Skip to main content

ನಾನು ಓದಿದ್ದು ಹೀಗೆ

ಹಾಸ್ಟೆಲ್ನಲ್ಲಿ ಸುಮ್ಮನೆ ಕೂತಿದ್ದಾಗ ಗೆಳತಿ ಮಧುರಾ ಮಂಜುನಾಥ ಕಾಮತ್ ಅವರು ಬರೆದ 'ಚಂದದ ಹಲ್ಲಿನ ಹುಡುಗಿ ಮತ್ತು 18 ಅವಳುಗಳ ಕತೆ' ಎನ್ನುವ ಪುಸ್ತಕ  ಕೈಗಿಟ್ಟು "ಸುಮಾ ಈ ಪುಸ್ತಕ ನಿನಗಾಗಿ, ಓದು ಎಂದಳು". ಪುಸ್ತಕದ ಮುಖಪುಟ ನೋಡುತ್ತಿದ್ದಂತೆ ತಲೆಕೆಳಗಾದೆ. ಆಕರ್ಷಕವಾಗಿತ್ತು. ಹೆಸರು ಓದಿದಾಗ ಇದೆಂತ ವಿಚಿತ್ರ ಹೆಸರಿನ ಪುಸ್ತಕ ಅನಿಸಿತು‌‌. ಪರಿವಿಡಿಗೆ ಹೋದಾಗ ಕೆಲವು ಸಣ್ಣಕತೆಗಳ ಗುಚ್ಛ ಇದು ಎನ್ನುವುದು ತಿಳಿದುಬಂತು.


ನಾನು ಸನ್ಯಾಸಿಯಾಗಲು ಹೊರಟಾಗ ಎಂಬ ಪುಸ್ತಕದ ಪ್ರಸ್ತಾಪದೊಂದಿಗೆ ದಿಗಂತನ  ಸಿನಿಮಾದ ಹಾಗಿರುವ ಈ ಕತೆಗಳು ನನ್ನನ್ನು ಸೆಳೆಯುತ್ತಾ ಸಾಗಿತು. ನಾನು ಪತ್ರಿಕೋದ್ಯಮ ಓದುತ್ತಿದ್ದೇನೆ ಕತೆ, ಕವಿತೆ, ಲೇಖನ ಮತ್ತು ನುಡಿಚಿತ್ರ ಬರೆಯಬೇಕು, ಅವು ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂಬ ಆಸೆ ಹೊಂದಿದ್ದವನು ಎಂದು ಬರೆದಿತ್ತು. ಈ ಸಾಲುಗಳನ್ನು ಓದಿದ ಮೇಲಂತು ನಾನೊಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ನನ್ನ ಆಸೆಗಳಿಗೆ ಸರಿಹೊಂದುವ ಮನೋಭಾವನೆಯನ್ನೇ ಈ ಪುಸ್ತಕವೂ ಹೊಂದಿದೆ ಎಂಬ ಹುಮ್ಮಸ್ಸಿನಲ್ಲಿ ಓದಲು ಶುರುವಿಟ್ಟೆ. ಮುನ್ನುಡಿಯೂ ಅವರದೇ ಇತ್ತು.

ಪರಿವಿಡಿ ತೆರೆದರೆ ಹದಿನೆಂಟು ಮೆಟ್ಟಿಲುಗಳು ಎಂದು ಹದಿನೆಂಟು ಹೆಸರು ಕಂಡಿತು. ಹಿಮಚಂದ್ರಿಕೆ, ಕಾಳಿಂಗ ಮರ್ದನ ಮತ್ತು ಹಲ್ನುಡಿ ವಿಶೇಷ ಎನಿಸಿತು. ಬಸ್ಸಿನ‌ ಕಂಡಕ್ಟರ್ ಮತ್ತು ಪಾಠಮಾಡುವ ಟೀಚರ್ ಹಾಗೂ ರೈಟರ್ ಗಳಿಗೆ ಅಷ್ಟು ಬೇಗ ಕಲ್ಯಾಣ ಭಾಗ್ಯವಿಲ್ಲ ಎಂಬ ಮಾತೊಂದು ಉಲ್ಲೇಖ ಮಾಡಿದ್ದನ್ನು ಕಂಡು ನನ್ನ ಸ್ಥಿತಿ ಏನಿರಬಹುದು ಎಂದು ಮನದಲ್ಲೇ ನಕ್ಕೆ. ಒಳ ನುಗ್ಗುತ್ತಿದ್ದಂತೆ ಸಾಲು ಸಾಲು ಪ್ರೇಮ ಪುರಾಣ. ಅದೆಷ್ಟು ಹುಡುಗಿಯರು ಜೀವನದಲ್ಲಿ ಇಣುಕಿ ಹೋದರೋ, ಅಂಗನವಾಡಿ ಟೀಚರ್ ಕತೆಯನ್ನು ಇದೆ ಸಾಲಿನಲ್ಲಿ ಸೇರಿಸಿದ್ದು ಚೂರು ಗೊಂದಲ ಎನಿಸಿತು‌.


ಬಸ್ಸಿನಲ್ಲಿ ತೋಳಮೇಲೆ ಒರಗಿದ ಕುವರಿ, ರಾತ್ರಿ ಹನ್ನೆರಡು ದಾಟಿದರೂ ಮುಗಿಯದ ಮಾತು. ಗೋವಾಕ್ಕೆ ಹೊರಟು ಕೇದಾರನಾಥ ತಲುಪಿದ ಕತೆ. ಹನಿಮೂನಿಗೆ ಬಂದಿದ್ದ ಶಿಮ್ಲಾ ಜೋಡಿಗಳ ಕತೆ, ತುಟಿಗುರುತು ಮೂಡಿದ ಪೇಪರ್ ಕಪ್ ಟೀ ಕತೆ, ಸಿಗಂದೂರಿನ ಅಪ್ಪೆಮಿಡಿಯ ಉಪ್ಪಿನಕಾಯಂತೆ ರುಚಿಯಾದ ಕತೆ,  ಮೂರು ಮಚ್ಚೆಯ ಹುಡುಗಿ ಹುಚ್ಚು ಹಿಡಿಸಿದ್ದು, ಕಡಲ ತೀರದ ಚಿಪ್ಪು, ನವಿಲು ಗರಿ ಕೊನೆಗೆ ಕೋಳಿ ಪುಕ್ಕವನ್ನು ಬಿಡದೆ ಒಪ್ಪಿಸಿದ್ದು, ಕಾಳಿಂಗ ಎಂಬ ಕರಿ ಬೈಕಿನ ಕತೆ, ಒಂದಕ್ಕಿಂತ ಒಂದು ಚಂದವಿತ್ತು. ಆದರೂ ಮೊದಲ ಮುತ್ತು ಎಂಬ ಕತೆಯ ಕುರಿತು ಆಲೋಚಿಸುವಂತಾಯಿತು. ಹತ್ತನೆ ಕ್ಲಾಸಿನ ಕ್ರಶ್ ಒಬ್ಬಳ ಕುರಿತು ಬರೆದು ಅವರಲ್ಲೇ ಈ ಪುಸ್ತಕದ ಮುನ್ನುಡಿ ಬರೆಯುವಂತೆ ಕೇಳಿದೆ ಎಂದಾಕ್ಷಣ. ಒಮ್ಮೆಲೆ ಕೊನೆ ಪುಟದಿಂದ ಮೊದಲ ಪುಟಕ್ಕೆ ಅವಳ ಹೆಸರು ತಿಳಿಯಲು ಪುಟ ತಿರುವಿಹಾಕದೆ ಇರಲು ಸಾಧ್ಯವಿಲ್ಲ. ಎಲ್ಲಾ ಓದುಗರು ಒಮ್ಮೆ ಪುಟತಿರುವುತ್ತಾರೆ. ಆದರೆ ಮುನ್ನುಡಿಯ ಬದಲು ಹಲ್ನುಡಿ ದೊರೆಯುವ ಮೋಜಿದೆ ನೀವು ಈ ಪುಸ್ತಕವನ್ನು ಒಂದೇ ದಿನದಲ್ಲಿ ಓದಬಲ್ಲಿರಿ.

ಸುಮಾ.ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...