Skip to main content

ನಾಗರಪಂಚಮಿ

ಪ್ರಾಣಿಗಳನ್ನು ಸಹ ಪೂಜಿಸಿ ದೇವರಂತೆ ಕಾಣುವ ಸಂಪ್ರದಾಯ ಮತ್ತು ಆಚರಣೆಗಳು ನಮ್ಮ ಭಾರತದಲ್ಲಿದೆ. ನಂದಿ, ಕಾಮಧೇನು, ನಾಗರ, ಇಲಿ, ವರಾಹ, ಕೂರ್ಮ, ಹುಲಿಯಪ್ಪ, ದತ್ತಾತ್ರೇಯನ ವಾಹನ ಶ್ವಾನ, ಹೀಗೆ ಹಲವಾರು ಪ್ರಾಣಿಗಳಿಗೂ ಪೂಜನೀಯ ಸ್ಥಾನ ಇದೆ. ಇಂದು ವಿಶೇಷವಾಗಿ ನಾಗದೇವರ ಹಬ್ಬ ನಾಗರಪಂಚಮಿ.

ನಾಗರಪಂಚಮಿ ಹಬ್ಬವನ್ನು ಒಂದೊಂದು ಕಡೆಯ ಒಂದೊಂದು ತರನಾಗಿ ವಿಭಿನ್ನ ಆಚರಣೆಗಳ ಮೂಲಕ ಆಚರಿಸಲಾಗುತ್ತದೆ. ಪ್ರಾದೇಶಿಕತೆಗೆ ತಕ್ಕಂತೆ ಆಚರಣೆಯ ವಿಧಾನಗಳು ಭಿನ್ನವಾಗುತ್ತದೆ.



ನಾಗರಪಂಚಮಿ ನಾಡಿಗೆ ದೊಡ್ಡದು ಎಂಬ ಮಾತು ಬಯಲುಸೀಮೆಯವರ ಬಾಯಿಂದ ಕೇಳಬಹುದು. ನಾಗರಪಂಚಮಿಯಂದು ಹಲವಾರು ಬಗೆಯ ಉಂಡೆಗಳನ್ನು ಮಾಡಿ ನೈವೇದ್ಯ ನೀಡುವುದು ಅವರ ಸಂಪ್ರದಾಯ. ನಾಗರ ಪ್ರತಿಮೆಗೆ ಹಾಲೆರೆದು ಅರಶಿನ ಹಚ್ಚಿ ಪೂಜಿಸಲಾಗುತ್ತದೆ.

ಮಹಾರಾಷ್ಟ್ರದ ಲಾಥೂರ್ ಜಿಲ್ಲೆಯಲ್ಲಿ ಜೀವಂತ ಹಾವುಗಳನ್ನು ತಂದು ಅವುಗಳಿಗೆ ಪೂಜೆ ಮಾಡಿ ಮತ್ತೆ ಅವನ್ನು ಕಾಡಿಗೆ ಬಿಡುವ ಸಂಪ್ರದಾಯವಿದೆ ಕೇಳಿದ್ರೆ ದಂಗಾಗುತ್ತೆ ಅಲ್ವಾ.?  ಮತ್ತೆ ನಾಗರ ಪಂಚಮಿ ಹಬ್ಬಕ್ಕೆ  ಅಕ್ಕ ತಮ್ಮಂದಿರ ಹಬ್ಬ ಅಂತಲೂ ಹೆಸರಿದೆ ಯಾಕೆ ಗೊತ್ತಾ?!
ಒಬ್ಬಾಕೆ ಹಾವು ಕಚ್ಚಿದ ತನ್ನ ತಮ್ಮನನ್ನು ಬದುಕಿಸಿಕೊಳ್ಳುತ್ತಾಳೆ. ಆ ಕಾರಣದಿಂದ ಈ ಹೆಸರು ಬಂದಿದೆ ಎನ್ನುತ್ತಾರೆ.



ನಾಗರಪಂಚಮಿಗೆ ಉಯ್ಯಾಲೆ ಕಟ್ಟಿ ಅದರಲ್ಲಿ ಕೂತು ಆಡುವುದು ಇದೆ. ಇನ್ನು ಶ್ರೀ ಕೃಷ್ಣ ಕಾಳಿಂಗ ಮರ್ದನ ಮಾಡಿದ ನೆನಪಿಗೂ ಈ ಹಬ್ಬ ಎನ್ನುತ್ತಾರೆ.  ಎಷ್ಟೋ ಕಡೆ ಲೆಕ್ಕಕ್ಕೆ ಸಿಗದಷ್ಟು ನಾಗರ ಹಾವಿನ ಚಿತ್ರವಿರುವ ಶಿಲೆಗಳಿವೆ. ಕುಕ್ಕೆ ಸುಭ್ರಮಣ್ಯ ನಾಗದೇವರಿಗೆ ಹೆಸರಾದ ದೇವಾಲಯ.  ಇನ್ನು  ಹಬ್ಬದ ಆಚರಣೆಯ ವಿಶೇಷ ತಿಂಡಿಗಳಾಗಿ ಪಾತೋಳಿ ಅಂದರೆ ಕಡುಬು ಮಾಡುತ್ತಾರೆ. ಅಕ್ಕಿ ಹಿಟ್ಟು, ಬೆಲ್ಲ ,ಕಾಯಿತುರಿ ಹೀಗೆ



ಆದರೆ ಯಲ್ಲಾಪುರದಲ್ಲಿ ಹಲಸಿನ ಬೇಳೆಯ ಒಬ್ಬಟ್ಟು ಮಾಡುವುದು ನಡೆದುಕೊಂಡು ಬಂದ ರೂಢಿ. ಇನ್ನು ಶಿರಸಿಯಲ್ಲಿ ನಾಗರಪಂಚಮಿಯಂದು ಮದರಂಗಿ ಅರೆದು ಮನೆಯವರೆಲ್ಲಾ ಕಾಲು ಕೈಗಳಿಗೆ ಮೆತ್ತಿಕೊಳ್ಳುವ ಪದ್ದತಿ ಇದೆ.ಹೀಗೆ ಹಲವಾರು ಬಗೆಯಲ್ಲಿ ನಾಗಪ್ಪನ ಪೂಜೆಗೆ ಅದರದೇ ಆದ ಬಗೆ ಬಗೆಯ ಆಚರಣೆಗಳಿವೆ. ನಾಗರ ನೆಡೆ ಎಂಬ ಪದವನ್ನು ನಾನು ಹಲವಾರು ಸಾರಿ ಕೇಳಿದ್ದೇನೆ ಹೀಗೆಂದರೆ. ನಾಗರ ಹಾವು ತಿರುಗಾಡುವ ಮಾರ್ಗ. ನಮ್ಮ ಕಡೆಯಲ್ಲಿ ನಾಗರ ಮೂರ್ತಿ ಇರುವ ಜಾಗ ಅಪವಿತ್ರವಾದರೆ ಮನೆಗೆ ಇರುವೆಗಳು ಬರುತ್ತವೆ.  ಕೆಲವೊಮ್ಮೆ ಹಾವು ಬಂದಿರುವ ಘಟನೆಯೂ ಇದೆ.

ಹಿಂದಿನವರು ನಡೆದುಕೊಂಡ ಆಚಾರ ವಿಚಾರಗಳಲ್ಲಿ ಒಂದಲ್ಲಾ ಒಂದು ವೈಜ್ಞಾನಿಕ ಸತ್ಯಗಳು ಅಡಗಿರುತ್ತವೆ. ಆ ಕಾರಣ ಎಲ್ಲ ಹಬ್ಬಗಳನ್ನು ಖುಷಿಯಿಂದ ಆಚರಿಸೋಣ ಓದುಗರೆಲ್ಲರಿಗೂ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ನಿಮ್ಮ ಊರಲ್ಲಿ ಯಾವತರದ ಆಚರಣೆ ಇದೆ. ಇದಕ್ಕು ಭಿನ್ನವಾಗಿ ಏನಾದರೂ ಇದೆಯ?

ಸುಮಾ.ಕಂಚೀಪಾಲ್.

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...