Skip to main content

ಹೆಸರಿಸಲಾಗದ್ದು

ಶುಕ್ರವಾರ ದಿನಾಂಕ ಹದಿನಾರು ಬೆಳಿಗ್ಗೆ ಹಠಮಾಡಿ ಸತ್ತರೂ ಬದುಕಿದರೂ ಅವನನ್ನು ನೋಡುವುದೇ ಎಂಬ ಆಶಯದಿಂದ ಜಪಗುಡುವ ಮಳೆಯಲ್ಲಿ ಮನೆ ಬಿಟ್ಟೆವು. ಅಮ್ಮ ಮತ್ತು ನಾನು ಬಸ್ಸಿಲ್ಲದೆ ಯಾವುದೋ ಗಾಡಿ ಹತ್ತಿ ಬಂದು, ಮಾವನ ಮನೆಯಿಂದ ಕಾರಲ್ಲಿ ಹೊರಡುವಷ್ಟರಲ್ಲಿ ಬಿಪೀ ಲೋ ಆಗಿದೆ. ನಾಡಿ ಬಡಿತವಿಲ್ಲ. ಎಂಬ ಸುದ್ದಿ ಸಿಕ್ಕಿ ಇನ್ನಷ್ಟು ಗಟ್ಟಿಯಾಗಿ ಹೊರಡೊ ಹೊತ್ತಲ್ಲೆ ಕಾಗೆಗಳ ಹಿಂಡು ಕೂಗುತ್ತಿತ್ತು ಮರದೆತ್ತರಕ್ಕೆ ಕಣ್ಣು ಹಾಯಿಸಿ ಹಾಗೇ ಒಂದು ನೋಟ ನನ್ನೆಡೆಗೆ ಬೀರಿದ ಅಮ್ಮನ ಕಣ್ಣಲ್ಲಿ ನೀರು ತುಂಬಿತ್ತು.

ಅಲ್ಲಿಂದ ಹೊರಟು ಅರ್ಧದಾರಿ ಮುಟ್ಟಿದಾಗ ಹನ್ನೊಂದು ನಲವತ್ತೈದು ಕಾರು ನಿಲ್ಲಿಸಿದ್ದೆವು. ಅವನು ಉಸಿರು ನಿಲ್ಲಿಸಿದ್ದ. ನಾನು ಅಳು ನಿಲ್ಲಿಸಿದ್ದೆ. ಎಲ್ಲವೂ ಕಣ್ಣೆದೆರು ಒಮ್ಮಲೆ ಬಂದಂತಾಗಿ ಮೂಕಮಾತ್ರಳಾದೆ. ಅಲ್ಲಿಗೆ ಬರುವುದು ಬೇಡ ಎಂದರು ಹೋಗುವಷ್ಟರಲ್ಲಿ "ಬಾಡಿ ನೋಡುದಾದರೆ ಬನ್ನಿ" ಎಂದಾಗ ಹೃದಯವು ಒಂದೊಂದು ಹೋಳಾಗಿ ಹುಡುಕಿದರು ಜನ್ಮವಿಡಿ ಸಿಗದಷ್ಟು ಪುಡಿಯಾಗಿತ್ತು.

ತವಕದಲಿ ಐ ಸಿ ಯು ಹತ್ತಿರ ಹೋದೆ ಹಸಿರಂಗಿ ತೊಡಿಸಿದರು. ಹೋಗುವಷ್ಟರಲ್ಲಿ ಹತ್ತಾರು ವಾಲುಗಳ ನಡುವೆ ಮಲಗಿದ್ದ. ನಾಲಿಗೆ ಹೊರಚಾಚಿತ್ತು. ಕರುಳು ಕಿವುಚಿ ಬಂತು. ಮುಟ್ಟ ಬಹುದೇ ಎಂದು ಕೇಳಿದೆ ತಲೆ ಅಲುಗಾಡಿಸಿದರು. ಎರಡು ನಿಮಿಷ ಅವನ ರಕ್ತ ಕುಂದಿದ ಬಿಳಿ ಕೈಯಲ್ಲಿ ನನ್ನ ಕೈ ಹಿಡಿದು ಮನದ ಭಾವನೆಗಳೆಲ್ಲವನ್ನು ಹರಿಸಿದೆ. ಜನ್ಮವಿಡಿ ಜೊತೆಗಿರು ಖುಷಿಯಿಂದ ಹೋಗಿಬಾ ಎಂದೆ. ಮತ್ತೆ ಒಮ್ಮೆ ಮೇಲಿಂದ ಕೆಳಗೆ ನೋಡಿದೆ.



ಕತ್ತಿನ‌ ಕೆಳಭಾಗದಲ್ಲಿ ಒಂದು ಪಪ್ಪಾಯಿ ಹಣ್ಣಿನಷ್ಟು ಉಬ್ಬಿತ್ತು. ತುಟಿ ಬಿಳಿಗಟ್ಟಿತ್ತು ರಕ್ತ ಕನ್ನೆತ್ತರು ಕಂಡು ಕಣ್ಮುಚ್ಚಿದೆ. ಹೊರನೆಡೆಯಲು ಸೂಚಿಸಿದರು ನನ್ನ ನಗುಮೊಗ ತೋರಿಸಿಯೇ ಹೊರಬಿದ್ದೆ. ಅವನಮ್ಮನ ಎದುರು ಅಳಬೇಡ ಎಂದು ನನ್ನಮ್ಮನಿಗೆ ಗದರಿದೆ. ನನಗೆ ಅದೆಲ್ಲಿಂದ ಅಳು ನಿಂತಿತ್ತೊ ಗೊತ್ತಿಲ್ಲಾ ಎಲ್ಲರಿಗೂ ಸಮಾಧಾನ ಮಾಡಿದೆ.

ತೀರಾ ಆಪ್ತರಾದ ನಾನು ನನ್ನ ಮಾವ ಅಂದರೆ ಇವನ‌ ಅಣ್ಣ ಪ್ರವೀಣ ತುಂಬಾ ಆಪ್ತರು ಮೂವರಿಗೂ ತಿಳಿದಿರದ ವಿಷಯಗಳಿಲ್ಲ. ನನಗೂ ಈಗ ಹಾಸಿಗೆಯಲ್ಲಿ ಬದುಕ ಯಾನ ಮುಗಿಸಿದ ಪ್ರಸಾದ ಮಾವನಿಗೂ ಒಂದು ವರ್ಷಗಳ ಅಂತರ ಅಷ್ಟೇ. ಎಷ್ಟು ಆಪ್ತರಿದ್ದೆವೆಂದರೆ ಒಂದು ಪೆನ್ಸಿಲ್, ಚಪ್ಪಲಿ, ಬ್ಯಾಗ್ ಏನೇ ಕೊಂಡು ಆನ್ಲೈನ್ ಆರ್ಡರ್ ಮಾಡಿದರು ಸ್ರೀನ್ ಶಾಟ್ ಮೂವರಿಗೂ ತಲುಪಿಯೇ ತಲುಪುತ್ತದೆ ಹಾಗೆ. ಮಾತಾಡದೆ ಮೂರುದಿನ ಮೀರಿದರೆ ಕೋಪಿಸಿಕೊಳ್ಳುತ್ತಿದ್ದೆವು. ದಿನವೂ ಒಂದಾದರೂ ಮೆಸೇಜ್ ಇದ್ದೇ ಇದೆ.

ಇನ್ನು ಮುಂದೆ ಆ ಕಡೆಯಿಂದ ಯಾವ ಪ್ರತ್ಯುತ್ತರವೂ ಬರುವುದೇ ಇಲ್ಲ ಎಂದು ನಾನು ಹೇಗೆ ಸಂತೈಸಲಿ ನನ್ನನ್ನು. ದೇವರು ಎಷ್ಟು ಕ್ರೂರಿ ಎಂದರೆ ಸರಿ  ಇದ್ದ ಒಬ್ಬ ಮಗನನ್ನು ಅವನ ತಂದೆ ತಾಯಿಯಿಂದ ಕಸಿದ. ಎಷ್ಟು ಜನ ಅವನಿಗಾಗಿ ಪ್ರಾರ್ಥನೆ ಮಾಡಿದ್ದರು ಲೆಕ್ಕವಿಲ್ಲ. ಎಲ್ಲರಿಗೂ ಆಪ್ತ, ಆತ್ಮೀಯ.
ಆಸ್ಪತ್ರೆಯಲ್ಲಿ ಅವನಿಗಾಗಿ ಕಾದಿದ್ದ ಜನರ ಗುಂಪು ನೋಡಿದರೆ ಇಷ್ಟು ಜನರ ಕಣ್ಣೀರು ಅವನ ಮೈ ಪೂರಾ ತೋಯಿಸಿ ಬಿಡುವಷ್ಟಿತ್ತು..

ಬ್ರೇನ್ ಡೆಡ್ ಆಗಿದೆ ನೀವು ಅಂಗಾಂಗ ದಾನ ಮಾಡುವುದಾದರೆ ಮಾಡಿ ಬಿಡಿ ಎಂದು ಮೊದಲನೇ ದಿನವೇ ಡಾಕ್ಟರ್ ಹೇಳಿದ್ದರು. ಆದರೂ ದೈವ ಬಲದಿಂದ ಉಳಿಯಬಹುದು ಎಂಬ ಆಸೆಗೆ ಪೂಜೆ ಹವನ ಮಾಡಿಯಾಯ್ತು.

ಸಲ್ಪ ಚೆತರಿಸಿದ ರೇಖಿ ಚಿಕಿತ್ಸೆ ಮಾಡಿ ಆತ್ಮವನ್ನು ದೇಹದೊಳಗೆ ಕರೆಸಲಾಗುತ್ತಿತ್ತು. ಅವನು ಪ್ರಯತ್ನಿಸಿದ ಕೈ ಕಾಲು ಚಲನೆ ಆಯ್ತು ಹುಬ್ಬು ಅದುರಿತ್ತು. ಕೊನೆಗೆ ಅವನಮ್ಮ ಇನ್ನು ಬೇಡ ನಿನಗೆ ಮತ್ತೆ ನೋವು ಕೊಡುವುದಿಲ್ಲ. ನೀನು ಹೋಗಿ ಬಾ ಈ ದೇಹ ಯೋಗ್ಯವಿಲ್ಲ ಎಂದು ಅವಳ ಬದುಕಿನ ಎಲ್ಲ ಶಕ್ತಿ ಸೇರಿಸಿ ಹೇಳುವ ಹೊತ್ತಿಗೆ.

ಬಿಪಿ ಲೊ ನಿಧಾನಕ್ಕೆ ಹೃದಯ ಒಂದರಲ್ಲಿ ಮಾತ್ರ ಜೀವಿಸುತ್ತಿದ್ದ ಅವನ ಆತ್ಮ ಪರಮಾತ್ಮನ ಎಡೆಗೆ ನಡೆಯಿತು. ಅದೆಷ್ಟೋ ಬಾರಿ ನಾನು ಸನ್ಯಾಸಿ ಆಗುತ್ತೇನೆ. ಮುಕ್ತಿ ಪಡೆಯುತ್ತೇನೆ. ನಾನು ಕೆಲ ವರ್ಷಗಳ ನಂತರ ನಿಮಗೆ ಕಾಣುವುದಿಲ್ಲ ದೇಶಾಂತರ ಹೋಗುತ್ತೇನೆ ಎಂದೆಲ್ಲಾ ನನ್ನ ಬಳಿ ಹೇಳುತ್ತಿದ್ದ. ಅವನ ಮಾತು ಇಷ್ಟು ಬೇಗ ನಿಜವಾಗುತ್ತದೆ ಎಂದು ಊಹಿಸಿರಲಿಲ್ಲ.

ದೇವರು ಬದುಕವ ಮತ್ತು ಸಾಯುವ ಎರಡು ಆಯ್ಕೆ ತನ್ನೆದುರಲ್ಲಿಟ್ಟರೆ ನಾನು ಸಾವನ್ನೆ ಆಯ್ದು ಕೊಳ್ಳುತ್ತೇನೆ ಎಂದು ನಿಮ್ಮಿಬ್ಬರ ಮಾತಿನಲ್ಲಿ ಸದ್ಯವೇ ಬಂದಿತ್ತು. ಅದೇ ಅವನ ಆಸೆಯೂ ಆಗಿತ್ತು ಎಂದರೆ ಅವನು ತನ್ನ ಖುಷಿಯನ್ನು ಸಾವಲ್ಲಿ ಕಂಡುಕೊಂಡ. ಆದರೆ ನಮ್ಮೆಲ್ಲರಿಗೆ ಸಹಿಸಲಾಗದ ಸದಾ ಎದೆಯಲ್ಲಿ ಹಸಿಯಾಗೆ ಉಳಿವ ಅಗ್ನಿ ಬರೆಗಳನ್ನು ಎಳೆದು ಹೋದ.

ಧಾರವಾಡದಿಂದ ಮಾವನ ಕಾರಲ್ಲಿ ಕೂತು ಬರುವ ಹೊತ್ತಿಗೆ ನಾಳೆ ಬೆಳಿಗ್ಗೆ ಮಾಡುವ ಅಂತ್ಯಕ್ರಿಯೆಗೆ ಬೇಕಾಗುವ ಸಾಮಾನುಗಳೆಲ್ಲವನ್ನು ಗಾಡಿಯಲ್ಲಿ ಹೇರುವಾಗ. ಅವನ ಕೊನೆಯ ವಸ್ತು ಅಸ್ತಿ ತುಂಬುವ ಮಣ್ಣಿನ ಗಡಿಯನ್ನು ನನ್ನ ಕಾಲ ಮೇಲಿಟ್ಟು "ಜೋಪಾನ ಇದು ಒಡೆಯಬಾರದು ಸರಿಯಾಗಿ ಹಿಡಿದು ಕೂತುಕೋ "ಎಂದಾಗ. ನಾನು ಅವನು ಕೂಡಿ ಕೊಳ್ಳ ಬೇಕೆಂದಿದ್ದ ಎಷ್ಟೋ ವಸ್ತುಗಳು. ಸೇರಿ ಸುತ್ತಬೇಕೆಂದಿದ್ದ ಎಷ್ಟೋ ಜಾಗಗಳು ಕಣ್ಣಲ್ಲಿ ನೀರಾಗಿ ಹರಿದು ಹೋಗುತ್ತಿವೆ.

ಮಗ ಮಾಡುವ ಕಾರ್ಯವನ್ನು ತಂದೆ ಮಾಡುವಂತಹ ದೃಷ್ಯವನ್ನು ಇನ್ನು ಹೇಗೆ ಈ ಮಣ್ಣಿನ ಮಡಿಕೆಯೊಳಗೆ ನೋಡಲಿ! ??

ಎಂ.ಎಸ್.ಇ ಕೊನೆಯ ವರ್ಷದ ಪರೀಕ್ಷೆ ಜೊತೆಗೆ ಪಿ.ಎಚ್.ಡಿ‌ ಕೊಂಚಿಂಗ್ ಪಡೆದು ಬದುಕಿನ ಹಲವಾರು ಕನಸುಗಳನ್ನು ಅವನು ಕಂಡಿದ್ದ ಎನ್ನುವುದಕ್ಕಿಂತ ನಾವೆಲ್ಲ ಅವನ ಕುರಿತಾಗಿ ಇನ್ನೂ  ಹೆಚ್ಚು ಕಂಡಿದ್ದೆವು. ಅವನು ಎಲ್ಲರಂತಿರಲಿಲ್ಲ ವಿಶೇಷ ಎನಿಸಿದ್ದ. ಜಗಳ, ತಕರಾರು ಟೆನ್ಶನ್ ಎನ್ನುವುದೇ ಇರಲಿಲ್ಲ.  ಕಲಿಯುವ ಸಲುವಾಗಿ ಹೋದವ ರಾತ್ರಿ ಊಟಕ್ಕೆಂದು ಹೊರಗೆ ತನ್ನ ಸ್ನೇಹಿತರೊಟ್ಟಿಗೆ ಹೋದವನಿಗೆ ಇನ್ನೊಂದು ಬೈಕ್ ಬಂದು ಗುದ್ದಿದ ರಭಸಕ್ಕೆ ಹೆಲ್ಮೆಟ್ ಪುಡಿಯಾಯ್ತು. ಮೈಗೆ ಯಾವ ಗಾಯವೂ ಆಗದೆ ಇದ್ದರೂ ಮೆದುಳು ಮಾತ್ರ ಬಲವಾಗಿ ನೊಂದಿತ್ತು.

ಕಿವಿ, ಮೂಗಿನಿಂದ ರಕ್ತ ಹರಿದಿತ್ತು. ಅವನ ಅಣ್ಣ ರಜತ್ ಅವರಿಬ್ಬರೂ ಒಂದೇ ರೂಂ ಶೇರ್ ಮಾಡಿಕೊಂಡಿರುವವರು. ಅವನು ವಿಷಯತಿಳಿದು ಮನೆಗೂ ತಿಳಿಸಿದ. ಆಸ್ಪತ್ರೆ ಸೇರಿಸಿದ್ದ. ಇದರ ನಡುವೆ ಅಕ್ಷರಗಳಲ್ಲಿಯೂ ವ್ಯಕ್ತಪಡಿಸಲಾಗದ ನೋವು ಉಂಡವರು ಹಲವರಿದ್ದಾರೆ.

ಸಮಸ್ತ ಕುಟುಂಬದವರು ಪಾಂಡವರಂತಿದ್ದ ಅಣ್ಣ ತಮ್ಮಂದಿರು. ಹಿಂದೂ ಮುಂದು ಸುಳಿದು ಮಾತಾಡುತ್ತಿದ್ದ ಅತ್ತಿಗೆಯಂದಿರು. ತನ್ನದೇ ತಾಯಿಯಷ್ಟು ಸಮಾನ ಸ್ಥಾನದಲ್ಲಿರಿಸಿದ್ದ ಅವನ ಚಿಕ್ಕಮ್ಮ, ಅವನ ಗೆಳೆಯರು, ಶಿಕ್ಷಕರು, ಆಪ್ತರು, ಇವುಗಳನ್ನೆಲ್ಲ ವಿವರಿಸಲು ನನ್ನ ಪದಗಳು ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ. ಕಣ್ಣು ಮಂಜಾಯ್ತು ಇನ್ನು ಬರೆಯಲು ಸಾಧ್ಯವಾಗುತ್ತಿಲ್ಲ.

ಸುಮಾ.ಕಂಚೀಪಾಲ್. 

Comments

  1. ನಿರ್ಲಿಪ್ತನಾಗಿ ಹೊಗಿ ಬರಲಿ..ಓಂ ಶಾಂತಿ🙏

    ReplyDelete
  2. ನಿನ್ನ ಬರಹಕ್ಕೆ ಇನ್ನೊಮ್ಮೆ ಕಂಗಳು ತೇವಗೊಂಡಿದ್ದು ನಿಜ..
    ಮತ್ತೆ ಹುಟ್ಟಿ ಬಾ ಸಹೋದರ.. ನಿನ್ನ ಅನುಪಸ್ಥಿತಿಯ ದುಃಖ ಭರಿಸುವ ಶಕ್ತಿ ದೇವರು ಎಲ್ಲರಿಗೂ ಕರುಣಿಸಲಿ🙏

    ReplyDelete
    Replies
    1. ಮತ್ತೆ ಹುಟ್ಟಬಾರದು ಮುಕ್ತಿ ದೊರೆಯಬೇಕು ಎಂಬುದು ಅವನ ಆಶಯ. ಕುಟುಂಬದವರಿಗೆ ಶಕ್ತಿಯೊಂದನ್ನ ನೀಡಲಿ ಆ ಭಗವಂತ ಇದ್ದರೆ.

      Delete
  3. ದುಃಖ, ನೋವು, ಸಂಕಟಗಳನ್ನ ಬರದಲ್ಲಿ ಹಿಡಿದಿಡುವುದು ಕಷ್ಟಸಾಧ್ಯ, ಆದರೆ ನಿನ್ನ ಬರಹ ನಡೆದ ಪ್ರತಿ ಸಂದರ್ಭವೂ ಕಣ್ಮುಂದೆ ಇರಿಸಿತು.

    ಆ ದೇವರು ದುಃಖ ಭರಿಸುವ ಶಕ್ತಿ ಕುಟುಂಬದವರಿಗೆ ನೀಡಲಿ.

    ReplyDelete
    Replies
    1. ದುಃಖ, ನೋವು, ಸಂಕಟಗಳನ್ನ ಬರಹದಲ್ಲಿ ಹಿಡಿದಿಡುವುದು ಕಷ್ಟಸಾಧ್ಯ, ಆದರೆ ನಿನ್ನ ಬರಹ ನಡೆದ ಪ್ರತಿ ಸಂದರ್ಭವೂ ಕಣ್ಮುಂದೆ ಇರಿಸಿತು.

      ಆ ದೇವರು ದುಃಖ ಭರಿಸುವ ಶಕ್ತಿ ಕುಟುಂಬದವರಿಗೆ ನೀಡಲಿ.

      Delete
  4. 🙏 ಪರಿಶುದ್ಧ ಅತ್ಮ ಪರಮಾತ್ಮನಲ್ಲಿ ಲೀನ...

    ReplyDelete
  5. ಪಾಪು ಸಾವನ್ನು mareyalaagadiddaru ದುಃಖ ವನ್ನು ಸಹಿಸುವ ಶಕ್ತಿ ಆ ದೇವರು ನಮ್ಮೆಲ್ಲರಿಗೂ ನೀಡಲಿ.ಅವನ ಆತ್ಮ ಪರಮಾತ್ಮನಲ್ಲಿ ಸೇರಲಿ

    ReplyDelete
  6. ಎನೆಂದು ಹೇಳಲೀ ಇಂದು.. ಮಾತೇ ತೋಚದಾಗಿದೆ... ಏನೆಂದು ಬರೆಯಲೀ ಅದೇಷ್ಟೋ ಬರವಣಿಗೆಯ ಬರೆದ ಕೈ ಇಂದು... ಗಡಗಡನೆ ನಡುಗುತ್ತಿದೆ.. ಈ ಸಾವು ನಿನಗೆ ತರವಲ್ಲ ... "ಅಕಾ !!!! ಎಂತದೇ ಪತ್ತೆನೇ ಇಲ್ಲೆ ನೀನು... ಹೈ ಸ್ಕೂಲ್ ಮುಗದ್ ಮೇಲೆ ನಾವ್ ಶಿಕ್ಕಿ ಆಗಿತ್ಲೆ ಅಲ್ದನೇ.... ಸುಮಾರ ದಿನ ಆಯೋತು ನೋಡು" ಹೇಳಿ ಎಲ್ಲೋ ಸಿಕ್ಕಿದಾಗ ಹೇಳಿದ ನೆನಪು... ಅದೇ ಕೊನೆ.. ಇನ್ನೆಂದೂ ನಾವು ಸಿಗಲೇ ಇಲ್ಲ... ಈಗ ಮಾತಾಡಲೂ ಸಿಗದಂತ ಊರಿಗೆ ಹೋಗಿಬಿಟ್ಟೆ ನೀನು.... ನೀ ಅಂತೂ ತುಂಬಾ ಆತ್ಮೀಯ.... ಯಾವಾಗಲೋ ಒಮ್ಮೆ ಮೆಸೆಜ್ ಮಾಡಿದರೂ ಮಾಡದಿದ್ದರೂ.... ಸಿಕ್ಕಿದಾಗ ನಮ್ಮದೂ ತುಂಬಾ ಮಾತು ಹರಟೆ.... ನನ್ನಂತವಳಿಗೆ ನಿನ್ನ ಸಾವು ಅಷ್ಟು ನೋವು ಕೊಟ್ಟೀತು ಎಂದರೆ... ಇನ್ನು ಅಪ್ಪ ಅಮ್ಮನ ಪರಿಸ್ಥಿತಿ.!!! ಈ ದುಃಖ ಬರಿಸುವ ಶಕ್ತಿ ನಿನ್ನ ಕುಟುಂಬಕ್ಕೆ ದೇವರು ಕೊಡಲಿ.!!! ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ... ನಮ್ಮ ಮನದಲ್ಲಿ ನೀನೆಂದೂ ಜೀವಂತ❤️
    ಇಂತಿ : ಸಹನಾ ಭಟ್ಟ (ಸನಾಮಿಕ)

    ReplyDelete
  7. ಜನನ ಮರಣದ ಸಂಕೋಲೆಯಲ್ಲಿ ಈ ಅನಿರೀಕ್ಷಿತ ಮರಣ ಎಂಬುದು ಒಂದು ಯಕ್ಷಪ್ರಶ್ನೆ ಯೇ ಸರಿ!!! ಮಕ್ಕಳಿಗಾಗಿ ಹಗಲಿರುಳು ದುಡಿದು ಕನಸಿನ ಗೌರವ ಕಟ್ಟಿ, ಇನ್ನೇನು ವಿಶ್ರಾಂತಿಯ ನಿಟ್ಟುಸಿರು ಬಿಡಬೇಕು ಎನ್ನುವಷ್ಟರಲ್ಲಿ.. ಎದೆಯೆತ್ತರಕ್ಕೆ ಬೆಳೆದ ಮಕ್ಕಳನ್ನು ಜವರಾಯ ಎಳೆದೊಯ್ದ ರೆ..!!? ಅಂಥಹ ಪಾಲಕರ ಮನೋಸ್ಥಿತಿಯನ್ನು ಊಹಿಸಲು ಅಸಾದ್ಯ!!. ಈಗಿನ ವಿಜ್ಞಾನ ಆರಿಗ್ಯವನ್ನು ವೃದ್ಧಿಸಬಹುದು ಆಯುಷ್ಯವನ್ನಲ್ಲ!!!. ಈ ಅಲ್ಪಾಯುಷಿ ಗಳ ಕಾಗುಣಿತದ ಲೆಕ್ಕಾಚಾರವನ್ನು ಪರಮಾತ್ಮನೇ ಬಲ್ಲ!!. # ಹೆಗಲಮೇಲೆ ಹೆಣವನ್ನು ಹೋರುವವನ ಎದೆಯಲ್ಲಿಯೂ ಸಹ ಆಸೆಯೆಂಬ ಬೀಜ ಬಿತ್ತಿ,.. ಮೋಹವೆಂಬ ಬೇಲಿ ಕಟ್ಟಿ..ಮನುಕೂಲವೆಂಬ ಬೆಳೆ ಯನ್ನು ಲೀಲಾಜಾಲವಾಗಿ ತೆಗೆಯುವ # ಅದೋ ಆ ಜಗನ್ನಾಥ ನಿಗೊಂದು ದೊಡ್ಡ ನಮಸ್ಕಾರ 🙏🙏🙏🙏

    ReplyDelete
  8. ಜನನ ಮರಣದ ಸಂಕೋಲೆಯಲ್ಲಿ ಈ ಅನಿರೀಕ್ಷಿತ ಮರಣ ಎಂಬುದು ಒಂದು ಯಕ್ಷಪ್ರಶ್ನೆ ಯೆ ಸರಿ!! ಮಕ್ಕಳಿಗಾಗಿ ಹಗಲಿರುಳು ದುಡಿದು ಕನಸಿನ ಗೋಪುರ ವ ಕಟ್ಟಿ..ಇನ್ನೇನು ವಿಶ್ರಾಂತಿ ಪಡೆಯಬೇಕು ಎನ್ನುವಷ್ಟರಲ್ಲಿ...ಎದೆಯೇತ್ತರಕ್ಕೆ ಬೆಳೆದ ಮಕ್ಕಳನ್ನು ಜವರಾಯ ಎಳೆದೊಯ್ದ ರೆ...!!? ಅಂಥಹ ಪಾಲಕರ ಮನೋಸ್ಥಿತಿ ಯನ್ನು ಊಹಿಸಲೂ ಅಸಾಧ್ಯ..!! ಈಗಿನ ವಿಜ್ಞಾನ ಆರೋಗ್ಯ ವೃದ್ಧಿ ಸಬಹುದು ಆಯುಷ್ಯ ವನ್ನಲ್ಲ!! ಈ.ಅಲ್ಪಾಯುಷಿ ಗಳ ಕಾಗುಣಿತದ ಲೆಕ್ಕಾಚಾರವನ್ನು ಪರಮಾತ್ಮನೇ ಬಲ್ಲ!! # ಹೆಗಲ ಮೇಲೆ ಹೆಣವನ್ನು ಹೋರುವವನ ಎದೆಯಲ್ಲಿಯುಸಹ...ಆಸೆಯೆಂಬ ಬೀಜ ಬಿತ್ತಿ ಮೋಹವೆಂಬ ಬೇಲಿ ಕಟ್ಟಿ.. ಮನುಕುಲವೆಂಬ ಬೆಳೆ ಯನ್ನು ಲೀಲಾಜಾಲವಾಗಿ ತೆಗೆಯುವ ಅದೋ ಆ ಜಗನ್ನಾ ಥ ನಿಗೊಂದು.ದೊಡ್ಡ ನಮಸ್ಕಾರ 🙏🙏🙏🙏

    ReplyDelete
  9. ಹೃದಯ ವಿದ್ರಾವಕ ಘಟನೆ. ಒಂದೊಂದು ಬಾರಿ ಸಮಯ ತುಂಬಾ ಕ್ರೂರಿ. ಜೊತೆಗಿಲ್ಲದ ಜೀವ ಎಂದಿಗಿಂತ ಜೀವಂತ ಎನ್ನುವ ಮಾತು ನೆನಪಿಗೆ ಬರುತ್ತದೆ. ಸ್ನೇಹಿತ ನ ಆತ್ಮಕ್ಕೆ ಶಾಂತಿ ಸಿಗಲಿ. ಭಗವಂತ ಕುಟುಂಬಕ್ಕೇ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

    ReplyDelete
  10. ತುಂಬಾ ಕಷ್ಟ ಆತು ಓದಲೆ.. ನಾನು ಅವ ಚಿಕ್ಕವರಿರೂವಾಗಲೂ ಆಡಿ ಬೆಳೆದವರು...
    ನಾನು ಅವನನ್ನು ನೋಡಲು ಶನಿವಾರ ಹೋಗುವವಳಿದ್ದೆ...ಆದರೆ ನನಗೆ ಅವನ ನೋಡುವ ಅದೃಷ್ಟ ಇಲ್ಲವೇನೋ ಆದರೆ ಅವನು ಎಲ್ಲಿ ಕಂಡಾಗಲೂ ಅಕ್ಕ ಎಂದು ಕರೆದು ಮಾತನಾಡಿ ಸುತ್ತ ಇದ್ದ ನೆನಪು ನೆನಪು ಹಾಗೇಯೆ ಉಳಿತು ನನ್ನಲ್ಲೆ ..ಅವನ ಇಲ್ಲದಿರುವಿಕೆ ಮನಸ್ಸು ನಂಬಲು ಇಂದು ತಯಾರಿಲ್ಲ.. ಎಲ್ಲೋ ಇರುವೆನೆಂಬುದು ಮನಕೆ... ಪ್ರಸಾದ ನೀನು ಯಾವಾಗಲೂ ನನ್ನ ನೆನಪಲ್ಲೆ ಇರುವೆ ನೀನಗೆ ಮುಂದಿನ ಜನ್ಮದಲ್ಲಾದರೂ ನೀನು ಅಂದುಕೊಂಡದ್ದೆಲ್ಲಾ ಸಾಧಿಸು ..ನೀನು ಯಾವಾಗಲೂ ಕರೆಯುತ್ತಿದ್ದೆ ಮನೆಗೆ ಬಾ ಎಂದೂ ಆದರೂ ನನಗೇಕೋ ಬರಲೂ ಸಾಧ್ಯವಾಗಲೇ ಇಲ್ಲ ..ಹಾಗೆಯೇ ಉಳಿಯಿತು ..

    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...