ಕಳೆದ ಎರಡು ಮೂರು ವರ್ಷಗಳಿಂದ ಮಳೆಯ ಅಬ್ಬರಕ್ಕೆ ಎಲ್ಲೆಡೆ ಭೂ ಕುಸಿತ ಆಗ್ತಾ ಇದೆ. ಈ ಕುರಿತು ಪರಿಸರ ತಜ್ಞರನ್ನು, ಭೂ ಶಾಸ್ತ್ರಜ್ಞರನ್ನು ಸಂದರ್ಶನ ಮಾಡಿಯಾಗಿದೆ. ಈಗ ಭೂಮಿತಾಯಿ ಈ ಕುರಿತು ಏನು ಹೇಳ್ತಾಳೆ ನೋಡೋಣ. ಅವಳನ್ನೇ ಕರೆದು ವಿಶೇಷ ಸಂದರ್ಶನ ಮಾಡುತ್ತಿದ್ದೇವೆ. ಮೊದ ಮೊದಲು ನಮ್ಮೊಟ್ಟಿಗೆ ಮಾತನಾಡಲು ನಿರಾಕರಿಸಿದರು ಒತ್ತಾಯಕ್ಕೆ ಮಣಿದು ಭೂ ತಾಯಿ ಒಪ್ಪಿಕೊಂಡಿದ್ದಾರೆ. ಈ ಒಂದು ಕಾಲ್ಪನಿಕ ಸಂದರ್ಶನ ನಿಮಗಾಗಿ.
ಮನುಷ್ಯ: ಸಮಸ್ತ ಜೀವ ಸಂಕುಲವನ್ನು ತನ್ನ ಒಡಲೊಳಗಿಟ್ಟು ಸಲಹುವ ಭೂ ತಾಯಿಯ ಚರಣಗಳಿಗೆ ನಮಿಸಿ ಸ್ವಾಗತಿಸುತ್ತಿದ್ದೇನೆ. ಮಾತೆ ನೀವು ಕಳೆದ ಎರಡು ವರ್ಷಗಳಿಂದ ಯಾಕೆ ಕೋಪಗೊಳ್ಳುತ್ತಿದ್ದೀರಿ?
ಭೂಮಿ ತಾಯಿ: ಪ್ರತಿ ವರ್ಷ ನಾನು ಶಾಂತಳಾಗಿಯೇ ಇರುತ್ತಿದ್ದೆ. ಉತ್ತಿ ಬಿತ್ತಿ ಬೆಳೆತೆಗೆಯಲು ನನ್ನ ಮೈ ಮನೆಗಳನ್ನು ನೀಡುತ್ತಿದೆ. ಪುಟ್ಟ ಮಕ್ಕಳಂತೆ ಮನುಜ ಸಂಕುಲವನ್ನು ಸಲಹುತ್ತಿದ್ದೆ. ಆದರೆ ಕಳೆದ ಎರಡು ಮೂರು ವರ್ಷಗಳಿಂದ ನನಗೂ ನನ್ನ ಮಕ್ಕಳ ಮೇಲೆ ಕೋಪ ಬಂದಿದೆ. ಮನುಷ್ಯರೇ ಮಾಡುತ್ತಿರುವ ಕೃತ್ಯಗಳ ಫಲವಾಗಿ ನಾನು ಕುಪಿತಳಾಗಿದ್ದೇನೆ. ಮನುಜ ಮತ್ತೆ ತನ್ನ ತಪ್ಪನ್ನು ಅರಿತರೆ ನಾನು ಸಮಾಧಾನ ಪಡುತ್ತೇನೆ.
ಮನುಷ್ಯ: ಭೂಮಿ ತಾಯಿಯಾದ ನೀವೆ ಕೋಪಿಸಿಕೊಂಡರೆ ಹೇಗೆ? ಸಣ್ಣ ಪುಟ್ಟ ಶಿಕ್ಷೆ ನೀಡಿ ಕ್ಷಮಿಸಿ ಬಿಡುವುದು ಒಳ್ಳೆಯದಲ್ಲವೇ?
ಭೂ ತಾಯಿ: ನಾನು ಹಲವು ವರ್ಷಗಳಿಂದ ನನ್ನದೇ ಮಕ್ಕಳು ಎಂಬ ಪ್ರೀತಿಗೆ ನಿಮ್ಮನ್ನು ಕ್ಷಮಿಸುತ್ತಲೇ ಬಂದೆ. ಆದರೆ ನೀವು ನನ್ನ ಒಡಲನ್ನು ಬರಡು ಮಾಡುತ್ತಾ ಹೋಗಿದ್ದೀರಿ. ಈಗಲೂ ನನ್ನ ನೋವಿಗಲ್ಲ ನಿಮ್ಮ ವಳಿತಿಗಾಗಿ ಹೇಳುತ್ತಿದ್ದೇನೆ. ನಿಮ್ಮ ರಕ್ಷಣೆಗಾಗೆ ಕಷ್ಟ ಪಡುತ್ತಿದ್ದೇನೆ. " ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ " ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲಾರಳು. ನಿಮ್ಮನ್ನು ನಾನು ಎಂದಿಗೂ ರಕ್ಷಿಸದೆ ಕೈ ಬಿಡಲಾರೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚುತ್ತಿರುವ ನಿಮ್ಮ ಕೆಡುಕಿನ ಆಟವನ್ನು ಸಹಿಸಹಿಸದೆ ಈ ನಿರ್ಧಾರಕ್ಕೆ ಬರುವಂತಾಯಿತು.
ಮನುಷ್ಯ: ನಮ್ಮ ಹೊಸ ಚಿಂತನೆಗಳಿಂದ ನಿನಗೊಂದು ಹೊಸ ರೂಪ ಕೊಡುತ್ತಿದ್ದೇವೆ ಇ ಕುರಿತು ನಿನ್ನ ಅನಿಸಿಕೆ ಏನು?
ಭೂಮಿತಾಯಿ: ನಿಮ್ಮ ಹೊಸ ಚಿಂತನೆಗಳು ಮಿತಿಯನ್ನು ಕಳೆದು ಕೊಂಡಿದೆ. ಭೂಮಿತೂಕದ ಸಹನೆ ಎಂಬ ಮಾತೇ ಇರುವಾಗ ನನ್ನ ತಾಳ್ಮೆಯನ್ನೇ ನೀವು ಮೀರಿದ್ದೀರಿ. ಅನಗತ್ಯ ಅವಶ್ಯಕತೆಗಳನ್ನು ಸೃಷ್ಟಿಸಿಕೊಂಡಿದ್ದೀರಿ. ಚತುಷ್ಪತ ರಸ್ತೆ, ಇಲ್ಲ ಅಲ್ಲದ ರಲ್ವೇ ಮಾರ್ಗಗಳು, ಅಣು ವಿದ್ಯುತ್ ಕೇಂದ್ರಗಳು ಗಣಿಗಾರಿಕೆ, ಅವೈಜ್ಞಾನಿಕ ಅಣೆಕಟ್ಟುಗಳು, ಅರಣ್ಯನಾಶ, ಈ ಎಲ್ಲಾ ನಿಮ್ಮ ಹೊಸಚಿಂತನೆಗಳಿಂದ ನಾನು ದಣಿದು ಹೋಗಿದ್ದೇನೆ. ಇದೇ ನನ್ನ ಅನಿಸಿಕೆ.
ಮನುಷ್ಯ: ನಿನಗೆ ಸಾವಿಲ್ಲ ಎಂದು ಕೇಳಲ್ಪಟ್ಟಿದ್ದೇವೆ ನಿಜವೇ?
ಭೂಮಿತಾಯಿ: ಎಲ್ಲರೂ ಹಾಗೆ ಅಂದು ಕೊಂಡಿದ್ದೀರಿ ಮತ್ತು ಅದು ನಿಜವೂ ಇರಬಹುದು. ಆದರೆ ಇತ್ತೀಚೆಗೆ ನನ್ನ ಆರೋಗ್ಯ ಹದಗೆಟ್ಟ ಪರಿಣಾಮವಾಗಿ ನಾನು ಸಾಗಬಹುದು ಎಂಬ ಸಂಶಯ ನನ್ನಲ್ಲಿ ಮನೆ ಮಾಡುತ್ತಿದೆ. ನನ್ನ ಒಡಲೊಳಗಿನ ಸತ್ವವೆಲ್ಲ ಬರಿದಾಗಿ ನಾನು ಖಾಲಿಯಾಗುತ್ತಿದ್ದೇನೆ. ಸತ್ವವಿಲ್ಲದೆ ಬಸವಳಿದು ಹೋಗಿದ್ದೇನೆ. ನನ್ನ ಕಣ್ಣೀರಿನ ಪ್ರವಾಹಕ್ಕೆ ನನ್ನ ಆಭರಣಗಳಾದ ಪರ್ವತ ಶಿಖರಗಳು ಕೊಚ್ಚಿಹೋಗುತ್ತಿವೆ. ಎಷ್ಟು ಅಶಕ್ತಳಾಗಿದ್ದೇನೆ ಎಂದರೆ ನನ್ನ ಮೈಯನ್ನೇ ಭಲವಾಗಿ ಹಿಡಿದುಕೊಳ್ಳಲಾಗದೆ ಒಂದೊಂದೇ ಪಾರ್ಶ್ವಗಳನ್ನು ಕಳೆದುಕೊಂಡಿದ್ದೇನೆ. ಹೀಗೆ ಆದರೆ ನನ್ನ ಅಳಿವು ಖಚಿತ.
Comments
Post a Comment