Skip to main content

ಹೃದಯಶಿವ

ಸ್ವರ್ಗವಾಸಿ,

ಪ್ರೀತಿಯ ಮಾವನಿಗೆ, ಅಂದು ಹುಟ್ಟಿದ ದಿನದ ನೆನಪಿಗೆ ಇಂದು ಈ ನನ್ನ  ಪತ್ರ.

ನೀನು ಇಂದು ಸ್ವರ್ಗದಲ್ಲಿ ಸಂತೃಪ್ತಿಯ ದಿನಗಳನ್ನು ಕಾಣುತ್ತಾ ಸುಖವಾಗಿದ್ದೀಯ ಎಂದು ದಿನವೂ ನಾವೆಲ್ಲರೂ ಭಾವಿಸಿದ್ದೇವೆ. ನಾವು ಇಲ್ಲಿ ಅಲ್ಪತೃಪ್ತರಾಗಿ ಸುಖವಾಗಿಯೇ ಇದ್ದೇವೆ ಎನ್ನಬಹುದು, ಆಗಾಗ ಕಾಡುವ  ನಿನ್ನ ನೆನಪೊಂದನ್ನು ಬಿಟ್ಟರೆ.

"ಹುಟ್ಟು ಹಬ್ಬವೆಂದರೆ ಏನು ವಿಶೇಷ ಅಲ್ಲ ಮಾರಾಯ್ತಿ ಮೊದಲು ವಿಷ್ ಮಾಡದೇ ಇದ್ರೆ ಅದಕೆಲ್ಲ ಯಾರಾದ್ರೂ ಬೇಜಾರ್ ಮಾಡ್ತವ" ಈಗ ವಿಷ್ ಮಾಡಿದ್ದೆ ಆತಲಿ ಖುಷಿಪಡು ಎಂದು ನನ್ನ ಹುಟ್ಟು ಹಬ್ಬದ ದಿನ ಪೋನು ಮಾಡಿ ನೀನು ಹೇಳುತ್ತಿದ್ದೆ. ಆದರೂ ನಾನು ಪ್ರತಿ ವರ್ಷವೂ ನೀನೆಕೆ ಇಷ್ಟು ತಡಮಾಡಿದೆ? ಎಂದೇ ಕೇಳುತ್ತಿದ್ದೆ‌.



ಇಲ್ಲಿ ಕಾಟಾಚಾರದ ಪರೀಕ್ಷೆಗಳೆಲ್ಲ ನಡೆಯುತ್ತಿದೆ. ನೀನು ಓದಿದ್ದನ್ನು ಗೆಳೆಯರಿಗೆ ಧಾರೆ ಎರೆದರೆ ಅವರು ಪಾಸಾಗಬಹುದು. ನೀನುಯಾವಾಗಲೂ ಹುಡುಗಿಯರ ಓದಿನ ಕುರಿತು ಹೀಗೆ ಅಲ್ಲವೇ ತಮಾಷೆ ಮಾಡಿ ನಗುತ್ತಿದ್ದುದು.

ಕನಸಲ್ಲಿ ಬರುತ್ತೇನೆ ಎಂದು ಭರವಸೆ ಕೊಟ್ಟ ನೀನು ಇತ್ತೀಚೆಗೆ ಯಾಕೊ ಗೈರು ಹಾಕುತ್ತಿದ್ದೀಯಾ ಹೀಗೆಂದೆ ನಾನು ಬೇಸರಮಾಡಿ ಅತ್ತದಿನ ರಾತ್ರಿ ನೀನು ಕನಸಿನಲ್ಲಿ ಬಂದದ್ದು ಖುಷಿ ಎನಿಸಿತು.

ಹಿಂದಿನ ವರ್ಷವೇ ನಿನ್ನ ಜೀವನದ ಕೊನೆಯ ಹುಟ್ಟು ಹಬ್ಬವೆಂದು ತಿಳಿದಿದ್ದರೆ ಅದೇನಾಗುತ್ತಿತ್ತೊ ಗೊತ್ತಿಲ್ಲ. ನಿನ್ನ ಅಮ್ಮನಿಗೆ ಪೋನುಮಾಡಿದಾಗ ಅವಳೂ ಇದನ್ನೇ ಹೇಳಿ ಅಳುತ್ತಾಳೆ. ನಿನ್ನ ನೆನಪುಗಳು ದಿನದ ಇಪ್ಪತ್ನಾಲ್ಕು ಗಂಟೆಯೂ ಮನಸಿನಲ್ಲೇ ಇಟ್ಟು ಕೊಂಡ ಕೆಂಡವಾಗಿ ಅವರೆದೆಯಲ್ಲಿ ಉರಿಯುತ್ತಿರುತ್ತದೆ ಆದರೂ ಬೂದಿ ಮುಚ್ಚಿಕೊಂಡಂತೆ ಕಾಣಿಸದೇ ಇರುವುದು ತುಂಬಾ ಕಷ್ಟ.

ನಿನ್ನೆಲ್ಲಾ ಸವಿಘಳಿಗೆ, ನೀನು ಬಿಟ್ಟುಹೋದ ವಸ್ತು, ನಿನ್ನ ದನಿ ಇದೆಲ್ಲವನ್ನು ಹಂಬಲಿಸಿ ನಿನ್ನಾಪ್ತರಲ್ಲಿ ಹಲವರು ಇನ್ನೂ ಕುಗ್ಗಿಹೋಗಿದ್ದಾರೆ. ಇನ್ನು ಕೆಲವರು ಮರೆಯಲು ಯತ್ನಿಸುತ್ತಿದ್ದಾರೆ. ನಿನ್ನೊಡನೆ ಆಡಬೇಕಾದ ಮಾತುಗಳನ್ನು ನಾವು ನಮ್ಮವರಲ್ಲೇ ಹಂಚಿಕೊಂಡು ಭಾರ ಇಳಿಸಿಕೊಳ್ಳುತ್ತಿದ್ದೇವೆ.

ನೆಲದಡಿಯಲ್ಲಿ ಹುದುಗಿರುವ ಜ್ವಾಲಾಮುಖಿಯಂತೆ ನಿನ್ನ ನೆನಪುಗಳು ಆಗಾಗ ಸ್ಪೂಟಗೊಳ್ಳದೇ ಬಿಡುವುದಿಲ್ಲ. ಹಾಗಾದಾಗ ಮೈಗೆ ಬಿಸಿನೀರು ಚಲ್ಲಿದಂತೆ ಬೆಚ್ಚಿ ಬೀಳುತ್ತೇವೆ. ಇರುವ ನೆನಪುಗಳಲ್ಲೇ ನಿನ್ನ ಮತ್ತೆ ಮತ್ತೆ ನೆನೆಯುತ್ತೇವೆ. 
ಅವನು ಅಲ್ಲಿಂದ ಕಳಿಸಿದ್ದು.

ನನ್ನ ಬಳಿಯಂತು ಹೇಳ ತೀರದಷ್ಟು ನಿನ್ನ ಕತೆಗಳಿವೆ ನಾನು ನಿನ್ನಾಪ್ತರಿಗೆ ಕೆಲವು ನಿಮಿಷಗಳಾದರೂ ನಿನ್ನ ಇರುವಿಕೆಯನ್ನು ತಂದುಕೊಡುತ್ತೇನೆ. ಅಮ್ಮ, ಅಪ್ಪ, ಆಯಿ, ಯೋಗಿಶ, ತಂಗಿ(ಚಿಕ್ಕಮ್ಮ) ಮಾವ, ಅಣ್ಣ, ಅತ್ತಿಗೆ, ಅಕ್ಕಂದಿರು, ಕುಟುಂಬದವರು, ಗೆಳೆಯರು, ಅಕ್ಕ,ಅಣ್ಣ  ಎಲ್ಲರೂ ಈ ಮೂಲಕ ನಿನಗೆ ಅವರ ನಗು ಮುಖ ತೋರಿಸುತ್ತಿದ್ದೇವೆ. ಮೇಲಿನಿಂದಲೆ‌ ನೋಡಿ ಸಮಾಧಾನಿಸು. ಇಂದು ಸ್ವರ್ಗದಲ್ಲಿ ಆಚರಿಸಿದ ನಿನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದೇವೆ ಅಲ್ಲೆ ನಗುತಿರು, ನಕ್ಷತ್ರವಾಗಿ ಮಿನುಗಿತಿರು.


ಇಂತಿ
ಸುಮಾ.

Comments

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...