ಊರು ಕೇರಿಯವರು ಅಡಿಕೆ ಕೊಯ್ಲು ಬಂದರೆ ತುಂಬಾ ಬ್ಯೂಸಿ ಆಗಿ ಬಿಡುತ್ತಾರೆ. ಹೀಗೇ ಉಳಿದ ದಿನಗಳಲ್ಲಿ ಬಿಡುವಿದೆ ಎಂಬ ಅರ್ಥ ಈ ಮಾತಿನದ್ದಲ್ಲ. ಅವರು ಯಾವಾಗಲೂ ಪುರುಸೊತ್ತಿಲ್ಲದ ಜೇನಿನಂತೆ ಕೆಲಸ ಮಾಡುವ ಜನ. ಚಳಿ ಆರಂಭ ಆಗ್ತಾ ಇದ್ಹಾಗೆ ಅಡಿಕೆ ಕೊಯ್ಲು ಶುರುವಾಗಿ ಬಿಡುತ್ತೆ. ಆಗ ಹೆಂಗಸರಿಗೂ, ಗಂಡಸರಿಗೂ ಬಿಡುವಿಲ್ಲದ ಕೆಲಸ. ನಮ್ಮಲ್ಲಿ ಗಂಡು ಮೇಲೋ ಹೆಣ್ಣು ಮೇಲೋ ಎಂಬ ಮಾತೇ ಬರೋದಿಲ್ಲ. ಎಲ್ಲ ಕೆಲಸಗಳನ್ನು ಎಲ್ಲರೂ ಸಮನಾಗಿ ಮಾಡುತ್ತಾರೆ. ಅಡಿಕೆ ಕುಯ್ಯುವ ಆ ದಿನವನ್ನು ಗಂಡಸರು ನಿಭಾಯಿಸಿದರೆ, ಆಳುಗಳಿಗೆ ಮಜ್ಜಿಗೆ ಬೆಲ್ಲವನ್ನೋ, ಚಹಾವನ್ನು ಮಾಡಿ, ತೆರಿ ಅಡಿಕೆ ಹೆಕ್ಕಿ ಅದೂ ಇದೂ ಅಂತ ಲೆಕ್ಕಕ್ಕೇ ಸಿಗದ ನೂರು ಕೆಲಸವನ್ನು ಹೆಂಗಸರೇ ಮಾಡುತ್ತಾರೆ. ಅಷ್ಟೇ ಯಾಕೆ ಅಡಿಕೆ ಹೋರಲು ಜನ ಸಿಗಲಿಲ್ಲ ಎಂದರೆ ಇವರು ಅದಕ್ಕೂ ಸೈ. ಇನ್ನು ಸಂಜೆಯಾಗುತ್ತಿದ್ದಂತೆ ಊಟಕ್ಕೆ ತಯಾರಿ ಆಗೇ ಬಿಡಬೇಕು. ಯಾಕೆಂದರೆ ಮುರಿಯಾಳಿನ ಪ್ರಕಾರ ಒಬ್ಬರ ಮನೆ ಅಡಿಕೆಯನ್ನು ಇನ್ನೊಬ್ಬರು ಸುಲಿಯಬೇಕಲ್ಲ. ಅದೇ ಹಿಂದಿನಿಂದಲೂ ಬಂದ ಪದ್ದತಿ. ಹಾಗೆನ್ನುವುದಕ್ಕಿಂತ ನಮ್ಮ ಕೇರಿಯ ಒಗ್ಗಟ್ಟು ಎನ್ನಬಹುದು. ಏನೇ ಕಾರ್ಯಕ್ರಮ ಇರಲಿ ಅಥವಾ ಹತ್ತು ಜನ ಕೂಡುವ ಶುಭಕಾರ್ಯ ಇರಲಿ ಚಪ್ಪರ ಹಾಕುವುದರಿಂದ ಬಾಳೆಲೆಕೊಯ್ದು, ಬಂದವರಿಗೆ ಬಡಿಸುವವರೆಗೂ ಕೇರಿಯವರೇ ನೋಡಿಕೊಳ್ಳುತ್ತಾರೆ. ಕೇರಿಯ ಪ್ರೀತಿಯ ಚಿಕ್ಕಪ್ಪ, ಚಿಕ್ಕಮ್ಮಂದಿರ...