Skip to main content

ಎಲ್ಲರಲ್ಲೂ ಒಬ್ಬ ಕಳ್ಳ ಇದ್ದಾನೆ

ಎಲ್ಲರೊಳಗೂ ಒಬ್ಬ ಕಳ್ಳ ಇದ್ದಾನೆ
ಒಂದು ಸಿನೆಮಾ ನೋಡುತ್ತೇವೆ ಎಂದಾದರೆ ಅದರ ಬಗ್ಗೆ ಒಂದಿಷ್ಟಾದರೂ ತಿಳಿದುಕೊಂಡೇ ಹೋಗುತ್ತೇವೆ. ಅದು ಇದು ಮಾತಾಡಿಕೊಂಡು ನಾವೇ ಒಂದು ನಿರ್ಧಾರ ಮಾಡಿಕೊಂಡು ಹಾ, ಈ ಸಿನಿಮಾ ಹೀಗಿರಬಹುದು ಎಂದು ಊಹಿಸಿಕೊಳ್ಳುತ್ತೇವೆ. ಆ ಪೂರ್ವಾಗ್ರಹವನ್ನು ಬದಲಿಸಿಬಿಡುವಂತಹ ಒಂದು ಸಿನಿಮಾಕ್ಕೆ ಇನ್ನೊಂದು ಹೆಸರೇ 'ಕೋಟಿ'. ಕೆಲವರು ಡಾಲಿ ಧನಂಜಯ್, ಇನ್ನು ಕೆಲವರು ಪರಂ  ಹೆಸರು ಕೇಳಿಯೇ ಈ ಸಿನಿಮಾ ನೋಡಲು‌ ನಿಶ್ಚಯಿಸಲು ನಿರ್ಧರಿಸಿರಬಹುದು. ಹಾಗೆ ಹೋಗುವುದು ಕೂಡ ಒಂದು ಮಟ್ಟಿಗೆ ಸರಿಯೇ. ನಾನಂತೂ ಕೋಟಿ ಸಿನಿಮಾವನ್ನು ಥಿಯೇಟರ್‌‌ನಲ್ಲೇ ನೋಡಲು ನಮ್ಮೂರಿನವರೇ ಆದ ಪರಮೇಶ್ವರ್​ ಗುಂಡ್ಕಲ್ ನಿರ್ದೇಶನವೇ ಕಾರಣ ಅನ್ನೋದು ಮುಚ್ಚುಮರೆ ಇಲ್ಲದ ಸತ್ಯ.



ಈಗಂತೂ ಹಲವರು "ಬಿಡು, ಓಟಿಟಿಗೆ ಬಂದ ಮೇಲೆ ನೋಡಿದರಾಯ್ತು" ಎಂದು ಸುಮ್ಮನಾಗುತ್ತಾರೆ. ಕೆಲವು ಸಿನಿಮಾಗಳನ್ನು ನಾನು ಕೂಡ ಓಟಿಟಿಗೆ ಎಂದೇ ಮೀಸಲಿಡುತ್ತೇನೆ. ಆದರೆ ಈ ಚಿತ್ರ ನನಗೆ ಚೂರು ವಿಶೇಷವಾಗಿತ್ತು. ಚೂರು ಅಂದ್ರೇ ಚೂರೇ, ಹೆಚ್ಚೇನೂ ಇಲ್ಲ. ಹೌದು, ಆಮೇಲೆ ನಾನು ಇದನ್ನು ಅವರಿಗಾಗಿ ಅವರನ್ನು ಹೊಗಳುವುದಕ್ಕಾಗಿ ಬರೆಯುತ್ತಾ ಇದ್ದೇನೆ ಎಂದು ನೀವು ಅಂದುಕೊಳ್ಳಬಹುದು. ಆ ಅನಿವಾರ್ಯತೆಗಳೇನೂ ಸದ್ಯಕ್ಕಿಲ್ಲ.

ಸಿನಿಮಾ ನೋಡುವ ಮುನ್ನ ಕೆಲವರ ಬಾಯಲ್ಲಿ ಒಂದು ವಿಷಯವನ್ನು ಕೇಳಿ ಹೌದಾಗಿರಬಹುದು ಎಂದುಕೊಂಡಿದ್ದೆ. 'ಸಿನಿಮಾ ಸುಮಾರಾಗೇ ಇದೆ. ಆದರೆ ಪರಂ ಇರುವ ಕಾರಣ ಹಾಗೇ ಡಾಲಿ ಇರುವ ಕಾರಣ, ಎಲ್ಲರೂ ಹೊಗಳುತ್ತಿದ್ದಾರೆ' ಈ ಮಾತನ್ನು ನಮ್ಮಾಫೀಸಲ್ಲಿ ಸಹ ಕೇಳಿದ್ದಂತೂ ನಿಜ. ಬೇಡ ಬೇಡ ಎಂದರೂ ಬೇರೆಯವರ ಅಭಿಪ್ರಾಯ ಕೆಲವೊಮ್ಮೆ ನಮ್ಮ ಮೇಲೆ ಪ್ರಭಾವ ಬೀರುವುದು ಸಹಜ. ಆದರೂ ನನಗೆ ಥಿಯೇಟರ್​ಗೆ ಹೋಗಿ ನೋಡಲೇಬೇಕು ಎಂಬ ಹಂಬಲ. ಮತ್ತೊಂದಷ್ಟು ಕಾರಣ ಇದೆ ಅದನ್ನು ಕೊನೆಯಲ್ಲಿ ಹೇಳುತ್ತೇನೆ ಬಿಡಿ. 


ನಾನೇ ಸಿನಿಮಾದ ಹತ್ತಿರ ಹೋದೆ..

ಮನೆಗೆ ಹತ್ತಿರವೇ ಇರುವ 'ನವರಂಗ'ಕ್ಕೆ ಸಿನಿಮಾ ಶುರುವಾಗಲು ಇನ್ನೇನು ಎರಡೇ ಎರಡು ನಿಮಿಷ ಇರುವಾಗ ಹೋಗಿ ಕುಳಿತೆವು. ಸಿನಿಮಾ ಆರಂಭವಾಯ್ತು. ಯಾವ ಸೀಟಲ್ಲಾದ್ರೂ ಕೂರುವ ಸ್ವಾತಂತ್ರ್ಯ ಬಳಸಿಕೊಂಡೇ ಜನತಾ ಕಾಲನಿಗೆ ನಾವು ಲಗ್ಗೆಯಿಟ್ಟೆವು. ಹೀರೊನ ಪ್ರಾಮಾಣಿಕತೆ ಪದೇ ಪದೇ ಸಾಬೀತಾಗುತ್ತಲೇ ನಟ ರಾಕ್ಷಸ ಡಾಲಿಯ ಸೌಮ್ಯತೆ ಬರಸೆಳೆಯಿತು. ಅದರಲ್ಲೂ ನಮ್ಮೂರಿನ ಆಯಿಯೇ ಆದ ತಾರಾರಿಂದ ನಾನೇ ಸಿನಿಮಾದ ಹತ್ತಿರ ಹೋದೆ. 

ನಂತರ ಅಣ್ಣ, ತಮ್ಮ, ತಂಗಿ ಅಂತೆಲ್ಲಾ ಒಂದೊಂದು ಕಡೆ ಒಂಚೂರು ಎಳೆದ ಹಾಗೆ ಅನಿಸಿತು. ನನ್ನ ಅಕ್ಕಪಕ್ಕ ಕೂತವರೂ ಈ ಮಾತಿಗೆ ಹೂಗುಟ್ಟಿದರು. 


ಆಹಾ ವಿಲನ್​​! 
ದಿನೂ ಸಾವ್ಕಾರ್ ಎಂಟ್ರಿ ಆದಾಗಿನಿಂದ ಕೊನೆವರೆಗೆ ಅವರನ್ನೇ ನೋಡ್ತಾ ಇದ್ರೂ ಆದೀತು ಅನ್ನೊವಷ್ಟು ಮಸ್ತ್​​​ ಆಗಿತ್ತು ವಿಲನ್​ ಪಾತ್ರ. ನಿಜ ಹೇಳಬೇಕು ಅಂದ್ರೆ ಬೇರೆ ಸಿನಿಮಾಗಳಲ್ಲಿ ಹೀರೋ ಇಷ್ಟವಾದ್ರೆ ಕೋಟಿಯಲ್ಲಿ ನನಗೆ ವಿಲನ್ ಇಷ್ಟವಾದ್ರು. ಖಡಕ್ ಆಗಿ ಕ್ಯೂಟ್​ ಆಗಿಯೂ ಇದ್ರು. ಈ ಹುಡುಗಿಯರು ಎಲ್ಲದಕ್ಕೂ ಕ್ಯೂಟ್ ಅನ್ನೋ ಪದ ಬಳಕೆ ಮಾಡ್ತಾರೆ ಅಂತ ಮಾತ್ರ ಅಂದ್ಕೊಬೇಡಿ. 

ಒಂದು ಮುಖ ಇರುವವರು ಯಾವಾಗಲೂ ಒಂದೇ ಥರ ಇರ್ತಾರೆ. ಆದ್ರೆ ಈ ಎರಡು ಮುಖ ಇರುವ ಜನರ ಸಹವಾಸ ಒಳ್ಳೆಯದಲ್ಲ. 


ಫ್ಯಾಮಿಲಿ ನೋಡೋ ಸಿನಿಮಾ ಅಂದ್ರಲ್ವಾ? ಹಾಗಾದ್ರೆ ಏನಿತ್ತು? 
ಡಾಲಿಯನ್ನು ನೋಡಿದಾಗ ಒಮ್ಮೊಮ್ಮೆ ಅವರ ಅಸಹಾಯಕತೆ ತುಂಬಾ ನಮ್ಮನ್ನೂ ಕಾಡುತ್ತಿತ್ತು. ಇನ್ನು ಪಕ್ಕದಲ್ಲಿ ಕುಳಿತ ಒಬ್ಬ ಅಂಕಲ್, ಮನೆ ಪತ್ರ ಅಡ ಇಡುವ ಸಂದರ್ಭದಲ್ಲಿ ತಾಯಿ ಅರ್ಧ ರಾತ್ರಿಯಲ್ಲಿ ಎದ್ದು ಬೇಕಾದರೂ ಮಗನಿಗಾಗಿ ಹೆಬ್ಬೆಟ್ಟು ಒತ್ತುತಾಳಲ್ಲ ಎಂದು ಅತ್ತೇ ಬಿಟ್ರು. ಈ ತಾಯಿ ಸೆಂಟಿಮೆಂಟ್​ ತುಂಬಾ ಟಚ್​​ ಆಯ್ತು. ಇನ್ನು ಡಾಲಿಯನ್ನ ಹೇಗಾದರೂ ಮಾಡಿ ಸಿಕ್ಕಿ ಹಾಕಿಸಬೇಕು ಎಂದು ಮನೆಗೆ ಬಂದಾಗ ತಂಗಿಯ ತುಟಿಗೆ ಮುತ್ತಿಟ್ಟು ಅಲ್ಲಿಂದ ಓಡಿ ಹೋಗ್ತಾರಲ್ಲ, ಅದಂತೂ ಎಲ್ಲಾ ನಮ್ಮ ನಮ್ಮ ಮನೆಗಳನ್ನು ನೆನಪು ಮಾಡುವುದು ಖಂಡಿತ.


ಕ್ಲೂ ಸಿಕ್ತು!
ನೀವು ಈ ಸಿನಿಮಾ ಮುಂದೆ ಹೀಗೆ ಆಗುತ್ತದೆ ಎಂದು ಅಂದಾಜು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಾವು ಅಂದುಕೊಳ್ಳುವುದು ಒಂದಾದ್ರೆ ಕಥೆ ಅಗುವ ದಾರಿಯೇ ಬೇರೆ. ನಾನು ಒಮ್ಮೆ ಸೀರಿಯಲ್ ಬರೆದಾಗ ಒಬ್ಬರು ಹೇಳಿದ್ದು ನೆನಪಾಯ್ತು. ನೋಡುಗರು ಹೀಗಾಗುತ್ತದೆ ಎಂದು ಊಹೆ ಮಾಡದ ಹಾಗೆ ನಾವು ಕಥೆ ಬರೆಯಬೇಕು. ಒಂದು ಸಮಸ್ಯೆ ಬಗೆಹರಿಯಿತು ಎಂಬಷ್ಟರಲ್ಲಿ ಊಹಿಸಲೂ ಸಾಧ್ಯವಾಗದ ಸಮಸ್ಯೆ ತಂದಿಡಬೇಕು. ಆಗಲೇ ಹುಟ್ಟುವುದು ಕೌತುಕ. 

ಒಮ್ಮೆ ಕಾರ್ ಕಳುವು, ಒಮ್ಮೆ ಅಮ್ಮನಿಗೆ ತೊಂದರೆ, ಇನ್ನೊಮ್ಮೆ ಕಳ್ಳತನದ ಆರೋಪ, ಮತ್ತೊಮ್ಮೆ ಕೌಟುಂಬಿಕ ಸಮಸ್ಯೆ, ಲೈಟಾಗಿ ಲವ್ ಫೇಲ್ಯುರ್.​. ಒಂದಾದ ಮೇಲೆ ಒಂದು ಒಟ್ಟಿನಲ್ಲಿ ಹೀರೋಗೆ ಕೊನೆವರೆಗೂ ಒಳ್ಳೆದೇನೂ ಆಗೋದೇ ಇಲ್ಲ ಎಂದು ಪ್ರೇಕ್ಷಕರು ಒಂದು ನಿರ್ಧಾರಕ್ಕೆ ಬಂದಾಗಲೇ ಸಿಗುವುದು ರೋಚಕ ತಿರುವು. ಆದರೆ ಸಿನಿಮಾದಲ್ಲಿ, ಅದರಲ್ಲೂ ಸೆಕೆಂಡ್​ ಹಾಫ್​​ನಲ್ಲಿ ನೀವು ಕಣ್ಣು ಮಿಟುಕಿಸದೇ ಸಿನಿಮಾ ನೋಡಬಹುದು. 

ವಿಜ್ಯೂವಲ್ ಟ್ರೀಟ್​ - ಕ್ಯಾಮರಾ - ರಿಚ್​ನೆಸ್ ಹೀಗೆಲ್ಲಾ ಅಂತಾರಲ್ಲ
ಇದರ ಬಗ್ಗೆ ನನಗೆ ಹುಡುಗರಷ್ಟು ಹೇಳೋಕೆ ಬರೋದಿಲ್ಲ. ಆದ್ರೂ ಹೇಳ್ತಿನಿ, ಈ ಸಿನಿಮಾದ ಕೆಲವೊಂದಷ್ಟು ಫ್ರೇಮ್​​ ತುಂಬಾ ಚೆನ್ನಾಗಿದೆ. ಅದರಲ್ಲೂ ಮುಖ್ಯವಾಗಿ ಹೀರೋ ಹಾಗೂ ವಿಲನ್ ಮುಖಾಮುಖಿ ಆಗುವ ಸಂದರ್ಭಗಳಲ್ಲಿ, ಹಾಗೂ ಹೀರೋ - ಹಿರೋಯಿನ್ ಮುಖಾಮುಖಿ ಆದಾಗ. ಇನ್ನೊಂದು ಜಾತ್ರೆಯ ಸೀನ್ ಇವುಗಳಲ್ಲಿ ತುಂಬಾ ಚೆನ್ನಾಗಿದೆ. ಹಲವು ಕಟ್ ಶಾಟ್​ಗಳಿದೆ. ಅಂದರೆ ನನ್ನ ಪ್ರಕಾರ ಒಂದು 5 ಸೆಕೆಂಡುಗಳ ಒಳಗಾಗಿ ಮೂರು ಬೇರೆ ಬೇರೆ ಫ್ರೇಮ್ ಬರುತ್ತದೆ. ಉದಾಹರಣೆಗೆ - ಜಾತ್ರೆಯಲ್ಲಿ ಮುದ್ದು ಮಗುವಿನ ಮುಖ, ತಕ್ಷಣ ಬೆಂಕಿ ಉಗುಳುವ ಹುಲಿವೇಷ, ಇನ್ನೊಮ್ಮೆ ನೃತ್ಯ - ನವಿಲುಗರಿ ಹೀಗೆ.. ತಕ್ಷಣಕ್ಕೆ ನೆನಪಾಗುತ್ತಾ ಇದೆ. ಇವುಗಳನ್ನು ಬಿಟ್ಟು ಇನ್ನೂ ಹಲವು ಅಲ್ಲಲ್ಲಿ ಹರಡಿಕೊಂಡಿವೆ. ಸಿನಿಮಾ ತಯಾರಿಯಲ್ಲಿ ತುಂಬಾ ಎಫರ್ಟ್​ ಕೆಲಸ ಮಾಡಿದೆ. ಎಡಿಟಿಂಗ್ ಹಾಗೂ ಆ ಡಿಟೇಲಿಂಗ್​​ ಅಷ್ಟು ಅಂದವಾಗಿ ಮೂಡಿಬಂದಿದೆ. 

ಕಥೆಯ ಕೊನೆ ತಿರುವು ರೋಚಕ
ನನಗೆ ಖುಷಿ ಆದಾಗ, ಬೇಜಾರಾದಾಗ, ತುಂಬಾ ಭಯ ಆದಾಗ ನನ್ನ ಕಾಲುಗಳು ಕುಣಿಯುತ್ತವೆ. ಈ ಸಿನಿಮಾ ಹೀರೋಯಿನ್​ಗೆ ಒಂದು ಖಾಯಿಲೆ ಇದೆ. ಬಿಕ್ಕಳಿಕೆ ಬರೋದು, ಬಂದಾಗ ಕದಿಯೋದು. ಅದೇ ರೀತಿ ನನಗೆ ಕಾಲನ್ನು ಸೆಕೆಂಡಿಗೆರಡು ಬಾರಿ ಕಟಕಟ ಅಂತ ಅಲ್ಲಾಡಿಸುತ್ತಾ ಕುಳಿತುಕೊಳ್ಳುವ ಒಂದು ಖಾಯಿಲೆಯೋ ಅಭ್ಯಾಸವೋ ಏನೋ ಒಂದು ಇದೆ. ಅದು ನನಗೆ ಗೊತ್ತಾಗದೇ ಆಗುವುದು. ಆ ಅನುಭವ ನನಗೆ ಈ ಚಿತ್ರದ ಕೊನೆಯಲ್ಲಿ ಆಗಿದ್ದಂತೂ ನಿಜ.

ಹುಲಿ ಕುಣಿತ
ನನಗೆ ಮೊದಲೇ ಒಂದು ಅಂದಾಜಾಗಿತ್ತು. ಇವಳು ಬಿಕ್ಕಳಿಗೆ ಬಂದಾಗ ಕದಿತಾಳೆ. ಹೀರೋ ತಮ್ಮ ಚಕ್ಕುಲಿಯನ್ನು ಅರ್ಧ ಸುತ್ತು ಮುರಿದಿಟ್ಟು ಲೆಕ್ಕ ತಪ್ಪದ ಹಾಗೆ ನೋಡಿಕೊಂಡು ತಿನ್ನುತ್ತಾನೆ ಎಂದಾಗ ಇವನು ಕಳ್ಳತನ ಮಾಡಲು ಇವರಿಬ್ಬರನ್ನೇ ತನ್ನ ಜೊತೆಗೂಡಿಸಿಕೊಳ್ಳುತ್ತಾನೆ ಎಂದು. ಕೊನೆಗೂ ಅದು ಹಾಗೇ ಆಯ್ತು. ಹುಲಿ ವೇಷ ಹಾಕಿಕೊಂಡು ಹೋಗುವಾಗ ಒಂದು ಮರ ಕತ್ತರಿಸುವ ಯಂತ್ರ ಕಾಣಿಸುತ್ತಾರೆ. ಆಗ ನಾವೆಲ್ಲ ಅಂದುಕೊಂಡೆವು, ಸಾಹುಕಾರನ ಕೊಲೆ ಮಾಡಿಯೇ ಇವರು ಬರೋದು ಎಂದು. 

ಆಗ ಮಾತಾಡಿದ್ದೂ ಇದೆ. ಇವರು ಕಥೆನಾ ಹೀಗೆ ಯಾಕೆ ಮಾಡಿದ್ರು, ಕೊಲ್ತಾರೆ ಅಂತ. ನಮಗೆ ಮೊದಲೇ ಗೊತ್ತಾಗೋತರ ಆಯ್ತು ಅಂತ. ಆದರೆ ಹಾಗೆ ಆಗಲೇ ಇಲ್ಲ. ಇದನ್ನೇ ನಾನು ನಿಜಕ್ಕೂ ಹೆಚ್ಚು ಇಷ್ಟಪಟ್ಟಿದ್ದು. ಕೆಲವನ್ನು ಊಹಿಸಿದ್ದೆ ಆದರೆ ಊಹಿಸದ ತಿರುವುಗಳು ಇದರಲ್ಲಿ ಹೆಚ್ಚಾಗೇ ಕಂಡವು. ನಂತರ ಅವರು ಕನ್ನ ಹಾಕಿ ಹಣ ತಂದು ಅದೇ ಹಣವನ್ನು ಮತ್ತೆ ಸಾಹುಕಾರನಿಗೆ ಕೊಡುವ ಮತ್ತು ಕೆನ್ನೆಗೆ ಹೊಡೆಯುವ ಮೂಲಕ ಸಿನಿಮಾ ಕೊನೆ ಆಗುತ್ತದೆ. 


ನೀವೂ ಒಮ್ಮೆ ಸಿನಿಮಾ ನೋಡಿ,
ನೋಡಿದ್ದರೆ ಹೇಗಿತ್ತು ಎಂದು ಕಮೆಂಟ್ ಮಾಡಿ

ಸುಮಾ. ಕಂಚೀಪಾಲ್​

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...