Skip to main content

ಚೌಕಿಯ ಹೊರಗಿನ ಪ್ರಸಂಗ

ಪ್ರಸಂಗದ ಹೆಸರು ಮತ್ತು ಅದರ ಪಾತ್ರದ ವಿವರಣೆ ಹೊರಗೆ ನಡೆಯುತ್ತಿದ್ದರೆ, ಒಳಗೆ ಗಣಪತಿ ಪೂಜೆಯ ವಾದನ ರಂಗಸ್ಥಳದ ಎದುರು ಕೂತವರ ಕಿವಿ ನೆಟ್ಟಗಾಗಿಸುತ್ತದೆ. ಹಿರಿಯರ ಬಾಯಲ್ಲಿದ್ದ ಕವಳ ನುಗ್ಗಾಗಿ ರಸ ಉಗಿದು ಒಂದು ಹೊಸ ಕವಳದ ಪಾನು ತಯಾರಾಗುತ್ತದೆ. ಒಳಗಿನ ಚಂಡೆ ಶಬ್ದಕ್ಕೆ ಕೂರ್ಚೆಯಿಂದ ಕೆಳಬಿಟ್ಟ ಕಾಲುಗಳು ತಂತಾನೆ ಕುಣಿಯಲು ಆರಂಭಿಸುತ್ತದೆ.

ನುಡಿಜೇನು.‌ 11/ 11/21

ಕೈಯಲ್ಲಿ ಪಾಪ್ ಕಾರ್ನ ಹಿಡಿದ, ಬೋರಾಗಿ ಕೂತ ಮಕ್ಕಳು ನಿಧಾನಕ್ಕೆ ಪ್ಲಾಸ್ಟಿಕ್ ಕೂರ್ಚೆಯ ಮೇಲೆ ಎದ್ದು ನಿಂತು ವೇದಿಕೆಯಲ್ಲಿ ಏನಾಗುತ್ತಿದೆ ಎಂದು ಬೆರಗುಗಣ್ಣಿನಿಂದ ಕಾಯುತ್ತಾರೆ. ಪೊಗಡಿ ಸುತ್ತಿದ ಹಿಮ್ಮೇಳ ವಾದಕರು, ಮೇಜು ಕೂರ್ಚಿತಂದಿಡುವ ಪರಿಚಾರಕರು‌, ಲೈಟ್ ಮ್ಯಾನ್ ಇವರೆಲ್ಲರ ಓಡಾಟ ಮೊದಲು ವೇದಿಕೆಯಲ್ಲಿ ಗೋಚರವಾಗುತ್ತದೆ. ಚಂಡೆಯ ಒಂದೇ ಒಂದು ಬಡಿತಕ್ಕೆ ಸ್ಪೀಕರ್ ಪಕ್ಕ ಕೂತ ಕೆಲವರು ಕೊಂಚ ದೂರ ಸರಿಯುತ್ತಾರೆ.

ವೇದಿಕೆಯ ತುಂಬೆಲ್ಲ ಹಾಸಿಕೊಂಡಿದ್ದ ಕರೆಂಟ್ ವಯರ್ ಗಳು ಕುಣಿಯುವವನ ಕಾಲಿಗೆಡವಬಾರದು ಎಂಬ ಕಾಳಜಿಯಿಂದ ಕೆಳ ಕೂತ ಕೆಲವರು ಸೂಚನೆಕೊಟ್ಟು ಅದನ್ನು ಪಕ್ಕಕ್ಕೆ ಎಳೆಯುತ್ತಾರೆ. ಹಿಮ್ಮೇಳದವರ ಹಿಂದಿನ ನೀಲಿ ಪರದೆ ನಿಧಾನಕ್ಕೆ ಅಲುಗಾಡಲು ಪ್ರಾರಂಭವಾಗುತ್ತದೆ. ಆಗ ಕೂತವರ ಕಣ್ಣುಗಳು ಪರದೆಯಂಚಿನ ತುದಿಗೆ ಹೋಗುತ್ತದೆ. ಯಾಕೆಂದರೆ ಪರದೆಹಿಂದಿನ ಕಲಾವಿದನ ಬಣ್ಣದ ವೇಷದ ಸೋಗು ಅವರನ್ನ ಕಾಡುತ್ತಿರುತ್ತದೆ. ಗೆಜ್ಜೆಯ ಶಬ್ಧ ಮೈ ಜುಮುಗುಡಿಸುತ್ತದೆ‌.

ಅರರೆ ನಿನ್ನಯ ಮಹಿಮೆಯನು ಪೊಗಳಲಳವಲ್ಲssss..
ಧರಣಿಯನು ಪೊತ್ತಿರ್ದ ದೇssವ ಜಗದೀಶ
ಧರೆಯೊಳು ವಿಷೇಶ
ಎಂಬ ಪದ ಕೇಳುತ್ತದೆ. ,


ಈ ಪದ್ಯ ಮುಗಿಯುತ್ತಿದ್ದಂತೆ ಪಾತ್ರವೊಂದು ಹೊರಬಿದ್ದು ಹೆಜ್ಜೆ ಹಾಕಿ ಒಂದೆರಡು ಅರ್ಥ ಉಸುರುತ್ತಿದ್ದಂತೆಯೇ. ಇತ್ತ ಮಗುವೊಂದು ಹಠ ಹಿಡಿದು ಅಳತೊಡಗುತ್ತದೆ. ಅಮ್ಮ ಮಗುವನ್ನು ಸಂತೈಸಲಾಗದೆ ತನ್ನ ಗಂಡನ ಕೈಗೆ ಮಗುವನ್ನಿತ್ತು ಮುಖ ತಿರುವುತ್ತಾಳೆ. ಅವನು ಮಗುವನ್ನು ಸಲ್ಪ‌ ದೂರ ಕೊಂಡೊಗಿ ಸಮಾಧಾನ ಮಾಡಿ ತನ್ನ ಹೆಗಲ ಮೇಲೆ ವರಗಿಸಿ ತಂದು ಹೆಂಡತಿಯ ಮಡಿಲಲ್ಲಿ ಮಲಗಿಸುತ್ತಾನೆ. ತನ್ನ ಕೈಚೀಲದಲ್ಲಿದ್ದ ಪುಟ್ಟ ವಸ್ತ್ರ ಒಂದನ್ನು ತೆಗೆದು ಪುಟ್ಟ ಮಗುವಿನ ದೇಹ ಮುಚ್ಚುತ್ತಾಳೆ.

ಇತ್ತ ವೇದಿಕೆಯಲ್ಲಿ ಪ್ರಸಂಗ ಮುಂದುವರೆಯುತ್ತಿರುತ್ತದೆ.‌ ಇನ್ನೇನು ಕೂತ ಮಕ್ಕಳಿಗೆಲ್ಲ ಬೋರಾಗುತ್ತಿದೆ ಎನ್ನುವ ಹೊತ್ತಿಗೆ ಹಾಸ್ಯ ಪಾತ್ರದವರ ಆಗಮನವಾಗುತ್ತದೆ‌.  ಮಾಣಿಗಳು ಮಾಡುವ ಅತಿ ಆಧುನಿಕ ಯಕ್ಷಗಾನ ಹಾಸ್ಯಕ್ಕೆ ಕೂತವರೆಲ್ಲ ನನಗೆಗಡಲಲ್ಲಿ ತೇಲುತ್ತಾರೆ. ಇಷ್ಟಾಗಿ ಪ್ರಸಂಗದ ಮಧ್ಯ ಕರೆಂಟ್ ಹೋದರೆ ಶೀಟಿ, ಚಪ್ಪಾಳೆ, ಬ್ಯಾಟರಿ ಬೆಳಕು ಅತ್ತ ಹೆಣ್ಣು ಪಾತ್ರ ಹಾಕಿದ ಗಂಡು ಅದೇ ಸಮಯಕ್ಕೆ ಸೀರೆ ಎತ್ತಿ ಕೂರುತ್ತಾನೆ. ಆಗಲೇ ಹೊರಹೋಗಿ ಸುಟ್ಟ ಜೋಳ ಕೈಯಲ್ಲಿ ಹಿಡಿದುಬರಲು ಒಳ್ಳೆಯ ವೇಳೆ. ಪ್ರಸಂಗ ಮುಗಿಯುವ ಹೊತ್ತಿಗೆ ಅರ್ಧ ಬೆಳಗಾಗುತ್ತದೆ.

ರಂಗ ನಾಯಕ ರಾಜೀವ ಲೋಚನ
ರಮಣನೆ ಬೆಳಗಾಯಿತ್ ಏಳೆನ್ನುತ


ಎಂಬ ಪದ್ಯದಿಂದ ಪ್ರಸಂಗ ಕೊನೆಯಾಗುತ್ತದೆ.‌


ಸುಮಾ.ಕಂಚೀಪಾಲ್

Comments

  1. ಬರಹ ಚೆನ್ನಾಗಿ ಮೂಡಿ ಬಂದಿದೆ.

    ReplyDelete
  2. ಬರವಣಿಗೆ ವಾಸ್ತವಿಕತೆಯಿಂದ ಕೂಡಿದೆ.ರಂಗಸ್ಥಲದ ಹೊರ ಜಗತ್ತು ಎನೆಲ್ಲ ಕೂತೂಹಲ ದಿಂದ ಕೂಡಿದೆ..ಓದುತ್ತಿದ್ದಂತೆ ತುಟಿಗಳಲ್ಲಿ ಮಂದಹಾಸ ಮೂಡುತ್ತದೆ......






    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...