Skip to main content

ಅಕ್ಕೋರಾಗೋದು ಸುಲಭ ಅಲ್ಲ

ಅಕ್ಕೋರಾಗುವುದು ತುಂಬಾ ಕಷ್ಟ ಇದೆ. ನಾನು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪರ್ಧೆಗೆ ನನ್ನ ಚಿಕ್ಕಮ್ಮನ ಮಗಳನ್ನು ಕರೆದುಕೊಂಡು ಹೋಗಿದ್ದೆ. ಎಲ್ಲಾ ಮಕ್ಕಳಿಗೂ ರಜ. ಅರವತ್ತಕ್ಕೂ ಹೆಚ್ಚು ಮಕ್ಕಳು ಅಲ್ಲಿ ಹಾಜರಿದ್ದರು. ಒಂದೊಂದು ತರಗತಿಯವರನ್ನು ಒಂದೊಂದು ಕಡೆ ಕೂರಿಸಿದ್ದರು. ಅವರ ಗಲಾಟೆಯನ್ನು ಕೇಳಲಾಗದೆ ಸಭಾ ಭವನವೇ ಅಳುತ್ತಿತ್ತು. ಕೆಳಗಡೆ ದೇವಸ್ಥಾನ. ಆ ದೇವರಿಗೂ ಅನಿಸಿರಬಹುದು ಅಬ್ಬಾ! ಈ ಮಕ್ಕಳು ಎಷ್ಟು ಗಲಾಟೆ ಮಾಡ್ತಾರೆ ಅಂತ. ಮದುವೆ ಮನೆಯಲ್ಲಾದರೂ ಇನ್ನಷ್ಟು ಶಾಂತ ವಾತಾವರಣ ಇರುತ್ತದೆ. 
ಆದರೆ, ಇಲ್ಲಿ ಮಾತ್ರ ಕೋಲಾಹಲ. ಕಾರ್ಯಕ್ರಮ ಆಯೋಜನೆ ಮಾಡುವವರು ಮುಂಜಾಗ್ರತಾ ಕ್ರಮವಾಗಿ ಮಕ್ಕಳನ್ನು ಹೇಗೆ ಕೂರಿಸಬೇಕು? ಎಲ್ಲಿ ಕೂರಿಸಬೇಕು? ಅವರ ವಯೋಮಾನದ ಮಿತಿಯನ್ನು ಎಷ್ಟರವರೆಗೆ ನಿಗದಿಪಡಿಸಬೇಕು ಇದ್ಯಾವುದನ್ನೂ ಸರಿಯಾಗಿ ನಿಗದಿ ಮಾಡಿಕೊಂಡಿರಲಿಲ್ಲ. ಆ ಕಾರಣಕ್ಕಾಗಿ  ಇನ್ನಷ್ಟು ಗಲಿಬಿಲಿಯಾಯಿತು. ಜಡ್ಜ್ ಬಂದು ಇನ್ನು ನಾನು ತೀರ್ಪು ನೀಡಬಹುದಾ ಎಂದರು. ಮೂರು ಗಂಟೆಗೆ ಮಕ್ಕಳು ಚಿತ್ರ ಬಿಡಿಸಲಾರಂಭಿಸಿದ್ದಾರೆ ಎಂಬ ಕಲ್ಪನೆ ಅವರದು. ನಾಕು ಗಂಟೆಯಾದರೂ ಇನ್ನೂ ಮಕ್ಕಳ ಕೈಗೆ ಬಣ್ಣ ಅಂಟಿರಲಿಲ್ಲ.  ಇನ್ನು ಅವರ ಜೊತೆಗೂಡಿ ಬಂದ ಪಾಲಕರದ್ದು ಇನ್ನೊಂದು ತರ. ರಜಾ ದಿನಗಳಲ್ಲೇ ಕೆಲಸ ಮಾಡಿಕೊಳ್ಳಬೇಕು ಎಂದುಕೊಂಡ ಅದೆಷ್ಟೋ ಜನರಿಗೆ ನಿಗದಿತ ಸಮಯ ಜಾರುತ್ತಿರುವುದು ಇನ್ನಷ್ಟು ತಲೆಕೆಡಿಸಿತು. 
ಮನೆಯಿಂದ ಹೆಂಡತಿಯ ಪೋನು ಬರಲಾರಂಬಿಸಿದರೆ, ಇನ್ನು ಕೆಲವರಿಗೆ ಸಂಜೆಯ ಅಡುಗೆ ನೆನಪಾಗುತ್ತಿರಬಹುದು. ಇನ್ನು ಹೊರಗಡೆ ಜೋರು ಮಳೆ. ಕೆಳಗಡೆ ದೇವಸ್ಥಾನದ ಬಟ್ಟರ ಹೆಂಡತಿ ಮಿಕ್ಸಿ ಕೂಗಿಸುತ್ತಿದ್ದರು. ಅಯ್ಯೊ ಒಂದು ಮನುಷ್ಯ ಎಷ್ಟು ಅಂತ ತಡೆದುಕೊಳ್ಳುವುದು ಎನಿಸತೊಡಗಿತು. ಆ ಮಕ್ಕಳನ್ನು ನೋಡಿ‌ ನನ್ನ ಬಾಲ್ಯವೂ ನೆನಪಾಯಿತು. ಇನ್ನು ಪಾಲಕರಲ್ಲೇ ಕೆಲವರು ಟೀಚರ್ಸ್ ಇದ್ದರು. ಅವರೆಲ್ಲ ಕಪ್ಪೆಯನ್ನು ಕೊಳಗದಲ್ಲಿ ತುಂಬಿದಂತೆ ಒಬ್ಬೊಬ್ಬರನ್ನೇ ಕೂಗಿ, ಕಿರುಚಿ, ಗದರಿ ಕೂರಿಸುವ ಪ್ರಯತ್ನ ಮಾಡಿದರು. 

ಅದು ಬರಿ ಪ್ರಯತ್ನವೇ ಆಗಿತ್ತು. "ಅವರೆಲ್ಲರ ಚೀರಾಟದ ನಡುವೆ ಇವರದ್ದೂ ಒಂದು ಇಲ್ಲಿಂದ ಹೊರಟೇ ಬಿಡ್ಬೇಕು" ಅಂತ ಅನಿಸಿತು. ಎಲ್ಲವನ್ನೂ ನೋಡುತ್ತಾ ಕುಳಿತ ನನಗೆ ಮನಸಿನಲ್ಲೇ ಪ್ರಾಥಮಿಕ ಶಾಲೆಯ ಟೀಚರ್ಸ್‌ಗಳ ನೆನಪಾಯಿತು. ಅದಕ್ಕೆ ಆಗಲೇ ಹೇಳಿದ್ದು ಅಕ್ಕೋರಾಗುವುದು ಕಷ್ಟ ಎಂದು. ಅಂತೂ ಯಾರೋ ಒಬ್ಬ ದೇವಸ್ಥಾನದ ಕಮೀಟಿಯವ ಬಂದು ಮೈಕು ಸರಿಮಾಡಿಕೊಟ್ಟ. ಈಗ ಸ್ಪರ್ಧೆ ಆರಂಭವಾಗಿದೆ. 

ಅದಾದ ಮೇಲೆ ಬೇಗ ಬೇಗ ಮಕ್ಕಳಿಗೆ ಸರಿಯಾಗಿ ಚಿತ್ರ ಬಿಡಿಸಲೂ ಅವಕಾಶ ಕೊಡದಂತೆ ಅರ್ಧಗಂಟೆಯಲ್ಲಿ ಮುಗಿಸೇಬಿಟ್ಟರು. ಕೆಲ ಮಕ್ಕಳು ಗಾಬರಿಯಾದರು, ಇನ್ನು ಕೆಲವರು ಸಮಯ ಸಾಲುತ್ತಿಲ್ಲ ಎಂದು ಅತ್ತರು, ಪಾಲಕರು ಹೀಗೆ ಮಾಡಬಾರದಿತ್ತು ಎಂದು ಹೀಗೆಲ್ಲ ಮಾಡುತ್ತಾ ಸ್ಪರ್ಧೆ ಮುಗೀತು. ನಂತರ ಪಾಲಕರಿಗೆ ಸಂಗೀತ ಕುರ್ಚಿ ಇತ್ತು. ಅದಾದ ನಂತರ ಬಹುಮಾನ ಕೊಟ್ರು ನಮ್ ಹುಡ್ಗಿ ವರ್ಷಾ ಮೊದಲ ಬಹುಮಾನ ಪಡೆದುಕೊಂಡಿದ್ದು ಈ ದಿನದ ಖುಷಿಯಾಗಿತ್ತು.


ಸುಮಾ ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...