Skip to main content

ಎಲ್ಲರಲ್ಲೂ ಒಬ್ಬ ಕಳ್ಳ ಇದ್ದಾನೆ

ಎಲ್ಲರೊಳಗೂ ಒಬ್ಬ ಕಳ್ಳ ಇದ್ದಾನೆ
ಒಂದು ಸಿನೆಮಾ ನೋಡುತ್ತೇವೆ ಎಂದಾದರೆ ಅದರ ಬಗ್ಗೆ ಒಂದಿಷ್ಟಾದರೂ ತಿಳಿದುಕೊಂಡೇ ಹೋಗುತ್ತೇವೆ. ಅದು ಇದು ಮಾತಾಡಿಕೊಂಡು ನಾವೇ ಒಂದು ನಿರ್ಧಾರ ಮಾಡಿಕೊಂಡು ಹಾ, ಈ ಸಿನಿಮಾ ಹೀಗಿರಬಹುದು ಎಂದು ಊಹಿಸಿಕೊಳ್ಳುತ್ತೇವೆ. ಆ ಪೂರ್ವಾಗ್ರಹವನ್ನು ಬದಲಿಸಿಬಿಡುವಂತಹ ಒಂದು ಸಿನಿಮಾಕ್ಕೆ ಇನ್ನೊಂದು ಹೆಸರೇ 'ಕೋಟಿ'. ಕೆಲವರು ಡಾಲಿ ಧನಂಜಯ್, ಇನ್ನು ಕೆಲವರು ಪರಂ  ಹೆಸರು ಕೇಳಿಯೇ ಈ ಸಿನಿಮಾ ನೋಡಲು‌ ನಿಶ್ಚಯಿಸಲು ನಿರ್ಧರಿಸಿರಬಹುದು. ಹಾಗೆ ಹೋಗುವುದು ಕೂಡ ಒಂದು ಮಟ್ಟಿಗೆ ಸರಿಯೇ. ನಾನಂತೂ ಕೋಟಿ ಸಿನಿಮಾವನ್ನು ಥಿಯೇಟರ್‌‌ನಲ್ಲೇ ನೋಡಲು ನಮ್ಮೂರಿನವರೇ ಆದ ಪರಮೇಶ್ವರ್​ ಗುಂಡ್ಕಲ್ ನಿರ್ದೇಶನವೇ ಕಾರಣ ಅನ್ನೋದು ಮುಚ್ಚುಮರೆ ಇಲ್ಲದ ಸತ್ಯ.



ಈಗಂತೂ ಹಲವರು "ಬಿಡು, ಓಟಿಟಿಗೆ ಬಂದ ಮೇಲೆ ನೋಡಿದರಾಯ್ತು" ಎಂದು ಸುಮ್ಮನಾಗುತ್ತಾರೆ. ಕೆಲವು ಸಿನಿಮಾಗಳನ್ನು ನಾನು ಕೂಡ ಓಟಿಟಿಗೆ ಎಂದೇ ಮೀಸಲಿಡುತ್ತೇನೆ. ಆದರೆ ಈ ಚಿತ್ರ ನನಗೆ ಚೂರು ವಿಶೇಷವಾಗಿತ್ತು. ಚೂರು ಅಂದ್ರೇ ಚೂರೇ, ಹೆಚ್ಚೇನೂ ಇಲ್ಲ. ಹೌದು, ಆಮೇಲೆ ನಾನು ಇದನ್ನು ಅವರಿಗಾಗಿ ಅವರನ್ನು ಹೊಗಳುವುದಕ್ಕಾಗಿ ಬರೆಯುತ್ತಾ ಇದ್ದೇನೆ ಎಂದು ನೀವು ಅಂದುಕೊಳ್ಳಬಹುದು. ಆ ಅನಿವಾರ್ಯತೆಗಳೇನೂ ಸದ್ಯಕ್ಕಿಲ್ಲ.

ಸಿನಿಮಾ ನೋಡುವ ಮುನ್ನ ಕೆಲವರ ಬಾಯಲ್ಲಿ ಒಂದು ವಿಷಯವನ್ನು ಕೇಳಿ ಹೌದಾಗಿರಬಹುದು ಎಂದುಕೊಂಡಿದ್ದೆ. 'ಸಿನಿಮಾ ಸುಮಾರಾಗೇ ಇದೆ. ಆದರೆ ಪರಂ ಇರುವ ಕಾರಣ ಹಾಗೇ ಡಾಲಿ ಇರುವ ಕಾರಣ, ಎಲ್ಲರೂ ಹೊಗಳುತ್ತಿದ್ದಾರೆ' ಈ ಮಾತನ್ನು ನಮ್ಮಾಫೀಸಲ್ಲಿ ಸಹ ಕೇಳಿದ್ದಂತೂ ನಿಜ. ಬೇಡ ಬೇಡ ಎಂದರೂ ಬೇರೆಯವರ ಅಭಿಪ್ರಾಯ ಕೆಲವೊಮ್ಮೆ ನಮ್ಮ ಮೇಲೆ ಪ್ರಭಾವ ಬೀರುವುದು ಸಹಜ. ಆದರೂ ನನಗೆ ಥಿಯೇಟರ್​ಗೆ ಹೋಗಿ ನೋಡಲೇಬೇಕು ಎಂಬ ಹಂಬಲ. ಮತ್ತೊಂದಷ್ಟು ಕಾರಣ ಇದೆ ಅದನ್ನು ಕೊನೆಯಲ್ಲಿ ಹೇಳುತ್ತೇನೆ ಬಿಡಿ. 


ನಾನೇ ಸಿನಿಮಾದ ಹತ್ತಿರ ಹೋದೆ..

ಮನೆಗೆ ಹತ್ತಿರವೇ ಇರುವ 'ನವರಂಗ'ಕ್ಕೆ ಸಿನಿಮಾ ಶುರುವಾಗಲು ಇನ್ನೇನು ಎರಡೇ ಎರಡು ನಿಮಿಷ ಇರುವಾಗ ಹೋಗಿ ಕುಳಿತೆವು. ಸಿನಿಮಾ ಆರಂಭವಾಯ್ತು. ಯಾವ ಸೀಟಲ್ಲಾದ್ರೂ ಕೂರುವ ಸ್ವಾತಂತ್ರ್ಯ ಬಳಸಿಕೊಂಡೇ ಜನತಾ ಕಾಲನಿಗೆ ನಾವು ಲಗ್ಗೆಯಿಟ್ಟೆವು. ಹೀರೊನ ಪ್ರಾಮಾಣಿಕತೆ ಪದೇ ಪದೇ ಸಾಬೀತಾಗುತ್ತಲೇ ನಟ ರಾಕ್ಷಸ ಡಾಲಿಯ ಸೌಮ್ಯತೆ ಬರಸೆಳೆಯಿತು. ಅದರಲ್ಲೂ ನಮ್ಮೂರಿನ ಆಯಿಯೇ ಆದ ತಾರಾರಿಂದ ನಾನೇ ಸಿನಿಮಾದ ಹತ್ತಿರ ಹೋದೆ. 

ನಂತರ ಅಣ್ಣ, ತಮ್ಮ, ತಂಗಿ ಅಂತೆಲ್ಲಾ ಒಂದೊಂದು ಕಡೆ ಒಂಚೂರು ಎಳೆದ ಹಾಗೆ ಅನಿಸಿತು. ನನ್ನ ಅಕ್ಕಪಕ್ಕ ಕೂತವರೂ ಈ ಮಾತಿಗೆ ಹೂಗುಟ್ಟಿದರು. 


ಆಹಾ ವಿಲನ್​​! 
ದಿನೂ ಸಾವ್ಕಾರ್ ಎಂಟ್ರಿ ಆದಾಗಿನಿಂದ ಕೊನೆವರೆಗೆ ಅವರನ್ನೇ ನೋಡ್ತಾ ಇದ್ರೂ ಆದೀತು ಅನ್ನೊವಷ್ಟು ಮಸ್ತ್​​​ ಆಗಿತ್ತು ವಿಲನ್​ ಪಾತ್ರ. ನಿಜ ಹೇಳಬೇಕು ಅಂದ್ರೆ ಬೇರೆ ಸಿನಿಮಾಗಳಲ್ಲಿ ಹೀರೋ ಇಷ್ಟವಾದ್ರೆ ಕೋಟಿಯಲ್ಲಿ ನನಗೆ ವಿಲನ್ ಇಷ್ಟವಾದ್ರು. ಖಡಕ್ ಆಗಿ ಕ್ಯೂಟ್​ ಆಗಿಯೂ ಇದ್ರು. ಈ ಹುಡುಗಿಯರು ಎಲ್ಲದಕ್ಕೂ ಕ್ಯೂಟ್ ಅನ್ನೋ ಪದ ಬಳಕೆ ಮಾಡ್ತಾರೆ ಅಂತ ಮಾತ್ರ ಅಂದ್ಕೊಬೇಡಿ. 

ಒಂದು ಮುಖ ಇರುವವರು ಯಾವಾಗಲೂ ಒಂದೇ ಥರ ಇರ್ತಾರೆ. ಆದ್ರೆ ಈ ಎರಡು ಮುಖ ಇರುವ ಜನರ ಸಹವಾಸ ಒಳ್ಳೆಯದಲ್ಲ. 


ಫ್ಯಾಮಿಲಿ ನೋಡೋ ಸಿನಿಮಾ ಅಂದ್ರಲ್ವಾ? ಹಾಗಾದ್ರೆ ಏನಿತ್ತು? 
ಡಾಲಿಯನ್ನು ನೋಡಿದಾಗ ಒಮ್ಮೊಮ್ಮೆ ಅವರ ಅಸಹಾಯಕತೆ ತುಂಬಾ ನಮ್ಮನ್ನೂ ಕಾಡುತ್ತಿತ್ತು. ಇನ್ನು ಪಕ್ಕದಲ್ಲಿ ಕುಳಿತ ಒಬ್ಬ ಅಂಕಲ್, ಮನೆ ಪತ್ರ ಅಡ ಇಡುವ ಸಂದರ್ಭದಲ್ಲಿ ತಾಯಿ ಅರ್ಧ ರಾತ್ರಿಯಲ್ಲಿ ಎದ್ದು ಬೇಕಾದರೂ ಮಗನಿಗಾಗಿ ಹೆಬ್ಬೆಟ್ಟು ಒತ್ತುತಾಳಲ್ಲ ಎಂದು ಅತ್ತೇ ಬಿಟ್ರು. ಈ ತಾಯಿ ಸೆಂಟಿಮೆಂಟ್​ ತುಂಬಾ ಟಚ್​​ ಆಯ್ತು. ಇನ್ನು ಡಾಲಿಯನ್ನ ಹೇಗಾದರೂ ಮಾಡಿ ಸಿಕ್ಕಿ ಹಾಕಿಸಬೇಕು ಎಂದು ಮನೆಗೆ ಬಂದಾಗ ತಂಗಿಯ ತುಟಿಗೆ ಮುತ್ತಿಟ್ಟು ಅಲ್ಲಿಂದ ಓಡಿ ಹೋಗ್ತಾರಲ್ಲ, ಅದಂತೂ ಎಲ್ಲಾ ನಮ್ಮ ನಮ್ಮ ಮನೆಗಳನ್ನು ನೆನಪು ಮಾಡುವುದು ಖಂಡಿತ.


ಕ್ಲೂ ಸಿಕ್ತು!
ನೀವು ಈ ಸಿನಿಮಾ ಮುಂದೆ ಹೀಗೆ ಆಗುತ್ತದೆ ಎಂದು ಅಂದಾಜು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಾವು ಅಂದುಕೊಳ್ಳುವುದು ಒಂದಾದ್ರೆ ಕಥೆ ಅಗುವ ದಾರಿಯೇ ಬೇರೆ. ನಾನು ಒಮ್ಮೆ ಸೀರಿಯಲ್ ಬರೆದಾಗ ಒಬ್ಬರು ಹೇಳಿದ್ದು ನೆನಪಾಯ್ತು. ನೋಡುಗರು ಹೀಗಾಗುತ್ತದೆ ಎಂದು ಊಹೆ ಮಾಡದ ಹಾಗೆ ನಾವು ಕಥೆ ಬರೆಯಬೇಕು. ಒಂದು ಸಮಸ್ಯೆ ಬಗೆಹರಿಯಿತು ಎಂಬಷ್ಟರಲ್ಲಿ ಊಹಿಸಲೂ ಸಾಧ್ಯವಾಗದ ಸಮಸ್ಯೆ ತಂದಿಡಬೇಕು. ಆಗಲೇ ಹುಟ್ಟುವುದು ಕೌತುಕ. 

ಒಮ್ಮೆ ಕಾರ್ ಕಳುವು, ಒಮ್ಮೆ ಅಮ್ಮನಿಗೆ ತೊಂದರೆ, ಇನ್ನೊಮ್ಮೆ ಕಳ್ಳತನದ ಆರೋಪ, ಮತ್ತೊಮ್ಮೆ ಕೌಟುಂಬಿಕ ಸಮಸ್ಯೆ, ಲೈಟಾಗಿ ಲವ್ ಫೇಲ್ಯುರ್.​. ಒಂದಾದ ಮೇಲೆ ಒಂದು ಒಟ್ಟಿನಲ್ಲಿ ಹೀರೋಗೆ ಕೊನೆವರೆಗೂ ಒಳ್ಳೆದೇನೂ ಆಗೋದೇ ಇಲ್ಲ ಎಂದು ಪ್ರೇಕ್ಷಕರು ಒಂದು ನಿರ್ಧಾರಕ್ಕೆ ಬಂದಾಗಲೇ ಸಿಗುವುದು ರೋಚಕ ತಿರುವು. ಆದರೆ ಸಿನಿಮಾದಲ್ಲಿ, ಅದರಲ್ಲೂ ಸೆಕೆಂಡ್​ ಹಾಫ್​​ನಲ್ಲಿ ನೀವು ಕಣ್ಣು ಮಿಟುಕಿಸದೇ ಸಿನಿಮಾ ನೋಡಬಹುದು. 

ವಿಜ್ಯೂವಲ್ ಟ್ರೀಟ್​ - ಕ್ಯಾಮರಾ - ರಿಚ್​ನೆಸ್ ಹೀಗೆಲ್ಲಾ ಅಂತಾರಲ್ಲ
ಇದರ ಬಗ್ಗೆ ನನಗೆ ಹುಡುಗರಷ್ಟು ಹೇಳೋಕೆ ಬರೋದಿಲ್ಲ. ಆದ್ರೂ ಹೇಳ್ತಿನಿ, ಈ ಸಿನಿಮಾದ ಕೆಲವೊಂದಷ್ಟು ಫ್ರೇಮ್​​ ತುಂಬಾ ಚೆನ್ನಾಗಿದೆ. ಅದರಲ್ಲೂ ಮುಖ್ಯವಾಗಿ ಹೀರೋ ಹಾಗೂ ವಿಲನ್ ಮುಖಾಮುಖಿ ಆಗುವ ಸಂದರ್ಭಗಳಲ್ಲಿ, ಹಾಗೂ ಹೀರೋ - ಹಿರೋಯಿನ್ ಮುಖಾಮುಖಿ ಆದಾಗ. ಇನ್ನೊಂದು ಜಾತ್ರೆಯ ಸೀನ್ ಇವುಗಳಲ್ಲಿ ತುಂಬಾ ಚೆನ್ನಾಗಿದೆ. ಹಲವು ಕಟ್ ಶಾಟ್​ಗಳಿದೆ. ಅಂದರೆ ನನ್ನ ಪ್ರಕಾರ ಒಂದು 5 ಸೆಕೆಂಡುಗಳ ಒಳಗಾಗಿ ಮೂರು ಬೇರೆ ಬೇರೆ ಫ್ರೇಮ್ ಬರುತ್ತದೆ. ಉದಾಹರಣೆಗೆ - ಜಾತ್ರೆಯಲ್ಲಿ ಮುದ್ದು ಮಗುವಿನ ಮುಖ, ತಕ್ಷಣ ಬೆಂಕಿ ಉಗುಳುವ ಹುಲಿವೇಷ, ಇನ್ನೊಮ್ಮೆ ನೃತ್ಯ - ನವಿಲುಗರಿ ಹೀಗೆ.. ತಕ್ಷಣಕ್ಕೆ ನೆನಪಾಗುತ್ತಾ ಇದೆ. ಇವುಗಳನ್ನು ಬಿಟ್ಟು ಇನ್ನೂ ಹಲವು ಅಲ್ಲಲ್ಲಿ ಹರಡಿಕೊಂಡಿವೆ. ಸಿನಿಮಾ ತಯಾರಿಯಲ್ಲಿ ತುಂಬಾ ಎಫರ್ಟ್​ ಕೆಲಸ ಮಾಡಿದೆ. ಎಡಿಟಿಂಗ್ ಹಾಗೂ ಆ ಡಿಟೇಲಿಂಗ್​​ ಅಷ್ಟು ಅಂದವಾಗಿ ಮೂಡಿಬಂದಿದೆ. 

ಕಥೆಯ ಕೊನೆ ತಿರುವು ರೋಚಕ
ನನಗೆ ಖುಷಿ ಆದಾಗ, ಬೇಜಾರಾದಾಗ, ತುಂಬಾ ಭಯ ಆದಾಗ ನನ್ನ ಕಾಲುಗಳು ಕುಣಿಯುತ್ತವೆ. ಈ ಸಿನಿಮಾ ಹೀರೋಯಿನ್​ಗೆ ಒಂದು ಖಾಯಿಲೆ ಇದೆ. ಬಿಕ್ಕಳಿಕೆ ಬರೋದು, ಬಂದಾಗ ಕದಿಯೋದು. ಅದೇ ರೀತಿ ನನಗೆ ಕಾಲನ್ನು ಸೆಕೆಂಡಿಗೆರಡು ಬಾರಿ ಕಟಕಟ ಅಂತ ಅಲ್ಲಾಡಿಸುತ್ತಾ ಕುಳಿತುಕೊಳ್ಳುವ ಒಂದು ಖಾಯಿಲೆಯೋ ಅಭ್ಯಾಸವೋ ಏನೋ ಒಂದು ಇದೆ. ಅದು ನನಗೆ ಗೊತ್ತಾಗದೇ ಆಗುವುದು. ಆ ಅನುಭವ ನನಗೆ ಈ ಚಿತ್ರದ ಕೊನೆಯಲ್ಲಿ ಆಗಿದ್ದಂತೂ ನಿಜ.

ಹುಲಿ ಕುಣಿತ
ನನಗೆ ಮೊದಲೇ ಒಂದು ಅಂದಾಜಾಗಿತ್ತು. ಇವಳು ಬಿಕ್ಕಳಿಗೆ ಬಂದಾಗ ಕದಿತಾಳೆ. ಹೀರೋ ತಮ್ಮ ಚಕ್ಕುಲಿಯನ್ನು ಅರ್ಧ ಸುತ್ತು ಮುರಿದಿಟ್ಟು ಲೆಕ್ಕ ತಪ್ಪದ ಹಾಗೆ ನೋಡಿಕೊಂಡು ತಿನ್ನುತ್ತಾನೆ ಎಂದಾಗ ಇವನು ಕಳ್ಳತನ ಮಾಡಲು ಇವರಿಬ್ಬರನ್ನೇ ತನ್ನ ಜೊತೆಗೂಡಿಸಿಕೊಳ್ಳುತ್ತಾನೆ ಎಂದು. ಕೊನೆಗೂ ಅದು ಹಾಗೇ ಆಯ್ತು. ಹುಲಿ ವೇಷ ಹಾಕಿಕೊಂಡು ಹೋಗುವಾಗ ಒಂದು ಮರ ಕತ್ತರಿಸುವ ಯಂತ್ರ ಕಾಣಿಸುತ್ತಾರೆ. ಆಗ ನಾವೆಲ್ಲ ಅಂದುಕೊಂಡೆವು, ಸಾಹುಕಾರನ ಕೊಲೆ ಮಾಡಿಯೇ ಇವರು ಬರೋದು ಎಂದು. 

ಆಗ ಮಾತಾಡಿದ್ದೂ ಇದೆ. ಇವರು ಕಥೆನಾ ಹೀಗೆ ಯಾಕೆ ಮಾಡಿದ್ರು, ಕೊಲ್ತಾರೆ ಅಂತ. ನಮಗೆ ಮೊದಲೇ ಗೊತ್ತಾಗೋತರ ಆಯ್ತು ಅಂತ. ಆದರೆ ಹಾಗೆ ಆಗಲೇ ಇಲ್ಲ. ಇದನ್ನೇ ನಾನು ನಿಜಕ್ಕೂ ಹೆಚ್ಚು ಇಷ್ಟಪಟ್ಟಿದ್ದು. ಕೆಲವನ್ನು ಊಹಿಸಿದ್ದೆ ಆದರೆ ಊಹಿಸದ ತಿರುವುಗಳು ಇದರಲ್ಲಿ ಹೆಚ್ಚಾಗೇ ಕಂಡವು. ನಂತರ ಅವರು ಕನ್ನ ಹಾಕಿ ಹಣ ತಂದು ಅದೇ ಹಣವನ್ನು ಮತ್ತೆ ಸಾಹುಕಾರನಿಗೆ ಕೊಡುವ ಮತ್ತು ಕೆನ್ನೆಗೆ ಹೊಡೆಯುವ ಮೂಲಕ ಸಿನಿಮಾ ಕೊನೆ ಆಗುತ್ತದೆ. 


ನೀವೂ ಒಮ್ಮೆ ಸಿನಿಮಾ ನೋಡಿ,
ನೋಡಿದ್ದರೆ ಹೇಗಿತ್ತು ಎಂದು ಕಮೆಂಟ್ ಮಾಡಿ

ಸುಮಾ. ಕಂಚೀಪಾಲ್​

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...