Skip to main content

ಬೂದೆ ಕಳು ಹಬ್ಬ

ದೀಪಾವಳಿಯಲ್ಲಿ 'ಬೂದೆ ಕಳು' ಎಂಬ ಹಬ್ಬ ಬರುತ್ತದೆ. ಈ ಹಬ್ಬ ಇತ್ತೀಚಿನ ದಿನಗಳಲ್ಲಿ ಆಚರಣೆಯಲ್ಲಿ ಇಲ್ಲವಾದರೂ ಹಿಂದೆಲ್ಲ ಈ ಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸುತ್ತಿದ್ದರು ಎನ್ನುವುದಕ್ಕೆ ನಾನೇ ಸಾಕ್ಷಿ. ನಾನು ತುಂಬಾ ಚಿಕ್ಕವಳಿದ್ದಾಗ ನನ್ನ ಅಜ್ಜಿ ಮನೆಯಲ್ಲಿ ನಾನು ಈ ಹಬ್ಬದ ಆಚರಣೆಯ ಬಗ್ಗೆ ತಿಳಿದುಕೊಂಡೆ. ಇನ್ನು ನಮ್ಮ ಮನೆಯಲ್ಲಿ ಈ ರೀತಿ ಹಬ್ಬದ ಆಚರಣೆಯ ಬಗ್ಗೆ ನಾನು ವಿವರಣೆಯನ್ನು ಮಾತ್ರ ಕೇಳಿದ್ದೆ. 


ಆದರೆ ಇದನ್ನು ಕಣ್ಣಾರೆ ಕಂಡು ಭಾಗಿಯಾಗಿದ್ದು ಮಾತ್ರ ಅಜ್ಜನ ಮನೆಯಲ್ಲಿ. ಅಜ್ಜನ ಮನೆಯೆಂದರೆ ಅದೊಂದು ದ್ವೀಪ. ಸುತ್ತಲೂ ನೀರು, ನಡುವೆ ನನ್ನ ಅಜ್ಜನ ಮನೆ. 'ಅಮ್ಮ' ಎಂಬ ಬಳ್ಳಿಯ ಬೇರು ಊರಿಕೊಂಡಿದ್ದ ಜಾಗ ಅದು. ಅಲ್ಲಿ ಹೋದಾಗಲೆಲ್ಲ ತುಂಬಿ ಗಲಗುಡುವ ಮನೆ. ಹತ್ತಾರು ಜನರು ಒಟ್ಟಿಗೆ ಕೂಡಿ ಬಾಳುತ್ತಿದ್ದ ಮನೆ ದಬ್ಬೇಸಾಲು. ಮರುದಿನವಾದರೆ ಲಕ್ಷ್ಮೀ ಪೂಜೆ. ಹಿಂದಿನ ದಿನವೇ ಈ ಬೂದೆ ಕಳು ಹಬ್ಬ. ಯಾರಿಗೂ ನಷ್ಟವಾಗದಂತೆ ಚಿಕ್ಕ ಪುಟ್ಟ ವಸ್ತುಗಳನ್ನು ಮಾತ್ರ ಕದಿಯುವ ಹಬ್ಬ. ಈ ಕಳು ಮಾಡುವ ಹಬ್ಬ ಯಾಕೆ ಆಚರಣೆಯಲ್ಲಿ ಬಂತು? ಅದರ ಹಿಂದಿನ ಇತಿಹಾಸ ಮತ್ತು ಆಚರಣೆಗೆ ಕಾರಣ ಏನು ಎಂಬುದು ನನಗೆ ತಿಳಿದಿಲ್ಲ. ನಿಮಗೇನಾದರೂ ತಿಳಿದಿದ್ದರೆ ನೀವು ವಿವರಿಸಬಹುದು.



ದಬ್ಬೇಸಾಲು ಊರಿನಲ್ಲಿ ಹಳ್ಳಗಳನ್ನು ದಾಟುತ್ತಲೇ ಒಂದೊಂದು ಮನೆ ತಲುಪಬೇಕು. ಹೀಗಿರುವಾಗ ನಾನು ತುಂಬಾ ಚಿಕ್ಕವಳು, ಒಂದೆರಡನೇ ತರಗತಿ ಇರಬಹುದು. ನನ್ನ ಮಾವಂದಿರು ನನ್ನನ್ನೂ ಕರೆದುಕೊಂಡು ಈ ಬೂದೆ ಕಳು ಹಬ್ಬಕ್ಕೆ ಹೋದರು. ನಾನು ಎಷ್ಟು ದೂರ ನಡೆದೆ ಎಂಬುದಕ್ಕಿಂತ ಮಾವಂದಿರು ನನ್ನನ್ನು ಎಷ್ಟು ಜೋಪಾನವಾಗಿ ಹಳ್ಳ ದಾಟಿಸಿದರು ಎಂಬುದೇ ಇಲ್ಲಿ ಮುಖ್ಯ ವಿಷಯ. ನನಗೆ ನೆನಪಿದ್ದದ್ದು ಮಾತ್ರ ಸುತ್ತ ಹತ್ತಾರು ಜನರ ತೋಟಕ್ಕೆ ನುಗ್ಗಿ ಎಳನೀರು ಕಡಿದು ನಾವೆಲ್ಲ ಕುಡಿದದ್ದು. ಅಷ್ಟಾದ ಮೇಲೆ ಯಾರ ಮನೆಯ ವಸ್ತುವನ್ನು ಕದ್ದಿರುತ್ತೇವೋ ಅವರ ಮನೆಯ ಮುಂದೆ ಇರುವ ತುಳಸಿ ಕಟ್ಟೆಯ ಹತ್ತಿರ ಹೋಗಿ 'ಗೋವಿಂದ' ಎಂದು ಕೂಗುವುದು.


 ಅದಾದ ಮೇಲೆ ಅಲ್ಲಿನವರು ನಮಗೆ ಅವಲಕ್ಕಿ ಕೊಟ್ಟರು. ನಾವೆಲ್ಲರೂ ಒಂದು ಲೇಯರ್‌ ಎಳನೀರು, ಇನ್ನೊಂದು ಲೇಯರ್‌ ಅವಲಕ್ಕಿ. ಇನ್ನು ಈ ದೀಪಾವಳಿ ಹಬ್ಬವನ್ನು ನಾವು 'ಅವಲಕ್ಕಿ ಹಬ್ಬ' ಎಂದೇ ಹೆಚ್ಚಾಗಿ ಕರೆಯುವುದು. ಹೀಗೆ ಒಂದಾದ ಮೇಲೆ ಇನ್ನೊಂದನ್ನು ಏರಿಸುತ್ತಲೇ ಹೋದೆವು. ಮರ ಹತ್ತುವ ತಾಕತ್ತು ಮತ್ತು ಊರು ಸುತ್ತುವ ಮಜ, ಆಗಿನ ಉತ್ಸಾಹ ಎಲ್ಲವೂ ಅಂದಿನ ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಇನ್ನು ಅದೇ ದಿನ ರಾತ್ರಿ ನಮ್ಮ ಮನೆಗೂ 'ಕಳು' ಮಾಡುವುದಕ್ಕೆ ಕೆಲವರು ಬರುತ್ತಿದ್ದರು. ಅದೇ ಊರಿನಲ್ಲಿದ್ದ ಕಾಮು ಮನೆಯವರು ಬಂದು ತುಳಸಿ ಪೀಠದ ಸುತ್ತ ಸುತ್ತಿ ಗೋವಿಂದ ಹಾಕುತ್ತಿದ್ದದ್ದನ್ನು ನೆನೆಸಿಕೊಂಡರೆ ಇನ್ನಷ್ಟು ಖುಷಿ. ನಾವು ಅಡಗಿ ಕುಳಿತು ಅವರಿಗಿಂತ ಮೊದಲು ಗೋವಿಂದ ಹೇಳಿ ಕಾಯಿ ಒಡೆಯಲು ಕಾದು ಕುಳಿತುಕೊಳ್ಳುತ್ತಿದ್ದೆವು. ಈಗ ರಜಾ ದಿನಗಳಲ್ಲಿ ಮನೆಗೆ ಹೋಗುವುದನ್ನು ಬಿಟ್ಟರೆ ಮತ್ತೆ ಕೆಲಸಕ್ಕೆ ಮರಳಿ ಬರಬೇಕು ಎನ್ನುವ ಆಲೋಚನೆಯೊಂದನ್ನು ಬಿಟ್ಟರೆ ಇವುಗಳನ್ನು ಮೆಲುಕು ಹಾಕುವುದು ಮಾತ್ರ. 


ನಂತರ ದಿನ ಕಳೆದಂತೆ ಹಬ್ಬದ ಕಳೆ ಮಾಸುತ್ತಾ ಬಂತು. ಆದರೂ ಜನುಮಕ್ಕೆ ಆಗುವಷ್ಟು ನೆನಪಿನ ಬುತ್ತಿಗಳನ್ನು ಕೊಟ್ಟ ಅಜ್ಜನಮನೆ ಮತ್ತು ನನ್ನ ಬಾಲ್ಯವನ್ನು ನಾನು ಸದಾ ಹೆಮ್ಮೆಯಿಂದ ಸ್ವೀಕರಿಸುತ್ತೇನೆ.

ಸುಮಾ ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...