Skip to main content

ಅನಾಮಿಕ‌ ಜಲಪಾತದ ಹಾದಿ

udyavani digitalಯಾವುದೋ ಅನಾಮಿಕ ಜಲಪಾತ ಒಂದರ ಬುಡದಲ್ಲಿ ನಿಂತು ನಾನಿದನ್ನು ನಿಮಗೆ ವಿವರಿಸುತ್ತಿದ್ದೇನೆ ಎಂದು ಊಹಿಸಿಕೊಳ್ಳಿ. ನೀವೂ ನನ್ನೊಟ್ಟಿಗೆ ಈ ಪಯಣದಲ್ಲಿ ಸಾತ್ ನೀಡಿದ್ದೀರಿ ಎಂದು ನಾನು ಊಹಿಸಿಕೊಳ್ಳುತ್ತೇನೆ.‌ ಆಗ ಈ ಬರಹ ನಿಮಗೆ ನಾನು ನಡೆದುಹೋದ ದಾರಿಯ ಪ್ರತಿಯೊಂದು ಚಿತ್ರಣವನ್ನು ಬಿಂಬಿಸುತ್ತಾ ಹೋಗುತ್ತದೆ.

ತೀರಾ ಕಡಿದಾದ ಮಣ್ಣು ರಸ್ತೆಯಲ್ಲಿ ನಾವು ಒಂದಷ್ಟು ಜನ ಸಾಹಸ ಮಾಡಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದೇವೆ. ದಾರಿಯ ಉದ್ದಕ್ಕೂ ಆಗಾಗ ಮಳೆ ಮತ್ತು ರಸ್ತೆಯ ಅಕ್ಕಪಕ್ಕದಲ್ಲಿ ರಬ್ಬರ್ ಮರಗಳೇ ಹಾಸಿಕೊಂಡಿವೆ. ಇಷ್ಟರ ನಡುವೆ ಕೆಲವರಿಗೆ ರೇನ್ ಕೋಟ್ ಇದೆ ಇನ್ನು ಕೆಲವರಿಗಿಲ್ಲ.  ರಸ್ತೆ ಕಳೆದು ಇನ್ನೇನು ಜಲಪಾತ ಬರುತ್ತದೆ ಎನ್ನುವಷ್ಟರಲ್ಲಿ ಆ ಜಲಪಾತಕ್ಕೆ ಹೋಗುವ ಮಾರ್ಗವನ್ನೇ ಬಂದ್ ಮಾಡಲಾಗಿದೆ ಎಂಬ ಸುದ್ದಿ ಸಿಕ್ಕಿತು. ಪ್ರವಾಸಿಗರಿಗೆ ಅಲ್ಲಿ ನಿಷೇಧವಿದೆ ಎಂದು ತಿಳಿದಾಗ ಕೊಂಚ ಬೇಸರವೆನಿಸಿದರೂ ಜೊತೆಯಲ್ಲಿ ಇದ್ದ ಘಟಾನುಘಟಿಗಳು ಯಾರದೋ ಪರವಾನಿಗೆ ಪಡೆದು ಅಂತು ಮುಂದೆ ಸಾಗಿದೆವು.

ತಲುಪುವ ಸ್ಥಳಕ್ಕಿಂತ ಹೊರಟಿದ್ದ ಹಾದಿಯ ಫಜೀತಿಯೇ ಬೇರೆ ಅನುಭವ ನೀಡುತ್ತಿದೆ. ಅಷ್ಟು ಕಲ್ಲು ಗುಡ್ಡೆಯಂತ ದಾರಿ, ಮೂಗಿನ ನೇರಕ್ಕೆ ಘಟ್ಟಗಳು, ಅಲ್ಲಲ್ಲಿ ಒಬ್ಬರೇ ದಾಟುವಷ್ಟು ಚಿಕ್ಕ ಸೇತುವೆ, ನೀರಿನ ಚಿಕ್ಕ ಚಿಕ್ಕ ಝರಿಗಳು, ಇಷ್ಟರ ನಡುವೆ ಅದ್ಭುತದಲ್ಲಿ ಅದ್ಬುತ ಅನುಭವ ನೀಡಿದ್ದು ಅಚ್ಚರಿಯ ಜೀವಿ ಇಂಬಳ ( ಜಿಗಣೆ, ಲೀಚ್ ) ರಕ್ತ ಬೀಜಾಸುರನ ವಂಶಸ್ಥರಾದ ಇವರು ಹಾದಿಯ ತುಂಬೆಲ್ಲ ಪೂರ್ಣ ಕುಂಭ ಸ್ವಾಗತಕ್ಕೆ ನಿಂತಹಾಗೆ ಕಾದುನಿಂತಿವೆ. ಬಿಸಿ ನೆತ್ತರದ ಹಸಿವಾಸನೆಗೆ ಕಚ್ಚಿದ ಜಾಗದಲ್ಲೇ ಮತ್ತೆ ಮತ್ತೆ ಕಚ್ಚುತ್ತಿವೆ. ದಾರಿಯೇ ಇಲ್ಲದ ಮಾರ್ಗದಲ್ಲಿ ಸೊಂಪಾಗಿ ಬೆಳೆದಿದ್ದ ಹಸಿರು ಸೊಪ್ಪಿನ ಗಿಡಗಳು, ಮೈತುಂಬಾ ಮುಳ್ಳು ತುಂಬಿರುವ ಬಿದಿರಿನ ಎಳೆಗಳು ಮೈಸೀಳುತ್ತಿವೆ. ನಾವು ತೊಟ್ಟ ಬಟ್ಟೆಗಳನ್ನು ಮುಳ್ಳಿನ ಹಾರ ಅಪ್ಪಿಕೊಂಡು ಅಲ್ಲಲ್ಲಿ ತೂತಾಗಿಸಿತ್ತು.


ಇವುಗಳ ಅಪ್ಪುಗೆಯನ್ನು ತಪ್ಪಿಸಿಕೊಂಡು ಮುಂದೆ ಸಾಗಿದ್ದೇವು.‌ ದೂರದಲ್ಲಿ ಒಂದು ಮನೆ ಕಾಣಿಸುತ್ತಿದೆ. ಮನೆ ಎದುರೆಲ್ಲಾ ಹಣ್ಣಡಿಕೆಗಳು ಹಾಸಿಕೊಂಡಿವೆ. ನೀರು ಬೇಕು ಎಂದು ಕೂಗಿದೆವು. ಒಳಗಿನಿಂದ ಒಬ್ಬ ಹೆಂಗಸು ಬಂದಳು. “ಏನು ಬಂದಿದ್ದು”? ಜಲಪಾತಕ್ಕಾ ಎಂದು ಕೇಳಿದಾಗ ಎಲ್ಲರೂ ಒಟ್ಟೊಟ್ಟಿಗೆ ಹೂಂ ಗುಟ್ಟೆವು. “ಹಾಗಾದರೆ ಈ ಕಲ್ಲುಪ್ಪಿನ ಕೋಲು ಹಿಡಿದುಕೊಳ್ಳಿ ದಾರಿಯಲ್ಲಿ ಉಪಯೋಗವಾಗುತ್ತದೆ” ಎಂದರು. ಅದನ್ನು ನಾನು ಮತ್ತು ನನ್ನ ಸ್ನೇಹತರಿಬ್ಬರು ಕೈಯಲ್ಲಿ ಹಿಡಿಕೊಂಡು ಮತ್ತೆ ನಡೆಯಲು ಪ್ರಾರಂಭಿಸಿದ್ದೇವೆ.


ಒಬ್ಬೊಬ್ಬರಿಗೆ ಸರಾಸರಿ ಐವತ್ತು ಇಂಬಳ ಹತ್ತಿ ರಕ್ತ ಹೀರಿದ್ದವು. ಮುಂದೆ ಸಾಗುವ ಹಾಗೂ ಇಲ್ಲ ಹಿಂದೆ ಬರುವ ಹಾಗೂ ಇಲ್ಲ ಅದು ಇಂದು ಅಮಾವಾಸ್ಯೆ ಮನೆಗೆ ತಲುಪುವುದು ಅನುಮಾನ ಎಂದು ಅಂದುಕೊಂಡಿದ್ದೇವು. ಹಿಂದಿರುಗಿ ಬರುವಾಗ  ದಾರಿ ತಪ್ಪುವುದಂತು ಖಚಿತಾಂತ ಗೊತ್ತಾಗಿದೆ. ದಾರಿಯಲ್ಲಿ ಸಿಕ್ಕ ಕೆಂಪು ಅಣಬೆಗಳನ್ನೇ ಗುರುತಾಗಿಸಿಕೊಳ್ಳೋಣ ನೆನಪಿಡಿ.‌ ಅಷ್ಟರಲ್ಲಿ ನೀರು ರಭಸವಾಗಿ ಬೀಳು ಸದ್ದು ಕೇಳುತ್ತಿದೆ. ನಿಮಗು ಕೇಳಿಸಿತಾ! ಹಾಗಾದರೆ ಏಕೆ ತಡ ಎಂದು ಕಾಲಿನ ವೇಗ ಹೆಚ್ಚಿಸಿ ಓಡಿ ಓಡಿ ಹೋಗುತ್ತಿದ್ದೇವೆ. ಆಹಾ ನೀರು ಕಂಡಿತು ಇದೇ ನಮ್ಮ ಜಲಪಾತ ಎಂದು ಖುಷಿಯಲ್ಲಿ ಹುಡುಗಿಯರೆಲ್ಲ ನೀರಿಗಿಳಿದೆವು. ಆದರೆ ರಾಮ, ಮತ್ತು ಹರಿ ಗೆ ಇನ್ನು ಚಂದದ ದೃಶ್ಯದ ಪೂರ್ವ ಕಲ್ಪನೆಯು ನೆನಪಾಗಿದೆ. ಇದಲ್ಲಾ ಬನ್ನಿ ಮುಂದೆ ಜಲಪಾತವಿದೆ ಎಂದಾಗ ಇಷ್ಟು ದೂರ ನಡೆದದ್ದೇ ಸಾಕು ಎಂಬ ಉದಾಸೀನ ನನಗೆ. ಆದರು ಅವರು ಹೇಳುವ ಮಾತು ಕೇಳಿ ಮತ್ತೆ ಎದ್ದು ಹೊರಟಿದ್ದೇವೆ.‌


ಏನೋ ಮಳೆ ಬಂದಂತ ಅನುಭವ ನೀರಿನ ತುಂತುರು ಮೈ ಸೋಕುತ್ತಿದೆ. ತಂಪು ತಂಪು ಗಾಳಿ ಅಲೆ ತಬ್ಬುತ್ತಿದೆ. ಕಣ್ ಅರಳಿಸಿ ಬೆರಗಿನಿಂದ ನೋಡುತ್ತಿದ್ದೇವೆ. ಎಷ್ಟೆತ್ತರ ನೋಡಿದರೂ ಬೀಳುವ ನೀರಿನ ಮೂಲ ಸ್ಥಾನ ಕಾಣುತ್ತಿಲ್ಲ. ಪೂರ್ತಿ ತಲೆ ಎತ್ತಿ ನೋಡಿದರೆ ಮೈಮೇಲೆ ನೀರು ಹಾರಿ ಬರುತ್ತಿದ್ದ ಅನುಭವವಾಗುತ್ತಿದೆ. ಕಲ್ಲು ಗೋಡೆಯ ಮಧ್ಯದಿಂದ ನೀರು ಮೆಟ್ಟಿಲಿಳಿಯುತ್ತಿದೆ. ಇಷ್ಟರ ‌ನಡುವೆ ನಾವೆಲ್ಲಾ ಒಮ್ಮೆ ಮೂಖರಾಗಿ ಪೃಕ್ರತಿ ಸೌಂದರ್ಯ ಸವಿದೆವು. ಮತ್ತದೇ ಕೆಂಪು ಅಣಬೆಗಳ ಜಾಡು ಹಿಡಿದು ನಮ್ಮ ಗೂಡು ಸೇರಿದೆವು…ಬೆಳ್ತಂಗಡಿಯ ಬೊಳ್ಳೆ ಜಲಪಾತದ ಪಯಣದ ಅನುಭವ…ಅಂದ ಹಾಗೆ ನೀವೇನಾದರೂ ಈ ಜಲಪಾತಕ್ಕೆ ಹೋಗುವ ಮನಸ್ಸು ಮಾಡಿದ್ರೆ..ಮೊದಲು ಪರವಾನಿಗೆ ಅಗತ್ಯ ಎಂಬುದನ್ನು ನೆನಪಿಟ್ಟುಕೊಳ್ಳಿ.


ಸುಮಾ.ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...