Skip to main content

ಬಾಲ್ಯದ ಘಮಲು ಭಾಗ ೨

ಚಿಕ್ಕವರಿರುವಾಗ ಮೂಗಲ್ಲಿ ಸುಂಬಳ ಸುರಿಸಿ ಸೊರ ಸೊರ ಸ್ವರ ಹೊರಡಿಸುತ್ತಿದ್ದ ದಿನಗಳು ನೆನಪಾಗುತ್ತಿವೆ. ಹೀಗೆ,... ಬರೆಯೋದಿಕ್ಕೆ ಅದು ಇದು ವಿಷಯ ಹೊಳೆಯುತ್ತಿರುವಾಗ ಬಾಲ್ಯದ ಕುರಿತೇ ಬರೆಯಬೇಕು ಎಂಬ ಮಾತು ಬಂತು ಅದಲ್ಲದೇ ವಿಷಯವನ್ನೂ ಅವರೇ ಸೂಚಿಸಿದ್ದರಿಂದ ಬಾಲ್ಯದ ಬುತ್ತಿಗಂಟಿಗೆ ಇನ್ನೊಂದಿಷ್ಟು ನೆನಪುಗಳನ್ನು ತುಂಬೋಣ ಎನಿಸಿತು, ನಿಮ್ಮ ಬಾಲ್ಯದ ನೆನಪುಗಳೇನಾದರು ಇದ್ದರೆ ನನಗೂ ತಿಳಿಸಿ.

ಒಂದೊಮ್ಮೆ ಜ್ವರ ಬಂದರೂ ಶಾಲೆಗೆ ರಜಾ ಹಾಕದ ದಿನಗಳು ಅವು, ಅದೆಷ್ಟು ಮುಖ್ಯವಾದ ತರಗತಿಗಳು ಇರುತ್ತಿದ್ದವೋ? ಏನೋ!? ಎಂಬಂತೆ ಹಠಮಾಡಿ ಶಾಲೆಗೆ ಹೋಗೋದು, ಅರ್ಧ ತರಗತಿಯಲ್ಲಿ ಸುಸ್ತಾಗಿ ಬಿದ್ದು ಶಾಲೆಯವರೆಗೆ ಮನೆಗೆ ಕಳುಹಿಸಿ ಕೊಡುತ್ತಿದ್ದ ದಿನಗಳು ನಮ್ಮ ಕನ್ನಡ ಶಾಲೆ ದಿನಗಳು.

ಆಟ ಆಡುವಾಗ ಬಿದ್ದು ಮೊಣಕಾಲಿಗೆ ಆದ ಗಾಯ ಇನ್ನೇನು ಮಾಸುತ್ತದೆ ಎನ್ನುವಷ್ಟರಲ್ಲಿ ಮತ್ತೆ ಬೀಳದೆ ಇದ್ದರೆ ನಮ್ಮ ಜಾಯಮಾನಕ್ಕೆ‌ ಅವಮಾನ ಎನ್ನುವ ಗಂಡು ಹುಡುಗರು. ಕೈ ಕಾಲಿಗೆ ಆದ ಗಾಯಕ್ಕೆಲ್ಲಾ ಬೇರೆ ಮದ್ದೇನು ಇಲ್ಲ. ತಕ್ಷಣ ಹಾದಿ ಬದಿಯ ಕಾಂಗ್ರೇಸ್ ಗಿಡ ಸಿಕ್ಕರೆ ಸಾಕು ಅದನ್ನೇ ಅರೆದು ಹಚ್ಚುವುದು. ಅದರ ಹಸಿರು ರಸ ರಕ್ತಕ್ಕೆ ಬಿದ್ದಾಗ ಗಾಯದಿಂದ ರಕ್ತ ಸೋರುವುದು ನಿಲ್ಲುತ್ತಿತ್ತು. 

ಸರಿಯಾಗಿ ಟೈ ಕಟ್ಟಿಕೊಳ್ಳಲೂ ಬರದ ಕಾಲ.

ಇನ್ನು ವರ್ಷಕ್ಕೊಂದು 
ಪ್ರತಿಭಾ ಕಾರಂಜಿ, ಕ್ರೀಡಾಕೂಟ,
ಪರೀಕ್ಷೆ, ಶಾರದಾ ಪೂಜೆ, 
ವಾರ್ಷಿಕೋತ್ಸವ ಬೇಸಿಗೆ ರಜ,
 ಜನವರಿ ಇಪ್ಪತ್ತಾರರ ಭಾಷಣ, 
ಇಷ್ಟಾದರೆ ಆಯಿತಲ್ಲ ಪೂರ್ತಿ
ಒಂದು ನತ್ತೆ ಕಳೆದು ಇನ್ನೊಂದು ನೆತ್ತೆ.

ದೀಪ ಬೆಳಗುವ ಖುಷಿ.

ಮನೆಗೆ ಬಂದರೆ ರಜೆಯಲ್ಲಿ ನೆಂಟರ ಮನೆ ತಿರುಗಾಟ ಆಟತ್ತಿ ಮನೆ ಆಟ ಮಣ್ಣಿನ‌ ಗೊಂಬೆ , ಕರಟದ ಪಾತ್ರೆ, ಎಲೆಗಳೆ ದುಡ್ಡು ಕಾಸು ಎಂದೆಲ್ಲಾ ಇದ್ದ ಬದ್ದ ಒಂದೇ ಜಾತಿಯ ಎಲೆಗಳೆಲ್ಲ ಕೊಯ್ದು ಬ್ಯಾಂಕಿನಲ್ಲಿಡುವುದು, ಸಲ್ಪ ದೊಡ್ಡದಾಗಿರುವ ಎಲೆಗೆ ಮೌಲ್ಯ ಹೆಚ್ಚು ಅದನ್ನು ಕೊಟ್ಟು ಸುಳ್ಳು ಸುಳ್ಳು ಸಾಮಾನು ಖರೀದಿ ಮಾಡುವುದು, ಈ ಆಟಗಳೇ ಮುಂದೆ ನಿಜವಾಗುತ್ತಾ ಜೀವನ ರೂಪಿಸುತ್ತವೆ ಎನ್ನುವ ಅಂಶ ಆಗ ಗೊತ್ತಿರುವುದಿಲ್ಲ.

  ಯಾವ ಕಟ್ಟಡದ ಉದ್ಘಾಟನೆಗೂ ಈ ನಳಕ್ಕೆ ಸಿಕ್ಕಷ್ಟು ಪ್ರಾಮುಖ್ಯತೆ ಇಲ್ಲ !

ಹುಡುಗರಿಗೆ ಒಂದು ಟೈಯರ್ ಸಿಕ್ಕರೆ ಸಾಕು ಅದೇ ಅವರ ಗಾಡಿ, ಹುಡುಗಿಯರದು ಗಿರಿಗಿಟ್ಟಲೆ ಮತ್ತು ಕಲ್ಲಾಟ ಬಲು ಜೋರು, ಐದು ಕಲ್ಲಿನ ಆಟ, ನಾಯಿ ಮೂಳೆ, ಜೋಡಿಬಲೆ ಆಹಾ! ನೆನಯುತ್ತಿದ್ದರೆ ಮತ್ತೆ ಈ ಜಂಜಾಟಗಳನ್ನು ಬಿಟ್ಟು ಮತ್ತೆ ಆಡೋಣ ಎನಿಸುವುದಿಲ್ಲವೇ? 

ದಿನ ಬೆಳಗಾದರೆ ಕಸ ಹೆಕ್ಕಬೇಕು

ಬಾಲಮಂಗಳ, ಚಂಪಕ, ಮಂಡೂರಾಯನ‌ ಕತೆ, 
ಪ್ರಜಾವಾಣಿ ಪೇಪರ್ ಕೊನೆಯ ಭಾನುಪುರವಣಿ ,
ಚುಕ್ಕಿ ಸೇರಿಸಿ ಚಿತ್ರಬರೆದು ಅದಕ್ಕೆ ಬಣ್ಣ ಹಾಕುವುದು, ಎಲೆಗಳನ್ನು ಪಟ್ಟಿಗಂಟಿಸುವುದು, 
ಬೇರೆಲೆ ಎಂಬ ಒಂದು ಜಾತಿ ಎಲೆ ಇರುತ್ತದೆ ಅದನ್ನು ಪಟ್ಟಿಯೊಳಗಿಟ್ಟು ಎಲೆಯ ತುದಿಗಳಿಗೆಲ್ಲಾ ಬೇರು ಬರಿಸುವುದು, ಬಣ್ಣ ಬಣ್ಣದ ಚಾಕ್ ಪೀಸ್ ಸಂಗ್ರಹಿಸುವುದು,
ದಾರಿ ಉದ್ದಕ್ಕು ಕಲ್ಲುಗಳಿಗೆ ಹೊಸ ವರ್ಷದ ಶುಭಾಶಯ ಬರೆಯೋದು
ಸಂಕ್ರಾಂತಿ ಬಂತೆಂದರೆ ಕಾಳಿನಲ್ಲಿ ಹೊಡೆದಾಡುವುದು.

ಬಾಲ್ಯದ ಹಕ್ಕಿಗೆ ಅದೆಷ್ಟು ಗರಿಗಳಿವೆ ಅಲ್ಲವಾ? 





Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಮಳೆಹನಿ

ಮಳೆ ಇದೊಂದೇ ಪದ ಸಾಕು ಅಲ್ವಾ ಮನಸ್ಸಿಗೆ ಖುಷಿ ಕೊಡೋದಕ್ಕೆ, ಇದು ಎಷ್ಟೋ ಜನರ ಹಂಬಲ ಆಗಿರತ್ತೆ. ಪ್ರಕೃತಿನ ಯಾರು ಜೀವಸ್ತಾರೋ ಅವರಿಗೆ ಇದು ಹಬ್ಬ ಅಂತಾನೆ ಹೇಳ್ಬಹುದು. ಎಷ್ಟೋ ಜನ ಈ ಮಳೆ ಯಾಕಾದ್ರೂ ಬಂತಪ್ಪಾ ಅಂತ ಅಂದ್ಕೊಳೋರು ಇರ್ತಾರೆ, ಪ್ರಪಂಚ ಅಂದ್ರೆ ಹಾಗೆ ಅಲ್ವ ಎಲ್ಲ ರೀತಿಯ ಜನರೂ ಇರ್ತಾರೆ. ಇದನ್ನ ನಾನ್ ಬರಿಬೇಕಾದ್ರೆ ನಂಗ್ ಆಗ್ತಾ ಇದ್ಯಲ್ಲ ಆ ಅನುಭವನ ಅನುಭವಿಸಿ ಬರೀತಾ ಇದೀನಿ. ಒಂದ್ಕಡೆ ಹಕ್ಕಿಗಳ ಚಿಲಿಪಿಲಿ, ಇನ್ನೊಂದ್ ಕಡೆ ಕಪ್ಪೆಗಳ ಸದ್ದು, ಮೊದಲನೇ ಸಲ ನೋಡೋರಿಗೆ ಇದು ಕಿರಿಕಿರಿ ಇರಬಹುದು, ಅದೇ ವಾತಾವರಣದಲ್ಲಿ ಇರುವವರಿಗೆ ಅದು ಸಾಮಾನ್ಯ. ನಮ್ಮ ಮನೆ ಇರೋದು ಇದೆ ಪ್ರಕೃತಿಯ ಮಡಿಲಿನಲ್ಲಿ ಸುತ್ತಮುತ್ತ ಬೆಟ್ಟ ,ಮನೆಮುಂದೆ ಹಳ್ಳ,ಗದ್ದೆ,ತೋಟ. ಇದೇ ನಂದೊಂದು ಪುಟ್ಟ ಪ್ರಪಂಚ. ಮಳೆಗಾಲ ಬಂತು ಅಂದ್ರೆ ಗದ್ದೆ ಹೂಡೋದು, ನೆಟ್ಟಿ ಇದೆಲ್ಲ ಎಸ್ಟ್ ಚಂದ ಅಲ್ವಾ? ನಾವು ಹೈಸ್ಕೂಲಿಗೆ ಹೋಗೋವಾಗಿಂದ ಬೇರೆಕಡೆ ಉಳಿದುಕೊಂಡು ಹೋಗ್ಬೇಕಾಗಿತ್ತು. ಆಗ ನಾವು ಮನೆನ ತುಂಬಾ ಮಿಸ್ ಮಾಡ್ಕೋತಾ ಇದ್ವಿ, ಶನಿವಾರ ಯವಾಗಪ್ಪ ಬರತ್ತೆ? ಯಾವಾಗ ಮನೆಗ್ ಹೋಗ್ತೀವಿ? ಅಂತ ಯೋಚನೆ ಆರಂಭವಾಗ್ತಾ ಇತ್ತು. ಎಸ್ಟ್ ಮಜಾ ಅಲ್ವಾ, ಮನೆಯಿಂದ ಹೊರಗಡೆ ಇದ್ದವರಿಗೆ ಮಾತ್ರ ಅದು ಗೊತ್ತಾಗೋದು. ಮಳೆ ತುಂಬಾ ಜೋರಾಯ್ತು ಅಂದ್ರೆ ರಜೆ ಕೊಡ್ತಿದ್ರು ಆಗ ನೋಡ್ಬೇಕು ಮಕ್ಕಳ ಖುಷಿನಾ. ನನ್ ತಮ್ಮ ತಂಗಿ ಎಲ್ಲ ಕುಣ್ದೇಬಿಡ್ತಾ ಇದ್ರು, ಅದನ್ನ ನೋಡಕ್ಕೆ ಒಂತ...

ನಾಲ್ಕು ವರುಷದ ಖುಷಿ

ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ. ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.  ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ...