ನಾನು ಹಲವಾರು ಪೋಟೋಗಳನ್ನು ಈಗಾಗಲೇ ಪೋಸ್ಟ್ ಮಾಡಿದ್ದೇನೆ. ಭಾಸ್ಕರ ಪರ್ವ ಕಾರ್ಯಕ್ರಮದ ಬಗ್ಗೆ ನಿಮಗೆ ಈಗಾಗಲೇ ಎಲ್ಲ ತಿಳಿದಿದೆ. ಪೋಸ್ಟ್ ಮಾಡಿ ಮುಗಿಸಲಾಗದಷ್ಟು ಪಟ ಮತ್ತು ನೆನಪುಗಳು ನನ್ನೊಳಗಡೆ ತುಂಬಿಕೊಂಡಿದೆ. ನಾನು ಉಜಿರೆಯಲ್ಲಿ ಪತ್ರಿಕೋದ್ಯಮ ಕಲಿಯುವಾಗ ಧೀಮಹಿ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದೆ. ಅಲ್ಲಿಗೆ ಮತ್ತೆ ಹೋಗಿ ಉಳಿಯುತ್ತೇನೆ ಎಂಬ ಅಂದಾಜು ಸಹ ನಾನು ಮಾಡಿರಲಿಲ್ಲ. ಆದರೆ ಮತ್ತದೆ ಹಳೆ ನೆನಪು ಮರುಕಳಿಸಿತು, ಅಷ್ಟೇ ಅಲ್ಲ ಎಲ್ಲ ಗೆಳತಿಯರು ಜೂನಿಯರ್ಗಳು ಸಹ ಅಲ್ಲೇ ಸಿಕ್ಕರು.
ಕಾಲೇಜು ಕ್ಯಾಂಟಿನ್ನಲ್ಲಿ ತಿಂಡಿ ಸವಿದಾಯಿತು. ವಿಶೇಷ ಎಂದರೆ ನನ್ನ ಗುರು (ಪತಿ) ಕೂಡ ಇದೇ ಕಾಲೇಜಿನಲ್ಲಿ ಕಲಿತದ್ದು, ಆದರೆ ನಾವು ಒಟ್ಟಿಗೆ ಕಲಿತವರಲ್ಲ. ನಾನು ಸೇರಿದ ವರ್ಷ ಅವನಿಗೆ ಬೀಳ್ಕೊಡುಗೆ ಆಗಿತ್ತು. ಇದು ನಮ್ಮ ಸರ್ ಬೀಳ್ಕೊಡುಗೆ ಆದ ಕಾರಣ ನಾವಿಬ್ಬರು ಹಳೆ ವಿದ್ಯಾರ್ಥಿಗಳಾಗಿ ಹೋಗಿದ್ದೆವು. ಜೊತೆಗೆ ಅವನ ದೋಸ್ತರು ಕೂಡ ಜೊತೆಯಾದರು. ಎಷ್ಟೋ ದಿನದಿಂದ ಕೂಡಿಟ್ಟ ಮಾತೆಲ್ಲ ಒಟಗುಟ್ಟಿ ಆಯಿತು.
ಆದರೆ ಎಷ್ಟು ಮಾತಾಡಿದರು ಮುಗಿಯದ ಒಂದಷ್ಟು ಮಾತುಗಳು ಇನ್ನೂ ಉಳಿದಿದೆ. ನಾವು ಅಂತಷ್ಟೆ ಅಲ್ಲ ಎಲ್ಲರಿಗೂ ಹೀಗೆ ಆಗಿದೆ. ಹಳೆ ಸ್ನೇಹಿತರ ಹೊಸ ಬದುಕಿನ ತಿರುವುಗಳನ್ನೆಲ್ಲ ನೋಡಿ, ಕೇಳಿದ್ದಾಯಿತು.
ಸಾಕಷ್ಟು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಒಟ್ಟಿಗೆ ಸೇರಿದ್ದರು.
ಇದು ನಮ್ಮ ಬ್ಯಾಚ್ನ ಪೋಟೋ ಜೊತೆಯಲ್ಲಿ ಭಾಸ್ಕರ ಸರ್.
ಈ ಬಾರಿ ಕಾಲುಂಗುರದ ಜೊತೆ ಧೀಮಹಿಗೆ ಬಂದಿದ್ದೇ ಬೇರೆ ರೀತಿ ಖುಷಿ. ನಾನು ನಿಜಕ್ಕೂ ಇಷ್ಟು ಬೇಗ ಮದುವೆ ಆಗುತ್ತದೆ ಎಂದುಕೊಂಡಿರಲಿಲ್ಲ.
ಇನ್ನೊಂದು ಚಿಕ್ಕ ಖುಷಿ ಏನ್ಗೊತ್ತಾ ಅಂದೊಂದು ದಿನ ಕಾರ್ಯಕ್ರಮಕ್ಕೆ ಹೆಸರಿಡಲು ಚರ್ಚೆ ನಡಿತಿತ್ತು, ಎಲ್ಲರೂ ಒಂದೊಂದು ಹೆಸರು ಸೂಚಿಸಿದರು. ಆಗ ನಾನು ಹೇಳಿದ ಹೆಸರು ಪೋಲ್ ಮೂಲಕ ಆಯ್ಕೆ ಆಗಿತ್ತು. ಇದು ಹೇಳಿಕೊಳ್ಳುವಂತದಲ್ಲದಿದ್ದರು ಇದು ನನಗೆ ತುಂಬಾ ಖುಷಿಕೊಟ್ಟ ವಿಚಾರ ಹಾಗಾಗಿ ಬ್ಲಾಗ್ನಲ್ಲಾದರೂ ಇರಲಿ ಎಂದು ಬರೆದಿಟ್ಟೆ.
ಅಭಿನಂದನ ಗ್ರಂಥಕ್ಕೆ ನಾ ಬರೆದ ಲೇಖನ
ಉತ್ತರ ಹಾಗೂ ದಕ್ಷಿಣದ ಸೇತುವೆ
ಉತ್ತರ ಕನ್ನಡದ ಶಿರಸಿ ಕಾಲೇಜಿನಲ್ಲಿ ಕಲಿತ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಕ್ಷಿಣ ಕನ್ನಡದ ಉಜಿರೆಯಲ್ಲಿ ಪತ್ರಿಕೋದ್ಯಮ ಕಲಿತಿದ್ದಾರೆ. ಕಲಿಕೆಗೆಂದೇ ಹಲವಾರು ಮೈಲಿಯಿಂದ ತಂದೆ, ತಾಯಿ ತಮ್ಮೂರನ್ನು ತೊರೆದು ಬರುವವರಿಗೆ ಇರುವ ಒಂದೇ ಒಂದು ಭರವಸೆ ಎಂದರೆ ಅದು ಭಾಸ್ಕರ್ ಸರ್. ಅದು ಕೇವಲ ಭೌಗೋಳಿಕ ಪಯಣವಲ್ಲ ಅದೊಂದು ಕನಸುಗಳ ಪಯಣ. ಈ ಪಯಣಕ್ಕೆ ಭರವಸೆಯ ಸೇತುವೆಯಾಗಿ ನಿಂತವರು ಭಾಸ್ಕರ್ ಸರ್.
ನಾನು ಉಜಿರೆಗೆ ಸ್ನಾತಕೋತ್ತರ ಪದವಿಗೆ (Master Degree) ಬಂದಾಗ, ಅವರು ಬೋಧಿಸುತ್ತಿದ್ದುದು ಪದವಿ ವಿದ್ಯಾರ್ಥಿಗಳಿಗೆ ಮಾತ್ರ. ಹಾಗಾಗಿ, ಅವರ ತರಗತಿಯಲ್ಲಿ ಕುಳಿತು ಪುಸ್ತಕದ ಪುಟಗಳನ್ನು ತಿರುವಿ ಹಾಕುವ ಅವಕಾಶ ನನಗೆ ಸಿಗಲೇ ಇಲ್ಲ. ಆದರೆ ಸದಾ ರುಚಿಸುವ ಅವರ ಬದುಕಿನ ಪಾಠಗಳನ್ನು ಕೇಳಲು ಪಠ್ಯಪುಸ್ತಕದ ಹಂಗಿರಲಿಲ್ಲ. ಅವರು ನಮ್ಮ ವಿಭಾಗಕ್ಕೆ ಬಂದು ಮಾತನಾಡುತ್ತಿದ್ದುದು ಕೆಲವೇ ದಿನಗಳಾದರೂ, ಆ ಮಾತುಗಳು ವರ್ಷವಿಡೀ ಸ್ಫೂರ್ತಿ ನೀಡುವ ಶಕ್ತಿಯನ್ನು ಹೊಂದಿತ್ತು.
ಪುಟಿಯುವ ಹಂಬಲಕ್ಕೆ ಸ್ಫೂರ್ತಿ ಅವರು
ಸರ್ ಬಂದು ನಿಂತರೆ ಸಾಕು, ಅಲ್ಲಿ ಬರೀ ಸಿದ್ಧಾಂತಗಳಿರುತ್ತಿರಲಿಲ್ಲ. ಬದಲಾಗಿ, ನಮ್ಮದೇ ಮಣ್ಣಿನ ವಿದ್ಯಾರ್ಥಿಗಳು ಶೂನ್ಯದಿಂದ ಹೇಗೆ ಸಾಧನೆ ಮಾಡಿದರು, ಇಲ್ಲಿನ ಶಿಸ್ತಿಗೆ ಒಗ್ಗಿಕೊಂಡು ಹೇಗೆ ಬಾನೆತ್ತರಕ್ಕೆ ಬೆಳೆದರು ಎಂಬ ನಿದರ್ಶನಗಳು ಅವರ ಮಾತುಗಳಲ್ಲಿ ತಿಳಿಯುತ್ತಿತ್ತು.
ಯಾರದೋ ಬಗ್ಗೆ ಹೇಳುತ್ತಾ "ಅವನು ನಿಮ್ಮಂತೆಯೇ ಬಂದವನು, ಇಂದು ಉತ್ತಮ ಹುದ್ದೆಯಲ್ಲಿದ್ದಾನೆ" ಎಂದು ಅವರು ಒಬ್ಬ ವಿದ್ಯಾರ್ಥಿಯ ಸಾಧನೆಯನ್ನು ವಿವರಿಸುವಾಗ, ನಮ್ಮೊಳಗೂ ಏನೋ ಒಂದು ಸಂಚಲನ.
ಸೋತು ಕುಳಿತಿದ್ದ ಮನಸ್ಸುಗಳಿಗೆ ಆ ಮಾತುಗಳು ಚಾಟಿಯಂತೆ ಬೀಸುತ್ತಿದ್ದವು. ನಾವೂ ಕೂಡ ಹೀಗೆಯೇ ಬೆಳೆಯಬೇಕು, ಪುಟಿಯಬೇಕು ಎಂಬ ಹಠ ಹುಟ್ಟುತ್ತಿದ್ದುದೇ ಅವರ ಆ ಸಾಂದರ್ಭಿಕ ಮಾತುಗಳಿಂದ.
ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವವರಲ್ಲ. ತಲೆಮಾರುಗಳಿಗೆ ದಾರಿದೀಪವಾದವರು ಭಾಸ್ಕರ್ ಸರ್. ನಮಗೆ ಕಲಿಸಿದ್ದು ಪರೀಕ್ಷೆಯಲ್ಲಿ ಅಂಕ ಪಡೆಯುವುದನ್ನಲ್ಲ, ಬದಲಾಗಿ ಬದುಕಿನ ಪರೀಕ್ಷೆಯಲ್ಲಿ ಎದೆಗುಂದದೆ ನಿಲ್ಲುವುದನ್ನು.
ಇಂದು ನಾವು ಎಲ್ಲೇ ಇರಲಿ, ಹೇಗೆ ಇರಲಿ, ನಮ್ಮ ಯಶಸ್ಸಿನ ಸಣ್ಣ ಎಳೆಯಲ್ಲಿ ಭಾಸ್ಕರ್ ಸರ್ ಅವರು ಬಿತ್ತಿದ ಆ ಪುಟಿಯುವ ಹಂಬಲ ಜೀವಂತವಾಗಿದೆ. ಅಕ್ಷರ ಕಲಿಸಿದವರಿಗಿಂತ ಅರಿವು ಮೂಡಿಸಿದ ಗುರುಗಳೇ ಶ್ರೇಷ್ಠ ಎಂಬ ಮಾತಿಗೆ ಅವರು ಸಾಕ್ಷಿಯಾಗಿದ್ದಾರೆ.
ಸುಮಾ ಕಂಚೀಪಾಲ್
Comments
Post a Comment