೇ ಪೋಸ್ಟನ ಮೂಲಕ ಆದಾಯದ ದೃಢತೆತಂದು 12 ಗುಂಟೆ ಮೊದಲು ಮುಡಿಪಿಟ್ಟು ನಂತರ 5 ಗುಂಟೆ ಜಾಗ ದೊರೆತು ಅದರಲ್ಲಿ ಕಟ್ಟಡ ನಿರ್ಮಾಣ ಮಾಡಲಾಯಿತು.

ನಂತರ ಪ್ರತೀ ವರ್ಷ ಪ್ರಚಾರ ಮಾಡಿ ಮಹಿಳಯರ ಸದಸ್ಯತ್ವವನ್ನು ಮಾಡಿಸಿ ಐನೂರಕ್ಕೂ ಹೆಚ್ಚು ಜನರು ವನಿತಾ ಸಮಾಜವನ್ನು ಸೇರಿಕೊಂಡರು. ಈಗಲೂ ಈ ವನಿತಾ ಸಮಾಜ ಪ್ರಚಲಿತವಾಗಿದ್ದು ಎಷ್ಟೋ ಮಹಿಳೆಯರಿಗೆ ಸಹಾಯಕವಾಗಿದೆ. ಇಪ್ಪತ್ತೆಂಟು ವರ್ಷ ಸಂಸ್ಥಾಪಕ ಅಧ್ಯಕ್ಷರಾಗಿ ವಾಸಂತಿ ಅವರೆ ಕಾರ್ಯ‌ನಿರ್ವಹಿಸಿದರು. ನಂತರ  ಭಾಗೀರಥಿ, ಅಹಲ್ಯಾ, ಮತ್ತು ಸೀತಾ ಎನ್ನುವವರು ಅಧ್ಯಕ್ಷತೆವಹಿಸಿ ಮುಂದುವರೆಸಿಕೊಂಡು ಬಂದಿದ್ದಾರೆ.

ಹೊಲಿಗೆ, ಶೋರ್ಟ ಹ್ಯಾಂಡ್ ಟೈಪಿಂಗ್,  (1978 - 82 )  ಯೋಗ, ನೃತ್ಯ ಮತ್ತು ಕಟ್ಟಡದ ಬಾಡಿಗೆ ಹಣದಿಂದ ವೆಚ್ಚ ನಿರ್ವಹಣೆ ಮಾಡಿ 2000ದಲ್ಲಿ ಬೆಳ್ಳಿ ಭವನ ಎಂಬ ಹೆಸರಿನಲ್ಲಿ ಸಭಾಭವನ ನಿರ್ಮಿಸಿದರು. ಇಂದಿಗೂ ಇಲ್ಲಿ ನಾಟಕ, ಯಕ್ಷಗಾನ, ಭರತನಾಟ್ಯ, ಭಜನೆ ಮತ್ತು ಸಂಗೀತ ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಅಡಿಗೆ, ರಂಗೋಲಿ ಸ್ಪರ್ಧೆ, ಸ್ಪೋಕನ್ ಇಂಗ್ಲಿಷ್ ತರಗತಿ, ಹೊಳೆ ಊಟ, ಬೆಳದಿಂಗಳೂಟ, ಪ್ರಾಣ ಚೈತನ್ಯ ಚಿಕಿತ್ಸೆ, ಸಂಕ್ರಾಂತಿಗೆ ಬಾಗೀನ, ವಾರ್ಷಿಕೋತ್ಸವ ‌ನಡೆಯುತ್ತದೆ‌. ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ. ಹಾಗೂ ಒರ್ವ ಬಡ ವಿದ್ಯಾರ್ಥಿನಿಗೆ ದತ್ತಿ ನಿಧಿ ನೀಡಲಾಗುತ್ತದೆ.

ನಿರಂತರವಾಗಿ ಈ ಎಲ್ಲಾ ಚಟುವಟಿಕೆ ನಡೆದುಕೊಂಡು ಬಂದಿರುವ ಗುಟ್ಟು ಎಂದರೆ‌ ಒಗ್ಗಟ್ಟು " ಒಗ್ಗಟ್ಟು ಇಲ್ಲದಿರೆ ಬಿಕ್ಕಟ್ಟು " ಮಾಡುವ ಕಾರ್ಯದಲ್ಲಿ ಆತ್ಮತೃಪ್ತಿ ಇದೆ ಎಂದಿದ್ದಾರೆ ವಾಸಂತಿ ಅಮ್ಮ.

ಸುಮಾ.ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...