Skip to main content

ಕಾಲೇಜು ಖಾಲಿ ಏಜು

ಎಲ್ಲರೂ ಕಲಿತಾರಲ್ಲ ಅದಿಕ್ಕೆ ನಾನೂ ಕಲಿತಿದ್ದೆ. ಅಪ್ಪ ಅಮ್ಮನ ಮನಸ್ಸಿನ ಸಮಾಧಾನಕ್ಕೆ ಸ್ನೇಹಿತರಿಗಿಂತ ನಾನೇನು ಕಡಿಮೆ ಅಂತ ಪ್ರತಿದಿನ ಕಾಲೇಜಿಗೆ ಹೋಗಿದ್ದೆ. ಅಂಕಗಳಿಸಲು ಅಷ್ಟೇನು ಆಸೆ ಇರಲಿಲ್ಲ. ಅಂಥ ಉಸಾಬರಿಗೆ ನಾನು ಹೋಗಿಯೂ ಇರಲಿಲ್ಲ. ಆದರೂ ಅಂಕಗಳೆನೋ ಚೆನ್ನಾಗಿಯೇ ಬಂದಿದ್ದವು ಪಕ್ಕದಮನೆಯಲ್ಲಿ ಒಬ್ಬ ನನ್ನ ವಯಸ್ಸಿನ ಹುಡುಗ ಇದ್ದ. ಪಾಪ ಇಡೀ ದಿನ ಅವನು ಓದೋದನ್ನು ನೋಡಿ ನನ್ನಮ್ಮನಿಗೆ ಆಗಾಗ ದಿನ ತಲೆಕೆಡುತ್ತಿತ್ತು. ಹಾಗನಿಸಿದ ದಿನ  ಅಮ್ಮನ ವೇದಘೋಶ ಜೋರಾಗಿಯೇ ಇರುತ್ತಿತ್ತು. ಆ ಪಕ್ಕದ ಮನೆ ಅಜ್ಜಿಗೋ ಮಾಡೊಕೆ ಬೇರೆ ಕೆಲಸ ಇಲ್ಲ ನಮ್ಮ ಮನೆಗೆ ಬಂದು ಮೊಮ್ಮಗನನ್ನು ಹೊಗಳೋದೇ ಕೆಲಸವಾಗಿಬಿಟ್ಟಿತ್ತು. ನಾನು ಪಿ.ಯು ಮುಗಿಸಿ ಕಾಲೇಜು ಬಿಟ್ಟೆ , ಮನೆಯಲ್ಲಿ ಮೂರು ತಲೆಮಾರಿನವರು ಕೂತು ತಿನ್ನೋವಷ್ಟು ಆಸ್ತಿ ಇತ್ತು. ಕಿರಿಯವನು ನಾನು. ಅಣ್ಣ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ  ಊರಿನ ಜನರ ಕಣ್ಣಿಗೆ ದೊಡ್ಡ ಮನಷ್ಯ ಅನ್ನಿಸ್ಕೊಂಡು ಎರಡು ವರ್ಷ ಆಯ್ತು, ನಾನು ಒಮ್ಮೆ ಬೆಂಗಳೂರಿಗೆ ಹೋಗಿ ಅಣ್ಣನ ದೊಡ್ಡಸ್ತಿಕ ನೋಡಿ ಬಂದೆ. ಮನೆಯೊಂದು ಮೂರು ಬಾಗಿಲು , ಎರಡು ಕಿಟಕಿ ; ಅದರಲ್ಲೊಂದು ತೆಗೆಯಲು ಬರುವುದಿಲ್ಲ . ಒಂದು ಹೆಜ್ಜೆ ಬಲಕ್ಕಿಟ್ಟರೆ ಊಟದ ಕೋಣೆ, ಎಡಕಿಟ್ಟರೆ ಮಲಗುವ ಕೋಣೆ , ಅದಕ್ಕಂಟಿಕೊಂಡೇ ಬಾತ್ ರೂಂ ಇತ್ಯಾದಿ , ದಿನವಿಡೀ ಹೊಗೆ, ಧೂಳು , ನೀರಿಗೂ ಹಣ ಕೊಡಬೇಕು. ಪಕ್ಕದ ಮನೆಯವರು ಹೊಡೆದಾಡಿ ಸತ್ತರೂ, ಕೂಗಿದರೂ, ಡಿಕ್ಕಿ ಹೊಡೆದರೂ ಅವರ್ಯಾರೆಂದು ಇವರಿಗೆ  ಅರಿವಾಗುವುದಿಲ್ಲ. ಮಾತಾಡುವುದಕ್ಕಾಗಲಿ, ಭಾವನೆಗಳನ್ನು ಹಂಚಿಕೊಳ್ಳುವುದಕ್ಕಾಗಲಿ ಅವರಿಗೆ ಪರಸೊತ್ತೇ ಇರುವುದಿಲ್ಲ. ಮನೆಗೆ ಬಂದವರನ್ನು ಮಾತಾಡಿಸುವುದು ಬೇಡ ಬಿಡಿ, ಮುಚ್ಚಿದ ಕದ ತೆಗೆದರೂ ಸಾಕಿತ್ತು. ಆದರೆ ಇವರು ಹಾಗಲ್ಲ ಒಳಗಿನಿಂದಲೇ ಯಾರು ಬೇಕಿತ್ತು ? ಎಂದರೆ ಮುಗಿದೇ ಹೊಯ್ತು. ಒಂದು ವಾರ ಇದ್ದು ಬರಲೆಂದು ಹೋಗಿ ಮೂರೇ ದಿನಕ್ಕೆ ವಾಪಸ್ಸು ಬಂದು ಬಿಟ್ಟೆ. ಊರಿಗೆ ಬಂದಿಳಿದ ಕೂಡಲೇ “ ಏನೋ ಗಣೇಶ ಇಷ್ಟು ಬೇಗ ಬಂದು ಬಿಟ್ಟೆ ? ಹುಷಾರಿಲ್ವಾ ? " ಅಂದ್ರು , “ ಹು ಹೌದು ಇನ್ನೊಮ್ಮೆ ಹೋದಾಗ ಉಳಿದು ಬರ್ತೀನಿ " ಎಂದೆ. ಮನದಲ್ಲೇ ಒಂತರಾ ನಗು ನನಗೆ, ಕಷ್ಟಪಟ್ಟು ಹಗಲು ರಾತ್ರಿ ಓದಿ ಹುಷಾರಿ ಎನಿಸಿಕೊಂಡ ನನ್ನ ಅಣ್ಣನ ಮರ್ಯಾದೆ ಯಾಕೆ ಕಳೆಯೋದು ಅಂತ ಹಾಗಂದೆ, ಹೆಚ್ಚೇನೂ ಕಷ್ಟಪಡದೆ ಜನರಾಡೋ ಚುಚ್ಚು ಮತುಗಳನ್ನು ಸಹಿಸಿಕೊಂಡು ಅಣ್ಣನಿಗಿಂತ ನೂರುಪಟ್ಟು ಚೆನ್ನಾಗಿ ಜೀವನ ನಡೆಸುತ್ತಿದ್ದೇನೆ ಅನ್ನೋ ಸಮಧಾನ ಆಯ್ತು. ಕೊನೆ ಕೊಯ್ಲಿನಲ್ಲಿ ಒಂದಿಷ್ಟು ಕಷ್ಟಪಟ್ಟು ಕೊನೆ ಹೊತ್ತರಾಯ್ತು. ಅಡಿಕೆ ಸುಲಿಯೋಕೆ ಜನ ಬರ್ತಾರೆ. ಅಜ್ಜನಿಗೆ ನಾನೆಂದರೆ ಪ್ರೀತಿ ನಾನು ಕಷ್ಟಪಟ್ಟು ಸಂಪಾದಿಸಿದ್ದು ನಿಮಗಾಗಿ. ನೀನೊಬ್ಬನಾದರೂ ಅನುಭವಿಸು ಎಂದು ಆಗಾಗ ಹೇಳಿ ನನ್ನ ತಲೆಸವರುತ್ತಿರುತ್ತಾರೆ. ಮನೆತುಂಬಾ ತಿರುಗಾಡಿಕೊಂಡು ಚಿಕ್ಕ ಚಿಕ್ಕ ಕೀಟಲೆ ಮಾಡಿ ಎಲ್ಲರನ್ನು ನಗಿಸುತ್ತಿರುತ್ತೇನೆ. ಎಲ್ಲರಿಗೂ ನಾನೆಂದರೆ ತುಂಬಾ ಇಷ್ಟ . ಆದರೂ ಹೊರಗಿನಿಂದ ಅಣ್ಣನನ್ನು ನೋಡಿ ಕಲಿ ಅಂತ ಹೆಳುತ್ತಿರುತ್ತಾರೆ. ಆದ್ರೂ ಒಂದು ದೊಡ್ಡ ಸಮಸ್ಯೆ ಇದೆ. ಮನೆಯಲ್ಲಿರೋ ಹುಡುಗರಿಗೆ ಹೆಣ್ಣು ಕೊಡುವುದಿಲ್ಲ. ಅಪ್ಪ ಅಮ್ಮ ಒಪ್ಪಿದರೂ ಹುಡುಗಿಯರು ಒಪ್ಪೋಲ್ಲ. ಅವರಿಗೂ ಕೆಲವೊಮ್ಮೆ ಬೆಂಗಳೂರಿನ ವ್ಯಾಮೋಹ.ಆದರೆ ಹಳ್ಳಿಯ ನೆಲ ನೀರು , ಮಣ್ಣಿನ ಕಂಪು , ಸಂಪ್ರದಾಯದ ಬೆಲೆ ಅರಿತವರಾರೂ ಈ ತರದ ಕನಸ ಕಟ್ಟುವುದಿಲ್ಲ . 

ಜುಲೈ 2 / 2018

• ಸುಮಾ ಕಂಚೀಪಾಲ್

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...