Skip to main content

ಬೂದೆ ಕಳು ಹಬ್ಬ

ದೀಪಾವಳಿಯಲ್ಲಿ 'ಬೂದೆ ಕಳು' ಎಂಬ ಹಬ್ಬ ಬರುತ್ತದೆ. ಈ ಹಬ್ಬ ಇತ್ತೀಚಿನ ದಿನಗಳಲ್ಲಿ ಆಚರಣೆಯಲ್ಲಿ ಇಲ್ಲವಾದರೂ ಹಿಂದೆಲ್ಲ ಈ ಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸುತ್ತಿದ್ದರು ಎನ್ನುವುದಕ್ಕೆ ನಾನೇ ಸಾಕ್ಷಿ. ನಾನು ತುಂಬಾ ಚಿಕ್ಕವಳಿದ್ದಾಗ ನನ್ನ ಅಜ್ಜಿ ಮನೆಯಲ್ಲಿ ನಾನು ಈ ಹಬ್ಬದ ಆಚರಣೆಯ ಬಗ್ಗೆ ತಿಳಿದುಕೊಂಡೆ. ಇನ್ನು ನಮ್ಮ ಮನೆಯಲ್ಲಿ ಈ ರೀತಿ ಹಬ್ಬದ ಆಚರಣೆಯ ಬಗ್ಗೆ ನಾನು ವಿವರಣೆಯನ್ನು ಮಾತ್ರ ಕೇಳಿದ್ದೆ. 


ಆದರೆ ಇದನ್ನು ಕಣ್ಣಾರೆ ಕಂಡು ಭಾಗಿಯಾಗಿದ್ದು ಮಾತ್ರ ಅಜ್ಜನ ಮನೆಯಲ್ಲಿ. ಅಜ್ಜನ ಮನೆಯೆಂದರೆ ಅದೊಂದು ದ್ವೀಪ. ಸುತ್ತಲೂ ನೀರು, ನಡುವೆ ನನ್ನ ಅಜ್ಜನ ಮನೆ. 'ಅಮ್ಮ' ಎಂಬ ಬಳ್ಳಿಯ ಬೇರು ಊರಿಕೊಂಡಿದ್ದ ಜಾಗ ಅದು. ಅಲ್ಲಿ ಹೋದಾಗಲೆಲ್ಲ ತುಂಬಿ ಗಲಗುಡುವ ಮನೆ. ಹತ್ತಾರು ಜನರು ಒಟ್ಟಿಗೆ ಕೂಡಿ ಬಾಳುತ್ತಿದ್ದ ಮನೆ ದಬ್ಬೇಸಾಲು. ಮರುದಿನವಾದರೆ ಲಕ್ಷ್ಮೀ ಪೂಜೆ. ಹಿಂದಿನ ದಿನವೇ ಈ ಬೂದೆ ಕಳು ಹಬ್ಬ. ಯಾರಿಗೂ ನಷ್ಟವಾಗದಂತೆ ಚಿಕ್ಕ ಪುಟ್ಟ ವಸ್ತುಗಳನ್ನು ಮಾತ್ರ ಕದಿಯುವ ಹಬ್ಬ. ಈ ಕಳು ಮಾಡುವ ಹಬ್ಬ ಯಾಕೆ ಆಚರಣೆಯಲ್ಲಿ ಬಂತು? ಅದರ ಹಿಂದಿನ ಇತಿಹಾಸ ಮತ್ತು ಆಚರಣೆಗೆ ಕಾರಣ ಏನು ಎಂಬುದು ನನಗೆ ತಿಳಿದಿಲ್ಲ. ನಿಮಗೇನಾದರೂ ತಿಳಿದಿದ್ದರೆ ನೀವು ವಿವರಿಸಬಹುದು.



ದಬ್ಬೇಸಾಲು ಊರಿನಲ್ಲಿ ಹಳ್ಳಗಳನ್ನು ದಾಟುತ್ತಲೇ ಒಂದೊಂದು ಮನೆ ತಲುಪಬೇಕು. ಹೀಗಿರುವಾಗ ನಾನು ತುಂಬಾ ಚಿಕ್ಕವಳು, ಒಂದೆರಡನೇ ತರಗತಿ ಇರಬಹುದು. ನನ್ನ ಮಾವಂದಿರು ನನ್ನನ್ನೂ ಕರೆದುಕೊಂಡು ಈ ಬೂದೆ ಕಳು ಹಬ್ಬಕ್ಕೆ ಹೋದರು. ನಾನು ಎಷ್ಟು ದೂರ ನಡೆದೆ ಎಂಬುದಕ್ಕಿಂತ ಮಾವಂದಿರು ನನ್ನನ್ನು ಎಷ್ಟು ಜೋಪಾನವಾಗಿ ಹಳ್ಳ ದಾಟಿಸಿದರು ಎಂಬುದೇ ಇಲ್ಲಿ ಮುಖ್ಯ ವಿಷಯ. ನನಗೆ ನೆನಪಿದ್ದದ್ದು ಮಾತ್ರ ಸುತ್ತ ಹತ್ತಾರು ಜನರ ತೋಟಕ್ಕೆ ನುಗ್ಗಿ ಎಳನೀರು ಕಡಿದು ನಾವೆಲ್ಲ ಕುಡಿದದ್ದು. ಅಷ್ಟಾದ ಮೇಲೆ ಯಾರ ಮನೆಯ ವಸ್ತುವನ್ನು ಕದ್ದಿರುತ್ತೇವೋ ಅವರ ಮನೆಯ ಮುಂದೆ ಇರುವ ತುಳಸಿ ಕಟ್ಟೆಯ ಹತ್ತಿರ ಹೋಗಿ 'ಗೋವಿಂದ' ಎಂದು ಕೂಗುವುದು.


 ಅದಾದ ಮೇಲೆ ಅಲ್ಲಿನವರು ನಮಗೆ ಅವಲಕ್ಕಿ ಕೊಟ್ಟರು. ನಾವೆಲ್ಲರೂ ಒಂದು ಲೇಯರ್‌ ಎಳನೀರು, ಇನ್ನೊಂದು ಲೇಯರ್‌ ಅವಲಕ್ಕಿ. ಇನ್ನು ಈ ದೀಪಾವಳಿ ಹಬ್ಬವನ್ನು ನಾವು 'ಅವಲಕ್ಕಿ ಹಬ್ಬ' ಎಂದೇ ಹೆಚ್ಚಾಗಿ ಕರೆಯುವುದು. ಹೀಗೆ ಒಂದಾದ ಮೇಲೆ ಇನ್ನೊಂದನ್ನು ಏರಿಸುತ್ತಲೇ ಹೋದೆವು. ಮರ ಹತ್ತುವ ತಾಕತ್ತು ಮತ್ತು ಊರು ಸುತ್ತುವ ಮಜ, ಆಗಿನ ಉತ್ಸಾಹ ಎಲ್ಲವೂ ಅಂದಿನ ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಇನ್ನು ಅದೇ ದಿನ ರಾತ್ರಿ ನಮ್ಮ ಮನೆಗೂ 'ಕಳು' ಮಾಡುವುದಕ್ಕೆ ಕೆಲವರು ಬರುತ್ತಿದ್ದರು. ಅದೇ ಊರಿನಲ್ಲಿದ್ದ ಕಾಮು ಮನೆಯವರು ಬಂದು ತುಳಸಿ ಪೀಠದ ಸುತ್ತ ಸುತ್ತಿ ಗೋವಿಂದ ಹಾಕುತ್ತಿದ್ದದ್ದನ್ನು ನೆನೆಸಿಕೊಂಡರೆ ಇನ್ನಷ್ಟು ಖುಷಿ. ನಾವು ಅಡಗಿ ಕುಳಿತು ಅವರಿಗಿಂತ ಮೊದಲು ಗೋವಿಂದ ಹೇಳಿ ಕಾಯಿ ಒಡೆಯಲು ಕಾದು ಕುಳಿತುಕೊಳ್ಳುತ್ತಿದ್ದೆವು. ಈಗ ರಜಾ ದಿನಗಳಲ್ಲಿ ಮನೆಗೆ ಹೋಗುವುದನ್ನು ಬಿಟ್ಟರೆ ಮತ್ತೆ ಕೆಲಸಕ್ಕೆ ಮರಳಿ ಬರಬೇಕು ಎನ್ನುವ ಆಲೋಚನೆಯೊಂದನ್ನು ಬಿಟ್ಟರೆ ಇವುಗಳನ್ನು ಮೆಲುಕು ಹಾಕುವುದು ಮಾತ್ರ. 


ನಂತರ ದಿನ ಕಳೆದಂತೆ ಹಬ್ಬದ ಕಳೆ ಮಾಸುತ್ತಾ ಬಂತು. ಆದರೂ ಜನುಮಕ್ಕೆ ಆಗುವಷ್ಟು ನೆನಪಿನ ಬುತ್ತಿಗಳನ್ನು ಕೊಟ್ಟ ಅಜ್ಜನಮನೆ ಮತ್ತು ನನ್ನ ಬಾಲ್ಯವನ್ನು ನಾನು ಸದಾ ಹೆಮ್ಮೆಯಿಂದ ಸ್ವೀಕರಿಸುತ್ತೇನೆ.

ಸುಮಾ ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...