Skip to main content

ದೀಪಾವಳಿ ಎಣ್ಣೆ ಸ್ನಾನ

"ಅಮ್ಮಾ ಅಂಟಂಟೂ ಬೇಡ ಎಣ್ಣೆ ಸ್ನಾನ ಚಳಿ ಅದೂ ಇಷ್ಟು ಬೆಳಿಗ್ಗೆ " ಎನ್ನುತ್ತಾ ದೊಡ್ಡ ಮಣ್ಣಿನ ಮನೆಯ ಸುತ್ತ ಅಮ್ಮ ಬಿಚ್ಚಿದ ಅಂಗಿ ಕೈಯಲ್ಲಿ ಹಿಡಿದು ಅರೆ ಬೆತ್ತಲಾಗಿ ಓಡುತ್ತಿದ್ದೆ. ದೀಪಾವಳಿಯ ಎಣ್ಣೆ ಸ್ನಾನಕ್ಕೆ ನನ್ನ ಬಾಲ್ಯದಲ್ಲಿ ಪ್ರತಿಸಲವೂ ಅಜ್ಜಿಯ ಮನೆಗೇ ಹೋಗುತ್ತಿದ್ದೆವು. ಅದು ಕೂಡುಕುಟುಂಬ ಮೂವತ್ತೆರಡು ಜನ. ಅಲ್ಲಿ ನಿತ್ಯವೂ ಹಬ್ಬವೇ ದೀಪಾವಳಿಗಂತೂ ಎಲ್ಲರ ನೆಂಟರೂ ಒಟ್ಟುಗೂಡಿ ಒಂದು ಮದುವೆ ಮನೆಯ ಅದ್ದೂರಿ ಅಲ್ಲಿ ಕಾಣುತ್ತಿತ್ತು.

ಎಲ್ಲರೂ ಸಾಲಾಗಿ ಶೇಡಿಯಿಂದ ಬರೆದ ಚಿತ್ರಗಳೆದರು ಚಾಪೆಯಮೇಲೆ ಕೂತು ಎಣ್ಣೆ ಹಚ್ಚಿಸಿಕೊಳ್ಳುವ ಮಜ ನೋಡಲು ಬಹಳ ಚಂದವಿತ್ತು. ಅದೇ ಶೇಡಿಯಲ್ಲಿ ಪುಟ್ಟ ಮಕ್ಕಳ ಕಾಲನ್ನು ನೆನೆಸಿ ಮರದ ಕಂಬಗಳ ಮೇಲೇ ಅಚ್ಚು ಹಾಕುತ್ತಿದ್ದರು ನನ್ನ ಪುಟ್ಟ ಕಾಲನ್ನು ನೋಡಿ ನಾನು ಈಗಲೂ ಖುಷಿಪಡುತ್ತಿದ್ದೆ. ಆದರೆ ಇತ್ತೀಚೆಗೆ ಹೊಸಮನೆ ಕಟ್ಟಿಸಿ ಎಲ್ಲರೂ ಬೇರೆ ಬೇರೆಯಾಗಿರುವುದು ಬೇಸರದ ಸಂಗತಿಯಾದರೂ ದೀಪಾವಳಿ ಹಬ್ಬದ ಸಂಭ್ರಮಕ್ಕೇನು ಕೊರತೆಇಲ್ಲ
ಯಾಕೆಂದರೆ ಮೂಲ ದೇವರಿರುವ ಮನೆಯಲ್ಲಿ ಪ್ರತೀ ದೀಪಾವಳಿಗೂ ಲಕ್ಷ್ಮಿ ಪೂಜೆ ಮಾಡುತ್ತಾರೆ ಅದಕ್ಕೆ ನಾವೆಲ್ಲ ತಪ್ಪದೆ ಹೋಗುತ್ತೇವೆ. ತುಪ್ಪದ ಅವಲಕ್ಕಿ ಹಬ್ಬದ ವಿಶೇಷ ತಿನಿಸು. ಸಿಹಿ ಎದ್ದು ಹೊಡೆಯುವ ಹಾಗೆ ಕರಿಯ ಬಣ್ಣದ ಹಳ್ಳಿ ಬೆಲ್ಲ ಆಕಳ ತುಪ್ಪವನ್ನು ಅವಲಕ್ಕಿಗೆ ಸೇರಿಸಿ ಕಲೆಸಿ ಕೈ ತುತ್ತು ಕೊಡುತ್ತಾರೆ. ಅದ್ನು ತಿನ್ನುತ್ತಿದ್ದಂತೆ ಹಬ್ಬದ ಅಮಲೇರುವುದು. ನೋಡಿ ನಾನೀಗ ಬರೆಯುತ್ತಾ ಅದನ್ನು ನೆನಪಿಸಿಕೊಂಡೆನಲ್ಲ ನನಗೆ ಈಗಲೂ ಬಾಯಲ್ಲಿ‌ ನೀರೂರುತ್ತಿದೆ. ನೀವು ಒಮ್ಮೆ ಹಬ್ಬದ ಆಚರಣೆಗೆ ನನ್ನೂರಿಗೆ ಬಂದು ನೋಡಿ.


ದೀಪಾವಳಿಯ ಮೂರು ದಿನದಲ್ಲಿ ಒಂದು ದಿನ ನಮ್ಮ ಊರಲ್ಲಿ  ಹುಲಿಯಪ್ಪನ ಪೂಜೆ ಇರುತ್ತಿತ್ತು ನಾವು ಚಿಕ್ಕವರೆಲ್ಲಾ ಸೇರಿ ಸಾಲುಗಟ್ಟಿ ಕಾಡುದಾರಿಯಿಂದ ಹುಲಿಯಪ್ಪನ ಮೂರ್ತಿ ಇದ್ದಲ್ಲಿಗೆ ಹೋಗುವುದು ಒಂದು ಹರ್ಷ ಹಿಂದಿನ ದಿನ ರಾತ್ರಿ ನಾಳಿನ ಖುಷಿಯಲ್ಲಿ ನಿದ್ದೆ ಬರುತ್ತಿರಲಿಲ್ಲ. ಅಲ್ಲಿ ಹೋಗಿ ಮಾಡುವ ಮುಖ್ಯ ಕೆಲಸವೆಂದರೆ ದೇವರಿಗೆ ಒಡೆದ ಕಾಯಿಯ ನೀರನ್ನು ಕ್ಯಾನುಗಳಲ್ಲಿ ಹಿಡಿದಿಟ್ಟು ಜನರಿಗೆ ಹಂಚುತ್ತಿದ್ದರು. ಆ ಉರಿಬಿಸಿಲ ಬಯಲಲ್ಲಿ ಕಾಯಿ ನೀರು ಹೀರುವುದಿದೆಯಲ್ಲ ಆಹಾ!! ಅದರ ರುಚಿ ಹುಲಿಯಪ್ಪನ ಎದುರೆ ಬೇರೆಯದು ನಾವು ಮನೆಗೆ ಬಂದು ಕಾಯಿ ನೀರು ಕುಡಿದರೆ ಅದರಲ್ಲಿ ಆ ರುಚಿ ಸಿಗುತ್ತಿರಲಿಲ್ಲ.

ಈಗೆಲ್ಲಾ ಹಾಗಿಲ್ಲ ಕಾಲೇಜು ದೂರದ ಊರು ಮನೆಗೆ ಬಂದ ದಣಿವು ನಿದ್ದೆ ಮನೆಯಲ್ಲೇ ಹಬ್ಬದ ಊಟ ಬೂದೆ ಕಳುವು ಸಿಂಪಲ್ ಎಣ್ಣೆ ಸ್ನಾನ ಅದು ಮನೆಯಲ್ಲೆ ಅಜ್ಜಿ ಮನೆಯ ಮಜ ಈಗಿಲ್ಲಾ.

ಸುಮಾ.ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...