Skip to main content

ಹಳೆ ಲೇಖನಕ್ಕೆ ಪ್ರಕಟಣೆಯ ಭಾಗ್ಯ!

ಅಷ್ಟಕ್ಕೂ ನಾವು ಮದುವೆ ಆಗಿದ್ದೇ ಬರೋಬ್ಬರಿ ಚುನಾವಣೆಯ ಕಾಲಗತಿಯಲ್ಲಿ.  ನಾವು ಅಂದರೆ ಮತ್ಯಾರೂ ಅಲ್ಲ, ನಾನು ಮತ್ತು ಸುಮಾ.  ಇಬ್ಬರೂ ಮಾಧ್ಯಮದಲ್ಲಿ, ಹೇಳಿಕೇಳಿ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವುದು ಮತದಾನ ಮುಗಿದರೂ ನಾಕು ದಿನ ರಜೆ ಹಾಕಲು ಅನುವು ಮಾಡಿರಲಿಲ್ಲ. ಚುನಾವಣೆ ಮುಗಿದು, ಸರ್ಕಾರ- ಮಂತ್ರಿ ಮಂಡಲ ರಚನೆಯೂ ಆಗಿಹೋದ ಮೇಲಾದರೂ ಒಂದು ಕೈ ನೋಡೇಬಿಡೋಣ ಎಂದು ಹೊರಟೆವು. ನಮಗೆ ಬೇಕಿದ್ದು, ಅದಾಗೇ ಕೂಡಿಬಂದದ್ದು ಎಲ್ಲವೂ ಸೇರಿ ಒಂದು ರಾತ್ರಿ ಕಳೆದು ಬೆಳಗು ಕೂಗುವದರಲ್ಲಿ ಒಂದು ಮುತ್ತಿನ ನಗರಿ! 



ನಮ್ಮ ಸಮಯಕ್ಕೆ ರೈಲು, ರೈಲಿನ ಸಮಯಕ್ಕೆ ನಾವು ಸೆಟ್ ಆಗುವುದಿಲ್ಲ ಎಂದು ಅಳೆದು ತೂಗಿ ಕೊನೆಕ್ಷಣದಲ್ಲಿ ಬಸ್ ಮೆಟ್ಟಿಲು ಹತ್ತುವ ನಿರ್ಧಾರ ಮಾಡಿದ್ದಾಯಿತು. ಮೊದಲು ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ ಟಿಎಸ್ಆರ್‌ಟಿಸಿ ಬಸ್‌ ಪರಿಶೀಲಿಸಲಾಗಿ ಬಸ್‌ಗಳ ಚಿತ್ರಗಳೇ ನಮ್ಮನ್ನು ಭ್ರಮನಿರಸನ ಮಾಡಿದ್ದು ಸುಳ್ಳಲ್ಲ. ತೆಲಂಗಾಣದ ಲಹರಿ ಹೆಸರಿನ ಬಸ್‌ಗಳು ನಮ್ಮ ರಾಜಹಂಸ ಇದ್ದಹಾಗೆ, ಆದರೆ ನಮ್ಮ ಯಲ್ಲಾಪುರದಿಂದ ಕಾರವಾರಕ್ಕೋ, ಹುಬ್ಬಳ್ಳಿಗೋ ಬುರುಬುರುನೇ ತಿರುಗುವ, ಕೊನೆಗೆ ಕೊರೋನಾಕ್ಕಿಂತ ಮೊದಲು ಕಮ್ಮಾಣಿಯೋ ಕೆಳಾಸೆಗಳೆಂಬೋ ಮೂಲೆ ಮೂಲೆಯ ಊರುಗಳಿಗೆ ಓಡುವ ಬಸ್‌ಗಳೇ ಇವಕ್ಕಿಂತ ಚೆನ್ನ. ಆ ಲೆಕ್ಕದಲ್ಲಿ ನಮ್ಮ ಕೆಎಸ್ಆರ್‌ಟಿಸಿ ಎಷ್ಟೋ ಬೆಸ್ಟ್.   ನಮ್ಮನ್ನು ಸುರಕ್ಷಿತವಾಗಿ ತಲುಪಿಸುವ ಹೊಣೆ ಕೆಎಸ್ಆರ್‌ಟಿಸಿಯ ಐರಾವತ ಸೀಟಿನ ಮೇಲೇ ಬಿತ್ತು ಬಿಡಿ.
ಅವಿಭಜಿತ ಆಂಧ್ರಪ್ರದೇಶವು ತೆಲಂಗಾಣವಾಗಿ ಬೇರ್ಪಟ್ಟ ಮೇಲೆ ನಾನು ತೆಲುಗಿನ ನೆಲ ಮೆಟ್ಟುತ್ತಿರುವುದು ಎರಡನೇ ಸಲ. ಕಾರಣ ಅಕ್ಕ, ಭಾವ ಮತ್ತು ಮುದ್ದು ಅಮೋಘವರ್ಷ. ಹಿಂದಿನ ಬಾರಿಯದ್ದು ಕೆವಿ ತಿರುಮಲೇಶರೇ ಅಕ್ಷಯ ಕಾವ್ಯವಾಗಿ ಹರಿಯುತ್ತಿದ್ದ ಕ್ಷಣಗಳ ದಿನಗಳು. ನಂತರ ಬರೆದದ್ದು ಭಾಳ ಕಡಿಮೆ. ಆಗ ಹೈದರಾಬಾದು ತೆಲಂಗಾಣಕ್ಕೂ ಆಂಧ್ರಕ್ಕೂ ಸಮಿಶ್ರ ರಾಜಧಾನಿಯಾಗಿದ್ದರೆ ಈ ಬಾರಿಯ ಹೈದರಾಬಾದಲ್ಲಿ ಆಂಧ್ರಕ್ಕೆ ಜಾಗ ಇರಲಿಲ್ಲ, ಇದಷ್ಟೇ ಹೊಸ ಬದಲಾವಣೆ. ತಿರುಮಲೇಶರಂತೂ ಮುದ್ದಾಂ ನನ್ನಲ್ಲಿ ಎಲ್ಲಿದ್ದರೋ ಅಲ್ಲೇ ಇದ್ದಾರೆ. 

ಮುಂಜಾನೆಯ ಬೆಳಕು ಬಸ್ ಕಿಟಕಿ ಸರಿಸಿಕೊಂಡು ಮೆಲ್ಲಮೆಲ್ಲನೆ ಕಣ್ಣುರೆಪ್ಪೆ ಸೀಳಿ ಓ..ಹೈದರಾಬಾದು ಬಂದೇ ಬಿಡ್ತಾ ಎಂಬ ಪ್ರಶ್ನೆಗೆ ಉತ್ತರ ಹೊತ್ತು ಬಂದಿದ್ದು ತೆಲುಗಿನ ಅನೇಕಾನೇಕ ಬೋರ್ಡುಗಳು. ನಾವು ಎಂಜಿಬಿಎಸ್‌ನಲ್ಲಿ ಬಸ್ ಇಳಿದಂತೆ ಬಂದಿದ್ದ ಬಾವ, ಊರಿಂದ ಕೆಂಪು ಬಸ್ ಹತ್ತಿ ಬಂದಿದ್ದ ಅಪ್ಪ ಬಂದುಮುಟ್ಟಿದ್ದೇ ತಡ, ಹೊರಟಿತು ಸವಾರಿ.

ನೀವು ಬೇಡ ಬೇಡ ಅಂದರೂ ಹೈದರಾಬಾದಿನ ಜೊತೆ ಮನಸ್ಸು ಬೆಂಗಳೂರಿನ ಹೋಲಿಕೆ ಮಾಡಲು ಶುರುಮಾಡುತ್ತದೆ. ಅತ್ತ ಹಳೆ ಹೈದರಾಬಾದಿನಿಂದ ಇತ್ತ ಸಿಕಂದರಾಬಾದಿನವರೆಗೆ ಓಡಾಡುವಾಗ ಸಿಕ್ಕ ಸಿಕ್ಕ ರಸ್ತೆ ಸರ್ಕಲ್ಲುಗಳಲ್ಲಿ ಇಲ್ಲಿ ನಾನಿದ್ದೇನೆ, ಇಲ್ಲಿಯೂ ನಾನಿದ್ದೇನೆ, ಇಲ್ಲಂತೂ ನಾನೇ ಇದ್ದೇನೆ ಎನ್ನುವ ಪ್ರತಿಮೆಗಳು ನಿಮ್ಮನ್ನೇ ಹಿಂಬಾಲಿಸಿ ಹಿಂಬಾಲಿಸಿ ಬರುತ್ತವೆ. ಪ್ರತಿಮಾ ರಾಜಕೀಯಕ್ಕೆ ಸಿಲುಕಿದ ತೆಲುಗು ರಾಜ್ಯದ ಸರ್ಕಲ್ಲುಗಳು ಚಂದ ಅನಿಸುತ್ತ ನಿಧನಿಧಾನವಾಗಿ ಯಾಕಿಷ್ಟೆಲ್ಲ ಪ್ರತಿಮೆಗಳೆಂಬ ಊಹೆ ಹುಟ್ಟಿಸುತ್ತವೆ. ಎನ್‌ಟಿಆರ್‌ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಳಕೆಗೆ ಬಂದ ಪ್ರತಿಮೆ ಪ್ರತಿಷ್ಠಾಪನೆಯ ಹುಕಿಯಿಂದ ಹಿಂದಿನ ವರ್ಷ ಚುನಾವಣೆಯ ನಿಮಿತ್ತ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ಗೆ ಒಂದೇ ಒಂದು ಹೈದರಾಬಾದ್ ಪೇಟೆಯಲ್ಲಿ 22,376 ಪ್ರತಿಮೆಗಳ ತಲೆಬೊಂಡಗಳನ್ನು ಮುಸುಕುಧಾರಿಗಳನ್ನಾಗಿ ಮಾಡುವ ಕಷ್ಟ ಕೊಟ್ಟಿತ್ತು ಎಂಬಲ್ಲಿಗೆ ಬಂದುಮುಟ್ಟಿದೆ.  


ಮುಂದಿನ ಭಾಗದಲ್ಲಿ; ತೆಲಂಗಾಣದಲ್ಲಿ ನೆನಪಾಗಿದ್ದು ಕರ್ನಾಟಕದ ವಿಧಾನಸೌಧ!

ಗುರುಗಣೇಶ ಡಬ್ಗುಳಿ
ಚಿತ್ರಗಳೂ ಅವರದ್ದೇ

vaividhya7@gmail.com

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...