Skip to main content

ಕಾಲೇಜು ಖಾಲಿ ಏಜು

ಎಲ್ಲರೂ ಕಲಿತಾರಲ್ಲ ಅದಿಕ್ಕೆ ನಾನೂ ಕಲಿತಿದ್ದೆ. ಅಪ್ಪ ಅಮ್ಮನ ಮನಸ್ಸಿನ ಸಮಾಧಾನಕ್ಕೆ ಸ್ನೇಹಿತರಿಗಿಂತ ನಾನೇನು ಕಡಿಮೆ ಅಂತ ಪ್ರತಿದಿನ ಕಾಲೇಜಿಗೆ ಹೋಗಿದ್ದೆ. ಅಂಕಗಳಿಸಲು ಅಷ್ಟೇನು ಆಸೆ ಇರಲಿಲ್ಲ. ಅಂಥ ಉಸಾಬರಿಗೆ ನಾನು ಹೋಗಿಯೂ ಇರಲಿಲ್ಲ. ಆದರೂ ಅಂಕಗಳೆನೋ ಚೆನ್ನಾಗಿಯೇ ಬಂದಿದ್ದವು ಪಕ್ಕದಮನೆಯಲ್ಲಿ ಒಬ್ಬ ನನ್ನ ವಯಸ್ಸಿನ ಹುಡುಗ ಇದ್ದ. ಪಾಪ ಇಡೀ ದಿನ ಅವನು ಓದೋದನ್ನು ನೋಡಿ ನನ್ನಮ್ಮನಿಗೆ ಆಗಾಗ ದಿನ ತಲೆಕೆಡುತ್ತಿತ್ತು. ಹಾಗನಿಸಿದ ದಿನ  ಅಮ್ಮನ ವೇದಘೋಶ ಜೋರಾಗಿಯೇ ಇರುತ್ತಿತ್ತು. ಆ ಪಕ್ಕದ ಮನೆ ಅಜ್ಜಿಗೋ ಮಾಡೊಕೆ ಬೇರೆ ಕೆಲಸ ಇಲ್ಲ ನಮ್ಮ ಮನೆಗೆ ಬಂದು ಮೊಮ್ಮಗನನ್ನು ಹೊಗಳೋದೇ ಕೆಲಸವಾಗಿಬಿಟ್ಟಿತ್ತು. ನಾನು ಪಿ.ಯು ಮುಗಿಸಿ ಕಾಲೇಜು ಬಿಟ್ಟೆ , ಮನೆಯಲ್ಲಿ ಮೂರು ತಲೆಮಾರಿನವರು ಕೂತು ತಿನ್ನೋವಷ್ಟು ಆಸ್ತಿ ಇತ್ತು. ಕಿರಿಯವನು ನಾನು. ಅಣ್ಣ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ  ಊರಿನ ಜನರ ಕಣ್ಣಿಗೆ ದೊಡ್ಡ ಮನಷ್ಯ ಅನ್ನಿಸ್ಕೊಂಡು ಎರಡು ವರ್ಷ ಆಯ್ತು, ನಾನು ಒಮ್ಮೆ ಬೆಂಗಳೂರಿಗೆ ಹೋಗಿ ಅಣ್ಣನ ದೊಡ್ಡಸ್ತಿಕ ನೋಡಿ ಬಂದೆ. ಮನೆಯೊಂದು ಮೂರು ಬಾಗಿಲು , ಎರಡು ಕಿಟಕಿ ; ಅದರಲ್ಲೊಂದು ತೆಗೆಯಲು ಬರುವುದಿಲ್ಲ . ಒಂದು ಹೆಜ್ಜೆ ಬಲಕ್ಕಿಟ್ಟರೆ ಊಟದ ಕೋಣೆ, ಎಡಕಿಟ್ಟರೆ ಮಲಗುವ ಕೋಣೆ , ಅದಕ್ಕಂಟಿಕೊಂಡೇ ಬಾತ್ ರೂಂ ಇತ್ಯಾದಿ , ದಿನವಿಡೀ ಹೊಗೆ, ಧೂಳು , ನೀರಿಗೂ ಹಣ ಕೊಡಬೇಕು. ಪಕ್ಕದ ಮನೆಯವರು ಹೊಡೆದಾಡಿ ಸತ್ತರೂ, ಕೂಗಿದರೂ, ಡಿಕ್ಕಿ ಹೊಡೆದರೂ ಅವರ್ಯಾರೆಂದು ಇವರಿಗೆ  ಅರಿವಾಗುವುದಿಲ್ಲ. ಮಾತಾಡುವುದಕ್ಕಾಗಲಿ, ಭಾವನೆಗಳನ್ನು ಹಂಚಿಕೊಳ್ಳುವುದಕ್ಕಾಗಲಿ ಅವರಿಗೆ ಪರಸೊತ್ತೇ ಇರುವುದಿಲ್ಲ. ಮನೆಗೆ ಬಂದವರನ್ನು ಮಾತಾಡಿಸುವುದು ಬೇಡ ಬಿಡಿ, ಮುಚ್ಚಿದ ಕದ ತೆಗೆದರೂ ಸಾಕಿತ್ತು. ಆದರೆ ಇವರು ಹಾಗಲ್ಲ ಒಳಗಿನಿಂದಲೇ ಯಾರು ಬೇಕಿತ್ತು ? ಎಂದರೆ ಮುಗಿದೇ ಹೊಯ್ತು. ಒಂದು ವಾರ ಇದ್ದು ಬರಲೆಂದು ಹೋಗಿ ಮೂರೇ ದಿನಕ್ಕೆ ವಾಪಸ್ಸು ಬಂದು ಬಿಟ್ಟೆ. ಊರಿಗೆ ಬಂದಿಳಿದ ಕೂಡಲೇ “ ಏನೋ ಗಣೇಶ ಇಷ್ಟು ಬೇಗ ಬಂದು ಬಿಟ್ಟೆ ? ಹುಷಾರಿಲ್ವಾ ? " ಅಂದ್ರು , “ ಹು ಹೌದು ಇನ್ನೊಮ್ಮೆ ಹೋದಾಗ ಉಳಿದು ಬರ್ತೀನಿ " ಎಂದೆ. ಮನದಲ್ಲೇ ಒಂತರಾ ನಗು ನನಗೆ, ಕಷ್ಟಪಟ್ಟು ಹಗಲು ರಾತ್ರಿ ಓದಿ ಹುಷಾರಿ ಎನಿಸಿಕೊಂಡ ನನ್ನ ಅಣ್ಣನ ಮರ್ಯಾದೆ ಯಾಕೆ ಕಳೆಯೋದು ಅಂತ ಹಾಗಂದೆ, ಹೆಚ್ಚೇನೂ ಕಷ್ಟಪಡದೆ ಜನರಾಡೋ ಚುಚ್ಚು ಮತುಗಳನ್ನು ಸಹಿಸಿಕೊಂಡು ಅಣ್ಣನಿಗಿಂತ ನೂರುಪಟ್ಟು ಚೆನ್ನಾಗಿ ಜೀವನ ನಡೆಸುತ್ತಿದ್ದೇನೆ ಅನ್ನೋ ಸಮಧಾನ ಆಯ್ತು. ಕೊನೆ ಕೊಯ್ಲಿನಲ್ಲಿ ಒಂದಿಷ್ಟು ಕಷ್ಟಪಟ್ಟು ಕೊನೆ ಹೊತ್ತರಾಯ್ತು. ಅಡಿಕೆ ಸುಲಿಯೋಕೆ ಜನ ಬರ್ತಾರೆ. ಅಜ್ಜನಿಗೆ ನಾನೆಂದರೆ ಪ್ರೀತಿ ನಾನು ಕಷ್ಟಪಟ್ಟು ಸಂಪಾದಿಸಿದ್ದು ನಿಮಗಾಗಿ. ನೀನೊಬ್ಬನಾದರೂ ಅನುಭವಿಸು ಎಂದು ಆಗಾಗ ಹೇಳಿ ನನ್ನ ತಲೆಸವರುತ್ತಿರುತ್ತಾರೆ. ಮನೆತುಂಬಾ ತಿರುಗಾಡಿಕೊಂಡು ಚಿಕ್ಕ ಚಿಕ್ಕ ಕೀಟಲೆ ಮಾಡಿ ಎಲ್ಲರನ್ನು ನಗಿಸುತ್ತಿರುತ್ತೇನೆ. ಎಲ್ಲರಿಗೂ ನಾನೆಂದರೆ ತುಂಬಾ ಇಷ್ಟ . ಆದರೂ ಹೊರಗಿನಿಂದ ಅಣ್ಣನನ್ನು ನೋಡಿ ಕಲಿ ಅಂತ ಹೆಳುತ್ತಿರುತ್ತಾರೆ. ಆದ್ರೂ ಒಂದು ದೊಡ್ಡ ಸಮಸ್ಯೆ ಇದೆ. ಮನೆಯಲ್ಲಿರೋ ಹುಡುಗರಿಗೆ ಹೆಣ್ಣು ಕೊಡುವುದಿಲ್ಲ. ಅಪ್ಪ ಅಮ್ಮ ಒಪ್ಪಿದರೂ ಹುಡುಗಿಯರು ಒಪ್ಪೋಲ್ಲ. ಅವರಿಗೂ ಕೆಲವೊಮ್ಮೆ ಬೆಂಗಳೂರಿನ ವ್ಯಾಮೋಹ.ಆದರೆ ಹಳ್ಳಿಯ ನೆಲ ನೀರು , ಮಣ್ಣಿನ ಕಂಪು , ಸಂಪ್ರದಾಯದ ಬೆಲೆ ಅರಿತವರಾರೂ ಈ ತರದ ಕನಸ ಕಟ್ಟುವುದಿಲ್ಲ . 

ಜುಲೈ 2 / 2018

• ಸುಮಾ ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...